Advertisement

ದಶಕ ಕಳೆದರೂ ದೊರೆಯದ ಆಸರೆ ಮನೆ

04:11 PM Feb 20, 2021 | Team Udayavani |

ಸಿರುಗುಪ್ಪ: ಫೆಬ್ರವರಿ 20ರಂದು ಗ್ರಾಮವಾಸ್ತವ್ಯ ನಡೆಯಲಿರುವ ತಾಲೂಕಿನ ಹಚ್ಚೊಳ್ಳಿ ಗ್ರಾಮ  ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಮತ್ತು ಹಚ್ಚೊಳ್ಳಿ ಗ್ರಾಮದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಮುಖ್ಯವಾಗಿ ಕುಡಿಯುವ ನೀರು, ಆಸರೆ ಮನೆ ಹಂಚಿಕೆ ಕಾರ್ಯ ನಡೆಯದಿರುವುದು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಚರ್ಚೆಗೆ ಗ್ರಾಸವಾಗಲಿದೆ.

Advertisement

2009ರ ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 1ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಮತ್ತು ತುಂಗಭದ್ರಾ ಜಲಾಶಯದಿಂದ 4ಲಕ್ಷ ಕ್ಯೂಸೆಕ್‌ ನೀರು ಹರಿಯಬಿಟ್ಟಿದ್ದರಿಂದ ಹಚ್ಚೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಟೂರು, ಚಳ್ಳೆಕೂಡೂÉರು, ಹಚ್ಚೊಳ್ಳಿ, ಶ್ರೀಧರಗಡ್ಡೆ, ಹೊನ್ನಾರಹಳ್ಳಿ ಗ್ರಾಮಗಳು ಸಂಪೂರ್ಣವಾಗಿ ಮೂರು ದಿನ ಜಲಾವೃತಗೊಂಡಿದ್ದವು. ಆ ಸಂದರ್ಭದಲ್ಲಿ ಇಡೀ ಗ್ರಾಮಗಳು ಬಿರುಗಾಳಿಗೆ ಸಿಲುಕಿದ ತರಗಲೆಗಳಂತೆ ಇಡೀ ಗ್ರಾಮದ ಮನೆಗಳು ನೆಲಕ್ಕುರುಳಿ ಬಿದ್ದಿದ್ದವು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಟೂರು, ಚಳ್ಳೇಕೂಡೂÉರು, ಹಚ್ಚೊಳ್ಳಿ,ಶ್ರೀಧರಗಡ್ಡೆ , ಹೊನ್ನಾರಹಳ್ಳಿ ಮುಂತಾದ ಗ್ರಾಮಗಳನ್ನು ಸ್ಥಳಾಂತರ ಮಾಡಲು ನವಗ್ರಾಮಗಳನ್ನು ನಿರ್ಮಿಸಿಕೊಟ್ಟಿದ್ದು, ಮಾಟೂರು, ಚಳ್ಳೆಕೂಡೂರು ನವಗ್ರಾಮಗಳಲ್ಲಿ ಕಟ್ಟಿರುವ ಆಸರೆ ಮನೆಗಳು ಕಳಪೆಯಾಗಿವೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದರೂ ಜನ ಅನಿವಾರ್ಯವಾಗಿ ನವಗ್ರಾಮಗಳಿಗೆ ತೆರಳಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಈ ಎರಡೂ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 8 ವರ್ಷದ ಹಿಂದೆ ಕಟ್ಟಿದ ಕೆರೆಗೆ ಒಂದು ಹನಿ ನೀರು ಬಿಟ್ಟಿಲ್ಲ, ಇದರಿಂದಾಗಿ ನದಿ ನೀರೇ ಈ ಜನರಿಗೆ ಗತಿಯಾಗಿದೆ. ಹೊನ್ನಾರಹಳ್ಳಿ, ಶ್ರೀಧರಗಡ್ಡೆ ನವಗ್ರಾಮಗಳಲ್ಲಿ ಜನರು ವಾಸಮಾಡುತ್ತಿದ್ದು, ಇಲ್ಲಿ ಚರಂಡಿ ಮತ್ತು ಸಿಸಿ ರಸ್ತೆ, ಆಸ್ಪತ್ರೆಯ ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.  ಹಚ್ಚೊಳ್ಳಿ ನವಗ್ರಾಮದಲ್ಲಿ ಒಂದು ಸಾವಿರ ಮನೆಗಳನ್ನು ಗಣಿ ಕಂಪನಿಗಳ ಮಾಲೀಕರು ಕಟ್ಟಲು ಮುಂದಾಗಿದ್ದು, ಇದರಲ್ಲಿ 500ಕ್ಕೂ ಹೆಚ್ಚು ಮನೆಗಳನ್ನು ವಿ.ಎಸ್‌. ಲಾಡ್‌ ಸನ್ಸ್‌ ಗಣಿಮಾಲೀಕರು ಕಟ್ಟಿ ಕೈತೊಳೆದುಕೊಂಡರು. ಇನ್ನುಳಿದ ಮನೆಗಳನ್ನು ಸರ್ಕಾರವೇ ಕಟ್ಟಿಕೊಡಲಿದೆ ಎಂದು ಕಂದಾಯ ಸಚಿವರಾಗಿದ್ದ ಕರುಣಾಕರರೆಡ್ಡಿ ಭರವಸೆ ನೀಡಿದ್ದರು.

ಜಿಲ್ಲಾಧಿಕಾರಿ ರಾಂಪ್ರಸಾತ್‌ ಮನೋಹರ್‌ ಇಲ್ಲಿ ಮನೆ ಕಟ್ಟುವ ಜವಾಬ್ದಾರಿಯನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ನೀಡಿದ್ದರು. ಆದರೆ ನವಗ್ರಾಮದಲ್ಲಿ ಇಲ್ಲಿಯವರೆಗೆ ಎಷ್ಟು ಮನೆಗಳು ನಿರ್ಮಾಣವಾಗಿವೆ ಎನ್ನುವುದರ ಬಗ್ಗೆ ಯಾವುದೇ ಅಧಿಕಾರಿಗಳು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. 2019ರ ಡಿಸೆಂಬರ್‌ ತಿಂಗಳಲ್ಲಿ ನವಗ್ರಾಮದ ಪರಿಶೀಲನೆಗೆ ಬಂದಿದ್ದ ಸಹಾಯಕ ಆಯುಕ್ತ ರಮೇಶ್‌ ಕೋನಾರೆಡ್ಡಿ ನೂರು ಎಕರೆ ಪ್ರದೇಶದಲ್ಲಿ ಸುಮಾರು 1200 ಮನೆಗಳನ್ನು ಕಟ್ಟಲಾಗಿದೆ ಎಂದು ತಿಳಿಸಿದ್ದರು. ಆದರೆ ಮನೆಗಳು ನಿರ್ಮಾಣವಾಗಿ 10ವರ್ಷ ಕಳೆದರೂ ಹಚ್ಚೊಳ್ಳಿ ಗ್ರಾಮಸ್ಥರು ನವಗ್ರಾಮಕ್ಕೆ ತೆರಳಿಲ್ಲ.ನಮಗೆ ಮನೆಯ ಹಕ್ಕುಪತ್ರ ನೀಡಿದರೆ ನವಗ್ರಾಮಕ್ಕೆ ತೆರಳುತ್ತೇವೆಂದು ಗ್ರಾಮಸ್ಥರು ಹೇಳಿದರೆ, ಹಳೇ ಊರಿನ ಮನೆಗಳನ್ನು ಖಾಲಿ ಮಾಡಿದರೆ ಮಾತ್ರ ನವಗ್ರಾಮದಲ್ಲಿ ಮನೆಯ ಹಕ್ಕುಪತ್ರ ನೀಡುತ್ತೇವೆಂದು ಸರ್ಕಾರ ಪಟ್ಟು ಹಿಡಿದುಕುಳಿತಿದ್ದು, ಇಲ್ಲಿನ ಜನರ ಆಸರೆ ಮನೆಯ ದಶಕದ ಕನಸು ಗ್ರಾಮ ವಾಸ್ತವ್ಯದಲ್ಲಿಯದರೂ ಬಗೆ ಹರಿದೀತೆ ಕಾದುನೋಡಬೇಕು.

ಇಂದು ಹಚ್ಚೊಳ್ಳಿಯಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

Advertisement

ಸಿರುಗುಪ್ಪ: ತಾಲೂಕಿನ ಹಚ್ಚೊಳ್ಳಿ ಗ್ರಾಮದಲ್ಲಿ ಫೆ. 20ರಂದು ತಹಶೀಲ್ದಾರ್‌, ತಾಪಂ ಇಒ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದು ಗ್ರಾಮದಲ್ಲಿರುವ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ ವಾಸ್ತವ್ಯದ ಬಗ್ಗೆ ಎಲ್ಲ ತಯಾರಿಯನ್ನು ಅಧಿಕಾರಿಗಳು ಮಾಡಿಕೊಂಡಿದ್ದು ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ ಆವರಣದಲ್ಲಿ ವೇದಿಕೆ ನಿರ್ಮಿಸಲಾಗುತ್ತಿದ್ದು ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಅಧಿಕಾರಿಗಳು ಸ್ವೀಕರಿಸಲಿದ್ದು ರಾತ್ರಿ ಇಲ್ಲಿರುವ ಬಿಸಿಎಂ ಇಲಾಖೆಯ ವಸತಿನಿಲಯದಲ್ಲಿ ತಹಶೀಲ್ದಾರ್‌ ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್‌ ಎಸ್‌. ಬಿ. ಕೂಡಲಗಿ ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶ ಸಣ್ಣ ಸಣ್ಣ ವಿಚಾರಕ್ಕೂ ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆದಾಡುವಂತಾಗ  ಬಾರದು ಎನ್ನುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಿದ್ದು, ಆಧಾರ್‌ ಕಾರ್ಡ್‌ ದೋಷ, ಪಡಿತರ ಚೀಟಿ ವ್ಯತ್ಯಾಸ, ಪೌತಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಂಚಣಿ ಸೌಲಭ್ಯ, ವೃದ್ಧಾಪ್ಯವೇತನ ಸೌಲಭ್ಯಗಳು ಅರ್ಹರಿಗೆ ಸಿಗದೇ ಇದ್ದರೆ ನೀಡುವ ವ್ಯವಸ್ಥೆ ಮಾಡಲಾಗುವುದು. ಪ್ರ

ವಾಹ, ಬರ ಪರಿಹಾರದ ಬಗ್ಗೆಯೂ ಕ್ರಮ ವಹಿಸಲಾಗುತ್ತದೆ. ಸಾರ್ವಜನಿಕರು ಆ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಂದಾಯ ಇಲಾಖೆಯ ವಿವಿಧ ಸೇವೆಗಳು, ಯೋಜನೆಗಳ ದೋಷಗಳನ್ನು ಸರಿಪಡಿಸಿಕೊಳ್ಳಲು, ತಿದ್ದುಪಡಿ ಮಾಡಿಕೊಳ್ಳಲು, ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಗ್ರಾಮ ವಾಸ್ತವ್ಯದ ಸೌಲಭ್ಯವನ್ನು ಸ್ಥಳಿಯರು ಪಡೆದುಕೊಳ್ಳಬೇಕೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next