Advertisement

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

01:26 PM Sep 04, 2024 | ವಿಷ್ಣುದಾಸ್ ಪಾಟೀಲ್ |

ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿಗೆ(BJP) ಸಮಬಲದ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್(Congress) ಈ ಬಾರಿ ಶತಾಯಗತಾಯ ಅಧಿಕಾರಕ್ಕೇರಲೇ ಬೇಕು ಎಂದು ಪಣತೊಟ್ಟಿದೆ. ಇದಕ್ಕೆ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

Advertisement

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಬಹುದು ಎಂಬ ಊಹಾಪೋಹಗಳ ನಡುವೆ, ರಾಜಕೀಯದ ಮಹತ್ವದ ವಿದ್ಯಮಾನದಲ್ಲಿ ಪ್ರಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ಬಜರಂಗ್ ಪುನಿಯಾ(Bajrang Punia)  ರಾಹುಲ್ ಗಾಂಧಿ(Rahul Gandhi) ಅವರನ್ನು ಬುಧವಾರ(ಸೆ.4) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಹರಿಯಾಣ ವಿಧಾನಸಭೆಯ ಎಲ್ಲಾ 90 ಸ್ಥಾನಗಳಿಗೆ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಅಕ್ಟೋಬರ್ 8 ರಂದು ಘೋಷಣೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣ ಪ್ರಚಾರಕ್ಕೆ ಹೊರಡುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ವಿನೇಶ್ ಫೋಗಟ್ ಅವರು ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ತನ್ನ ಬೆಂಬಲವನ್ನು ಸೂಚಿಸಿದ್ದರು.

ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಚರ್ಚೆಯ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿದೆ. ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿ (CEC) ಸೋಮವಾರ ಸಭೆ ಸೇರಿದ ಬೆನ್ನಲ್ಲೇ ಈ ಭೇಟಿ ನಡೆದಿದೆ.

Advertisement

ವಿನೇಶ್ ಅವರನ್ನು ಬಿಜೆಪಿ ವಿರುದ್ಧ ಹೋರಾಟದ ಅಸ್ತ್ರವನ್ನಾಗಿಸಲು ಕಾಂಗ್ರೆಸ್ ಮುಂಚೂಣಿಯಲ್ಲಿ ನಿಲ್ಲಿಸಬಹುದು, ಮಾತ್ರವಲ್ಲದೆ ಆಕೆ ಒಲಂಪಿಕ್ ಪದಕ ಕಳೆದುಕೊಂಡ ಭಾವಾನಾತ್ಮಕ ವಿಚಾರವೂ ಪರಿಮಾಣಕಾರಿಯಾಗಿ ಕೆಲಸ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಈ ಹಿಂದೆ, ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹಿಂದಿರುಗಿದ ನಂತರ, ವಿನೇಶ್ ಫೋಗಟ್ ಅವರನ್ನು ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಭೇಟಿಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುವ ಪ್ರತಿಯೊಬ್ಬರನ್ನು ಸ್ವಾಗತಿಸುತ್ತೇವೆ. ಕ್ರೀಡಾಪಟು ಯಾವುದೇ ನಿರ್ದಿಷ್ಟ ಪಕ್ಷ ಅಥವಾ ರಾಜ್ಯಕ್ಕೆ ಸೇರಿದವರಲ್ಲ. ಒಬ್ಬ ಕ್ರೀಡಾಪಟು ಇಡೀ ರಾಷ್ಟ್ರಕ್ಕೆ ಸೇರಿದವರು” ಎಂದು ಹೇಳಿದ್ದರು.

29ರ ಹರೆಯದ ವಿನೇಶ್ ಭಾರತಕ್ಕೆ ಹಿಂದಿರುಗಿದಾಗಿನಿಂದಲೂ ಆಕೆಯೊಂದಿಗೆ ಕಾಂಗ್ರೆಸ್ ನಾಯಕರು ಕಾಣಿಸಿಕೊಂಡಿದ್ದರು. ರೋಹ್ಟಕ್ ಸಂಸದ ದೀಪೇಂದರ್ ಹೂಡಾ ಅವರು ಆಕೆಯನ್ನು ಸ್ವಾಗತಿಸಲು ದೆಹಲಿಯ ಐಜಿಐ ವಿಮಾನ ನಿಲ್ದಾಣವನ್ನು ತಲುಪಿದ ಮೊದಲ ರಾಜಕೀಯ ನಾಯಕರಾಗಿದ್ದರು.

ಲೈಂಗಿಕ ಕಿರುಕುಳದ ಆರೋಪದ ಮೇಲೆ ಅಂದಿನ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಹರಿಯಾಣದ ವಿನೇಶ್ ಮತ್ತು ಇತರ ಕುಸ್ತಿಪಟುಗಳ ಆಂದೋಲನವನ್ನು ದೀಪೇಂದರ್ ಗಟ್ಟಿ ಧ್ವನಿಯಿಂದ ಬೆಂಬಲಿಸಿದ್ದರು.

ಸಮರಾಂಗಣ ಸಿದ್ದ
ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ರಾಜ್ಯದ 10 ಲೋಕಸಭಾ ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಸ್ಪರ್ಧಿಸಿತ್ತು, ಕುರುಕ್ಷೇತ್ರವನ್ನು ಎಎಪಿಗೆ ಬಿಟ್ಟುಕೊಟ್ಟಿತ್ತು. 5 ರಲ್ಲಿ ಬಿಜೆಪಿ ಗೆದ್ದಿದ್ದರೆ, 5 ರಲ್ಲಿ ಕಾಂಗ್ರೆಸ್ ಗೆದ್ದು ಬಲ ಪ್ರದರ್ಶನ ಮಾಡಿತ್ತು. 90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 42ರಲ್ಲಿ ಮೇಲುಗೈ ಸಾಧಿಸಿತ್ತು. ಎಎಪಿ ನಾಲ್ಕರಲ್ಲಿ ಮುನ್ನಡೆ ಸಾಧಿಸಿತ್ತು ಆದರೆ ಕ್ಷೇತ್ರ ಗೆಲ್ಲಲು ವಿಫಲವಾಗಿತ್ತು. ಈಗ ಮೈತ್ರಿ ಮಾತುಕತೆಗಳು ನಡೆಯುತ್ತಿದ್ದು ಏಳು ಸ್ಥಾನಗಳ ಬೇಡಿಕೆಯನ್ನು ಕಾಂಗ್ರೆಸ್ ಮುಂದೆ ಆಪ್ ಇಟ್ಟಿದೆ.

2019 ರಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಹುಮತಕ್ಕೆ ಆರು ಸ್ಥಾನಗಳು ಕಡಿಮೆಯಾಗಿತ್ತು. ಆದರೂ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್ 31 ಸ್ಥಾನ, ಜನನಾಯಕ ಜನತಾ ಪಕ್ಷ 10, ಪಕ್ಷೇತರರು 7 ಸ್ಥಾನ ಗೆದ್ದಿದ್ದರು. ಲೋಕದಳ 1, ಲೋಕ್ ಹಿತ್ ಪಾರ್ಟಿ 1 ಸ್ಥಾನಗಲ್ಲಿ ಜಯ ಸಾಧಿಸಿತ್ತು. ಬಿಜೆಪಿ ಜನನಾಯಕ ಜನತಾ ಪಾರ್ಟಿ ಮತ್ತು ಪಕ್ಷೇತರರು 7 ಶಾಸಕರ ಬೆಂಬಲದಿಂದ ಸುಲಭವಾಗಿ ಸರಕಾರ ರಚಿಸಿತ್ತು. ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಮತ್ತು ಜೆಜೆಪಿ ಅಧ್ಯಕ್ಷ ದುಷ್ಯಂತ್ ಚೌಟಾಲಾ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಚಿತ್ರಣ ಬದಲಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.ಈಗ ನಾಯಕತ್ವ ಬದಲಾಗಿದ್ದು ಬಿಜೆಪಿಯು ಸಿಎಂ ನಯಾಬ್ ಸಿಂಗ್ ಸೈನಿ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾಗರೂಕತೆ ಬಯಸುವ ಎಲ್ಲ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಲೋಕಸಭಾ ಚುನಾವಣೆಯಲ್ಲಿ ಆದ ಹಿನ್ನಡೆ.

ಪಕ್ಷಾಂತರ ಪರ್ವ ಜೋರು

ಲೋಕಸಭೆ ಚುನಾವಣೆಗೆ ಮುನ್ನ ಜೆಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿದ್ದ ಜೆಜೆಪಿ ಪ್ರತ್ಯೇಕವಾಗಿ ಹೋರಾಟಕ್ಕೆ ಸಿದ್ಧವಾಗಿದೆ. ಈ ನಡುವೆ ಮೂವರು ಜೆಜೆಪಿ ಶಾಸಕರು, ಪ್ರಮುಖ ನಾಯಕ ನಾಯಕ ದೇವೆಂದರ್ ಸಿಂಗ್ ಬಬ್ಲಿ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮೂವರೂ ಜಾಟ್ ಸಮುದಾಯದ ನಾಯಕರೆನ್ನುವುದು ವಿಶೇಷ. ಇನ್ನೂ ಕೆಲವರು ಪಕ್ಷಾಂತರಕ್ಕೆ ಸಿದ್ಧವಾಗಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next