Advertisement

ಕೋಳಿಫಾರಂ ಮುಚ್ಚಿಸಲು ಮಹಿಳೆಯರ ಒತ್ತಾಯ

12:40 PM May 21, 2020 | Naveen |

ಹಗರಿಬೊಮ್ಮನಹಳ್ಳಿ: ತಾಲೂಕಿನ ಕ್ಯಾತಯನಮರಡಿ, ಒಬಳಾಪುರ ಗ್ರಾಮದ ಮಧ್ಯಭಾಗದಲ್ಲಿರುವ ಕೋಳಿ ಫಾರಂನಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಕೋಳಿಫಾರಂ ಬಂದ್‌ ಮಾಡಿ ಎಂದು ಎರಡು ಗ್ರಾಮಗಳ ಮಹಿಳೆಯರು, ಯುವಕರು ತಹಶೀಲ್ದಾರ್‌ ಕಚೇರಿ ಬಳಿ ಪ್ರತಿಭಟಿಸಿದರು.

Advertisement

ನೊಣಗಳ ಕಾಟದಿಂದ ಬದುಕಲು ಸಾಧ್ಯವಿಲ್ಲ ಸಾರ್‌, ನನಗೆ, ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸ್ವಲ್ಪ ವಿಷ ಕೊಟ್ಟಿಬಿಡಿ ಸಾರ್‌ ಇಲ್ಲೇ ಸತ್ತು ಹೋಗ್ತಿವಿ ಎಂದು ಕ್ಯಾತಯನಮರಡಿ ಗ್ರಾಮದ ಅಜ್ಜಿ ನೀಲಮ್ಮ ತಹಶೀಲ್ದಾರ್‌ ಆಶಪ್ಪ ಪೂಜಾರ್‌ ಬಳಿ ಸಂಕಷ್ಟವನ್ನು ತೋಡಿಕೊಂಡಳು. ನೊಣಗಳ ಕಾಟವನ್ನು ಇತ್ತೀಚೆಗೆ ಗ್ರಾಮಸ್ಥರು ಶಾಸಕರ ಬಳಿ ಹೇಳಿಕೊಂಡಾಗ ಶಾಸಕರು ಎರಡು ಗ್ರಾಮಗಳಿಗೆ ಭೇಟಿನೀಡಿ ಜನರ ಸಂಕಷ್ಟವನ್ನು ಆಲಿಸಿ ಕೂಡಲೇ ಕೋಳಿಫಾರಂ ಬಂದ್‌ ಮಾಡುವಂತೆ ಆದೇಶಿಸಿದ್ದರು. ಶಾಸಕರ ಆದೇಶಕ್ಕೂ ಕಿಮ್ಮತ್ತು ಕೊಡದೆ ಕೋಳಿಫಾರಂನವರು ಮುಂಭಾಗದ ಗೇಟ್‌ನ್ನು ಬಂದ್‌ ಮಾಡಿ ಹಿಂಬದಿಯಲ್ಲಿ ಓಪನ್‌ ಮಾಡಿಕೊಂಡು ಫಾರಂ ನಡೆಸುತ್ತಿದ್ದಾರೆ. ಕೋಳಿಫಾರಂ ಮಾಲೀಕರ ಪರವಾಗಿ ಕಾಣದ ಕೈಗಳು ಹೆಚ್ಚು ಕೆಲಸ ಮಾಡುತ್ತಿವೆ ಎಂದು ಗ್ರಾಮದ ಮಾರುತಿ, ಪ್ರಕಾಶ್‌ ಬೇಸರದಿಂದ ತಹಶೀಲ್ದಾರ್‌ಗೆ ತಿಳಿಸಿದರು.

ತಹಶೀಲ್ದಾರ್‌ ಆಶಪ್ಪ ಪೂಜಾರ್‌ ಪ್ರತಿಕ್ರಿಯಿಸಿ, ಶಾಸಕರು ಭೇಟಿ ನೀಡಿದ ದಿನದಂದೆ ಸಹಾಯಕ ಆಯುಕ್ತರ ಆದೇಶದಂತೆ ಕೋಳಿಫಾರಂ ಬಂದ್‌ ಮಾಡಲಾಗಿತ್ತು. ನಮಗೆ ತಿಳಿಯದಂತೆ ಪುನಃ ಪ್ರಾರಂಭಿಸಿರುವುದು ಆದೇಶವನ್ನು ಧಿಕ್ಕರಿಸಿದಂತಾಗಿದೆ. ಕೂಡಲೇ ಕೋಳಿಫಾರಂ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. 50ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next