Advertisement

ಬಿಲ್ಲವ ಭವನದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರಿಗೆ ಗುರುವಂದನೆ

12:15 PM Jul 25, 2017 | |

ಮುಂಬಯಿ: ಬದುಕಿಗೆ ಸಂಸ್ಕಾರ ನೀಡುವ ಕಲೆ ಯಕ್ಷಗಾನವಾಗಿದೆ. ಭಗೀರಥ ಪ್ರಯತ್ನನದಿಂದ ಮಾತ್ರ ಇದರ ಆಳ, ಎತ್ತರ ಅಳೆಯಲು ಸಾಧ್ಯ. ಕಲಾವಿದರು  ವೈಚಾರಿಕ ದೃಷ್ಟಿಗೋನ, ಅಧ್ಯಾಯನಶೀಲತೆ, ಶೋಧನ ಪ್ರಜ್ಞೆಯನ್ನು ಜೀವನ ಪರ್ಯಾಂತ ಪಾಲಿಸಬೇಕು. ಶಿಷ್ಯಂದಿರು ಪರಿಪೂರ್ಣ ಕಲಾವಿದರಾಗಿ ಮೆರೆದಾಗ ಗುರುವಂದನೆ ಅರ್ಥಪೂರ್ಣವಾಗುತ್ತದೆ ಎಂದು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ನುಡಿದರು.

Advertisement

ಜು. 22 ರಂದು ಸಂಜೆ  ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತ ಗಂಗಾಧರ ಸುವರ್ಣ ಮಾಂಟ್ರಾಡಿ ಅವರು ಆಯೋಜಿಸಿದ್ದ ಖ್ಯಾತ ಯಕ್ಷಗಾನ ಭಾಗವತ, ಪ್ರಸಂಗಕರ್ತ, ಯಕ್ಷಗುರು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ಇತ್ಯಾದಿಗಳಲ್ಲಿ ಸಂಪೂರ್ಣವಾಗಿ ಪರಿಣಿತರು. ಸಂಪ್ರದಾಯ ಶೈಲಿಯ ಅವರನ್ನು ಗುರುವಾಗಿ ಪಡೆದ ಭಾಗವತ ಗಂಗಾಧರ ಸುವರ್ಣರು ಧನ್ಯರು. ಅವರ ಕಲಾಸೇವೆ ಸದಾ ಯಶಸ್ವಿಯಾಗಲಿ ಎಂದು ಹಾರೈಸಿದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಖ್ಯಾತ ಭಾಗವತ ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು, ಮುಂಬಯಿ ನಗರ, ಉಪನರಗಳಲ್ಲಿ ಅಲ್ಲಲ್ಲಿ ಯಕ್ಷಗಾನ ತರಭೇತಿ ನೀಡಿದ್ದೇನೆ. ಹೆಚ್ಚಿನವರು ಉತ್ತಮ ಕಾರ್ಯ ಸಾಧನೆ ಮಾಡಿದ್ದಾರೆ. ಇಂದಿನ ಗುರುವಂದನೆ ಬೆಲೆ ಕಟ್ಟಲಾಗದ ವಸ್ತುವಾಗಿದೆ. ನನ್ನ ಶಿಷ್ಯ ಗಂಗಾಧರ ಸುವರ್ಣರು ಕಷ್ಟಕರ ಬದುಕಿನಲ್ಲಿ ಕಲಾಮಾತೆಯ ಸೇವೆಗೈಯುತ್ತಿರುವುದು ಅಭಿನಂದನೀಯ ಎಂದರು.

ಅತಿಥಿಗಳಾಗಿ ಪಾಲ್ಗೊಂಡ ಜೆರಿಮೆರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಎಸ್‌. ಎನ್‌. ಉಡುಪ ಅವರು ಆಶೀರ್ವಚನ ನೀಡಿ, ಯಕ್ಷಗಾನ ಮನುಷ್ಯನಿಗೆ ಶಿಸ್ತು, ಸಂಯಮ, ವ್ಯಕ್ತಿತ್ವವನ್ನು ನೀಡುತ್ತದೆ. ಅದರ ಮೌಲ್ಯವನ್ನು ಸದಾಕಾಲ ಕಾಪಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಮತ್ತೋರ್ವ ಅತಿಥಿ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್‌ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಅನೇಕ ಸಂಪ್ರದಾಯಬದ್ಧ ಕಲಾವಿದರನ್ನು ಸೃಷ್ಟಿಸಿದ್ದಾರೆ. ಹಿಮ್ಮೇಳ, ಮುಮ್ಮೇಳ, ಬಣ್ಣಗಾರಿಕೆಯಲ್ಲಿ ಶ್ರೇಷ್ಟತೆ ಸೃಷ್ಟಿಸಿದ್ದಾರೆ. ಅವರು ನಮ್ಮೆಲ್ಲರ ಆದರಣೀಯ ಗುರುಗಳಾಗಿದ್ದಾರೆ ಎಂದರು.

Advertisement

ಶ್ರೀ ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ, ಉತ್ತಮ ಸಂದೇಶದೊಂದಿಗೆ ಪೌರಾಣಿಕ ಕಥೆಗಳನ್ನು ಅರ್ಥೈಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಯಕ್ಷಗಾನದಲ್ಲಿ ಪರಿಹಾರವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮದು. ಶಿಷ್ಯಂದಿರು ಗುರುಗಳ ಬಗ್ಗೆ ಪೂಜ್ಯ ಭಾವದಿಂದರಬೇಕು. ಗುರುಗಳು ನೀಡಿದ ವಿದ್ಯೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಜನಮನ್ನಣೆಗಳಿಸಿದಾಗ ಗುರುವಿನ ಶ್ರಮ ಸಾರ್ಥಕವಾಗುತ್ತದೆ. ಗುರುವಂದನೆ ಅರ್ಥಪೂರ್ಣವಾಗುತ್ತದೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಪ್ರಕಾಶ್‌ ಪಣಿಯೂರು ಅಭಿನಂದನ ಭಾಷಣಗೈದರು. ಲೇಖಕ ಅರುಣ್‌ ಕುಮಾರ್‌ ಎರ್ಮಾಳ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಮೇಶ್‌ ಕಾಂತಾವರ ವಂದಿಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ನಾರಾಯಣ ಪೂಜಾರಿ ಭಿವಂಡಿ, ದಾಮೋದರ ಕುಂದರ್‌ ಹಾಗೂ ಅತಿಥಿ-ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಮಿತಾ ಜತ್ತಿನ್‌ ಅವರ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ ಕಲಾವಿದರಿಂದ ಶ್ರೀ ಶನಿದರ್ಶನ-ನಳಚರಿತ್ರೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಯಕ್ಷಗಾನ ಕಲಾಭಿಮಾನಿಗಳು, ವಿವಿಧ ಯಕ್ಷಗಾನ ಮಂಡಳಿಗಳ ಕಲಾವಿದರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗರ್ವ, ದರ್ಪಗಳಿಂದ ದೂರವಿದ್ದು, ಸಹನೆಯಿಂದ ಸಾಧನೆಯನ್ನು ಮಾಡಬೇಕು. ಸಮಾಧಾನಕ್ಕೆ ದೇವರ ಆಶೀರ್ವಾದ ಸದಾ
ಇದೆ ಎನ್ನುವುದಕ್ಕೆ ಪೂಂಜಾ ಅವರು ಸಾಕ್ಷಿ
 – ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ (ಅಧ್ಯಕ್ಷರು :  ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ).

ಹಲವಾರು ಕೆಲಸ, ಒತ್ತಡಗಳ ಮಧ್ಯೆಯೂ ಗುರುವಂದನೆಯಂತಹ ಮಹತ್ತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಶ್ಲಾಘನೀಯ. ಗುರುವನ್ನು ಉನ್ನತ ಸ್ಥಾನದಲ್ಲಿರಿಸಿ ಮಾಡುವ ಕಾರ್ಯಕ್ರಮ ಫಲಪ್ರದವಾಗುತ್ತದೆ 
  – ಪ್ರವೀಣ್‌ ಶೆಟ್ಟಿ ಪುತ್ತೂರು (ಅಧ್ಯಕ್ಷರು: ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ).

ಸುಮಾರು 25 ಪ್ರಸಂಗಗಳ ಕೃತಿಕಾರರು, ಸಂಸ್ಕೃತ, ಛಂದಸ್ಸು, ಪ್ರಾಸಗಳ ಮೂಲಕ ಭಾಗವತಿಕೆ ಮಾಡುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರು ಯಕ್ಷಗಾನದ ಅನಘÂì ರತ್ನ 
   – ಶ್ರೀನಿವಾಸ ಪಿ. ಎಸ್‌. (ಅಧ್ಯಕ್ಷರು: ಶ್ರೀ ಶನೀಶ್ವರ ಮಂದಿರ ಕುರಾರ್‌ ವಿಲೇಜ್‌ ಮಲಾಡ್‌).

ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಗೆ ಹಾಗೂ ಮುಂಬಯಿ ಮಹಾನಗರ ಉತ್ತಮ ಕಲಾವಿದರನ್ನು ನೀಡಿದ ಶ್ರೇಯಸ್ಸು ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರಿಗೆ ಸಮ್ಮುತ್ತದೆ. ಅವರ ಆದರ್ಶಮಯ ಬದುಕು ಕಲಾವಿದರಿಗೆ ಆದರ್ಶವಾಗಲಿ 
  – ಎಲ್‌. ವಿ. ಅಮೀನ್‌ (ಮಾಜಿ ಅಧ್ಯಕ್ಷರು: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ).

ಮನೋರಂಜನೆಯ ಒಟ್ಟಿಗೆ ಧಾರ್ಮಿಕತೆಯ ಬೋಧನೆ  ಯಕ್ಷಗಾನದಲ್ಲಿದೆ. ನಮ್ಮ ಪೂರ್ವಜರು ಯಕ್ಷಗಾನ ಬಯಲಾಟದ ಮೂಲಕ ರಾಮಾಯಣ, ಮಹಾಭಾರತದ ಕತೆಗಳನ್ನು ಅರಿತಿದ್ದರು. ಯಕ್ಷಗಾನ ವಿಜೃಂಭಣೆಯ ಕಲೆಯಾಗಿದೆ 
– ದಯಾನಂದ ಪೂಜಾರಿ (ಕಾರ್ಯಾಧ್ಯಕ್ಷರು: ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ).

ಚಿತ್ರ-ವರದಿ: ರಮೇಶ್‌ ಅಮೀನ್‌ 

Advertisement

Udayavani is now on Telegram. Click here to join our channel and stay updated with the latest news.

Next