Advertisement

ಚಂದನವನದಲ್ಲಿ ಹರ್ಷಿತ್‌ ಹೆಜ್ಜೆ ಗುರುತು

10:36 PM Jun 14, 2019 | Team Udayavani |

ಸಾಧನೆಗೆ ಸಣ್ಣ ಸಣ್ಣ ಪ್ರಯತ್ನಗಳೇ ಮೆಟ್ಟಿಲುಗಳು. ಪ್ರಯತ್ನಗಳೇ ನಮ್ಮನ್ನು ಗುರಿಮುಟ್ಟಿಸುತ್ತವೆ. ಸತತ ಪ್ರಯತ್ನದಿಂದ ಗುರಿ ಸೇರುವ ಘಳಿಗೆ ಸಮಿಪಿಸಬಹುದು. ಇದೇ ರೀತಿ ತನ್ನ ಬಣ್ಣ ಬಣ್ಣದ ಕನಸನ್ನು (ನನಸಾಗಿಸಲು) ರಂಗೇರಿಸಲು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ ಪುತ್ತೂರು ತಾಲೂಕಿನ ಹರ್ಷಿತ್‌ ಕಣಿಯಾರು.

Advertisement

ನಗು ಮೊಗದ ಚೆಲುವನಿಗೆ ನಟನಾಗುವ ಕನಸು. ಬಿಬಿಎಂ ಪದವೀಧರರಾದ ಇವರು ತಮ್ಮ ಶಾಲಾ ದಿನಗಳಿಂದಲೇ ನೃತ್ಯ, ನಾಟಕ. ಇಂತಹ ಕಾರ್ಯಕ್ರಮಗಳೆಲ್ಲ ಹೆಚ್ಚಿನ ಒಲವನ್ನು ತೋರುತ್ತಿದ್ದರು. ನಟನಾಗಬೇಕು ಎಂಬ ಕನಸು ಹಚ್ಚ ಹಸುರಾಗಿಯೇ ಉಳಿಯಿತು. ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ ಅವರು, ಈ ಕುರಿತು ಹೆಚ್ಚಿನ ತರಬೇತಿ ಪಡೆದರು. ಉಡುಪಿಯಲ್ಲಿ ನಡೆದ ಫಿಲ್ಮ್ ಆಡಿಷನ್‌ನಲ್ಲಿ ಭಾಗವಹಿಸಿ ನಟನೆಯ ಕ್ಷೇತ್ರದಲ್ಲಿ ತಮ್ಮ ಅರ್ಹತೆಯನ್ನು ಸಾಬೀತು ಮಾಡಿದರು.

ಬಣ್ಣದ ಬದುಕಿನ ಕನಸ ಹೊತ್ತ ಹೈದನಿಗೆ ಧಾರವಾಹಿಗಳಲ್ಲಿ ಅವಕಾಶ ತೆರೆದುಕೊಂಡಿತ್ತು. ನಾ ನಿನ್ನ ಬಿಡಲಾರೆ, ಸೀತಾ ವಲ್ಲಭ, ಸರ್ವಮಂಗಲ ಮಾಂಗಲೆ ಸಹಿತ ಹಲವು ಧಾರವಾಹಿಗಳಲ್ಲಿ ಉತ್ತಮವಾಗಿ ಅವಕಾಶಗಳು ಸಿಕ್ಕವು. ನಟನೆಯ ಅನುಭವ ಬೆಳೆಯಲೂ ಸಹಾಯವಾಯಿತು. ಅವಕಾಶಗಳ ಆಶಾವಾದಿಯಾದ ಹರ್ಷಿತ್‌ಗೆ ಈ ಅವಕಾಶಾಗಳು ಜೀವ ತುಂಬಿದವು. ಇದೀಗ ಅವರ ನಟನ ಕೌಶಲವನ್ನು ಗುರುತಿಸಿ ಖ್ಯಾತ ನಿರ್ದೇಶಕ ಕೃಷ್ಣ ವಿ. ಹಾಗೂ ಮಧುಸೂದನ್‌ ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರವೊಂದರಲ್ಲಿ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಚಂದನವನಕ್ಕೆ ಲಗ್ಗೆಯಿಟ್ಟಿದ್ದಾರೆ. ಕಿರು ತೆರೆಯಿಂದ ಹಿರಿ ತೆರೆಗೆ ಕಾಲಿಟ್ಟ ಮುಗ್ಧ ಮನದ ಹೈದನಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳುವ ಸೂಚನೆ ಸಿಗುತ್ತಿದೆ.

ಮಗನ ಆಸಕ್ತಿಗೆ ತಂದೆ, ತಾಯಿ ಮತ್ತು ಸಹೋದರನ ಪ್ರೋತ್ಸಾಹ ನೀರೆರೆದಿದೆ. ಸ್ನೇಹಿತರ ಸಹಾಯದಿಂದ ಸಿನೆಮಾದಲ್ಲಿ ಅವಕಾಶ ದೊರಕುವಂತಾಯಿತು ಎಂದು ಹರ್ಷಿತ್‌ ಹೇಳುತ್ತಾರೆ. ತನ್ನಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ನಿರಂತರ ಪ್ರಯತ್ನದ ಫಲವಾಗಿ ಅವಕಾಶಗಳು ತೆರೆದುಕೊಳ್ಳುವ ಸಮಯ ಸಮೀಪಿಸುತ್ತದೆ. ಯಾರು ಸತತವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೋ, ಅವರಿಗೆ ದಾರಿ ತಾನಾಗಿ ತೆರೆದುಕೊಳ್ಳುತ್ತದೆ. ಕೈ ಕಟ್ಟಿ ಕೂರದೆ ಆತ್ಮ ವಿಶ್ವಾಸದಿಂದ ಮುನ್ನುಗ್ಗುವ ಧೈರ್ಯ ಮಾಡಿದ ಹರ್ಷಿತ್‌, ಸ್ಯಾಂಡಲ್‌ವುಡ್‌ನ‌ಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ನಗುಮೊಗದ ಸರದಾರ
ಮೊದಲ ಪ್ರಯತ್ನದಲ್ಲಿಯೇ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಪ್ರಯತ್ನದಿಂದ ಸೋತರೂ ಅದರೊಳಗಿನ ಅನುಭವ ಜೀವನದ ನೈಜತೆಯನ್ನು ಅರ್ಥಮಾಡಿಸುತ್ತದೆ. ಛಲದಿಂದ ಮುನ್ನುಗ್ಗಿದರೆ ಯಾವ ಕಷ್ಟವಾದರೂ ಸರಿಯೇ ದೂರ ಸರಿಯಲೇ ಬೇಕು. ಪ್ರಯತ್ನದಲ್ಲಿ ನಂಬಿಕೆ, ಶ್ರದ್ಧೆ ಇದ್ದರೆ ಪ್ರತಿಯೊಂದು ಹಂತದಲ್ಲಿಯೂ ಗುರಿ ಸೇರುವ ಮೆಟ್ಟಿಲುಗಳು ಕಾಣಿಸುತ್ತವೆ. ತಾನು ಕಂಡ ಕನಸಿಗೆ ಬಣ್ಣದ ರಂಗೋಲಿ ಬಿಡಲು ಚಂದನವನಕ್ಕೆ ಕಾಲಿಟ್ಟ ಹರ್ಷಿತ್‌ ಎಲ್ಲರ ಮನ ಗೆಲ್ಲಲಿ ಹಾಗೂ ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿ ಬರುವಂತಾಗಲಿ ಎಂಬುದು ಅವರ ಸ್ನೇಹಿತರ ಹಾರೈಕೆ.

Advertisement

ಭವಿತಾ ಕಣಲ್‌

Advertisement

Udayavani is now on Telegram. Click here to join our channel and stay updated with the latest news.

Next