Advertisement

ಹರ್ಯಾಣ, ಮಹಾರಾಷ್ಟ್ರ ವಿಧಾನಸಭೆಗಳಿಗೆ ಇಂದು ಹಕ್ಕು ಚಲಾವಣೆ

09:57 AM Oct 22, 2019 | Team Udayavani |

ಮುಂಬೈ/ಚಂಡಿಗಡ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆಗೆ ಸೋಮವಾರ ಮತದಾನ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಎರಡೂ ರಾಜ್ಯಗಳಲ್ಲಿ ಮರಳಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರೆ, ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಗೆಲುವು ಸಾಧಿಸುವ ಇಂಗಿತವನ್ನು ಪ್ರತಿಪಕ್ಷಗಳು ಹೊಂದಿವೆ.

Advertisement

ಈ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಹೊರತುಪಡಿಸಿದರೆ, 18 ರಾಜ್ಯಗಳ 51 ಅಸೆಂಬ್ಲಿ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೂ(ಮಹಾರಾಷ್ಟ್ರದ ಸತಾರಾ ಮತ್ತು ಬಿಹಾರದ ಸಮಸ್ಟಿಪುರ) ಸೋಮವಾರವೇ ಮತದಾನ ನಡೆಯಲಿದೆ. ಗುರುವಾರ ಫ‌ಲಿತಾಂಶ ಪ್ರಕಟವಾಗಲಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಹಾಗೂ ಇತರೆ ಸಣ್ಣ ಪುಟ್ಟ ಪಕ್ಷಗಳ “ಮಹಾಯುತಿ’ ಮೈತ್ರಿಯನ್ನು ಕಾಂಗ್ರೆಸ್‌ ಮತ್ತು ಎನ್‌ಸಿಪಿಯ “ಮಹಾ-ಅಘಾಡಿ’ ಎದುರಿಸಲಿದೆ. 3,237 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 8.98 ಕೋಟಿ ಮತ ದಾರರು ನಿರ್ಧರಿಸಲಿದ್ದಾರೆ. ಇನ್ನು ಹರ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದ್ದು, 1.83 ಕೋಟಿ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ಬರೆ ಯಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆ ಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆ ಯಲು ಎರಡೂ ರಾಜ್ಯಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಅಬ್ಬರದ ಪ್ರಚಾರ: ಎರಡೂ ರಾಜ್ಯಗಳಲ್ಲಿ ಹೈವೋಲ್ಟೆàಜ್‌ ಚುನಾವಣಾ ಪ್ರಚಾರ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಯೋಗಿ ಆದಿತ್ಯನಾಥ್‌, ರಾಹುಲ್‌ ಗಾಂಧಿ, ಶರದ್‌ ಪವಾರ್‌ ಸೇರಿದಂತೆ ರಾಜಕೀಯ ಘಟಾನುಘಟಿಗಳು ಹಲವು ರ್ಯಾಲಿಗಳನ್ನು ನಡೆಸಿದ್ದಾರೆ. ಆದರೆ, ಅಚ್ಚರಿಯೆಂಬಂತೆ, ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟವು ಒಂದೇ ಒಂದು ಜಂಟಿ ರ್ಯಾಲಿಯನ್ನೂ ನಡೆಸಿಲ್ಲ. ಪ್ರಧಾನಿ ಮೋದಿ ಮಹಾರಾಷ್ಟ್ರದಲ್ಲಿ ಒಟ್ಟು 9 ರ್ಯಾಲಿಗಳನ್ನು ನಡೆಸಿದ್ದು, ರಾಹುಲ್‌ 6 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

ಕಣದಲ್ಲಿರುವ ಪ್ರಮುಖರು: ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ಮಾಜಿ ಸಿಎಂ ಅಶೋಕ್‌ ಚವಾಣ್‌, ಪೃಥ್ವಿರಾಜ್‌ ಚೌಹಾಣ್‌, ಆದಿತ್ಯ ಠಾಕ್ರೆ ಮತ್ತಿತರರು ಮಹಾರಾಷ್ಟ್ರದಲ್ಲಿ ಕಣದಲ್ಲಿರುವ ಪ್ರಮುಖರು. ಇನ್ನು ಹರ್ಯಾಣದಲ್ಲಿ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌, ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾ, ರಣದೀಪ್‌ ಸಿಂಗ್‌ ಸುಜೇìವಾಲ, ಕಿರಣ್‌ ಚೌಧರಿ, ಕುಲದೀಪ್‌ ಬಿಷ್ಣೋಯ್‌, ದುಶ್ಯಂತ್‌ ಚೌಟಾಲಾ ಮತ್ತಿ ತರರು ಕಣದಲ್ಲಿದ್ದಾರೆ.

Advertisement

ಬಿಜೆಪಿಯು ಮೂವರು ಕ್ರೀಡಾಳುಗಳು ಅಂದರೆ ಬಬಿತಾ ಫೋಗಟ್‌, ಯೋಗೇಶ್ವರ್‌ ದತ್‌ ಹಾಗೂ ಸಂದೀಪ್‌ ಸಿಂಗ್‌ರನ್ನು ಕಣಕ್ಕಿಳಿಸಿದೆ. ಇಲ್ಲಿ ಪ್ರಧಾನಿ ಮೋದಿ ಒಟ್ಟು 7 ರ್ಯಾಲಿಗಳನ್ನು ನಡೆಸಿದ್ದು, ರಾಹುಲ್‌ ಗಾಂಧಿ 2 ರ್ಯಾಲಿಗಳಿಗೆ ಪ್ರಚಾರ ಸೀಮಿತಗೊಳಿಸಿದ್ದಾರೆ.

ಉಚಿತ ಪ್ರಯಾಣ: ಸೋಮವಾರದ ಮತದಾನದ ವೇಳೆ ದಿವ್ಯಾಂಗ ಮತದಾರರನ್ನು ಉಚಿತವಾಗಿ ಮತಗಟ್ಟೆಗೆ ಕರೆದೊಯ್ಯುವುದಾಗಿ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಆಟೋರಿಕ್ಷಾ ಚಾಲಕರು ಘೋಷಿಸಿದ್ದಾರೆ. ಸುಮಾರು 100ರಷ್ಟು ಚಾಲಕರು ತಮ್ಮ ಆಟೋಗಳ ಹಿಂದೆ ಪೋಸ್ಟರ್‌ಗಳನ್ನು ಅಂಟಿಸಿದ್ದು, ಅದರಲ್ಲಿ ತಮ್ಮ ಮೊಬೈಲ್‌ ಫೋನ್‌ ಸಂಖ್ಯೆಯನ್ನೂ ಬರೆದಿದ್ದಾರೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿದರೆ, ಉಚಿತವಾಗಿ ಮತಗಟ್ಟೆಗೆ ಕರೆದೊಯ್ಯುವುದಾಗಿ ಹೇಳಿದ್ದಾರೆ.

ಮಿತ್ರಪಕ್ಷವನ್ನೇ ತಿವಿದ ಶಿವಸೇನೆ: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಕೈಜೋಡಿಸಿರುವ ಶಿವಸೇನೆ, ಮಿತ್ರಪಕ್ಷವನ್ನೇ ತಿವಿಯುವುದನ್ನು ಮುಂದುವರಿಸಿದೆ. ಸವಾಲೆಸೆಯಲು ಪ್ರತಿಸ್ಪರ್ಧಿಗಳೇ ಇಲ್ಲ ಎಂಬ ಸಿಎಂ ದೇವೇಂದ್ರ ಫ‌ಡ್ನವೀಸ್‌ ಹೇಳಿಕೆಗೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಕಾಲೆಳೆದಿರುವ ಶಿವಸೇನೆ, “ಪ್ರತಿಸ್ಪರ್ಧಿಗಳೇ ಇಲ್ಲ ಎಂದಾದ ಮೇಲೆ ರಾಜ್ಯದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವದ ಅಷ್ಟೊಂದು ನಾಯಕರು ಇಲ್ಲಿಗೆ ಬಂದು ರ್ಯಾಲಿಗಳನ್ನು ನಡೆಸಿದ್ದಾದರೂ ಏಕೆ’ ಎಂದು ಪ್ರಶ್ನಿಸಿದೆ.

ಧನಂಜಯ್‌ ಮುಂಡೆ ವಿರುದ್ಧ ಎಫ್ಐಆರ್‌
ಮಹಾರಾಷ್ಟ್ರದ ಸಚಿವೆ ಹಾಗೂ ತಮ್ಮ ಸಂಬಂಧಿ ಪಂಕಜಾ ಮುಂಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಎನ್‌ಸಿಪಿ ನಾಯಕ ಧನಂಜಯ್‌ ಮುಂಡೆ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ಚುನಾವಣಾ ರ್ಯಾಲಿಯೊಂದರಲ್ಲಿ ಪಂಕಜಾ ವಿರುದ್ಧ ಧನಂಜಯ್‌ ಅವರು ಕೆಟ್ಟದಾಗಿ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.

ಮಹಾರಾಷ್ಟ್ರ
ಒಟ್ಟು ಸೀಟು- 288
ಮತದಾರರ ಸಂಖ್ಯೆ- 8.98 ಕೋಟಿ
ಅಭ್ಯರ್ಥಿಗಳು – 3,237
ಮತಗಟ್ಟೆಗಳ ಸಂಖ್ಯೆ- 96,661

ಹರ್ಯಾಣ
ಒಟ್ಟು ಸೀಟು- 90
ಮತದಾರರ ಸಂಖ್ಯೆ- 1.83 ಕೋಟಿ
ಅಭ್ಯರ್ಥಿಗಳು – 1,169
ಮತಗಟ್ಟೆಗಳ ಸಂಖ್ಯೆ- 19,578

Advertisement

Udayavani is now on Telegram. Click here to join our channel and stay updated with the latest news.

Next