Advertisement

ತೆಗ್ಗಿನಮಠದ ಶಿಕ್ಷಣ ಕ್ರಾಂತಿಗೆ ಸುವರ್ಣ ಸಂಭ್ರಮ

03:12 PM Dec 25, 2019 | Naveen |

„ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

ಹರಪನಹಳ್ಳಿ: ಕಳೆದ ಐದು ದಶಕಗಳ ಕಾಲ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉದ್ಯೋಗ ಕಲ್ಪಿಸಿರುವ ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ತೆಗ್ಗಿನಮಠ ಆರ್ಟ್ಸ್ ಆ್ಯಂಡ್‌ ಎಜ್ಯುಕೇಷನ್‌ ನಲ್‌ ಸೊಸೈಟಿ(ಟಿಎಂಎಇ) ಸಂಸ್ಥೆ ಇದೀಗ ಸುವರ್ಣ ಸಂಭ್ರಮದಲ್ಲಿದೆ.

ತೆಗ್ಗಿನಮಠ ಪೀಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಡಿ. 25ರಂದು ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗುತ್ತಿದೆ. ಜನ ಸಮುದಾಯದ ಅಜ್ಞಾನ ತೊಲಗಿಸಬೇಕೆಂಬ ಉದ್ದೇಶದಿಂದ ಲಿಂ.ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ವಿದ್ಯಾ ಸಂಸ್ಥೆಗಳನ್ನು ಹುಟ್ಟುಹಾಕಿ 1969ರಲ್ಲಿ ಟಿಎಂಎಇ ಸಂಸ್ಥೆ ಪ್ರಾರಂಭಿಸಿದರು. ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳನ್ನೊಳಗೊಂಡು ಉದ್ಯೋಗಾಧಾರಿತ ಐಟಿಐ, ಪಾಲಿಟೆಕ್ನಿಕ್‌, ಫಾರ್ಮಸಿ, ನರ್ಸಿಂಗ್‌ ಶಿಕ್ಷಣ ಹಾಗೂ ಆಯುರ್ವೇದ ವಿದ್ಯಾಲಯ, ನಾಟಕ ರಂಗ ಶಾಲೆ, ಅಂಗನವಾಡಿ ತರಬೇತಿ ಕೇಂದ್ರ, ಸಂಸ್ಕೃತ ಪಾಠ ಶಾಲೆ, ದೈಹಿಕ ಶಿಕ್ಷಕರ ತರಬೇತಿ ಕಾಲೇಜು ಸೇರಿದಂತೆ 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮಧ್ಯ ಕರ್ನಾಟಕದ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಧಾರವಾಡ ಮತ್ತು ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಸ್ಥಾಪಿಸಿದ್ದು, 1400ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲಿಂ. ಚಂದ್ರಮೌಳೀಶ್ವರ ಶ್ರೀಗಳ ಭಗೀರಥ ಪ್ರಯತ್ನದ ಫಲವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಸಂಸ್ಥೆ ಬೆಳಕಾಗಿದೆ. ಆರಂಭದಲ್ಲಿ ಸಂಸ್ಕೃತ ಪಾಠ ಶಾಲೆ ಮತ್ತು “ಪಂಡಿತ ಬಸವಲಿಂಗ ಶಾಸ್ತ್ರಿ ‘ಗ್ರಂಥಾಲಯವನ್ನು ಪ್ರಾರಂಭಿಸಿ ನಂತರ 1970ರಲ್ಲಿ ಶಿಕ್ಷಕರ ತರಬೇತಿ ಶಾಲೆಯನ್ನು ಪ್ರಾರಂಭಿಸಿದರು. 1972ರಲ್ಲಿ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿ ಉಜ್ಜಯಿನಿ ಪೀಠದ ಜ್ಞಾನಗುರು ವಿದ್ಯಾಪೀಠಕ್ಕೆ ದಾನವಾಗಿ ನೀಡಿದ್ದಾರೆ. ನಂತರ ತಮ್ಮ ಪಟ್ಟಾಧಿಕಾರವಾದ ವರ್ಷದಲ್ಲಿ ಉದ್ಯೋಗಾಧಾರಿತ ಬಿ.ಇಡಿ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿ ನಾಡಿನ ವಿದ್ಯಾರ್ಥಿಗಳಲ್ಲಿ ಉದ್ಯೋಗದ ಭರವಸೆ ಮೂಡಿಸಿದರು. ಈ ಮಠ ಇಂದಿಗೂ ಧಾರ್ಮಿಕ ಕಾರ್ಯದ ಜೊತೆಗೆ ಉದ್ಯೋಗಾಧಾರಿತ ಸಂಸ್ಥೆಗಳನ್ನು ತೆರೆಯುವ ಮೂಲಕ ನಿರುದ್ಯೋಗಿಗಳ ಪಾಲಿಗೆ ಉದ್ಯೋಗದ ಅಕ್ಷಯ ಪಾತ್ರೆಯಾಗಿದೆ.

ಕೆಳದಿ ನಾಯಕರು, ಪಾಳೆಗಾರರ ಪಾಳೆ ಪಟ್ಟಾಗಿದ್ದ ಹರಪನಹಳ್ಳಿ ಪಟ್ಟಣದಲ್ಲಿ ನಾಲ್ಕು ಮಠಗಳು ಸ್ಥಾಪನೆಯಾಗಿ ಧಾರ್ಮಿಕ ಚಟುವಟಿಕೆ ಮುಂದುವರೆಸಿಕೊಂಡು ಬಂದಿದ್ದು, ಅವುಗಳಲ್ಲಿ ಹಿರೇಮಠ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕೆಳದಿ ಸೋಮಶೇಖರನ ಕಾಲದಲ್ಲಿ ಕೋಟೆಯ ಒಳಗಡೆ ಹಿರೇಮಠ ಸ್ಥಾಪನೆಯಾಗಿತ್ತು ಎಂಬುದಕ್ಕೆ ಕುರುಹಾಗಿ ಕೋಟೆಯಲ್ಲಿ ಮಠದ ಜಾಗವಿದೆ.

Advertisement

ಕೋಟೆ ನಶಿಸಿ ಹೋದ ನಂತರ ಮಠ ಅವನತಿ ಕಂಡಿದೆ. ಈ ಸಂದರ್ಭದಲ್ಲಿ ಕೋಟೆಯಿಂದ ಹಿರೇಮಠ ಊರ ಸಮೀಪದ ತಗ್ಗಿನ ಜಾಗಕ್ಕೆ ಸ್ಥಳಾಂತರಗೊಂಡಿದೆ. ತಗ್ಗಿನ ಪ್ರದೇಶದಲ್ಲಿ ಮಠ ಸ್ಥಾಪನೆಗೊಂಡಿದ್ದರಿಂದ ಹಿರೇಮಠಕ್ಕೆ “ತಗ್ಗಿನಮಠ’ ಅಥವಾ “ತೆಗ್ಗಿನಮಠ’ ಎಂಬ ಹೆಸರು ಬಂದಿದ್ದು ಇದು ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಶಾಖಾಮಠವಾಗಿದೆ.

ಬಡ ಮಕ್ಕಳ ಪಾಲಿನ ಸುವರ್ಣಯುಗ
ಲಿಂ. ಚಂದ್ರಮೌಳೀಶ್ವರ ಶ್ರೀಗಳು ಕಟ್ಟಿ ಬೆಳೆಸಿರುವ ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಶಿಕ್ಷಣ ವಂಚಿತ ಸಮುದಾಯದ ಮಕ್ಕಳಿಗೆ ಅಕ್ಷರ ದೀಕ್ಷೆ ನೀಡಿದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ. ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ವರ್ಗದ ನೌಕರರು ಇದ್ದಾರೆ. ಹಾಗೆಯೇ ಜಾತಿಬೇಧ ಇಲ್ಲದೇ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹಿರಿಯ ಶ್ರೀಗಳ ಕನಸಿನ ಕೂಸಾಗಿರುವ ಸಂಸ್ಥೆ ಸುವರ್ಣ ಸಂಭ್ರಮ ಆಚರಿಸುತ್ತಿದೆ. ಐವತ್ತು ವರ್ಷಗಳು ಬಡ ಮಕ್ಕಳ ಪಾಲಿನ ಸುವರ್ಣಯುಗ ಅಂದ್ರೆ ತಪ್ಪಾಗಲಿಕ್ಕಿಲ್ಲ.

ವರಸದ್ಯೋಜಾತ ಸ್ವಾಮೀಜಿ, ತೆಗ್ಗಿನಮಠ ಪೀಠಾಧ್ಯಕ್ಷರು ಚೈತನ್ಯದ ಚಿಲುಮೆ ಚಂದ್ರಶೇಖರಯ್ಯ ಸಂಸ್ಥೆಯ ಶಕ್ತಿ ತೆಗ್ಗಿನಮಠ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಲಿಂ.ಚಂದ್ರಮೌಳೀಶ್ವರ ಶ್ರೀಗಳ ಸಂಬಂಧಿ, ಟಿಎಂಎಇ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ (72) ಎಂಬ ಚೈತನ್ಯದ ಗಣಿ ದಣಿವರಿಯದೇ ಕಾರ್ಯನಿರ್ವಹಿಸುತ್ತಿದೆ. ಪಂಚಪೀಠಗಳು ಸಹ ಶಿಕ್ಷಣ ಕ್ಷೇತ್ರದಲ್ಲಿ ಮಾಡದಂಥ ಸಾಧನೆಯನ್ನು ಕೇವಲ ಒಂದು ಪುತ್ರವರ್ಗ ಮಠ ಮಾಡಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಚಂದ್ರಮೌಳೀಶ್ವರ ಶ್ರೀಗಳಿಂದ ಹಿಡಿದು ಈಗಿನ ವರಸದ್ಯೋಜಾತ ಸ್ವಾಮೀಜಿ ಅವರೊಂದಿಗೆ ಅವಿರತವಾಗಿ ಸಂಸ್ಥೆಯ ಏಳಿಗೆಗೆ ಟಿ.ಎಂ. ಚಂದ್ರಶೇಖರಯ್ಯ ದುಡಿಯುತ್ತಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಅವರು ಎಂಜಿನಿಯರಿಂಗ್‌ ಅಭ್ಯಾಸ ಮಾಡಿದ್ದು, ಮಠದ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next