Advertisement

ಶಿಲಾ ತಪಸ್ವಿ ಗಣಪ

09:08 PM Aug 30, 2019 | Sriram |

ಪುರಾಣಗಳಲ್ಲಿ ಸ್ತೋತ್ರ ಮತ್ತು ಶ್ಲೋಕಗಳಿಂದ ಆರಾಧಿಸಲ್ಪಡುತ್ತಿದ್ದ ಗಣಪತಿ, ಭಕ್ತಿಜನರ- ಕಲಾವಿದರ ಕಣ್ಣಲ್ಲಿ ಬೇರೆ ಬೇರೆ ರೂಪದಲ್ಲಿ ಅರಳುತ್ತಾ ಹೋದ. ಆತನ ಪ್ರತಿಯೊಂದು ಆಕಾರಗಳ ಹಿಂದೆಯೂ, ಒಂದೊಂದು ಕತೆ- ಮಹಿಮೆಗಳಿವೆ. ಕರುನಾಡಿನ ದೇಗುಲಗಳ ಶಿಲೆಗಳಲ್ಲೂ ವಿನಾಯಕನ ವಿಭಿನ್ನ ಕಲ್ಪನೆಗಳಿವೆ. ಆ ಶಿಲಾ ಕಲ್ಪನೆಯ ಸುತ್ತ ಒಂದು ನೋಟ…

Advertisement

ನಮ್ಮ ಭಕ್ತಿಯಂತೆ ಅವನಿಗೊಂದು ಆಕಾರ. ಹಾಗೆ, ರೂಪ ರೂಪಗಳನ್ನು ದಾಟುತ್ತಲೇ ಬೆಳೆದವನು ಗಣಪ. ಅವನ ವಿಕಾಸ, ಒಂದೇ ಹೊತ್ತಿನಲ್ಲಿ ಆದುದ್ದಲ್ಲ; ಹಲವು ಶತಮಾನಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ, ಬಗೆಬಗೆಯಲ್ಲಿ ನಡೆದಿದೆ. ಗಣಪತಿಯ ಜನ್ಮ, ಮಹಿಮೆ ಮತ್ತು ಪೂಜಾನುಷ್ಠಾನ ವಿಧಿ- ವಿಧಾನಗಳನ್ನು ನಿರೂಪಿಸುವ ಪ್ರಸಂಗಗಳು ಹಲವು ಪುರಾಣಗಳಲ್ಲಿ ದೊರೆಯುತ್ತವೆ. ಪುರಾಣಗಳಲ್ಲಿ ಸ್ತೋತ್ರ ಮತ್ತು ಶ್ಲೋಕಗಳಿಂದ ಆರಾಧಿಸಲ್ಪಡುತ್ತಿದ್ದ ಗಣಪತಿ, ಕಾಲಾನಂತರ ಮೂಲಾಧಾರ ಚಕ್ರದ ದೇವತೆಯಾಗಿ ಪರಿಗಣಿಸಲ್ಪಟ್ಟು, ತಾಂತ್ರಿಕ ಸಂಕೇತಗಳ ರೂಪದಲ್ಲಿ ಕಣ್ಣೆದುರು ನಿಲ್ಲುತ್ತಾನೆ.

ಮಣ್ಣಿನ ಮಗನಾಗಿ…
ಗಣಪತಿ, ಕೃಷಿಕರು ಸೃಷ್ಟಿಸಿಕೊಂಡ ಗ್ರಾಮ್ಯ ದೇವರು. ಧಾನ್ಯಾಧಿದೇವತೆ. ಗಣಪತಿಯನ್ನು ವರ್ಷ ಋತುವಾದ ಭಾದ್ರಪದ ಮಾಸದಲ್ಲಿ ಮಣ್ಣಿನಿಂದ ಮಾಡಿ ಪೂಜಿಸುವುದೂ, ಗಣಪತಿ ವಿಗ್ರಹಗಳ ಕೈಯಲ್ಲಿ ಕಬ್ಬಿನ ಜÇÉೆ, ಭತ್ತದ ತೆನೆಗಳಿರುವುದೂ, ಗಣಪತಿಗೆ ಗರಿಕೆ ಇಷ್ಟವಾದುದೆಂಬುದೂ, ಗಣಪತಿ ಮೂಲತಃ “ಅನ್ನದಾತರ ದೇವರು’ ಎಂಬ ವಾದಕ್ಕೆ ಪುಷ್ಟಿ ನೀಡುವ ಅಂಶಗಳು. ಸುಗ್ಗಿಯ ನಂತರ ಧಾನ್ಯವನ್ನು ಶುದ್ಧೀಕರಿಸಿ ದಾಸ್ತಾನು ಮಾಡುವ ಕಣಜ, ಬಾವಿಯಿಂದ ನೀರೆತ್ತುವ ಬಾನೆ, ಧಾನ್ಯ ಅಳೆಯುವ ಕೊಳಗ, ಕೇರುವ ಮೊರಗಳು, ಕುಡುಗೋಲು ಮತ್ತಿತರ ಕೃಷಿ ಸಲಕರಣೆಗಳು ಗಣೇಶನ ರೂಪ ಮಾಡಲು ಸಾಧನಗಳಾಗಿವೆ. ದೊಡ್ಡ ಕಣಜದಲ್ಲಿ (ಲಂಬೋದರ) ಧಾನ್ಯ ತುಂಬಿ ಅದರ ಬಾಯಿಗೆ ಕೊಳಗ (ಶಿರ) ಮುಚ್ಚಿ, ಅದರ ಎಡ- ಬಲಕ್ಕೆ ಮೊರಗಳನ್ನು (ಶೂರ್ಪಕರ್ಣ) ಸಿಕ್ಕಿಸಿ, ಕೃಷಿ ಉಪಕರಣಗಳನ್ನು ಕೊಳಗ ಕುಸಿಯದಂತೆ ಎರಡೂ ಬದಿಗೂ ಮತ್ತು ಕಣಜದ ತಳಭಾಗಕ್ಕೆ (ಕೈಗಳು ಮತ್ತು ಕಾಲುಗಳು) ಸಿಕ್ಕಿಸಿದರೆ ಗಣೇಶನ ಸ್ವರೂಪ ಬಂದಂತಾಗಿ ಚಿತ್ರ ಪೂರ್ಣವಾಗುತ್ತದೆ.

ಬಹುಮುಖೀ ಅವತಾರ
ಒಂದೇ ದೇವತೆಯನ್ನು ಬೇರೆ ಬೇರೆ ರೂಪ, ಲಾಂಛನ ಮತ್ತು ಆಯುಧ- ಅಸ್ತ್ರಗಳಿಂದ ಅಲಂಕರಿಸಿ ವಿವಿಧ ಹೆಸರುಗಳಿಂದ ಕರೆಯುವುದು ಹಿಂದೂ ದೇವತಾ ಶಾಸ್ತ್ರದ ವಿಶೇಷ. ಕೃಷ್ಣನಿಗೆ ಮತ್ತು ದೇವಿಗೆ ಹೇಗೆ ಬೇರೆ ಬೇರೆ ರೂಪ- ಹೆಸರುಗಳಿವೆಯೋ ಹಾಗೆಯೇ ಗಣೇಶನಿಗೂ ಇವೆ. ದ್ವಿಭುಜ, ಚತುಭುìಜ, ಷಟು½ಜ, ಅಷ್ಟಭುಜ, ದಶಭುಜ ಮತ್ತು ದ್ವಾದಶಭುಜ- ಹೀಗೆ ಹಲವಾರು ಆಕಾರಗಳ ಗಣೇಶ ಬೇರೆ ಬೇರೆ ಕಾಲಘಟ್ಟಗಳಲ್ಲಿ ರೂಪುಗೊಂಡನು. ಇಷ್ಟೇ ಅಲ್ಲ, ಕೆಲವು ವಿಶೇಷ ಕ್ಷೇತ್ರಗಳಲ್ಲಿ ದ್ವಿಮುಖೀ, ತ್ರಿಮುಖೀ, ಚತುರ್ಮುಖೀ, ಪಂಚಮುಖೀ ಗಣಪತಿಗಳೂ ಕಾಣಸಿಗುತ್ತವೆ. ಮತ್ತೂಂದು ಅತ್ಯಂತ ಕುತೂಹಲದ ಗಣೇಶನ ರೂಪವೇ ವಿನಾಯಕಿ ಅಥವಾ ಗಣೇಶಾನಿ. ಇದು ಸ್ತ್ರೀ ರೂಪಿ ಗಣೇಶ. ಮಧುರೈಯ ಸುಂದರೇಶ್ವರ ದೇಗುಲದ ಕಂಬವೊಂದರ ಮೇಲಿರುವ “ವ್ಯಾಘ್ರಪಾದ ಗಣೇಶಾನಿ’ ಇಂಥ ಅಪರೂಪದ ಕಲಾಕೃತಿ. ಮಂಡ್ಯ ಜಿÇÉೆಯ ಕಿಕ್ಕೇರಿಯ ಬೃಹೆ¾àಶ್ವರ ದೇಗುಲದ ಕಂಬವೊಂದರ ಮೇಲ್ಭಾಗದ ಆವರಣದಲ್ಲಿಯೂ ಚಿಕ್ಕದಾದ ಒಂದು ಗಣೇಶಾನಿ ವಿಗ್ರಹವಿದೆ.

ಶಿಲೆಯಿಂದ ಎದ್ದವನು…
ಗಣಪತಿಯನ್ನು ವಿಗ್ರಹ ರೂಪದಲ್ಲಿ ಆರಾಧಿಸುವ ಪದ್ಧತಿ ಪ್ರಾರಂಭವಾದ ಸಮಯದಲ್ಲಿ ಉರುಟಾದ ಕಲ್ಲುಗಳಿಗೆ, ಕೋಡುಗಲ್ಲುಗಳಿಗೆ ಕೆಂಪು ಬಣ್ಣ ಬಳಿದು ಗಣಪತಿ ಎಂದು ಪೂಜಿಸುವ ಪರಿಪಾಠವಿತ್ತು ಎಂಬ ವಾದವನ್ನು ಪುಷ್ಟೀಕರಿಸಲು, ಉತ್ತರ ಭಾರತದ ಕೆಲವೆಡೆ ಈಗಲೂ ಅಂಥ ಗಣಪತಿ ಮೂರ್ತಿಗಳು ಕಾಣಸಿಗುತ್ತವೆ. ತದನಂತರ ಆನೆಯ ತಲೆಯಂತೆ ಕಾಣುವ ಕಲ್ಲುಗಳೇ ಗಣೇಶ ಮೂರ್ತಿಯಾಗಿ ಪೂಜಿಸಲ್ಪಡಲು ಪ್ರಾರಂಭವಾಯಿತು. ಕಾಲಾಂತರದಲ್ಲಿ ಸರಳ ಗಣಪತಿಯು ರೂಪದಲ್ಲಿ ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತ ಸಾಗಿದ್ದರ ಫ‌ಲವೇ ದ್ವಿಭುಜ ಗಣಪತಿಗಳು. ಇಡಗುಂಜಿ ಮತ್ತು ಗೋಕರ್ಣದ ಗಣಪತಿಗಳು ಈ ದೃಷ್ಟಿಯಿಂದ ಗಮನಾರ್ಹ. ಬೊಕ್ಕತಲೆ, ಭಾರೀ ಹೊಟ್ಟೆಯ ಕುಳ್ಳ ದೇಹ, ಅತ್ಯಂತ ಚಿಕ್ಕ ಕಾಲುಗಳು, ಮುಖ್ಯವಾಗಿ ನಿರಾಭರಣ ಸರಳ ಮೂರ್ತಿ. ಯಜ್ಞೊàಪವೀತದ ವಿನಃ ಬೇರಾವ ಅಲಂಕಾರವೂ ಇಲ್ಲ.

Advertisement

ಪಲ್ಲವರೇ ಪ್ರಥಮ
ದಕ್ಷಿಣ ಭಾರತದಲ್ಲಿ ಪಲ್ಲವರ ಆಳ್ವಿಕೆಗೂ ಮೊದಲು ಗಣೇಶನ ಮೂರ್ತಿಗಳು ಲಭ್ಯವಾಗಿಲ್ಲ. ಗಣಪತಿಯ ವಿಗ್ರಹಾರಾಧನೆ ತಮಿಳುನಾಡಿನ ಪಲ್ಲವರ ಕಾಲದಲ್ಲಿ ಆರಂಭವಾಯಿತೆಂಬುದು ಇತಿಹಾಸಜ್ಞರ ಅಭಿಪ್ರಾಯ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಐಹೊಳೆ- ಬಾದಾಮಿ ದೇಗುಲಗಳಲ್ಲಿನ ಗಣಪತಿ ಮೂರ್ತಿಗಳು 6ನೇ ಶತಮಾನಕ್ಕೆ ಸೇರಿದವುಗಳಾಗಿದ್ದು, ಗಜಮುಖ- ಗಣಪತಿಯ ಕಲ್ಪನೆ ಅಷ್ಟು ಹೊತ್ತಿಗೆ ಪರಿಪೂರ್ಣವಾಗಿದ್ದುದು ಮಾತ್ರವಲ್ಲದೆ, ಸಾಕಷ್ಟು ಜನಪ್ರಿಯವೂ ಆಗಿತ್ತೆಂದು ತಿಳಿದುಬರುತ್ತದೆ.

ಗಣಪತಿಯೇ ಪರಬ್ರಹ್ಮ, ಅವನೇ ಸರ್ವೋತ್ತಮ ಎಂಬ ತತ್ವವನ್ನು ಪ್ರತಿಪಾದಿಸುವ, ಅವನಿಗೆಂದೇ ವಿಶೇಷವಾಗಿ ಬರೆದ ಎರಡು ಪುರಾಣಗಳಿವೆ. ಒಂದು ಗಣೇಶ ಪುರಾಣ, ಇನ್ನೊಂದು ಮುದ್ಗಲ ಪುರಾಣ. ಗಣಪತಿಯ ಪಾರಮ್ಯವನ್ನು ಬಣ್ಣಿಸುವ ಈ ಪುರಾಣಗಳು ಗಣಪತಿಯ ಅನೇಕ ಪ್ರಭೇದಗಳನ್ನು ಪರಿಚಯಿಸಿವೆ. ಇವುಗಳನ್ನೇ ಆಧಾರವಾಗಿಟ್ಟುಕೊಂಡು ಗಣಪತಿ ಮೂರ್ತಿಗಳನ್ನು ವಿವಿಧ ಭಂಗಿಗಳಲ್ಲಿ ಸುಂದರವಾದ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಅವುಗಳಲ್ಲಿ ಹಂಪಿಯ ಎರಡು ಬೃಹತ್‌ ಪ್ರಮಾಣದ ಗಣಪತಿಗಳು (ಸಾಸಿವೆಕಾಳು ಮತ್ತು ಕಡಲೆಕಾಳು ಗಣಪತಿ) ಮತ್ತು ಹೊಯ್ಸಳರ ಕಾಲದ ನೃತ್ಯ ಗಣಪತಿಗಳು ಉಲ್ಲೇಖನಾರ್ಹ. ಹೊಯ್ಸಳರ ಗಣಪತಿ ಸರ್ವಾಲಂಕಾರ ಭೂಷಿತ. ಅತ್ಯಂತ ಸೂಕ್ಷ¾ ಕುಸುರಿ ಕೆತ್ತನೆಗಳಿಂದ ಮಾಡಿದ ಕಿರೀಟ, ಆಭರಣಗಳು ಮತ್ತು ಪ್ರಭಾವಳಿಗಳಿಂದ ಕೂಡಿದ ಈ ಗಣಪತಿ ನಯನಮನೋಹರ.

ಹಿಂದೂ ದೇವತೆಗಳಲ್ಲಿ ಗಣಪತಿ ಅತ್ಯಂತ ರಹಸ್ಯಮಯವಾದ ದೇವತೆ. ಯೋಗಿಗಳಿಗೆ ಪರಬ್ರಹ್ಮ, ನರ್ತಕರಿಗೆ ನಾಟ್ಯಾಚಾರ್ಯ, ಭಾಗವತರಿಗೆ ಗಾನಮೂರ್ತಿ, ವಿದ್ಯಾಕಾಂಕ್ಷಿಗಳಿಗೆ ವಿದ್ಯಾಗಣಪತಿ, ಜನಸಾಮಾನ್ಯರಿಗೆ ಸಂಕಟಹರ, ಹೀಗೆ ಒಂದೇ, ಎರಡೇ… ಹಲವಾರು ರೂಪಗಳು, ಗುಣಗಳು, ಸಾಮರ್ಥ್ಯಗಳಿವೆ, ನಮ್ಮ ಗಣಪನಿಗೆ.

ಇಂದಿನ ಗಣಪನೂ ವಿಭಿನ್ನ ಪರಿಕಲ್ಪನೆಯಲ್ಲಿ ಬೇರೆ ಬೇರೆ ಆಕಾರ ತಾಳುತ್ತಲೇ ಇದ್ದಾನೆ. ಸರ್ವ ಕಾಲಕ್ಕೂ ಸಲ್ಲುವ ದೇವನಾಗಿ, ನಮ್ಮೆದುರು ಬರುತ್ತಲೇ ಇದ್ದಾನೆ…

– ಲೇಖನ: ಲಕ್ಷ್ಮೀ ಮೂರ್ತಿ ಮತ್ತು ರವಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next