Advertisement

ಅವಸಾನದ ಅಂಚಿನಲ್ಲಿ ಕೈಮಗ್ಗಗಳು; 80 ಸಾವಿರ ಮಗ್ಗಗಳ ಪ್ರದೇಶದಲ್ಲಿ ಇದೀಗ 18 ಮಗ್ಗಗಳು …!

07:20 PM Jul 30, 2023 | Team Udayavani |

ರಬಕವಿ ಬನಹಟ್ಟಿ :ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ದೇಶಿ ಸಂಸ್ಕೃತಿ, ಕಲೆ ಸಾಹಿತ್ಯ ಜೊತೆಗೆ ನಮ್ಮ ಗುಡಿ ಕೈಗಾರಿಕೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲಿ ಕೈಮಗ್ಗ ಉದ್ದಿಮೆಯು ಒಂದು.ಇಂದಿನ ಫ್ಯಾಶನ್ ಯುಗದ, ಮಿಲ್ಲಿನ ಬಟ್ಟೆಯ ಜೊತೆ ಪೈಪೋಟಿ ಮಾಡುವ ಶಕ್ತಿ ಇಲ್ಲದಿರುವುದು, ಕಡಿಮೆ ಸಂಬಳ ಹಾಗೂ ಜನರಿಗೆ ಅದರ ಮೇಲಿನ ಆಸಕ್ತಿ ಕಡಿಮೆಯಾದ ಕಾರಣ ಅದು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿರುವುದು ವಿಷಾದನೀಯ.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರವು ಇದೀಗ ಎಲ್ಲೆಡೆ ವಿದ್ಯುತ್ ಮಗ್ಗಗಳ ಭರಾಟೆಯಲ್ಲಿ ಮೂಲ ಕೈಮಗ್ಗ ನೇಕಾರರೇ ದೊರಕದ ಕಾರಣ ಕೈಮಗ್ಗಗಳು ನೇಪಥ್ಯಕ್ಕೆ ಸರಿಯುತ್ತ ಪಳೆಯುಳಿಕೆ ಗಳಾಗಿ ಕಾಣಸಿಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ವಿದ್ಯುತ್‌ ಚಾಲಿತ ಮಗ್ಗಗಳ ಹಾವಳಿಗೆ ತತ್ತರಿಸಿ ಕೈಮಗ್ಗಗಳು ನೇಪಥ್ಯಕ್ಕೆ ಸರಿಯುವಲ್ಲಿ ಕಾರಣವಾಗಿದೆ. ವಿನ್ಯಾಸಗಳ ಬಳಕೆಯಿಂದಲೂ ಕೈಮಗ್ಗಗಳ ಬಳಕೆಗಿಂತ ವಿದ್ಯುತ್ ಮಗ್ಗಗಳಿಗೆ ಹೆಚ್ಚಿನ ವ್ಯವಸ್ಥೆ ಕಾರಣ ಜಾಗತಿಕ ಮಟ್ಟದಲ್ಲಿ ಕೈಮಗ್ಗ ಕ್ಷೀಣಿಸಲು ಕಾರಣವಾಗಿದೆ.

ಬಾಗಿಲಿಗೊಂದು ಮಗ್ಗ: ಬನಹಟ್ಟಿಯ ಯಾವುದೇ ಪ್ರದೇಶದಲ್ಲಿ ಸಂಚರಿಸಿದರೂ ಮನೆಯ ಹೊಸ್ತಿಲೊಲ್ಲೊಂದು ಕೈಮಗ್ಗ ಸಿಗಲೇಬೇಕು. ಅಷ್ಟೊಂದು ಪ್ರಮಾಣದಲ್ಲಿ ಕೈಮಗ್ಗಗಳಿದ್ದವು. ಸುಮಾರು 17ನೇ ಶತಮಾನದಿಂದಲೂ ಈ ಪ್ರದೇಶದಲ್ಲಿ ಕಾಣಸಿಗುತ್ತಿದ್ದ ಈ ಮಗ್ಗಗಳು ಕೇವಲ 5 ಕುಟುಂಬಗಳಿಗೆ ಮಾತ್ರ ಸೀಮಿತವಾಗಿ, ಅಶೋಕ ಮಾಚಕನೂರ, ಪಟ್ಟಣ, ಭಾಗೀರಥಿ ಹನಗಂಡಿ, ಮಾರುತಿ ಗಣಿ, ಬಾಲಚಂದ್ರ ಹುಲ್ಯಾಳ ಅವರಲ್ಲಿ ಒಟ್ಟಾರೆ 18 ಕೈಮಗ್ಗಳು ಕಾಣಸಿಗುತ್ತಿದ್ದರೆ ಇದಕ್ಕೆ ನೇಯ್ಗೆದಾರರೂ ಸಹಿತ 8 10 ಜನ ಮಾತ್ರ…!

Advertisement

ಕೈಮಗ್ಗಕ್ಕಿರುವ ಮೂಲ ಸಮಸ್ಯೆ ಎಂದರೆ ನೇಕಾರರು. ಇಂದು ರಬಕವಿ ಬನಹಟ್ಟಿಯಲ್ಲಿರುವ ಕೈಮಗ್ಗ ನೇಕಾರರ ವಯಸ್ಸು 55ಕ್ಕಿಂತ ಹೆಚ್ಚು. ಅವರಷ್ಟೇ ಮಾತ್ರ ಈ ಉದ್ಯೋಗವನ್ನು ನಂಬಿಕೊಂಡಿದ್ದಾರೆ. ಬಹುತೇಕ ಜನರು ಪವರಲೂಮಗಳನ್ನು ಅವಲಂಭಿಸಿದ್ದಾರೆ. ಶ್ರಮದಾಯಕವಾದ ಈ ಕೈಮಗ್ಗ ಉದ್ದಿಮೆಗೆ ಯುವಕರು ಹತ್ತಿರವೂ ಸುಳಿಯುತ್ತಿಲ್ಲ. ಜೊತೆಗೆ ಕೈಮಗ್ಗದ ಸೀರೆಯನ್ನು ನೇಯುವುದಕ್ಕಿಂತ ಮೊದಲು ಅದಕ್ಕೆ ಬೇಕಾಗುವ ಪೂರಕ ಕಾರ್ಯಗಳನ್ನು ಮಾಡುವ ಕಾರ್ಮಿಕರು ಇಲ್ಲವೇ ಇಲ್ಲದಂತಾಗಿದ್ದಾರೆ. ಕೈಮಗ್ಗ ರಿಪೇರಿ ಮಾಡುವವರು ಇಲ್ಲ. ತೆನೆ ತಿರುವುವ ವ್ಯಕ್ತಿಗಳು ಇಲ್ಲವಾಗಿದ್ದಾರೆ.

ಸರ್ಕಾರದ ದಿವ್ಯ ನಿರ್ಲಕ್ಷ್ಯ : ಹೈಟೆಕ್ ಮಗ್ಗಗಳ ನೇಕಾರರ ಭರಾಟೆಯಲ್ಲಿ ಅತ್ಯಂತ ಹಿಂದುಳಿದ ಹಾಗು ಅನ್ಯ ಉದ್ಯೋಗ ಅರಿಯದ ನೇಕಾರರೆಂದೇ ಗುರುತಿಸಿಕೊಂಡಿರುವ ಕೈಮಗ್ಗ ನೇಕಾರರಿಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವಾಗಿದೆ

ನೇಕಾರ ಸಮ್ಮಾನ ಯೋಜನೆಯಡಿ ವಾರ್ಷಿಕ 5 ಸಾವಿರಗಳಿಂದ ವಂಚಿತಗೊಂಡಿರುವ ನೇಕಾರರಿಗೆ ವಿದ್ಯುತ್ ಸಬ್ಸಿಡಿಯಿಲ್ಲ. ಇಳಿವಯಸ್ಸಿನಲ್ಲಿರುವ ನೇಕಾರರಿಗೆ ಜೀವನ ಭದ್ರತೆಗೆ ಪಿಂಚಣಿ ವ್ಯವಸ್ಥೆಯೂ ಇಲ್ಲದ ಕಾರಣ ಅತಂತ್ರದ ಬದುಕು ಇವರದಾಗಿದೆ.

ಈಗಲೂ ಬೇಡಿಕೆ: ಬನಹಟ್ಟಿಯ ಕೈಮಗ್ಗ ಸೀರೆಗಳೆಂದರೆ ಈಗಲೂ ಬೇಡಿಕೆ ಹೆಚ್ಚಿದೆ. ಒಂದು ಸೀರೆಗೆ ಸುಮಾರು 1,200 ರಿಂದ 1,500 ರೂ.ಗಳವರೆಗೆ ಮಾರಾಟವಾಗುತ್ತಿದ್ದು, ಉತ್ಪಾದನೆಯೇ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಸಮರ್ಪಕ ಪೂರೈಕೆಯಾಗಲು ಸಾಧ್ಯವಾಗುತ್ತಿಲ್ಲ.

ಮಜೂರಿ ಸಮಸ್ಯೆ: ಎಲ್ಲಕ್ಕಿಂತ ಹೆಚ್ಚಾಗಿ ಕೈಮಗ್ಗ ನೇಕಾರರ ಸಮಸ್ಯೆ ಎಂದರೆ ಅವರಿಗೆ ಕೊಡುತ್ತಿರುವ ಕೂಲಿ. ಒಬ್ಬ ಒಳ್ಳೆಯ ನೇಕಾರ ಒಂದು ವಾರಕ್ಕೆ ನಾಲ್ಕು ಅಥವಾ ಐದು ಸೀರೆಗಳನ್ನು ಮಾತ್ರ ನೇಯುತ್ತಾನೆ. ಆದರೆ ಅವರಿಗೆ ವಾರಕ್ಕೆ ದೊರೆಯುವ ಕೂಲಿ ರೂ. 500 ರಿಂದ ರೂ. 600 ಮಾತ್ರ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಒಂದು ವಾರ ಕುಟುಂಬದ ನಿರ್ವಹಣೆಗಾಗಿ ಈ ಕೂಲಿ ಸಾಲುತ್ತಿಲ್ಲ.

ಹಸ್ತಚಾಲಿತ ಕೆಲಸ: ಕೈಮಗ್ಗ ಕೆಲಸದಲ್ಲಿ ಯಾವುದೇ ಯಾಂತ್ರಿಕ ಸಹಾಯವಿಲ್ಲ. ಬದಲಾಗಿ ಎಲ್ಲವನ್ನೂ ಹಸ್ತಚಾಲಿತದಿಂದಲೇ ಕೆಲಸ ನಿರ್ವಹಿಸುವದರಿಂದ ಇತ್ತೀಚಿನ ದಿನಗಳಲ್ಲಿ ಇದಕ್ಕೆ ತಗಲುವ ಕಚ್ಚಾ ವಸ್ತುಗಳ ತಯಾರಿಕೆಯಲ್ಲಿ ಯಾರೂ ಇಲ್ಲ.

ಕೈಮಗ್ಗ ನೇಕಾರರ ಏಳ್ಗೆಗೆ 1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಎಂ. ಬಾಂಗಿಯವರ ನೇತೃತ್ವದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಬನಹಟ್ಟಿಯಲ್ಲಿ ಸ್ಥಾಪನೆಗೊಳಿಸಿತ್ತು. ಇದೀಗ ಅದೂ ಸಹಿತ ಅವನತಿಯತ್ತ ಸಾಗಿರುವುದು ಆತಂಕದ ವಿಷಯವಾಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಮಹಾಲಿಂಗಪುರ, ಅಮೀನಗಡ, ಗುಳೇದಗುಡ್ಡ ಹಾಗೂ ಸುತ್ತ ಮುತ್ತಲೀನ ಗ್ರಾಮೀಣ ಪ್ರದೇಶಗಳು ಕೆಲವು ದಶಕಗಳ ಹಿಂದೆ ಕೈಮಗ್ಗ ನೇಕಾರಿಕೆಗೆ ಪ್ರಸಿದ್ದವಾಗಿದ್ದವು. ಆಗ ಇಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಒಂದು ಕುಣಿ, ಒಂದು ಕೈಮಗ್ಗ ಇದ್ದೇ ಇರುತ್ತಿತ್ತು. 1960ಕ್ಕಿಂತ ಮುಂಚೆ ಇಲ್ಲಿ ಸಾವಿರಾರು ಕೈಮಗ್ಗಗಳು ಇದ್ದವು. ಮನೆಯಲ್ಲಿಯ ಗಂಡು, ಹೆಣ್ಣು ಮತ್ತು ಸಣ್ಣ ಮಕ್ಕಳು ಕೂಡಾ ಒಂದಿಲ್ಲೊಅದು ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಸಾವಿರಾರು ಜನರು ಕೈಮಗ್ಗ ಉದ್ದಿಮೆಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ಬೆರಣಿಕೆಯಷ್ಟು ಕೈಮಗ್ಗಗಳು ಉಳಿದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇವು ಕೂಡಾ ನಮ್ಮಿಂದ ದೂರವಾಗುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಪುರಾತನ ಹಾಗು ಬನಹಟ್ಟಿಯ ಹೆಸರು ದೇಶಾದ್ಯಂತ ಪರಿಚಯಿಸಿದ ಕೈಮಗ್ಗಗಳು ಇದೀಗ ಇತಿಹಾಸ ಪುಟ ಸೇರುತ್ತಿರುವುದು ತುಂಬಾ ನೋವಿನ ಸಂಗತಿ.
-ದುಂಡಪ್ಪ ಮಾಚಕನೂರ, ನೇಕಾರ ಮುಖಂಡ, ಬನಹಟ್ಟಿ

ಮತ್ತೊಂದು ಉದ್ಯೋಗ ಅರಿತಿಲ್ಲ. ಕೈಮಗ್ಗ ನೇಯ್ಗೆ ಮಾಡಿದಷ್ಟು ಮಜೂರಿಯೂ ದೊರಕುವುದಿಲ್ಲ. ಅತಂತ್ರದ ಬದುಕು ನಮ್ಮದಾಗಿದೆ. ಕನಿಷ್ಠ ಸೌಲಭ್ಯಗಳನ್ನಾದರೂ ಸರ್ಕಾರ ಒದಗಿಸಲಿ.’
-ಪಂಡಿತ ಹಟ್ಟಿ ನೇಕಾರ

-ಕಿರಣ ಶ್ರೀಶೈಲ ಆಳಗಿ

 

Advertisement

Udayavani is now on Telegram. Click here to join our channel and stay updated with the latest news.

Next