ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಕ್ರಿಕೆಟ್ ಸರಣಿ ಆರಂಭಿಸುವ ಮುನ್ನವೇ ಭಾರತ ದೊಡ್ಡ ಆಘಾತವೊಂದಕ್ಕೆ ಸಿಲುಕಿದೆ. ಬೆನ್ನುನೋವಿಗೆ ಸಿಲುಕಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಹಾಗೂ ಏಕದಿನ ಸರಣಿ ಗಳೆರಡರಿಂದಲೂ ಹೊರಬಿದ್ದಿದ್ದಾರೆ.
ಪಾಂಡ್ಯ ಬದಲು ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜ ಅವರನ್ನು ಏಕದಿನ ಸರಣಿಗೆ ಸೇರಿಸಿ ಕೊಳ್ಳಲಾಗಿದೆ. ಆದರೆ ಟಿ20 ಸರಣಿಗೆ ಯಾವುದೇ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಹೀಗಾಗಿ ಚುಟುಕು ತಂಡದ ಸದಸ್ಯರ ಸಂಖ್ಯೆ 14ಕ್ಕೆ ಇಳಿದಿದೆ.
ಇತ್ತೀಚೆಗಷ್ಟೇ ಟಿವಿ ಶೋ ವಿವಾದಕ್ಕೆ ಸಿಲುಕಿ ನಿಷೇಧಕ್ಕೊಳಗಾಗಿದ್ದ ಹಾರ್ದಿಕ್ ಪಾಂಡ್ಯ, ನ್ಯೂಜಿಲ್ಯಾಂಡ್ ಪ್ರವಾಸದ ನಡುವೆ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದರು. ಅಷ್ಟರಲ್ಲೇ ಮತ್ತೂಂದು ಸಮಸ್ಯೆಗೆ ಸಿಲುಕಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದ ಸಲಹೆಯಂತೆ ಸದ್ಯ ವಿಶ್ರಾಂತಿ ಪಡೆಯಲಿರುವ ಹಾರ್ದಿಕ್ ಪಾಂಡ್ಯ, ಬಳಿಕ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ.
ಮುಂಬರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಫಾರ್ಮ್ ಭಾರತಕ್ಕೆ ನಿರ್ಣಾಯಕವಾಗಿತ್ತು. ಆದರೀಗ ಮೂಲೆಗುಂಪಾಗಿದ್ದ ರವೀಂದ್ರ ಜಡೇಜಗೆ ಅವಕಾಶವೊಂದು ತೆರೆಯ ಲ್ಪಟ್ಟಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡರೆ ಜಡೇಜ ಅವರಿಗೆ ವಿಶ್ವಕಪ್ ತಂಡದ ಬಾಗಿಲು ತೆರೆಯ ಲ್ಪಡುವ ಸಾಧ್ಯತೆ ಇದೆ.
ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟಿ20 ಪಂದ್ಯ ರವಿವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ. 2ನೇ ಪಂದ್ಯದ ತಾಣ ಬೆಂಗಳೂರು (ಫೆ. 27). 5 ಪಂದ್ಯಗಳ ಏಕದಿನ ಸರಣಿ ಮಾ. 2ರಿಂದ ಆರಂಭವಾಗಲಿದೆ.