Advertisement

ಪಾಸ್ವಾನ್‌ ಇಲ್ಲದೆ ಹಾಜೀಪುರ ಎಲೆಕ್ಷನ್‌

11:25 AM May 04, 2019 | sudhir |

ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ ಪಾಸ್ವಾನ್‌ ಸ್ಪರ್ಧೆ ಮಾಡುತ್ತಿಲ್ಲ. ಅವರ ಬದಲು ಪುತ್ರ ಚಿರಾಗ್‌ ಪಾಸ್ವಾನ್‌ ಕಣಕ್ಕೆ ಇಳಿಯಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಅದರ ಬದಲಾಗಿ ಬಿಹಾರ ಸರ್ಕಾರದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿರುವ ಪಶುಪತಿ ಕುಮಾರ್‌ ಪರಸ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ಎದುರಾಳಿ ಅಭ್ಯರ್ಥಿಯಾಗಿ ಆರ್‌ಜೆಡಿಯ ಶಿವಚಂದ್ರ ರಾಮ್‌ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

1952ರಲ್ಲಿ ಈ ಕ್ಷೇತ್ರ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜೇಶ್ವರ ಪಟೇಲ್‌ ಗೆದ್ದಿದ್ದರು. 1957 ಮತ್ತು 1962ರ ಚುನಾವಣೆಯಲ್ಲಿ ಪಟೇಲ್‌ ಅವರೇ ಸ್ಥಾನ ಉಳಿಸಿಕೊಂಡಿದ್ದರು. 1967ರಲ್ಲಿ ಕಾಂಗ್ರೆಸ್‌ನಿಂದ ವಾಲ್ಮೀಕಿ ಚೌಧರಿ ಗೆದ್ದರು. 1971ರಲ್ಲಿ ರಾಮ್‌ಶೇಖರ್‌ ಪ್ರಸಾದ್‌ ಸಿಂಗ್‌ ಜಯ ಸಾಧಿಸಿದ್ದರು. ಹಾಲಿ ಪ್ರಭಾವಿ ನಾಯಕ ಪಾಸ್ವಾನ್‌ 1977ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲ್ಲುವ ಮೂಲಕ ತಮ್ಮ ಛಾಪು ಮೂಡಿಸಿದರು. 1980, 1989, 1996, 1998, 1999, 2004, 2014ರ ಚುನಾವಣೆಯಲ್ಲಿ ಪಾಸ್ವಾನ್‌ ಜಯಗಳಿಸಿದ್ದರು. 1991 ಮತ್ತು 2009ರಲ್ಲಿ ಜೆಡಿಯುನ ರಾಂ ಸುಂದರ್‌ ದಾಸ್‌ ಗೆದ್ದಿದ್ದರು.

ಸ್ವಾತಂತ್ರ್ಯ ಪಡೆದ ಬಳಿಕ 1977ರ ವರೆಗೆ ಮಾತ್ರ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದರು. ನಂತರದ ವರ್ಷಗಳಲ್ಲಿ ಅದಕ್ಕೆ ಬ್ರೇಕ್‌ ನೀಡಿದ ಹೆಗ್ಗಳಿಕೆ ಕೇಂದ್ರ ಸಚಿವ ಪಾಸ್ವಾನ್‌ಗೆ ಸೇರಿದೆ. 1977ರಲ್ಲಿ ಪಾಸ್ವಾನ್‌ ಮೊದಲ ಬಾರಿಗೆ 4,69,007 ಮತಗಳನ್ನು ಪಡೆಯುವ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣದ ಮತ ಪಡೆದು ಆ ಕಾಲಕ್ಕೇ ಗಿನ್ನಿಸ್‌ ದಾಖಲೆ ಮಾಡಿದ್ದರು. ಈ ದಾಖಲೆಯನ್ನು ದಿ.ಪಿ.ವಿ.ನರಸಿಂಹ ರಾವ್‌ ಒಡಿಶಾದ ನಂದ್ಯಾಲ್‌ನಿಂದ 5 ಲಕ್ಷ ಮತಗಳನ್ನು ಪಡೆಯುವ ಮೂಲಕ ಮುರಿದಿದ್ದರು.

ಈ ಬಿಹಾರದಲ್ಲಿ ಜೆಡಿಯು-ಬಿಜೆಪಿ ಸ್ಥಾನ ಹೊಂದಾಣಿಕೆ ವೇಳೆ ಪಾಸ್ವಾನ್‌ ಎನ್‌ಡಿಎ ತೊರೆವ ಮಾತಾಡಿದ್ದರು. ಅಂತಿಮವಾಗಿ ಗೆದ್ದದ್ದು ಅವರೇ. 1 ರಾಜ್ಯಸಭಾ ಸ್ಥಾನ, 7 ಕ್ಷೇತ್ರಗಳನ್ನು ಅವರು ಪಡೆದುಕೊಂಡಿದ್ದಾರೆ.
ಜಾತಿ ಲೆಕ್ಕಾಚಾರ: ಇಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು. ಅಲ್ಪಸಂಖ್ಯಾತ ಸಮುದಾಯದ ಪೈಕಿ ಮುಸ್ಲಿಂ ಸಮುದಾಯದ ಪ್ರತಿನಿಧಿನ್ವ ಶೇ.9.5. ಕ್ರಿಶ್ಚಿಯನ್‌ ಸಮುದಾಯ ಶೇ.0.06, ಜೈನ, ಸಿಖ್‌ ಮತ್ತು ಬೌದ್ಧ ಸಮುದಾಯದವರ ಪ್ರಮಾಣ ಶೇ.3ರಷ್ಟು ಇದೆ. ಇನ್ನು ಯಾದವರು, ರಜಪೂತರು, ಭೂಮಿಹಾರರು, ಕುಶ್ವಾಹಾ, ಪಾಸ್ವಾನ್‌, ರವಿದಾಸ ಸಮುದಾಯಕ್ಕೆ ಸೇರಿದವರೂ ಗಣನೀಯ ಪ್ರಮಾಣದಲ್ಲಿ ಇದ್ದಾರೆ.

ಗೆದ್ದಾಗ ಸಚಿವ: ರಾಂ ವಿಲಾಸ್‌ ಪಾಸ್ವಾನ್‌ ಪ್ರತಿಬಾರಿ ಗೆದ್ದಾಗಲೂ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಗಳ ಅವಧಿಯಲ್ಲಿ ವಿವಿಧ ಖಾತೆಗಳನ್ನು ಅವರು ನಿರ್ವಹಿಸಿದ್ದಾರೆ.

Advertisement

ಇಷ್ಟು ಮಾತ್ರವಲ್ಲದೆ ಕ್ಷೇತ್ರದ ಜತೆಗೆ ಬರೋಬ್ಬರಿ ನಲವತ್ತು ವರ್ಷಗಳ ಕಾಲ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ಜನತಾ ಪರಿವಾರ ವಿಭಜನೆಗೊಂಡು ಪ್ರತ್ಯೇಕಗೊಂಡಾಗಲೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಬಿಹಾರದಲ್ಲಿ ಎನ್‌ಡಿಎ ಸ್ಥಾನ ಹೊಂದಾಣಿಕೆ ವೇಳೆ ತಮಗೆ ರಾಜ್ಯಸಭಾ ಸ್ಥಾನ ಬೇಕೇ ಬೇಕು ಎಂದು ಪಟ್ಟುಹಿಡಿದು ಗಿಟ್ಟಿಸಿಕೊಂಡವರು. ಹೀಗಾಗಿ, ಕ್ಷೇತ್ರದ ಜನತೆಗೆ ಅವರನ್ನು ನಿಜಕ್ಕೂ “ಕಳೆದುಕೊಂಡಂತೆ’ ಆಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕ್ಷೇತ್ರದ ಮತದಾರ ಜೋಗೇಶ್ವರ್‌ ಕುಶ್ವಾಹ ಹೇಳುವ ಪ್ರಕಾರ ಪ್ರತಿ ಬಾರಿಯೂ ನಾವು ಅವರಿಗೆ ಮತ ಹಾಕಿ ಆಯ್ಕೆ ಮಾಡುತ್ತಿದ್ದೆವು.

ನವದೆಹಲಿಯಲ್ಲಿರುವ ಅವರ ಕಚೇರಿಗೆ ತೆರಳಿದ್ದಾಗ ಯಾವ ರೀತಿಯಾಗಿ ಸಿಬ್ಬಂದಿ ಕ್ಷೇತ್ರದ ಜತೆಗೆ ನಡೆದುಕೊಳ್ಳುತ್ತಿದ್ದರು ಮತ್ತು ಯಾವ ರೀತಿಯ ಸಮಸ್ಯೆ, ಪರಿಹಾರ ಬೇಕಾದರೂ ಸ್ಪಂದಿಸುತ್ತಿದ್ದರು ಎನ್ನುವುದನ್ನು ಹತ್ತಿರದ ಬಂಧುಗಳು ಹೇಳುವುದನ್ನು ಕೇಳಿದ್ದೆ ಎಂದು ಹೇಳಿದ್ದಾರೆ. ಸದ್ಯ 72 ವರ್ಷ ವಯಸ್ಸಿನ ಅವರು ಕಾಂಗ್ರೆಸ್‌ ವಿರೋಧಿಸಿ ರಾಜಕೀಯ ಜೀವನ ಶುರು ಮಾಡಿದ್ದರೂ, ನಂತರದ ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಮತ್ತು ಬಿಜೆಪಿ ಮೈತ್ರಿಕೂಟದ ಜತೆಗೆ ಕೆಲಸ ಮಾಡಿದ್ದಾರೆ.

ಈ ಬಾರಿ ಕಣದಲ್ಲಿ
– ಪಶುಪತಿ ಕುಮಾರ್‌ ಪರಸ್‌ (ಎಲ್‌ಜೆಪಿ)
– ಶಿವಚಂದ್ರ ರಾಮ್‌ (ಆರ್‌ಜೆಡಿ)

Advertisement

Udayavani is now on Telegram. Click here to join our channel and stay updated with the latest news.

Next