Advertisement

Haratala Gowri: ಮರಳಿನಲ್ಲಿ ಅರಳುವ ಹರತಾಳ ಗೌರಿ

12:28 PM Sep 17, 2023 | Team Udayavani |

ಮೂಲತಃ ಮಹಾರಾಷ್ಟ್ರ­ದವರಾದ ನಮ್ಮ ಮನೆತನದ ಪೂರ್ವಜರು ಕರ್ನಾಟಕಕ್ಕೆ ಬಂದು ನೆಲೆಸಿ ಎರಡ್ಮೂರು ಶತಮಾನಗಳೇ ಉರುಳಿದವು. ಹೀಗಾಗಿ ನಮ್ಮ ಮನೆಯಲ್ಲೀಗ ಮೂಲ ಬೇರಿನ ಆಚರಣೆಯೊಂದಿಗೆ, ನಾವು ವಾಸಿಸುವ ಅಕ್ಕಪಕ್ಕದ ಪ್ರದೇಶಗಳ ಪ್ರಭಾವ­ದಿಂದಾಗಿ ಆಚರಣೆಗಳು ರೆಂಬೆ ಕೊಂಬೆಯಂತೆ ಬಂದು ಸೇರಿ ನಮ್ಮವೇ ಎನಿಸಿಬಿಟ್ಟಿವೆ. ಹೀಗಾಗಿ ಮಹಾರಾಷ್ಟ್ರ ಮೂಲದ, ಉತ್ತರ ಕರ್ನಾಟಕ ಭಾಗಗಳಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳಲ್ಲಿ ಗೌರಿ-ಗಣೇಶನ ಹಬ್ಬದ ಆಚರಣೆ ವಿಭಿನ್ನತೆ ಹಾಗೂ ವಿಶಿಷ್ಟತೆಯಿಂದ ಕೂಡಿದೆ.

Advertisement

ಇಬ್ಬರು ಗೌರಿಯರು!:

ಮೊದಲಿಗೆ ಈ ಗೌರಿಯರ ಕುರಿತ ಕುತೂಹಲಕರ ಹಿನ್ನೆಲೆಯನ್ನು ಕೇಳಿಬಿಡಿ. ಗೌರಿಯರು ಎಂದೇಕೆ ಹೇಳಿದೆನೆಂದರೆ ಆಯಾ ಪ್ರದೇಶ ಹಾಗೂ ಮನೆತನದ ವಾಡಿಕೆಯಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸ್ವರ್ಣಗೌರಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹರತಾಳ ಗೌರಿ ಎಂಬ ಇಬ್ಬರು ವಿಭಿನ್ನ ಗೌರಿಯರನ್ನು ಪೂಜಿಸುವ ಸಂಪ್ರದಾಯವಿದೆ. ಅಂದಿನ ಕಾಲದ ನಂಬಿಕೆಯಂತೆ, ಸ್ವರ್ಣಗೌರಿ ಹಾಗೂ ಹರತಾಳ ಗೌರಿ ಇಬ್ಬರೂ ಸಹೋದರಿಯರೆಂಬ ಕತೆಯಿದೆ. ಕೆಲವು ಕಡೆಗಳಲ್ಲಿ ಇವರಿಬ್ಬರೂ ಬೇರೆಬೇರೆ ದಂಪತಿಗೆ ಜನಿಸಿದ್ದು ಪ್ರಾಣ ಸ್ನೇಹಿತೆಯರೆಂಬ ಕತೆಯೂ ಇದೆ. ಸ್ವರ್ಣಗೌರಿಗೆ ಒಬ್ಬ ರಾಜನೊಂದಿಗೆ ವಿವಾಹ ನಡೆಯುತ್ತದೆ. ಶ್ರೀಮಂತೆಯೆಂದು ಅವಳಿಗೆ ಅಲಂಕಾರ, ಪೂಜೆ ವಿಜೃಂಭಣೆಯಿಂದ ಕೂಡಿರುತ್ತದೆ. ಆದರೆ ಹರತಾಳ ಗೌರಿಯನ್ನು ಒಬ್ಬ ಬಡ ಬ್ರಾಹ್ಮಣನಿಗೆ ವಿವಾಹ ಮಾಡಿ ಕೊಡಲಾಗುತ್ತದೆ ಎಂದು ನಂಬಿಕೆಯಿದೆ.

ವಿಗ್ರಹ/ ಮೂರ್ತಿ ರೂಪದಲ್ಲಿಲ್ಲ…

ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಸ್ವರ್ಣಗೌರಿ ಹಬ್ಬಕ್ಕೆ ಬಹಳ ಮಹತ್ವವಿದೆ. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಹರತಾಳ ಗೌರಿ ಅಥವಾ ಹರಿತಾಲಿಕಾ ಎಂದು ಕರೆಯಲ್ಪಡುವ ಗೌರಿಗೆ ಸರಳ ಪೂಜೆಯೆ ಸಂಪನ್ನ. ಈಕೆ ಕೇವಲ ಪತ್ರೆ, ಪುಷ್ಪ, ಅರ್ಚನೆಗಳಿಂದ ಸಂಪ್ರೀತಳಾಗುತ್ತಾಳೆ. ಮತ್ತೂಂದು ವಿಶೇಷವೆಂದರೆ ಹರತಾಳ ಗೌರಿಯು ಸ್ವರ್ಣಗೌರಿಯಂತೆ ಮೂರ್ತಿ/ವಿಗ್ರಹ ರೂಪದಲ್ಲಿ ಇರುವುದಿಲ್ಲ. ಭಾದ್ರಪದ ಶುಕ್ಲ ತದಿಗೆಯ ದಿನ ಬೆಳಗ್ಗೆ ಮುತ್ತೈದೆಯರು ಮಡಿಯುಟ್ಟು, ನದಿ ತೀರದಿಂದ ಮರಳನ್ನು ಸಂಗ್ರಹಿಸಿ ತರುತ್ತಾರೆ. ಅದನ್ನು ಬಳಸಿ ಒಂದು ಪುಟ್ಟ ಚೌಕಿಮಣೆಯ ಮೇಲೆ ಶಿವಲಿಂಗ, ಗಂಗೆ-ಗೌರಿ, ನಂದಿ ಹಾಗೂ ಶಿವಗಣಗಳನ್ನು ತಯಾರಿಸುತ್ತಾರೆ. ನಂತರ ಪತ್ರೆ, ಪುಷ್ಪಗಳಿಂದ ತಯಾರಿಸಿದ ಹರತಾಳ ಗೌರಿಯನ್ನು ಅಲಂಕರಿಸಿ ಮೆಕ್ಕೆಜೋಳ, ಸಿಹಿಗೆಣಸು, ಸೌತೆಕಾಯಿಯ ನೈವೇದ್ಯ ಅರ್ಪಿಸಿ, ಆರತಿ ಬೆಳಗುತ್ತಾರೆ. ಫ‌ಲ, ತಾಂಬೂಲ, ಗೋಧಿ, ಕಡಲೆಬೇಳೆ, ಬೆಲ್ಲ, ಕುಪ್ಪಸದ ತುಂಡು, ಹಸಿರು ಬಳೆ ಮುಂತಾದ ಸಾಮಗ್ರಿಗಳನ್ನು ಒಂದು ಬುಟ್ಟಿಯಲ್ಲಿಟ್ಟು ಹಿರಿಯ ಮುತ್ತೈದೆಗೆ ಬಾಗಿನ ಕೊಡುತ್ತಾರೆ. ಮರುದಿನ ಗಣೇಶನ ಪ್ರತಿಷ್ಟಾಪನೆಗೂ ಮುನ್ನ ಹರತಾಳ ಗೌರಿಯನ್ನು ವಿಸರ್ಜಿಸಲಾಗುತ್ತದೆ. ಎಲ್ಲ ಮರಳನ್ನು ಬಾಚಿ ಪುನಃ ನದಿ ತೀರದಲ್ಲಿ ಅಥವಾ ಯಾವುದಾದರೂ ಮರದಡಿಗೆ ವಿಸರ್ಜನೆ ಮಾಡಲಾಗುತ್ತದೆ.

Advertisement

ಪೂಜಾ ವಿಧಾನದಲ್ಲೂ ಭಿನ್ನತೆ:

ಗಣಪನನ್ನು ಪೂಜಿಸುವ ಪದ್ಧತಿಯಲ್ಲೂ ಭಿನ್ನತೆಯಿದೆ. ಒಂದು, ಮೂರು, ಐದು, ಏಳು ಹೀಗೆ ಬೆಸ ಸಂಖ್ಯೆಯ ದಿನಗಳು ಗಣೇಶನನ್ನು ಕೂರಿಸಿ ವಿಸರ್ಜಿಸುವ ಪದ್ಧತಿ ಎಲ್ಲೆಡೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮೂಲದ ಸಂಪ್ರದಾಯ ನಡೆಸಿಕೊಂಡು ಬಂದಿರುವ ಮನೆತನಗಳಲ್ಲಿ, ಸರಿಯಾದ ಮುಹೂರ್ತ ನೋಡಿ ಮನೆಯ ಯಜಮಾನ ಗಣಪನ ವಿಗ್ರಹವನ್ನು ತರುತ್ತಾನೆ. ಮುತ್ತೈದೆಯು ಕೆಂಪಾರತಿ ಮಾಡಿ ದೃಷ್ಟಿ ನೀವಾಳಿಸಿ, ಭಕ್ತಿ ಭಾವದಿಂದ ಮನೆಯೊಳಕ್ಕೆ ಬರ ಮಾಡಿಕೊಳ್ಳುತ್ತಾಳೆ. ಪ್ರತಿಷ್ಠಾಪನೆಯವರೆಗೂ ಗಣೇಶನನ್ನು ನೋಡಬಾರದೆಂಬ ಆಚರಣೆಯಿದೆ. ಹಾಗಾಗಿ ವಿಗ್ರಹವನ್ನು ಕೆಂಪು ಬಟ್ಟೆಯಿಂದ ಮುಚ್ಚಿ ತರಲಾಗುತ್ತದೆ. ಪೂಜೆ ಪ್ರಾರಂಭವಾಗುವವರೆಗೂ ವಿಗ್ರಹವನ್ನು ಗೋಡೆಗೆ ಮುಖ ಮಾಡಿ ಇಡಲಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆಗೈದು ಗಣಪನನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆಲವರು ಜೇಷ್ಠಾ ಗೌರಿಯ ವ್ರತದಂದು ಹಾಗೂ ಕೆಲವರು ಅನಂತ ಪದ್ಮನಾಭನ ವ್ರತದಂದು, ಸಕಲ ಷೋಡಶೋಪಚಾರ ಪೂಜೆ ಸಹಿತ, ಬಗೆಬಗೆಯ ಭಕ್ಷ್ಯ ಭೋಜನಗಳಿಂದ ಕೂಡಿದ ನೈವೇದ್ಯವನ್ನು ಸಮರ್ಪಿಸಿ, ಗಣೇಶನನ್ನು ವಿಸರ್ಜಿಸುವ ಪದ್ಧತಿಯಿದೆ.

ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ:

ಸಂಕಷ್ಟಹರ, ವಿಘ್ನ ನಿವಾರಕ ಗಣಪನನ್ನು ಸಂತುಷ್ಟಪಡಿಸಿ ವರಗಳನ್ನು ಬೇಡುವ ರೂಢಿಯೂ ಇದೆ. ಮಂಗಳಾರತಿಯ ವೇಳೆಯಲ್ಲಿ ಮನೆಯವರೆಲ್ಲರೂ ಯಥಾಶಕ್ತಿ ಕ್ರಮವಾಗಿ 7, 21, 52 ಹಾಗೂ 108 ಗರಿಕೆಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, 21 ಬಾರಿ ಉಠ್ ಬೈಸ್‌ ಹೊಡೆಯುವ ರೂಢಿ ಚಾಲ್ತಿಯಲ್ಲಿದೆ. ಗಣಪತಿಯನ್ನು ವಿಸರ್ಜಿಸುವ ಸಮಯದಲ್ಲಿ ವಿಗ್ರಹವಿಟ್ಟ ಸ್ಥಾನವನ್ನು ಪಲ್ಲಟಗೊಳಿಸಿದ ನಂತರ ಆ ಜಾಗವನ್ನು ಖಾಲಿ ಇಡಕೂಡದೆಂದು ಯಾವುದಾದರೂ ವಸ್ತು ಅಥವಾ ಪುಸ್ತಕವನ್ನು ಇಡುವುದುಂಟು. ಒಟ್ಟಾರೆ ಈ ಭಾಗಗಳಲ್ಲಿ ವಾರಪೂರ್ತಿ ಗೌರಿ-ಗಣೇಶ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ವಯಸ್ಸು, ಅಂತಸ್ತಿನ ಬೇಧವಿಲ್ಲದೆ ಮಾಡುವ ಸಂಭ್ರಮಾಚರಣೆ ಎಲ್ಲರ ಸಂತಸವನ್ನು ಇಮ್ಮಡಿಗೊಳಿಸುತ್ತದೆ.

ಸುಕ್ಕಿನುಂಡೆ ಸ್ಪೆಷಲ್…

ಮೋದಕ ಪ್ರಿಯ ಗಣಪನಿಗೆಂದು ಎಲ್ಲರ ಮನೆಯಲ್ಲೂ ನೈವೇದ್ಯಕ್ಕೆ ಮೋದಕವನ್ನು ಕಡ್ಡಾಯವಾಗಿ ತಯಾರಿಸಲಾಗುತ್ತದೆ. ಇಲ್ಲಿ ಮತ್ತೂ ಒಂದು ವಿಶೇಷವಿದೆ. ನೈವೇದ್ಯದಲ್ಲಿ ಬೇಯಿಸಿದ ಮೋದಕ, ಕಡುಬು ಮಾತ್ರವಲ್ಲದೆ, ವಿಶೇಷವಾಗಿ ಸುಕ್ಕಿನುಂಡೆ (ಇದೂ ಗಣಪನಿಗೆ ತುಂಬಾ ಪ್ರಿಯವಾದ ತಿನಿಸು) ತಯಾರಿಸಿ ಅರ್ಪಿಸುವ ವಾಡಿಕೆಯೂ ಇದೆ. ಕೆಲವು ಮನೆಗಳಲ್ಲಿ 8 ಅಥವಾ 11 ದಿನವೂ ಒಂದೊಂದು ಬಗೆಯ ತಿನಿಸನ್ನು ನೈವೇದ್ಯವಾಗಿ ಅರ್ಪಿಸಿ, ಕೊನೆಯ ದಿನ ಎಲ್ಲವನ್ನೂ ತಯಾರಿಸಿ ಅರ್ಪಿಸುವ ರೂಢಿಯಿದೆ. ಅದರಲ್ಲಿ ಸಹ ಈ ಸುಕ್ಕಿನುಂಡೆಗೇ ಮೊದಲ ಮತ್ತು ಉನ್ನತ ಸ್ಥಾನ.

-ಮೇಘನಾ ಕಾನೇಟ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next