Advertisement

ಗುರುಗಳ ಸಂದೇಶ ಎಲ್ಲ ಕಾಲಕ್ಕೂ ಅನ್ವಯ: ಸ್ವಾಮೀಜಿ

09:47 PM Sep 18, 2019 | Team Udayavani |

ಮಂಗಳಗಂಗೋತ್ರಿ: ಮಾನವೀಯ ಮೌಲ್ಯ ಮನುಷ್ಯತ್ವದ ಸವಿಗುಣಗಳನ್ನು ಪ್ರದರ್ಶಿ ಸುತ್ತಾ ಮಾನವ ಹೇಗೆ ಇರಬೇಕು, ಹೇಗೆ ಬದುಕಿದರೆ ಶಾಶ್ವತವಾದ ಶಾಂತಿ ಸಮಾಧಾನ ಸಿಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಮಹಾನ್‌ ಚೇತನ ಬ್ರಹ್ಮಶ್ರೀ ನಾರಾಯಣಗುರುಗಳು ಅಂದು ಅವರು ನೀಡಿದ ಸಂದೇಶ ಎಲ್ಲ ಕಾಲಕ್ಕೆ ಅನ್ವಯವಾಗುವಂತದ್ದು ಎಂದು ಶಿರ್ತಾಡಿ ಬಲ್ಲೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಆಡಿಟೋರಿಯಂನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಮಂಗಳವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ -2019ರಲ್ಲಿ ಭಾಗವಹಿಸಿ ಆಶಿರ್ವಚನ ನೀಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್‌ ಮಾತನಾಡಿ ಅಧ್ಯಯನ ಪೀಠಗಳು ಪರಸ್ಪರ ವಿಶ್ವಾಸ ಮೂಡಿಸಲು ಪ್ರಯತ್ನಿಸಬೇಕು. ಅಧ್ಯಯನ ಪೀಠದ ಕಾರ್ಯಕ್ರಮ ಬಲಿಷ್ಠ ಭಾರತ ಕಟ್ಟಲು ನೆರವಾಗಬೇಕು. ಸರಕಾರ ಮಂಗಳೂರು ವಿವಿಯ ಇಪ್ಪತ್ತಮೂರು ಅಧ್ಯಯನ ಪೀಠಕ್ಕೂ ತಲಾ ಎರಡು ಕೋಟಿ ರೂ. ಮೀಸಲಿಡಲಿ. ಆ ಮೂಲಕ ಬಹಳಷ್ಟು ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಜಾಗ ವಿವಿ ಕೊಟ್ರೆ ಅನುದಾನ ನಾವು ಮಂಜೂರು ಮಾಡಿಸಿ ಸುಂದರ ಕಟ್ಟಡ ನಿರ್ಮಿಸಿ ಕೊಡುತ್ತೇವೆ. ಅದರಲ್ಲಿ ಸುಂದರ ಸಭಾಂಗಣ ಹಾಗೂ ಎಲ್ಲ ಅಧ್ಯಯನ ಪೀಠಕ್ಕೆ ಕಚೇರಿ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಕಲಾವಿಭಾಗದ ಡೀನ್‌ ಪ್ರೊ| ಕಿಶೋರಿ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು.ಅಖೀಲ ಭಾರತ ಬಿಲ್ಲವರ ಯೂನಿಯನ್‌ ಅಧ್ಯಕ್ಷ ನವೀನ್‌ ಚಂದ್ರ ಡಿ. ಸುವರ್ಣ ಹಾಗೂ ನಾರಾಯಣಗುರು ಅಧ್ಯಯನ ಪೀಠದ ಸಲಹಾ ಮಂಡಳಿ ಸದಸ್ಯೆ ಪ್ರೊ| ಮರಿಯ ಡಿ.ಕೋಸ್ಟ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ “ಗುರುವಿನ ಅರಿವು ಸ್ಪರ್ಧಾ ಪ್ರಬಂಧಗಳ ಸಂಕಲನ’ ಕೃತಿ ಬಿಡುಗಡೆಗೊಳಿಸಲಾಯಿತು.

Advertisement

ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜಯಪುರದಲ್ಲಿ ನಡೆದ ನೃತ್ಯರೂಪಕದಲ್ಲಿ ಬಹುಮಾನ ವಿಜೇತ ನಾಟಕ ತಂಡದ ನಿರ್ದೇಶಕ ಅರವಿಂದ ಚೊಕ್ಕಾಡಿ ಹಾಗೂ ನೃತ್ಯರೂಪಕ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

ಹುಸೇನ್‌ ಕಾಟಿಪಳ್ಳ ಅವರು ನಾರಾಯಣಗುರು ಕುರಿತಾದ ಹಾಡನ್ನು ಬ್ಯಾರಿ ಭಾಷೆಯಲ್ಲಿ ಹಾಡಿದರು. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಸ್ವಾಗತಿಸಿದರು.ಕನ್ನಡ ವಿಭಾಗ ಸಂಶೋಧನಾ ವಿದ್ಯಾರ್ಥಿ ಶಿವರಾಜು ಎಸ್‌. ನಿರೂಪಿಸಿ, ಡಾ| ರವಿರಾಜ್‌ ಬಿ.ವಿ. ವಂದಿಸಿದರು.

ನಾರಾಯಣಗುರುಗಳ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ
ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಕಾಲಘಟ್ಟದಲ್ಲಿ ಬ್ರಿಟಿಷರ ಆಡಳಿತವಿತ್ತು. ಬಡತನ ಸಹಿಸಲಾರದಷ್ಟಿತ್ತು.
ಅಂತಹ ಕಾಲಘಟ್ಟದಲ್ಲಿಯೂ ಶಿಕ್ಷಣದ ಮೂಲಕವೇ ಅಭಿವೃದ್ಧಿ ಸಾಧ್ಯ ಎಂದು ನಾರಾಯಣ ಗುರುಗಳು ಪ್ರತಿಪಾದಿಸಿದ್ದು ಒಬ್ಬ ದಾರ್ಶನಿಕನಾಗಿ ಅವರು ಕೊಟ್ಟ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ, ಕಾಲಾತೀತವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next