Advertisement

ಬದುಕಿನಲ್ಲಿ ಹಣ-ಅಂತಸ್ತಿಗಿಂತ ನೆಮ್ಮದಿ ಮುಖ್ಯ: ಸುಧಾಮೂರ್ತಿ

03:30 PM Apr 07, 2023 | Team Udayavani |

ಹುಬ್ಬಳ್ಳಿ: ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಬೇರು ಮರೆಯಬಾರದು. ಜೀವನದಲ್ಲಿ ಹಣ ಅಂತಸ್ತು ಮುಖ್ಯವಲ್ಲ ನೆಮ್ಮದಿ ಮುಖ್ಯ. ಮತ್ತೊಂದು ಜನ್ಮವಿದ್ದರೆ ಅದು ಕನ್ನಡ ನಾಡಿನಲ್ಲಿ ಎಂದು ಪದ್ಮಭೂಷಣ ಪುರಸ್ಕೃತೆ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.

Advertisement

ಪದ್ಮಭೂಷಣ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೊಟೆಕ್ನಾಲಜಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಣ, ಅಂತಸ್ತು, ಸಾಧನೆಯಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ ಇದಕ್ಕೆ ಪ್ರೇರಣೆ ಹಾಗೂ ಕಾರಣರಾದ ಜನ್ಮ ನೀಡಿದ ತಂದೆ-ತಾಯಿ, ಅಕ್ಷರ ಕಲಿಸಿದ ಗುರುಗಳು, ಶಿಕ್ಷಣ ಸಂಸ್ಥೆಗಳನ್ನು ಮರೆಯಬಾರದು. ಸದಾ ಕೃತಜ್ಞರಾಗಿರಬೇಕು. ಜೀವನದಲ್ಲಿ ಹಣ, ಅಂತಸ್ತು ಮುಖ್ಯವೇ ಅಲ್ಲ. ಇವುಗಳಿಂದ ಸಂಪೂರ್ಣ ಸುಖ, ಶಾಂತಿ ಹಾಗೂ ನೆಮ್ಮದಿ ಸಿಗಲ್ಲ. ಗಳಿಸಿದ ಹಣದಲ್ಲಿ ಒಂದಿಷ್ಟು ಸಮಾಜಕ್ಕೆ ನೀಡುವುದರಲ್ಲಿ ಇರುವ ಸಮಾಧಾನ ಮತ್ತೂಂದರಲ್ಲಿ ಇಲ್ಲ ಎಂದರು.

ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ನೀಡಿದಾಗ ತಂದೆ-ತಾಯಿ, ಗುರುಗಳು, ಕಲಿತ ಶಿಕ್ಷಣ ಸಂಸ್ಥೆ, ಬಡವರು ನೆನಪಾದರು. ಎಂಜಿನಿಯರಿಂಗ್‌ ಕಲಿತ ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜು, ನನ್ನ ಜತೆ ಕೆಲಸ ಮಾಡಿದ ದೇವದಾಸಿಯರು, ನಾವು ಸಾಮಾಜಿಕ ಕಾರ್ಯ ಕೈಗೊಳ್ಳಲು ಕಾರಣರಾದ ಬಡವರು, ಕರ್ನಾಟಕ ಹಾಗೂ ಈ ದೇಶ ಭಾರತ ನೆನಪಾಯಿತು. ಈ ಪ್ರಶಸ್ತಿಗೆ ಭಾಜರಾಗುವುದಕ್ಕೆ ನನ್ನೊಂದಿಗೆ ಶ್ರಮಿಸಿದವರು ನನ್ನಷ್ಟೇ ಪಾಲುದಾರರು. ನನ್ನ ರಕ್ತ ಹಾಗೂ ಡಿಎನ್‌ಎ, ಹೃದಯದಲ್ಲಿ ಕನ್ನಡವಿದೆ.

ಮತ್ತೊಂದು ಜನ್ಮವಿದ್ದರೆ ಅದು ಕರ್ನಾಟಕದಲ್ಲಿಯೇ ಹುಟ್ಟಬೇಕು. ಜಗತ್ತಿನಲ್ಲಿ ನಾನು ಎಲ್ಲಿಯೇ ಇದ್ದರೂ ಮೊದಲು ಕರ್ನಾಟಕ, ಬಳಿಕ ಬಿವಿಬಿಯನ್ನು ಸ್ಮರಿಸುತ್ತೇನೆ. ಬಿ.ವಿ.ಭೂಮರಡ್ಡಿ ಅವರು ಈ ಸಂಸ್ಥೆ ಕಟ್ಟದಿದ್ದರೆ ನಾನು ಇಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ. 1968ರಲ್ಲಿ ಶಿಕ್ಷಣ ಪಡೆಯುವುದು, ಅದರಲ್ಲಿಯೂ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು ಬಹಳ ಕಷ್ಟ ಇತ್ತು. ಅನೇಕರು ವಿರೋಧ ಮಾಡಿದರೂ ತಂದೆ ನನ್ನ ನಿಲುವಿಗೆ ಬೆನ್ನೆಲುಬಾಗಿದ್ದರು. ದೇವದಾಸಿಯರೊಂದಿಗೆ ಸುಮಾರು 18 ವರ್ಷ ಕಾಲ ಕೆಲಸ ಮಾಡಿದ್ದೇನೆ. ಇದರೊಂದಿಗೆ ಹಲವು ಕಾರ್ಯಗಳು ಫೌಂಡೇಶನ್‌ ಮೂಲಕ ನಡೆಯುತ್ತಿವೆ. ಈ ಸಂದರ್ಭದಲ್ಲಿ ಅನೇಕ ಬಡವರು ಹಲವು ಪಾಠ ಕಲಿಸಿದ್ದಾರೆ. ನನ್ನ ಪತಿ, ಇಡೀ ಕುಟುಂಬ ಬೆನ್ನುಲುಬಾಗಿ ನಿಂತಿದೆ ಎಂದರು.

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಧಾಮೂರ್ತಿ ಅವರ ಭಾರತ ರತ್ನಕ್ಕೆ ಅರ್ಹರು. ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದರಿಂದ ಸುಧಾಮೂರ್ತಿ ಅವರಿಗಲ್ಲ, ಆ ಪ್ರಶಸ್ತಿಗೆ ದಕ್ಕಿದ ಗೌರವ, ಶ್ರೇಯಸ್ಸು. ಕೆಲ ಪ್ರಶಸ್ತಿಗಳು ವ್ಯಕ್ತಿಗಳನ್ನು ಎತ್ತರಕ್ಕೆ ಕೊಂಡೊಯ್ದರೆ ಈ ಪ್ರಶಸ್ತಿಯನ್ನು ಸುಧಾಮೂರ್ತಿ ಅವರು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಜಗತ್ತಿನ ಯಾವ ಶಿಕ್ಷಣ ಸಂಸ್ಥೆ ಇಂತಹ ವಿದ್ಯಾರ್ಥಿನಿಯನ್ನು ಕಂಡಿರಲಿಕ್ಕಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ, ಡಾ|ಪ್ರಕಾಶ ತೆವರಿ, ಡಾ| ಬಸವರಾಜ ಅನಾಮಿ ಉಪಸ್ಥಿತರಿದ್ದರು.

ಗುರುಗಳ ಕಾಲಿಗೆ ನಮಸ್ಕಾರ
ಸುಧಾಮೂರ್ತಿ ಅವರು ವೇದಿಕೆ ಆಗಮಸುವ ಮೊದಲು ತಮ್ಮ ಗುರುಗಳಾದ ಪ್ರೊ|ಎಸ್‌.ಬಿ. ಕುರುಬರ, ಪ್ರೊ|ವಿ.ಎಸ್‌.ದೋತ್ರದ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಅವರ ಸರಳತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಇನ್ನೂ ಸಹಪಾಠಿಗಳನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ವೇದಿಕೆಗೆ ತೆರಳಿದ ನಂತರ ಪದ್ಮವಿಭೂಷಣೆ ಪ್ರಶಸ್ತಿ ಪ್ರಮಾಣ ಪತ್ರವನ್ನು ಬಿ.ವಿ.ಭೂಮರಡ್ಡಿ ಅವರ ಭಾವಚಿತ್ರದ ಮುಂದೆ ಇಟ್ಟು ತಮ್ಮ ಸಾಧನೆಗೆ ಸಂಸ್ಥೆ ಹಾಗೂ ವ್ಯಕ್ತಿಗೆ ಈ ಮೂಲಕ ಧನ್ಯತೆ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next