Advertisement

ಗಂಡಂದಿರೇ, ಹ್ಯಾಂಡ್ಸಪ್‌!

09:11 AM May 10, 2019 | mahesh |

ಬೇಸಿಗೆ ರಜೆಯನ್ನು ಮುಗಿಸಿ, ಪತ್ನಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾಳೆ. ತಾನೆಲ್ಲಿದ್ದೇನೆ ಅವಳಿಗೇ ಗೊತ್ತಿಲ್ಲ. ಇಟ್ಟ ವಸ್ತುಗಳಾವೂ ಇದ್ದ ಜಾಗದಲ್ಲಿ ಇರಲಿಲ್ಲ. ಕಾಲಡಿ ಕಸ. ತಾನು ಹೋಗುವಾಗ ನೆಲ ಒರೆಸಿದ್ದೇ ಕೊನೆ. ಬಟ್ಟೆಗಳೆಲ್ಲ ಒಗೆಯುವ ಕೈಗಳನ್ನು ಕಾಯುತ್ತಿವೆ. ಸಿಂಕ್‌ ನೋಡುವ ಹಾಗಿಲ್ಲ. ಬಚ್ಚಲ ವರ್ಣನೆ ಬೇಡಬಿಡಿ… ಪತ್ನಿ ಊರಿಂದ ಮರಳಿದಾಗ, ಎಲ್ಲ ಪತಿಯರ ಹಣೆಬರಹವೇ ಈ ಲೇಖನ…

Advertisement

“ಮಕ್ಕಳಿಗೆ ಹೇಗೂ ಬೇಸಗೆ ರಜೆ. ತವರು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ’ ಅಂತ ಮನೆಯಾಕೆ ಹೇಳಿದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ. “ಗಂಡಸರೆಂದರೆ ಗಂಡಸರೇ’ ಅಂತ ಗೊಣಗಿ, ನನ್ನ ಬಗ್ಗೆ ಇನ್ನೇನೇನೋ ತಪ್ಪುತಪ್ಪಾಗಿ ಊಹಿಸಿಕೊಳ್ಳದಿರಿ. ಶಾಲೆಗೆ ರಜೆ ಕೊಟ್ಟ ತಕ್ಷಣ, ಮಕ್ಕಳನ್ನು ತಮ್ಮ ತಲೆಯ ಮೇಲಿನ ಭಾರವೆಂಬಂತೆ ಬೇಸಿಗೆ ಶಿಬಿರಕ್ಕೆ ಕಳಿಸಿ, ರಜೆ ಮುಗಿದುಬಿಡಲಿ ಅಂತ ನಿಟ್ಟುಸಿರುಯ್ಯುವ ಜಾಯಮಾನ ಖಂಡಿತ ನನ್ನದಲ್ಲ. ಅದರ ಬದಲು, ಹೆಂಡತಿ ತವರುಮನೆಗೆ ಹೋದರೆ ಅಲ್ಲಿ ಅವುಗಳಿಗೆ ಆಟವಾಡಿಕೊಳ್ಳಲು ಜೊತೆಗೆ ಅವಳ ಅಣ್ಣನ ಮಕ್ಕಳೂ ಇರುತ್ತಾರಲ್ಲ. ಜೊತೆಗೆ ಈ ಸಮಯದಲ್ಲಿ ತಾನೇ, ಮಕ್ಕಳು ತಮ್ಮ ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ, ತಾತ, ಅಜ್ಜಿ, ಸೋದರಮಾವ ಅನ್ನುವ ಹತ್ತಿರದ ಸಂಬಂಧಗಳನ್ನು ಪರಿಚಯ ಮಾಡಿಕೊಳ್ಳುವುದು? ಹಾಗಾಗಿ ಆಕೆ ತವರು ಮನೆಗೆ ಹೋಗಿಬರುವುದು ಒಳ್ಳೆಯ ನಿರ್ಧಾರವೆನ್ನಿಸಿತು.

ಕೊಂಚ ಸತ್ಯವನ್ನೂ ಸೇರಿಸಬೇಕೆಂದರೆ ಒಂಬತ್ತು ವರ್ಷದ ಹಿಂದೆ ಮದುವೆಯಾದಾಗಿನಿಂದ ಒಬ್ಬನೇ ಈ ಮನೆಯಲ್ಲಿ ಉಳಿಯುವ ಸ್ವಾತಂತ್ರ, ಅವಕಾಶ ಎರಡೂ ನನಗೆ ಸಿಕ್ಕಿರಲಿಲ್ಲ. ಅದಕ್ಕಿಂತಲೂ, ತಾನಿಲ್ಲದೇ ಈ ಮನೆಯ ಒಂದು ಹುಲ್ಲುಕಡ್ಡಿಯೂ ಅತ್ತಿತ್ತ ಸರಿಯುವುದಿಲ್ಲ ಅನ್ನುವ ಹೆಂಡತಿಯ ಅಹಮ್ಮಿಗೆ ಕೊಡಲಿ ಹಾಕಬೇಕಿತ್ತು. ಅದಕ್ಕಾಗಿಯೇ ಕಾಯುತ್ತಿದ್ದ ನನಗೆ ಈ ಬೇಸಿಗೆ ರಜೆ ಬಂದಿದ್ದು ವರದಾನವೇ. “ನೀವೂ ಆಫೀಸಿಗೆ ಎರಡು ವಾರ ರಜೆ ಹಾಕಿ ನಮ್ಮೊಡನೆ ಬನ್ನಿ’ ಅಂತ ಆಕೆ ಕರೆಯುತ್ತಾಳಾದರೂ, ಸಿಗುವ ಸ್ವಾತಂತ್ರ್ಯವನ್ನು ಬಿಟ್ಟುಕೊಡುವ ಮೂರ್ಖತನವನ್ನು ಯಾವ ಬುದ್ಧಿವಂತ ಪತಿ ಮಾಡುತ್ತಾನೆ ಹೇಳಿ? ಹೊರಡುವ ಮೊದಲು ಮನೆಯ ನಿಯಮಗಳನ್ನೆಲ್ಲಾ ಹೇಳಿಯೇ ಹೋದಳು. ಅವರು ಹೋಗುವಾಗ ಸುಳ್ಳೇ ಬೇಸರವನ್ನು ಮುಖದಲ್ಲಿ ತೋರ್ಪಡಿಸುವುದನ್ನು ಮರೆಯಲಿಲ್ಲ.

ಮನೆಯಲ್ಲಿ ಹೆಂಡತಿಯಂತೆ ಗಂಡನೂ ಅಡುಗೆ ಮಾಡಬೇಕು ಅನ್ನುವುದು ನನ್ನ ಪತ್ನಿಯ ಬಹುದಿನದ ಒತ್ತಾಯ. ಆದರೆ, ನಾನು ಇದುವರೆಗೆ ಅಡುಗೆ ಮನೆಗೆ ಕಾಲಿಟ್ಟವನಲ್ಲ. ಇದು ಎಂದೆಂದಿಗೂ ನಮ್ಮ ನಡುವಿನ ಜಗಳದ ಮೊದಲ ಅಧ್ಯಾಯ. ತಾನು ಹುಷಾರಿಲ್ಲದೇ ಮಲಗಿ¨ªಾಗ ಪತಿಯಾದವ ಕೊಂಚವಾದರೂ ತನ್ನ ಕುರಿತು ಕಾಳಜಿ ವಹಿಸಲೆಂದು ಪತ್ನಿ ಆಶಿಸುತ್ತಾಳೆ. ಆದರೆ ಗಂಡನಿಗೆ ಇಂಥ ಸರಳ ವಿಚಾರ ಅರ್ಥವಾಗುವುದಿಲ್ಲ. ಕಳೆದ ತಿಂಗಳು ಪತ್ನಿಗೆ ಹುಷಾರಿಲ್ಲದಾಗ ದರ್ಶಿನಿಯಿಂದ ಇಡ್ಲಿ ಕಟ್ಟಿಸಿಕೊಂಡು ಬಂದಿದ್ದೆ. ಆಗಲೂ ನಾನು ಅಡುಗೆಮನೆಗೆ ಕಾಲಿಟ್ಟಿರಲಿಲ್ಲ. ಅದಕ್ಕಾಕೆ “ಮನೆಯಲ್ಲಿಯೇ ಅನ್ನ-ತಿಳಿಸಾರು ಮಾಡಬಹುದಿತ್ತಲ್ಲ’ ಎಂದು ಗೊಣಗಿದ್ದಳು. “ನಾನು ಅಡುಗೆ ಮನೆಗೆ? ಇಲ್ಲ ಇಲ್ಲ’ ಅಂತ ಮೀಸೆ ಮೇಲೆ ಕೈಯಾಡಿಸುತ್ತಲೇ ಸುಳ್ಳು ದರ್ಪ ತೋರಿಸಿದ್ದೆ. ಅದೇ ಪಕ್ಕದ ಮನೆಯ ಶಾಂತಲಾ ಆಂಟಿ “ಯಾಕೋ ಹುಷಾರಿಲ್ಲ, ನಮ್ಮವರು ಆಫೀಸಿಗೆ ಹೋಗಿದ್ದಾರೆ. ಹೋಟೆಲಿಗೆ ಹೋಗಿ ಊಟ ತರುತ್ತೀಯಾ?’ ಎಂದು ಕೇಳಿದಾಗ ನಾನು ಇಂಟರ್‌ನೆಟ್‌ ನೋಡಿ ಉಪ್ಪಿಟ್ಟು ಮಾಡಿಕೊಟ್ಟಿದ್ದೆ. ತಪ್ಪು ಮಾಡಿದ್ದೆಂದರೆ ಡಬ್ಬಿಯನ್ನು ಆಗಲೇ ತೆಗೆದುಕೊಂಡು ಬರದೆ, ಅಲ್ಲೇ ಬಿಟ್ಟು ಬಂದಿದ್ದು!

ಎರಡು ವಾರ, ಎರಡು ತಾಸಿನ ಹಾಗೆ ಮುಗಿದುಹೋಯಿತು. ಹೆಂಡತಿ ಬರುವ ದಿನ ಮನೆಯ ಕಸ ಗುಡಿಸಿ, ಒರೆಸಿದ್ದೆ. ಆದರೆ, ಕಸವನ್ನು ಎತ್ತಿ ಹಾಕುವುದು ಮರೆತುಹೋಗಿತ್ತು. ಹಿಂದಿನ ರಾತ್ರಿ ಎರಡೆರಡು ಬಾರಿ ಉಜ್ಜಿ ತೊಳೆದರೂ ಪಾತ್ರೆಯ ತಳಕ್ಕೆ ಅಂಟಿದ ಜಿಡ್ಡು ಹೋಗಿರಲಿಲ್ಲ… ಸಿಟಿ ಬಸ್ಸಿನಲ್ಲಿ ಬಂದಿಳಿಯುತ್ತೇನೆ, ಅಲ್ಲಿ ನೀವು ಕಾಯುತ್ತಿರಿ ಅಂತ ಪತ್ನಿ ಹೇಳಿದ್ದಳು. ಅವಳು ಹೇಳಿದ ಸಮಯಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದರೆ, ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಎಂಟು ವರ್ಷ ಹಳೆಯ ಸ್ಕೂಟರ್‌ ಕೈಕೊಟ್ಟು ನಿಂತಿತು. ಎಷ್ಟು ಸಲ ಒದ್ದರೂ ಸ್ಟಾರ್ಟ್‌ ಆಗಲೇ ಇಲ್ಲ. ಏನಾಗಿದೆ ಅಂತ ನೋಡುವಾಗಲೇ ಫೋನಿಗೆ ಇನ್ನೊಂದು ಮೆಸೇಜು. “ನೀವೇನು ಬರುವುದು ಬೇಕಿಲ್ಲ. ಆಟೋದಲ್ಲೇ ಬರುತ್ತಿದ್ದೇನೆ. ಕೆಲಸವಿದ್ದರೆ ನೋಡಿಕೊಳ್ಳಿ’ ಅಂತ. ಕಡೆಯ ವಾಕ್ಯ ಯುದ್ಧಘೋಷಣೆಯ ಮುನ್ಸೂಚನೆ ಅಂತ ಗಂಡಂದಿರಿಗಷ್ಟೇ ಅರ್ಥವಾಗುವುದು ಬಿಡಿ.

Advertisement

ಸರಿಯಾದ ಸಮಯಕ್ಕೆ ಕೈಕೊಟ್ಟು ಮತ್ತೂಂದು ಪ್ರಳಯಕ್ಕೆ ಕಾರಣವಾದ ಸ್ಕೂಟರನ್ನು ಬೈದುಕೊಳ್ಳುತ್ತ ಮನೆಯೊಳಕ್ಕೆ ಬಂದು ಗಡಿಬಿಡಿಯಿಂದಲೇ ಕಸ ಗುಡಿಸಿ, ಯಾವುದೋ ಮ್ಯಾಗಜೀನನ್ನು ನೋಡುತ್ತ ಕುಳಿತೆ. ಬಾಗಿಲು ಬಡಿದ ಸದ್ದು. ಬಾಗಿಲು ತೆರೆದರೆ, ನನ್ನ ಹೆಂಡತಿ ಮಕ್ಕಳೊಂದಿಗೆ ಉರಿಮುಖದಲ್ಲಿ ನಿಂತಿದ್ದಳು. ಏನೂ ಆಗಿಲ್ಲವೆಂಬಂತೆ ನಟಿಸುತ್ತ ಮಾತಿನಲ್ಲೇ ಅವಳನ್ನು ಸಮಾಧಾನ ಮಾಡಲೆತ್ನಿಸಿದೆ. ಏನೂ ಕೇಳಿಸಿಕೊಳ್ಳಲಿಲ್ಲ ಎಂಬಂತೆ ಕೈಲಿದ್ದ ಬ್ಯಾಗುಗಳನ್ನು ಎಸೆದವಳೇ ಸೋಫಾದ ಮೇಲೆ ಕೂತಳು. ಟಿಪಾಯಿಯ ಮೇಲೆ ತೆರೆದಿಟ್ಟಿದ್ದ ಮ್ಯಾಗಝೀನು ಮತ್ತು ಅದರೊಳಗೆ ನಗುತ್ತಿದ್ದ ಮಾದಕ ನಟಿಯ ಫೋಟೋ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.

“ಪಾಪ ನೀವೆಷ್ಟು ಬಿಝಿ ಇದ್ದೀರಿ, ಮುಂದುವರೆಸಿ’ ಅಂತ ಹೇಳಿ ಅತ್ತ ತಿರುಗಿದಳು. ನನ್ನ ದಡ್ಡತನಕ್ಕೆ ನಾನೇ ಶಪಿಸಿಕೊಂಡೆ. ಕೊಂಚ ಹೊತ್ತು ವ್ಯರ್ಥ ಮಾತಿಗಿಂತ ಮೌನವೇ ಲೇಸು ಅಂತ ಸುಮ್ಮನೆ ಮಕ್ಕಳೊಡನೆ ಮಾತನಾಡುತ್ತ ಕುಳಿತೆ. “ನಾನಿಲ್ಲದಿದ್ದರೆ ಈ ಮನೆ ಗತಿ ನೋಡಬೇಕು’ ಅಂತ ಗೊಣಗುತ್ತ, ನಾನು ಈಗಾಗಲೇ ಗುಡಿಸಿ, ಒರೆಸಿ ಶುಚಿಗೊಳಿಸಿದ್ದ ಮನೆಯನ್ನೇ ಇನ್ನೊಮ್ಮೆ ಗುಡಿಸಲು ಶುರುಮಾಡಿದಳು. ಅದೆಲ್ಲಿ ಅಡಗಿ ಕುಳಿತಿತ್ತೋ ಆ ಸೋಡಾ ಬಾಟೆಲ್ಲು, ಪೊರಕೆ ಸೋಕಿದ ಕ್ಷಣ ಸೋಫಾದ ಕೆಳಗಿಂದ ಲೊಳಲೊಳನೆ ಉರುಳಿ ಬಂತು. ಈಕೆ ಇನ್ನೂ ಮೂರು ದಿನ ಬರುವುದಿಲ್ಲವೆಂದು ಗೆಳೆಯರಿಗೆ ಹೇಳಿ¨ªೆ. ಇದೇ ಸಮಯವೆಂದು ತಿಳಿದಿದ್ದ ಗೆಳೆಯರು “ತೀರ್ಥ ಸಮಾರಾಧನೆ’ ನಡೆಸಲು ಬಂದೇಬಿಟ್ಟರು. ನಾವು ಅದೇನೇ ಸಾಕ್ಷಿ ನಾಶ ಮಾಡಿದ್ದರೂ, ಕೆಳಗಿಟ್ಟಿದ್ದ ಈ ಖಾಲಿ ಸೋಡಾ ಬಾಟೆಲ್ಲು ಮಾತ್ರ ಉರುಳಿ ಹೋಗಿ ಸೋಫಾದ ಕೆಳಗೆ ಸರಿಯಾದ ಸಮಯಕ್ಕಾಗಿ ಅಡಗಿ ಕುಳಿತಿತ್ತು. “ಇದಕ್ಕಲ್ಲವೇ ಎರಡು ವಾರದಲ್ಲಿ ಮೂರ್ನಾಲ್ಕು ಸಲವಷ್ಟೇ ಕರೆ ಮಾಡಿದ್ದು ನೀವು? ಈಗ ನಾನು ಬಂದದ್ದೇ ನಿಮಗೆ ಬೇಡವಾಗಿರಬಹುದು’ ಅಂದಳು ಕಣ್ಣೀರಧಾರೆ ಹರಿಸುತ್ತ. ಮತ್ತೆ ಸಮಾಧಾನ ಮಾಡುವ ನನ್ನ ಪ್ರಯತ್ನ ಯಶಸ್ವಿಯಾಗಲೇ ಇಲ್ಲ.

ಅವಳಿಗೆ ತವರು ಮನೆಯಿಂದ ತಂದಿದ್ದ ಒಂದಷ್ಟು ನಿಪ್ಪಟ್ಟುಗಳನ್ನು ಎತ್ತಿಡಬೇಕಿತ್ತು. ಕೆಂಪು ಡಬ್ಬಿ ಎಲ್ಲಿ ಅಂತ ಕೇಳಿದಳು. ಈಗಾಗಲೇ ಅವಳ ಮುನಿಸು, ಕೋಪ ನೋಡಿ ನನಗೂ ರೋಸಿ ಹೋಗಿತ್ತು. ಅಸಮಾಧಾನದಿಂದಲೇ “ಅಲ್ಲೇ ಇರಬೇಕು ನೋಡು. ನಿನ್ನ ಕೆಂಪು ಡಬ್ಬಿ ನನ್ನ ಜೇಬಿನಲ್ಲಿ ಇರುತ್ತದಾ?’ ಅಂತ ಮುಂದಾಗುವ ಪರಿಣಾಮ ಊಹಿಸದೆ ರೇಗಿದೆ. ಇದಾಗಿ ಒಂದೆರಡು ಗಂಟೆಗಳಾಗಿರಬಹುದು. ಪಕ್ಕದ ಮನೆಯ ಶಾಂತಲಾ ಆಂಟಿಯ ಅನಿರೀಕ್ಷಿತ ಆಗಮನವಾಯಿತು. ಬಂದವರೇ, “ಅವತ್ತು ನಿಮ್ಮ ಯಜಮಾನ್ರು ಎಷ್ಟು ಚೆಂದ ಉಪ್ಪಿಟ್ಟು ಮಾಡಿಕೊಟ್ಟಿದ್ರು ಅಂತೀರ? ನಿಮ್ಮ ಗಂಡನ ಕೈ ಅಡುಗೆ ಚೆನ್ನಾಗಿದೆ. ಇತರರ ಬಗ್ಗೆ ಎಷ್ಟು ಕಾಳಜಿ. ನೀವೇ ಪುಣ್ಯವಂತರು’ ಎನ್ನಬೇಕೆ? ಹೇಳುವುದು ಹೇಳಿಬಿಟ್ಟು ಉಪ್ಪಿಟ್ಟು ತುಂಬಿಕೊಟ್ಟಿದ್ದ ಕೆಂಪು ಡಬ್ಬವನ್ನು ಸಾಕ್ಷಿಯೆಂಬಂತೆ ಕೊಟ್ಟು ಹೊರಟುಹೋದರು. ಇದೇ ಕೆಂಪು ಡಬ್ಬವನ್ನೇ ಈಕೆ ಹುಡುಕುತ್ತಿದ್ದದ್ದು ಎಂಬುದು ಅರಿವಾದಾಗ ಮೂರನೇ ಮಹಾಯುದ್ಧ ಶುರುವಾಗುವ ಮುನ್ಸೂಚನೆ ಸಿಕ್ಕಾಯ್ತು.

“ಅಯ್ಯೋ, ಸ್ವಲ್ಪ ಹೆಚ್ಚು ಉಪ್ಪಿಟ್ಟು ಮಾಡಿದ್ದೆ, ಯಾಕೆ ಬಿಸಾಡೋದು ಅಂತ ಅವರಿಗೆ ಕೊಟ್ಟೆ’ ಅಂತ ಹೇಳುವಷ್ಟರಲ್ಲಿ, ಅಡುಗೆ ಮನೆಯ ಕಡೆಯಿಂದ ಪಾತ್ರೆಗಳು, ಲೋಟಗಳು ಹಾರಾಡತೊಡಗಿದವು. “ಹೆಂಡತಿ ಹಾಸಿಗೆ ಹಿಡಿದಾಗ ಗಂಡ ಅನ್ನಿಸಿಕೊಳ್ಳೋನು ಕೆಲಸ ಮಾಡೋದಿಲ್ಲ. ಪಕ್ಕದ ಮನೆಯವಳಾರಿಗೋ ಹುಷಾರಿಲ್ಲ ಅಂದರೆ, ಎಲ್ಲ ಕೆಲಸಾನೂ ಮಾಡೋಕಾಗುತ್ತೆ’ ಅಂತ ಬೆಂಕಿಯುಗುಳುವ ಅವಳ ಡೈಲಾಗು ಮತ್ತು ಸ್ಟೀಲ್‌ ಲೋಟವೊಂದು ರಪ್ಪನೆ ಕಿವಿಗೆ ಬಡಿಯಿತು. ನಾನೇ ತೋಡಿಕೊಂಡ ಹಳ್ಳ ಅಂದುಕೊಂಡು, ಕಾರಣಗಳನ್ನೆಲ್ಲ ಕೊಡುತ್ತ ಹೋದೆ. ನನ್ನ ಮಾತುಗಳೆಲ್ಲ ವ್ಯರ್ಥವಾದವು. ಸಮಯ ಸರಿಯುತ್ತಿತ್ತು. ಮತ್ತಷ್ಟು ಅನಾಹುತಗಳಾಗುವ ಮೊದಲೇ ಎಚ್ಚೆತ್ತು, “ಹೋಗಲಿ ಬಿಡು ಮಾರಾಯ್ತಿ. ನನ್ನದು ತಪ್ಪಾಗಿದೆ. ಇನ್ನು ಮುಂದಿನ ಬೇಸಗೆ ರಜೆ ನಿಮ್ಮಮ್ಮನ ಮನೆಯಲ್ಲೇ. ಆಫೀಸಿಗೆ ರಾಜೀನಾಮೆ ಕೊಟ್ಟಾದರೂ ಬರುತ್ತೇನೆ’ ಎಂದು ಅವಳ ಮುಂದೆ ಶಸ್ತ್ರಾಸ್ತ್ರಗಳನ್ನೆಲ್ಲ ತ್ಯಜಿಸಿದ ಎದುರು ಪಾಳಯದ ರಾಜನಂತೆ ಶರಣಾದೆ. ಎಂದಿನಂತೆ ಆಕೆ ಮೌನವಾಗಿದ್ದರೂ, ಯುದ್ಧ ಗೆದ್ದ ಕಿರುನಗೆ ಆಕೆಯ ಮೊಗದ ಮೇಲಿತ್ತು!

-ಸಂತೋಷ್‌ ಕುಮಾರ್‌ ಎಲ್‌. ಎಂ.

Advertisement

Udayavani is now on Telegram. Click here to join our channel and stay updated with the latest news.

Next