Advertisement

Hampi G20 summit ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಚ್ಯವಸ್ತುಗಳ ಮಹತ್ವ ಸಾರಲು ವೇದಿಕೆ

10:18 PM Jul 09, 2023 | Team Udayavani |

ಹೊಸಪೇಟೆ: ಜಿ-20 ಶೃಂಗಸಭೆಯಿಂದ ಪ್ರಾಚ್ಯವಸ್ತುಗಳ ಕಳ್ಳ ಸಾಗಾಣಿಕೆ ತಡೆಗಟ್ಟುವ ಕಾರ್ಯಕ್ಕೆ ಸಹಕಾರಿಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಚ್ಯವಸ್ತುಗಳ ಮಹತ್ವವನ್ನು ತಿಳಿಯಪಡಿಸಲು ಜಿ-20 ವೇದಿಕೆಯಾಗಿ ಪರಿಣಮಿಸಿದೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಇಡೀ ಜಗತ್ತಿಗೆ ಮತ್ತೊಮ್ಮೆ ಪರಿಚಯಿಸುವ ಕಾರ್ಯವೂ ನಡೆಯುತ್ತಿದೆ. ಹಂಪಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಜುಲೈ 10ರಂದು ಎದುರು ಬಸವಣ್ಣ ಮಂಟಪದ ಬಳಿ ಲಂಬಾಣಿ ಕಸೂತಿ ಕಲೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸುವ ಕಾರ್ಯ ನಡೆಯಲಿದೆ. ಇದರಿಂದ ಈ ಕಲೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ ಮೋಹನ್ ತಿಳಿಸಿದರು.

Advertisement

ಜಿಂದಾಲ್‌ನ ವಿದ್ಯಾನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಚರ್ಚೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸೂತಿ ಕಲೆಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಕರಕುಶಲ ವಸ್ತುಪ್ರದರ್ಶನ ನಡೆಸಲಾಗುವುದು ಎಂದರು.

ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-೨೦ ವೇದಿಕೆಯಾಗಲಿದೆ. ಈ ಹಿಂದೆ ಒರಿಸ್ಸಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಜಿ-20 1 ಮತ್ತು 1ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗಳು ಯಶಸ್ವಿಯಾಗಿವೆ. ಇದರಲ್ಲಿ ಜಿ–20 ಸದಸ್ಯ ರಾಷ್ಟ್ರಗಳ 50 ಅತ್ಯುನ್ನತ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜೊತೆಗೆ ನಾಲ್ಕು ವೆಬಿನಾರ್‌ಗಳನ್ನು ಸಹ ಆಯೋಜಿಸಲಾಗಿತ್ತು. ಈ ಸಭೆಗಳು ಕೂಡ ಯಶಸ್ವಿಯಾಗಿವೆ ಎಂದರು.

ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತೆ ರಕ್ಷಿಸಿ, ಪುನರ್‌ಸ್ಥಾಪಿಸುವುದಾಗಿದೆ. ೧೯೭೦ರ ಯುನೆಸ್ಕೊ ಒಡಂಬಡಿಕೆಯಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದಿಂದ, ವಸಾಹತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ಪಡೆಯಲಾದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ದವಾಗಿದ್ದು, ಈಗಾಗಲೇ ಭಾರತವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕ 150 ಕ್ಕೂ ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ ಎಂದರು.

ಭಾರತದಲ್ಲಿ ಆರ್ಯುವೇದ ಪದ್ಧತಿ ಬಳಕೆಯಲ್ಲಿ ಇದೆ. ಹಲವಾರು ಸಂದರ್ಭದಲ್ಲಿ ಆರ್ಯವೇದಲ್ಲಿ ಬಳಕೆಯಲ್ಲಿದ್ದ ಔಷಧೋಪಚಾರಗಳ ಸ್ವಾಮ್ಯ ಹಕ್ಕು(ಪೇಟೆಂಟ್) ಬೇರೆಯವರ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ. ಸಾಂಸ್ಕೃತಿಕ ಅಂಶಗಳು, ಕಸೂತಿ ಕಲೆ, ಕರಕುಶಲ ಹಾಗೂ ಉದ್ದಿಮೆಗಳನ್ನು ಪ್ರಚುರ ಪಡಿಸುವುದಾಗಿದೆ. ಇದರ ಅಂಗವಾಗಿ ಹಂಪಿಯಲ್ಲಿ ಜವಳಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಸಾಂಸ್ಕೃತಿಕ ಅಂಶಗಳಿಗೆ ಡಿಜಿಟಲ್ ರೂಪ ನೀಡಿ, ಆಡಿಯೋ, ವಿಡಿಯೋ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು. ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸಲು ಆಧಾರವಾಗಿದೆ ಎಂದು ಜಿ-20 ಸಾಂಸ್ಕೃತಿಕ ಕಾರ್ಯಕಾರಣಿ ಗುಂಪು ವಿಶ್ವಾಸ ಇರಿಸಿದೆ ಎಂದರು.

Advertisement

ವಾರಣಾಸಿಯಲ್ಲಿ ಆಗಸ್ಟ್ 26 ರಂದು ಸಾಂಸ್ಕೃತಿಕ ಕಾರ್ಯಕಾರಣಿ ಗುಂಪಿನ ಅಂತಿಮ ಸಭೆ ನಡೆಯಲಿದೆ. ವಾರಾಣಸಿ ಸಭೆಯಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದರು.

ಗಿನ್ನಿಸ್ ದಾಖಲೆಗೆ ಲಂಬಾಣಿ ಕುಸೂತಿ ಕಲೆ

ಕೇಂದ್ರ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ ಮಾತನಾಡಿ, ಹಂಪಿಯ ಎದುರು ಬಸವಣ್ಣ ಮಂಟಪದ ಬಳಿ ಕಸೂತಿ ಕಲೆ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಜು.೧೦ರಂದು ವಸ್ತುಪ್ರದರ್ಶನ ಉದ್ಘಾಟನೆ ನಡೆಯಲಿದೆ. ಸಂಡೂರಿನ ಕಲಾಕೇಂದ್ರದ ಲಂಬಾಣಿ ಮಹಿಳೆಯರು ಸೇರಿದಂತೆ ರಾಜ್ಯದ ವಿವಿಧ ಭಾಗದ ೪೫೦ಕ್ಕೂ ಹೆಚ್ಚು ಲಂಬಾಣಿ ಮಹಿಳೆಯರು 1300 ವೈವಿಧ್ಯಮಯ ಕಸೂತಿಗಳನ್ನು ಸಿದ್ಧಪಡಿಸಿದ್ದು, ಇದು ಗಿನ್ನಿಸ್ ದಾಖಲೆಗೆ ಸೇರಲಿದೆ. ಇದರ ಪ್ರದರ್ಶನ ನಡೆಯಲಿದೆ ಎಂದರು.

ಈ ಪ್ರದರ್ಶನದಲ್ಲಿ ಕರಕಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಜಾಗತಿಕವಾಗಿ ಸಾಂಪ್ರದಾಯಿಕ ಲಂಬಾಣಿ ಕಸೂತಿಗೆ ಮನ್ನಣೆ ದೊರಕಿಸಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯ ದೊರಕಿಸುವ ಜೊತೆಗೆ ಸಾಂಪ್ರದಾಯಿಕ ಬದುಕಿನ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.

ಗೋಷ್ಠಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕ ಕೆ.ಕೆ.ಬಸಾ ಹಾಗೂ ಕೇಂದ್ರ ವಾರ್ತಾ ವಿಭಾಗದ(ಪಿಐಬಿ) ಸಹಾಯಕ ಮಹಾ ನಿರ್ದೇಶಕಿ ನಾನು ಭಾಸಿನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next