Advertisement

ತ್ಯಾಗ ನಮ್ಮದು, ಅಧಿಕಾರ ಅನುಭವಿಸ್ತಿರೋದು ಯಾರೋ!

12:30 AM Dec 04, 2020 | sudhir |

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಎಚ್‌.ವಿಶ್ವನಾಥ್‌ ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನದ ರೂವಾರಿಗಳಲ್ಲಿ ಒಬ್ಬರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು ಉಪ ಚುನಾವಣೆಯಲ್ಲಿ ಸೋತರೂ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲಾಯಿತು. ಆದರೆ ಅದೇ ಈಗ ಅವರಿಗೆ ಮುಳುವಾಗಿದೆ. ಸಚಿವರಾಗಲು ಅರ್ಹರಲ್ಲ ಎಂಬ ಹೈಕೋರ್ಟ್‌ ತೀರ್ಪಿನ ಅನಂತರ ವಿಶ್ವನಾಥ್‌ ಮಾತಿನ ವರಸೆಯೂ ಬದಲಾಗಿದೆ. ಅವರ ಮಾತಿನ ತಿವಿತ ಬಿಜೆಪಿ ನಾಯಕತ್ವಕ್ಕೂ ಮುಜುಗರ ಉಂಟು ಮಾಡುತ್ತಿದ್ದು ಒಂದು ರೀತಿಯಲ್ಲಿ ಬಂಡಾಯ ಸಾರಿದಂತಿದೆ. ಪ್ರಸಕ್ತ ವಿದ್ಯಮಾನಗಳ ಕುರಿತು ಅವರೊಂದಿಗೆ ನೇರಾ-ನೇರ….

Advertisement

ಯೋಗೇಶ್ವರ್‌ ವಿರುದ್ಧ ಯಾಕೆ ನಿಮ್ಮ ಕೋಪ?
ಹುಣಸೂರಿನಲ್ಲಿ ನಾನು ಸೋಲಲು ಆತನೇ ಕಾರಣ. ಷಡ್ಯಂತ್ರ ಮಾಡಿ ಸೋಲಿಸಿದ, ಒಕ್ಕಲಿಗ ಸಮು ದಾಯದರನ್ನು ನನ್ನ ವಿರುದ್ಧ ಎತ್ತಿ ಕಟ್ಟಿದರು. ಸಂಸದ ಸೇರಿ ಬಿಜೆಪಿಯವರು ನನ್ನ ಪರ ಕೆಲಸ ಮಾಡಲಿಲ್ಲ.

ನೀವು ಆಗಲೇ ಯಾಕೆ ಇವನ್ನೆಲ್ಲ ಹೇಳಲಿಲ್ಲ?
ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರಿಗೆ ತಿಳಿಸಿ ದ್ದೇನೆ. ಅದೆಲ್ಲವೂ ಪಕ್ಷದ ವಿಚಾರವಾದ್ದರಿಂದ ಆಗಲೇ ಹೇಳಿದ್ದೆ. ಇದೀಗ ಸರಕಾರ ಬರಲು ಏನೇನೂ ಕಾರಣ ನಲ್ಲದ ಯೋಗೇಶ್ವರ್‌ನನ್ನು ಸಚಿವರನ್ನಾಗಿಸುವುದು ದುರಂತದಲ್ಲಿ ದುರಂತ. ಈಗಿನ ಸ್ಥಿತಿ ಹ್ಯಾಮ್ಲೆಟ್‌ ನಾಟಕದ ದೃಶ್ಯದಂತಾಗಿದೆ. ತಂದೆಯ ಹತ್ಯೆಯ ಸುದ್ದಿ ಕೇಳಿ ರಣರಂಗದಿಂದ ರಾಜಧಾನಿಗೆ ಓಡೋಡಿ ಬಂದವನಿಗೆ ತಂದೆ ಕೊಂದವನನ್ನೇ ತಾಯಿಯು ಮದುವೆಯಾಗಿ ಮೆರವಣಿಗೆ ಹೊರಟಿರುವುದು ನೋಡಿ ಹೇಗನಿಸಬೇಡಾ? ನಮ್ಮ ಪರಿಸ್ಥಿತಿ ಹಾಗೂ ಸರಕಾರದ ಪರಿಸ್ಥಿತಿ ಆ ರೀತಿಯೇ ಆಗಿದೆ.

ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಂಡಾಯ ಎದ್ದು ಬಿಜೆಪಿಗೆ ಬಂದರೆ ಇಲ್ಲೂ ಅದೇ ಕತೆ ಆಯ್ತಾ?
ಆಕಾಶ ಕಳಚಿ ಬಿದ್ದಿಲ್ಲ, ನನಗೂ ತಾಳ್ಮೆ ಸಮಾಧಾನ ಇದೆ. ಇದೀಗ ನನ್ನ ಭವಿಷ್ಯ ಯಡಿಯೂರಪ್ಪ ಅವರ ಕೈಲಿದೆ. ಅವರು ನ್ಯಾಯ ದೊರಕಿಸಿಕೊಡಬೇಕು.

ಬಿಜೆಪಿಗೆ ನಿಮ್ಮನ್ನು ಸಚಿವರಾಗಿಸಬೇಕು ಎಂದಿದ್ದರೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಕಳುಹಿಸಬಹುದಿತ್ತಲ್ಲವೇ?
ಹೌದು, ಆಗ ನಾಲ್ಕು ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಕೊನೇ ಗಳಿಗೆಯಲ್ಲಿ ತೆಗೆದು ಹಾಕ ಲಾಯಿತು. ಸುನಿಲ್‌ ವಲ್ಯಾಪುರೆ ವಿಧಾನಸಭೆಯಿಂದ ಪರಿಷತ್‌ಗೆ ಕಳುಹಿಸುವ ಅರ್ಜೆಂಟಾದರೂ ಏನಿತ್ತು? ಅವರನ್ನೇ ನಾಮಿನೇಷನ್‌ ಮಾಡಬಹುದಿತ್ತು. ಅಲ್ಲಿಂ ದಲೇ ನನಗೆ ಸಚಿವ ಸ್ಥಾನ ತಪ್ಪಿಸುವ ಷಡ್ಯಂತ್ರ ಆರಂಭವಾಯಿತು.

Advertisement

ಯಾರು ಆ ಷಡ್ಯಂತ್ರ ಮಾಡಿದವರು?
ಬಿಜೆಪಿಯಲ್ಲಿದ್ದವರೇ. ಜತೆಗೆ ಬೇರೆ ಬೇರೆ ರೀತಿ ಯಲ್ಲಿ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರ ಸ್ವಾಮಿಯ ವರು ಸಹ ನಾನು ಸಚಿವನಾಗದಿರಲು ಏನೆಲ್ಲ ಬೇಕೋ ಅದನ್ನು ಮಾಡಿದರು.

ಬಿಜೆಪಿ ಸರಕಾರ ಬರಲು ಕಾರಣವಾದ ನೀವೇ ಅತಂತ್ರ, ಒಂಟಿ ಆಗಿಬಿಟ್ರಲ್ಲಾ?
ಸದ್ಯದ ಪರಿಸ್ಥಿತಿಯಲ್ಲಿ ಹಾಗೆ ಕಾಣಬಹುದು. ನಾನು ಅತಂತ್ರನಾಗಲು ಸಾಧ್ಯವೇ ಇಲ್ಲ. ಎಲ್ಲವೂ ಸರಿಹೋಗಲಿದೆ, ಸರಿ ಹೋಗಲೇಬೇಕು. ನನ್ನ ಜತೆ ಎಲ್ಲರೂ ಇದ್ದಾರೆ. ರಮೇಶ್‌ ಜಾರಕಿಹೊಳಿ, ಅಶೋಕ್‌, ಮಾಧುಸ್ವಾಮಿ ಜತೆಗಿರುವುದಾಗಿ ಹೇಳಿ ದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾ ಗಿಯೂ ಹೇಳಿದ್ದಾರೆ. ಹಾಗಾಗಿ ನಾನು ಏಕಾಂಗಿಯಲ್ಲ.

ನೀವು ಬಿಜೆಪಿ ಸೇರಿದ್ದೇ ಅಧಿಕಾರಕ್ಕಾಗಿಯಾ? ನೀವು ಸಚಿವ ಸ್ಥಾನಕ್ಕಾಗಿ ಅವಕಾಶವಾದಿ ಆದ್ರಾ?
ಸರಕಾರ ತಂದವರು ನಾವು, ನಮ್ಮ ಹಕ್ಕು ಕೇಳಿದರೆ ಅವಕಾಶ ವಾದಿ ಹೇಗೆ ಆಗುತ್ತದೆ. ನಾನು ಬರದಿದ್ದರೆ ಸಂಖ್ಯಾಬಲವೇ ಆಗುತ್ತಿರಲಿಲ್ಲ. ರಮೇಶ್‌ ಜಾರಕಿ ಹೊಳಿ ಪ್ಲಸ್‌ ಮೂವರು ಓಡಾಡಿಕೊಂಡಿದ್ದರು. ನಾನು ಜೆಡಿಎಸ್‌ ರಾಜ್ಯಾಧRಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಅನಂತರವೇ ಎಲ್ಲರಿಗೂ ಧೈರ್ಯ ಬಂತು. ಯಡಿ ಯೂರಪ್ಪ ಇದನ್ನೆಲ್ಲಾ ಮರೆಯಬಾರದು.

ನಿಮಗೆ ಅಧಿಕಾರ ಸಿಕ್ಕರೆ ಸರಿ, ಇಲ್ಲದಿದ್ದರೆ ಸರಿಯಲ್ಲ ಎಂಬ ಧೋರಣೆ ಎಷ್ಟು ಸರಿ?
ನನಗೆ ಅಧಿಕಾರದ ಹಪಾಹಪಿ ಇದ್ದಿದ್ದರೆ ಇಷ್ಟು ದಿನ ಸುಮ್ಮನಿರುತ್ತಿರಲಿಲ್ಲ. ಬಿಜೆಪಿಯವರಿಗೂ ಇದು ಗೊತ್ತಿದೆ. ನಾನು ಬೇರೆಯವರದು ಕಿತ್ತು ಕೊಡಿ ಎಂದು ಕೇಳುತ್ತಿಲ್ಲ, ನಮಗೆ ಭರವಸೆ ಕೊಟ್ಟಿದ್ದು ಈಡೇರಿಸಿ ಎಂದು ಕೇಳುತ್ತಿದ್ದೇನೆ. ಇದು ತಪ್ಪಾ?

ಬಿಜೆಪಿ ಸೇರಿದ್ದಕ್ಕೆ ಪಶ್ಚಾತ್ತಾಪ ಆಗುತ್ತಿದೆಯಾ?
ಹಾಗನಿಸುತ್ತಿಲ್ಲ. ಪಶ್ಚಾತ್ತಾಪ ಆಗಲು ಬಿಜೆಪಿ ನಾಯಕತ್ವ ಅದಕ್ಕೆ ಅವ ಕಾಶ ಕೊಡಲೂಬಾರದು. ಇಲ್ಲದಿದ್ದರೆ ನಮ್ಮ ತ್ಯಾಗಕ್ಕೆ ಏನು ಬೆಲೆ?

ನಾನು ಹಣಕ್ಕೆ ಮಾರಿಕೊಂಡಿಲ್ಲ ಎಂದು ಹೇಳಿದ್ದಿರಿ, ಈಗ ಉಪ ಚುನಾವಣೆಯಲ್ಲಿ ಯೋಗೇಶ್ವರ್‌ ಹಣ ಲಪಟಾಯಿಸಿದರು ಎಂದು ದೂರಿದ್ದೀರಿ? ಏನಿದು ದ್ವಂದ್ವ?
ಚುನಾವಣೆ ವೆಚ್ಚಕ್ಕೆ ಪಕ್ಷದ ವತಿಯಿಂದ ಕೊಡುವ ಹಣದ ಬಗ್ಗೆ ನಾನು ಮಾತನಾಡಿದ್ದೇನೆ. ಬೇರೆ ಹಣ ಎಂತದ್ದೂ ಇಲ್ಲ.

ಈಗಿನ ಬಿಜೆಪಿ ಸರಕಾರದ ಬಗ್ಗೆ ನಿಮ್ಮ ಅಭಿಪ್ರಾಯ?
ಈಗಿನ ಬಿಜೆಪಿ ಸರಕಾರ ಜನಪರ ವಾಗಲು ಕೆಲವು ಲೋಪಗಳಿದ್ದು ಸರಿಪಡಿಸಿಕೊಳ್ಳಬೇಕು. ಪೂರ್ಣ ಪ್ರಮಾಣದ ಸಂಪುಟ, ಸರಕಾರದ ಕಾರ್ಯ ಕ್ರಮಗಳನ್ನು ಜನರಿಗೆ ತಿಳಿಸುವ ಹಾಗೂ ತಲುಪಿಸುವ ಕೆಲಸ ಪಕ್ಷದಿಂದ ಆಗಬೇಕು. ಎಲ್ಲ ವರ್ಗ, ವಿಭಾಗಕ್ಕೆ ಅವಕಾಶ ಕೊಡಬೇಕು. ಹೊಸ ಮಾತು, ಹೊಸ ಕಾರ್ಯಕ್ರಮ, ಹೊಸ ಗಾಳಿ ಬರಬೇಕು.

ಸರಕಾರ ನಡೆಸುತ್ತಿರುವವರು ನಿಮ್ಮ ಮರ್ಜಿಯಲ್ಲಿದ್ದಾರಾ?
ಹೌದು, ನಾವು ತ್ಯಾಗ ಮಾಡಿದ್ದೇವೆ. ಅದರಿಂದ ಬೇರೆಯವರು ಅಧಿಕಾರ ಅನುಭವಿಸುತ್ತಿದ್ದಾರೆ. ನಮಗೂ ಅಧಿಕಾರ ಕೊಡಿ ಎಂದು ಹೇಳುವುದು ತಪ್ಪಾ? ಯಡಿಯೂರಪ್ಪ ಅವರು ಒಂದು ಕ್ಷಣ ನಮ್ಮ ಮುಂದೆ ನಿಂತಿದ್ದ ಆ ಪರಿಸ್ಥಿತಿ ನೆನಪು ಮಾಡಿಕೊಳ್ಳಲಿ. ಪಾಪ, ಅವರು ಒತ್ತಡದಲ್ಲಿದ್ದಾರೆ.

ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸ ಇದೆಯಾ?
ಖಂಡಿತ ಇದೆ. ಇದೇನು ದೊಡ್ಡ ಸಮಸ್ಯೆಯಲ್ಲ. ಬಿಜೆಪಿ ನಾಯಕರು ಮನಸ್ಸು ಮಾಡಿದರೆ ಎಲ್ಲವೂ ಸುಲಭ.

ಇನ್ನೂ ನಿಮಗೆ ಆ ಭರವಸೆ ಇದೆಯಾ?
ಖಂಡಿತ ಇದೆ. ನಾನು ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಇದು ವಿಶ್ವನಾಥ್‌ ಪ್ರಶ್ನೆಯಲ್ಲ, ಬಿಜೆಪಿ ಸರಕಾರಕ್ಕಾಗಿ ತ್ಯಾಗ ಮಾಡಿ ಬಂದವರ ಪ್ರತಿಷ್ಠೆಯ ಪ್ರಶ್ನೆ.

– ಎಚ್‌.ವಿಶ್ವನಾಥ್‌ ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next