Advertisement

ಬೀದರಲ್ಲಿ ಗುರುನಾನಕರ ಜಯಂತಿ

03:01 PM Dec 01, 2020 | Suhan S |

ಬೀದರ: ಸಿಖ್‌ ಬಾಂಧವರ ಆರಾಧ್ಯ ದೇವ ಗುರುನಾನಕ್‌ ಜೀ ದೇವ್‌ ಮಹಾರಾಜರ 551ನೇ ಜಯಂತಿಯನ್ನು ಸೋಮವಾರ ನಗರದ ಗುರುದ್ವಾರ ಪರಿಸರದಲ್ಲಿ ಹೆಮ್ಮಾರಿ ಕೋವಿಡ್‌-19 ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.

Advertisement

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಗುರು ಗ್ರಂಥಗಳ ಭವ್ಯ ಮೆರವಣಿಗೆಯ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್‌ ಧರ್ಮಿಯರು ಸಾಕ್ಷಿಯಾದರು.

ಜಯಂತಿ ಹಿನ್ನೆಲೆಯಲ್ಲಿ ನಗರದ ಗುರುದ್ವಾರ ಪರಿಸರದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಶ್ರೀ ಗುರುನಾನಕರ ಮಂದಿರದಲ್ಲಿ ದಿನವೀಡಿ ಧಾರ್ಮಿಕ ಕೈಂಕರ್ಯಗಳು, ಗ್ರಂಥ ಪಠಣ, ಕಥೆ-ಕೀರ್ತನೆಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು. ಪ್ರತಿ ವರ್ಷ ಜಯಂತಿ ನಿಮಿತ್ತ ಸಾಯಂಕಾಲ ನಗರದ ಗುರುದ್ವಾರದಿಂದ ಅಂಬೇಡ್ಕರ ವೃತ್ತದವರೆಗೆ ವೈಭವದಿಂದ ಮೆರವಣಿಗೆ ನಡೆಯುತ್ತಿತ್ತು. ಆದರೆ, ಕೋವಿಡ್‌ನಿಂದಾಗಿ ಇದಕ್ಕೆ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ನಗರ ಜನತೆಗೆ ಈವೈಭವ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ  ಗುರುದ್ವಾರದ ಪರಿಸರದಲ್ಲೇ ಮೆರವಣಿಗೆ ನಡೆಸಿ ಭಕ್ತಿ-ಭಾವ ಮೆರೆಯಲಾಯಿತು.

ವಿಶೇಷ ಅಲಂಕೃತ ವಾಹನದಲ್ಲಿ ಗುರುನಾನಕರ ಭಾವಚಿತ್ರ ವಾಹನ ಕಣ್ಮನ ಸೆಳೆಯಿತು. ಸಿಖ್‌ ಧರ್ಮಿಯರು ಭಕ್ತಿಯಿಂದ ಭಾಗಿಯಾಗಿ ಹಾಡಿ,ಕುಣಿದು ಸಂಭ್ರಮಿಸಿದರಲ್ಲದೇ ಧಾರ್ಮಿಕ ಗ್ರಂಥ ಪಠಣ ಸಹ ನಡೆಸಿದರು. ಬಾನಂಗಳದಲ್ಲಿ ಪಟಾಕಿಗಳಬೆಳಕಿನ ಚಿತ್ತಾರ ಮೂಡಿಸಿದರೆ, ಪಾರಂಪರಿಕ ಕಲೆ ಪ್ರದರ್ಶನಗಳು ಮೈ ಜುಮ್ಮೆನಿಸಿದವು. ನೀಲಿ ಮತ್ತು ಹಳದಿ ಧ್ವಜ (ನಿಶಾನೆ ಸಾಹೇಬ್‌) ಮತ್ತು ಸಿಖರ “ಬೊಲೆ ಸೋನಿಹಾಲ್‌, ಸಶ್ರೀಯಾ ಅಕಾಲ್‌’ ಜಯ ಘೋಷಗಳು ಜನರನ್ನು ಆಕರ್ಷಿಸಿತು. ಅಲಂಕೃತ ಕುದುರೆಗಳ ಮೇಲೆ ಸಿಖ್‌ ಧರ್ಮಿಯರು ಪಾರಂಪರಿಕ ತಲವಾರ್‌ ಮತ್ತು ಚಕ್ರ ತಿರುಗಿಸುವುದು, ಕೈಯಲ್ಲಿ ತಲವಾರ್‌ ಹಿಡಿದು ಓಡುವುದು ಆಕರ್ಷಕವಾಗಿತ್ತು.

ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಬ್‌, ಪ್ರಮುಖರಾದ ಮನಪ್ರೀತ್‌ ಸಿಂಗ್‌ ಬಂಟಿ, ದರ್ಬಾರಸಿಂಗ್‌,ಪ್ರದೀಪಸಿಂಗ್‌, ದರ್ಶನಸಿಂಗ್‌, ಗುರುಪ್ರೀತಸಿಂಗ್‌ ಸೇರಿದಂತೆ ಬೆಂಗಳೂರು, ನಾಂದೇಡ, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧಡೆಯಿಂದ ಸಿಖ್‌ ಬಾಂಧವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next