Advertisement

ಕೈ ತಯಾರಿ: ಸುರ್ಜೇವಾಲಾ ಠಿಕಾಣಿ ಅಭ್ಯರ್ಥಿಗಳ ಆಯ್ಕೆ, ನಿಗಮ-ಮಂಡಳಿ ನೇಮಕ ಮತ್ತಿತರ ಚರ್ಚೆ

12:09 AM Jan 08, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕೆಪಿಸಿಸಿ ಕರೆದ ಪದಾಧಿಕಾರಿಗಳ ಸಭೆಗೆ ಕ್ಷಣ ಗಣನೆ ಆರಂಭ ವಾಗಿದ್ದು, ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸೋಮವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ರಾಜಧಾನಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

Advertisement

ಈ ಅವಧಿಯಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಗಳ ಆಯ್ಕೆ, ಇದೇ ವಿಚಾರದ ಬಗ್ಗೆ ಕೆಲವು ಸಚಿವರು ಇನ್ನೂ ವರದಿ ನೀಡದಿರುವುದು, ಪಕ್ಷದ ಕಾರ್ಯಾಧ್ಯಕ್ಷರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಸೇರಿ ಪದಾಧಿಕಾರಿಗಳ ನೇಮಕ, ನನೆಗುದಿಗೆ ಬಿದ್ದಿರುವ ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪಟ್ಟಿ ಬಿಡುಗಡೆ ವಿಚಾರ ಸಹಿತ ಹತ್ತು ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 3 ದಿನ ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲಿವೆ.

ಪಂಚರಾಜ್ಯಗಳ ಚುನಾವಣೆ ಅನಂತರ ಮೊದಲ ಬಾರಿಗೆ ಸುರ್ಜೇವಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ನಿಗಮ-ಮಂಡಳಿ ಆಯ್ಕೆಗೆ ಒತ್ತಡ?
ಕಳೆದ ಬಾರಿ ಎರಡು ದಿನಗಳು ಬೀಡು ಬಿಟ್ಟು ನಿಗಮ- ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿತ್ತು. ಬಹುತೇಕ ಅಂತಿಮ ಗೊಂಡ ಆ ಪಟ್ಟಿ ಎರಡು ತಿಂಗಳಾದರೂ ಬಿಡುಗಡೆ ಯಾಗಿಲ್ಲ ಎಂಬ ಅಸಮಾಧಾನ ಆಕಾಂಕ್ಷಿಗಳಲ್ಲಿ ಮನೆಮಾಡಿದೆ. ಇದರಲ್ಲಿ ಶಾಸಕರು, ಕಾರ್ಯಕರ್ತರು ಕೂಡ ಇದ್ದಾರೆ. ಆ ವರ್ಗ ಪ್ರತ್ಯೇಕವಾಗಿ ಭೇಟಿ ಮಾಡಿ ಒತ್ತಡ ಹಾಕುವ ಸಾಧ್ಯತೆ ಇದೆ. ಚುನಾವಣೆ ಹೊಸ್ತಿ ಲಲ್ಲಿದ್ದು, ಈ ಹಂತದಲ್ಲಿ “ಅಧಿಕಾರ ಭಾಗ್ಯ’ ನೀಡುವುದರಿಂದ ಹೊಸ ಉತ್ಸಾಹ ತುಂಬಿ ದಂತಾಗುತ್ತದೆ. ಮತ್ತಷ್ಟು ವಿಳಂಬ ಸರಿ ಅಲ್ಲ ಎಂದು ಮನವೊಲಿಕೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದುವರೆಗೆ ಯಾವುದೇ ನಿಗದಿತ ಕಾರ್ಯಕ್ರಮಗಳು ಅವರ ಈ ರಾಜ್ಯ ಪ್ರವಾಸದಲ್ಲಿಲ್ಲ. ಆದರೆ ಮೂರು ದಿನ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹಿತ ಪಕ್ಷದ ವಿವಿಧ ಹಂತದ ನಾಯಕರ ನಿಯೋಗಗಳು ಭೇಟಿ ಮಾಡಿ, ಹಲವು ವಿಷಯಗಳ ಕುರಿತು ಚರ್ಚೆ ನಡೆಸುವುದಂತೂ ಖಚಿತ.

Advertisement

ಅದರಲ್ಲೂ ಮುಖ್ಯವಾಗಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪಟ್ಟಿ ಅಂತಿಮಗೊಳ್ಳಬೇಕಿದೆ. ಈ ಸಂಬಂಧ ಜ. 10ರ ಸಭೆಗೆ ಪೂರ್ವಭಾವಿಯಾಗಿ ಕೆಪಿಸಿಸಿ ಘಟಕ, ವಿವಿಧ ವಿಭಾಗಗಳ ರಾಜ್ಯಾಧ್ಯಕ್ಷರು, ಹಲವು ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಜತೆಗೆ ಸಚಿವರು, ಶಾಸಕರ ನಿಯೋಗಗಳು ಕೂಡ ಪ್ರತ್ಯೇಕವಾಗಿ ಸಲಹೆಗಳನ್ನು ನೀಡುವ ಸಾಧ್ಯತೆ ಇದೆ.
ಐದು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು. ಅದರ ಸದುಪಯೋಗ ಪಡೆಯಬೇಕು ಎಂದು ರಾಜ್ಯ ಉಸ್ತುವಾರಿ ಸೂಚಿಸಲಿದ್ದಾರೆ. ಶಾಸಕರಿಗೆ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಇನ್ನೂ ಬಿಡುಗಡೆಯಾಗಿಲ್ಲ. ಚುನಾವಣೆ ಘೋಷಣೆಗೆ ಮುನ್ನ ತಮ್ಮ ಕ್ಷೇತ್ರಗಳಲ್ಲಿ ಎದ್ದುಕಾಣುವ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕಾಗಿ ಶಾಸಕರು ಮತ್ತೂಂದು ಸುತ್ತಿನ ಒತ್ತಡ ಹಾಕುವ ಸಾಧ್ಯತೆ ಇದೆ.

ಇನ್ನು ಕಾರ್ಯಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳ ನೇಮಕ ತ್ವರಿತಗತಿಯಲ್ಲಿ ಆಗಬೇಕು. ಶಾಸಕರ ಮಾತುಗಳನ್ನು ಸಚಿವರು ಕೇಳುವಂತೆ ಸೂಚಿಸಬೇಕು ಎನ್ನುವುದು ಒಳಗೊಂಡಂತೆ ಹಲವು ವಿಚಾರಗಳು ಚರ್ಚೆ ಆಗಲಿವೆ. ಇದಲ್ಲದೆ, ಈಗಾಗಲೇ ಜ. 4ರಂದು ರಾಷ್ಟ್ರೀಯ ನಾಯಕರೊಂದಿಗೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಮೊದಲ ಸುತ್ತಿನ ಮಾತುಕತೆ ನಡೆದಿದೆ. ಅದರ ಮುಂದುವರಿದ ಭಾಗವಾಗಿ ಜ. 10ರಂದು ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಸುತ್ತಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next