Advertisement

ನಂದಿನಿ ನದಿಯಿದ್ದರೂ ಜನರಿಗೆ ಟ್ಯಾಂಕರ್‌ ನೀರೇ ತಾತ್ಕಾಲಿಕ ಪರಿಹಾರ

03:12 PM May 15, 2019 | Naveen |

ಹಳೆಯಂಗಡಿ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಾವಂಜೆ ಹಾಗೂ ಸಸಿಹಿತ್ಲಿನ ಪಕ್ಕದಲ್ಲಿಯೇ ನಂದಿನಿ ನದಿ ವಿಶಾಲವಾಗಿ ಹರಿಯುತ್ತಿದ್ದರೂ ಸಹ ಗ್ರಾಮಸ್ಥರಿಗೆ ಮಾತ್ರ ಕುಡಿಯುವ ನೀರಿನ ಹಾಹಾಕಾರ ತೀವ್ರವಾಗಿದೆ. ತಾತ್ಕಾಲಿಕವಾಗಿ ಟ್ಯಾಂಕರ್‌ ನೀರೇ ಪರಿಹಾರವಾದರೂ ಅದೂ ಸಾಕಾಗುತ್ತಿಲ್ಲ.

Advertisement

ಪಾವಂಜೆಯಲ್ಲಿನ ಸ್ಥಿತಿಗತಿ
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಪಾವಂಜೆ, ಅರಾಂದ್‌, ಕೊಳುವೈಲು ಪ್ರದೇಶವು ನಂದಿನಿ ನದಿಯ ದಂಡೆಯಲ್ಲಿನ ಸುಮಾರು 300ಕ್ಕೂ ಹೆಚ್ಚು ಕುಡಿಯುವ ನೀರಿನ ಸಂಪರ್ಕ ಇರುವ ಪ್ರದೇಶವಾಗಿದೆ. ಇಲ್ಲಿಗೆ ಕಿನ್ನಿಗೋಳಿ ಬಹುಗ್ರಾಮದ ಯೋಜನೆ, ರಾಮನಗರದಲ್ಲಿರುವ ತೆರೆದ ಬಾವಿಯ ನೀರು ಹಾಗೂ ತುಂಬೆಯ ನೀರೇ ಆಸರೆ. ಆದರೆ ವ್ಯವಸ್ಥಿತವಾದ ನೀರು ಶೇಖರಣೆಯ ಟ್ಯಾಂಕಿ ಇಲ್ಲದೇ ಬಹುದೊಡ್ಡ ಸಮಸ್ಯೆಯಾಗಿದ್ದ ನೇರವಾಗಿ ಪೈಪ್‌ಲೈನ್‌ ಮೂಲಕವೇ ನೀರು ಸರಬರಾಜು ಆಗುತ್ತಿದೆ. ತುಂಬೆಯಿಂದ ಬರುವ ನೀರು ರೇಶನಿಂಗ್‌ನ ವ್ಯವಸ್ಥೆಯಿಂದ ಕೈಕೊಟ್ಟಿದೆ. ಬಹುಗ್ರಾಮದ ನೀರು ಪಾವಂಜೆಗೆ ಬರುವಾಗ ಬತ್ತಿರುತ್ತದೆ. ರಾಮನಗರದ ತೆರೆದ ಬಾವಿಯ ನೀರು ಕೆಳ ಮಟ್ಟದಲ್ಲಿರುವುದರಿಂದ ಅರಾಂದ್‌ವರೆಗೂ ಹರಿಯುವುದಕ್ಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ.

ಸಸಿಹಿತ್ಲು ಪ್ರದೇಶದಲ್ಲಿ
ಒಂದು ಭಾಗ ಕಡಲು ಮತ್ತೂಂದು ಭಾಗ ನದಿಯನ್ನು ಹೊಂದಿರುವ ಸಸಿಹಿತ್ಲು ಪ್ರದೇಶದಲ್ಲಿ 400ಕ್ಕಿಂತಲೂ ಹೆಚ್ಚು ಸಂಪರ್ಕ ಇದ್ದರೂ ಸಹ ಕುಡಿಯುವ ನೀರಿಗಾಗಿ ತುಂಬೆ ನೀರಿನ ಆಸರೆ ಮಾತ್ರ ಇರುವುದು, ಆ ನೀರು ಬಂದರೆ ಮಾತ್ರ ಇಲ್ಲಿನವರಿಗೆ ಸಿಹಿ ನೀರು ಇಲ್ಲದಿದ್ದಲ್ಲಿ ಉಪ್ಪು ನೀರಿನಲ್ಲಿಯೇ ಎಲ್ಲವನ್ನು ಸಹಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ನೀರಿನ ಶೇಖರಣೆಗೆ ಟ್ಯಾಂಕ್‌ಗಳಿದ್ದರೂ ಸಹ ಅದಕ್ಕೆ ನೀರು ತುಂಬಿಸಲು ಸಾಧ್ಯವಾಗದ ಪರಿಸ್ಥಿತಿ. ಇದ್ದ ಒಂದೆರಡು ಸಾರ್ವಜನಿಕ ಬಾವಿಯಲ್ಲೂ ಉಪ್ಪು ನೀರಿನ ಅಂಶ ಕಂಡು ಬಂದಿದೆ.

ದೇವಸ್ಥಾನದಿಂದ ನೀರು
ಹಳೆಯಂಗಡಿ ಗ್ರಾಮ ಪಂಚಾಯತ್‌ನಿಂದ ವಿಶೇಷವಾಗಿ ಮನವಿ ಮಾಡಿಕೊಂಡ ಪರಿಣಾಮ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀಜಿ ದೇವಸ್ಥಾನದ ಆಡಳಿತ ಮಂಡಳಿಯು ದಿನಕ್ಕೆ ಎರಡರಿಂದ ನಾಲ್ಕರವರೆಗೆ ಟ್ಯಾಂಕರ್‌ ಮೂಲಕ ತಮ್ಮದೇ ಜಲಮೂಲದ ಬಾವಿಯಿಂದ ಉಚಿತವಾಗಿ ನೀರನ್ನು ನೀಡಿ ಔದಾರ್ಯ ಮೆರೆದಿದೆ. ಆದರೆ ನೇರವಾಗಿ ಟಾಂಕಿಗಳಿದ್ದಲ್ಲಿ ತುಂಬಿಸಲು ಸುಲಭವಾಗಿತ್ತು.

ಆದರೆ ಪಾವಂಜೆಯಲ್ಲಿ ಟ್ಯಾಂಕ್‌ಗಳಿಲ್ಲದೇ ಮನೆಗಳು ಸಹ ದೂರ ದೂರ ಇರುವುದರಿಂದ ಪ್ರತೀ ಮನೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

Advertisement

ಸಸಿಹಿತ್ಲು ಪ್ರದೇಶವು ಸಹ ವಿಶಾಲವಾಗಿದ್ದು, ಒಳ ರಸ್ತೆಗಳಿಲ್ಲದೇ ಇರುವುದರಿಂದ ಟ್ಯಾಂಕರ್‌ ನೀರು ಗ್ರಾಮಸ್ಥರ ನಿರೀಕ್ಷೆಯಂತೆ ತಲುಪುತ್ತಿಲ್ಲ ಎಂಬ ದೇವಳದ ಮುಕ್ತ ಸಹಕಾರದ ನಡುವೆಯೂ ಅಸಮಾಧಾನ ಕೇಳಿ ಬಂದಿದೆ.

ಉಪ್ಪು ನೀರಿನಿಂದ ತೊಂದರೆ
ಈ ಎರಡೂ ಪ್ರದೇಶದಲ್ಲಿ ಉಪ್ಪು ನೀರಿನಿಂದ ಹೊಸದಾಗಿ ಕೊಳವೆ ಬಾವಿ ಕೊರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಶಾಸಕರ ನೇತೃತ್ವದಲ್ಲಿನ ಟಾಸ್ಕ್ ಫೋರ್ಸ್‌ನ ಮೂಲಕವಾದರೂ ನೆರವು ನೀಡಲು ಪ್ರಯತ್ನ ನಡೆಯಬೇಕು. ಜಿಲ್ಲಾಡಳಿತದಿಂದಲೇ ಟ್ಯಾಂಕರ್‌ ವ್ಯವಸ್ಥೆ ಮಾಡಿದಲ್ಲಿ ಪರಿಹಾರ ಸಾಧ್ಯವಿದೆ. ನೀರಿನ ನಿರ್ವಹಣೆಯಲ್ಲಿ ರಾಜಕೀಯದ ಆರೋಪ ಸರಿಯಲ್ಲ.
ಜಲಜಾ ಪಾಣಾರ್‌,
ಅಧ್ಯಕ್ಷರು, ಗ್ರಾಮ ಪಂಚಾಯತ್‌

ನಿಯೋಗ ಆಗಮಿಸಲಿದೆ
ಪಾವಂಜೆಯ ಅರಾಂದ್‌ ಪ್ರದೇಶಕ್ಕೆ ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಹಾಗೂ ಮತ್ತಿತರರು ಸೇರಿಕೊಂಡು 30 ಸಾವಿರ ರೂ. ವಿನ ಸ್ವಂತ ಹಣದಲ್ಲಿ ಪ್ರತ್ಯೇಕ ಪೈಪ್‌ಲೈನ್‌ ಮಾಡಿ ಪ್ರಯತ್ನ ನಡೆಸಿದ್ದೇವೆ. ಆದರೂ ಒಂದಿಬ್ಬರು ಮುಂದೆ ಬಂದರೂ ಅದರಲ್ಲಿ ನೀರಿನ ಸಂಗ್ರಹ ಅಷ್ಟಾಗಿ ಇಲ್ಲ. ಈ ಎಲ್ಲ ವಿವರಣೆಯನ್ನು ಜಿ.ಪಂ.ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಲ್ಲಿ ತಿಳಿಸಿದ್ದು ಅವರ ನಿಯೋಗವು ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಲಿದೆ.
ವಿನೋದ್‌ ಬೊಳ್ಳೂರು,
ಸದಸ್ಯರು, ದ.ಕ.ಜಿ.ಪಂ..

ಟ್ಯಾಂಕರ್‌ ಮೂಲಕ ಪರಿಹಾರ ನೀಡಲು ಟೆಂಡರ್‌ ಕರೆದಿದ್ದರೂ ಯಾರೂ ಮುಂದೆ ಬರುತ್ತಿಲ್ಲ. ಕಾರಣ 800 ರೂ. ಇದ್ದ ನೀರಿಗೆ 2000 ದಾಟಿದೆ ಹಾಗೂ ನೀರು ಕೊಟ್ಟ ಅನಂತರ ಬಿಲ್ ಸಿಗುವಾಗ ವರ್ಷ ಕಳೆಯುತ್ತದೆ ಎಂಬ ಆತಂಕವೂ ಅವರಲ್ಲಿದೆ. ಸಮಿತಿಯ ಮೂಲಕವೇ ಪರಿಹಾರ ಸಾಧ್ಯವಿದೆ. ಗ್ರಾಹಕರು ಸಹ ತಿಂಗಳಿಗೆ ತಕ್ಕ ಹಾಗೆ ಬಿಲ್ಲನ್ನು ಪಾವತಿಸಿದಲ್ಲಿ ಸಮಿತಿಯಲ್ಲಿಯೇ ಎಲ್ಲವೂ ಪರಿಹಾರ ಕಾಣಲು ಸಾಧ್ಯವಿದೆ.
ಅನಿತಾ ಕ್ಯಾಥರಿನ್‌
ಪಂಚಾಯತ್‌ ಅಭಿವೃದ್ದಿ ಅಧಿಕಾರಿ (ಪ್ರಭಾರ)

ಗ್ರಾಮಸ್ಥರ ಬೇಡಿಕೆಗಳು
••ತುಕ್ಕು ಹಿಡಿದ ಪೈಪ್‌ಲೈನ್‌ಗಳನ್ನು ಬದಲಿಸಬೇಕು.

••ಉಪ್ಪು ನೀರಿನ ಪ್ರದೇಶವಾದ್ದರಿಂದ ಇಲ್ಲಿಗೊಂದು ಶಾಶ್ವತ ಯೋಜನೆ ಮಾಡಬೇಕು.

••ಟ್ಯಾಂಕರ್‌ನಲ್ಲಿ ನೀರು ಎಲ್ಲರಿಗೂ ತಲುಪುವಂತಿರಬೇಕು

••ಖಾಸಗಿ ಟ್ಯಾಂಕರ್‌ ನೀರಿನ ಬೆಲೆ ದುಬಾರಿಯಾಗಿದ್ದು, ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು.

ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next