Advertisement

ಚಿಕ್ಕ ಮನೆಯಲ್ಲಿ ದೊಡ್ಡ ಸಂಸಾರ!

11:32 AM Jul 12, 2019 | Team Udayavani |

ಗುರುಮಠಕಲ್: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಚಿಕ್ಕಮನೆಗಳಲ್ಲಿ ದೊಡ್ಡ ಸಂಸಾರಗಳು ವಾಸವಾಗಿದ್ದು, ಸೂರಿಗಾಗಿ ನಿತ್ಯ ಪರದಾಟುವಂತಾಗಿದೆ.

Advertisement

ಪಟ್ಟಣದ ಇಂದಿರಾನಗರ ಬಡಾವಣೆ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂ.10ಕ್ಕೆ ಒಳಪಡುತ್ತದೆ. ಇಲ್ಲಿ ಸುಮಾರು 450-500 ಜನಸಂಖ್ಯೆ ಇದೆ. 220 ಮತದಾರರಿದ್ದಾರೆ. ಸುಮಾರು 35 ವರ್ಷಗಳ ಹಿಂದೆ 40 ಮನೆ ನಿರ್ಮಿಸಿ ಕೊಡಲಾಗಿದೆ. ಆದರೆ ಆ ಮನೆಗಳು ಚಿಕ್ಕಗಳಾಗಿವೆ. ಬಡಾವಣೆಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲಿನ ಕುಟುಂಬದವರಿಗೆ ಮಕ್ಕಳು, ಮೊಮ್ಮಕ್ಕಳು ಇರುವುದರಿಂದ ಕುಟುಂಬ ಬೆಳೆದು ದೊಡ್ಡದಾಗಿದೆ. ಆದರೆ ಆಗ ನೀಡಲಾದ ಒಂದು ಒಂದು ಕೋಣೆ ಮತ್ತೆ ಅಡುಗೆ ಮನೆ ಇದೀಗ ಚಿಕ್ಕದಾಗಿವೆ. ಒಂದು ಮನೆಯಲ್ಲಿ ಸುಮಾರು 3-5 ಕುಟುಂಬಗಳಾಗಿ ಬೆಳೆದಿದ್ದು, ವಾಸಿಸಲು ಅಗತ್ಯವಿದ್ದಷ್ಟು ಸ್ಥಳ ಇಲ್ಲದೇ ಪರದಾಡುವಂತಾಗಿದೆ. ಇತ್ತ ಇರುವ ಸೂರುಗಳು ಕೂಡ ಶಿಥಿಲಾವಸ್ಥೆಯಲ್ಲಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಅಪಾಯ ಸೃಷ್ಟಿಸಬಹುದು ಎಂಬ ಆತಂಕ ಎದುರಾಗಿದೆ.

ಇಲ್ಲನ ಮಹಿಳೆಯರು ಬೆಳಗ್ಗೆ ತಮ್ಮ ಚಿಕ್ಕ ಮಕ್ಕಳನ್ನು ಕರೆದುಕೊಂಡು ಭಿಕ್ಷೆಗಾಗಿ ತೆರಳಿದರೆ, ಇನ್ನು ಪುರುಷರು ಕೆಲಸಕ್ಕಾಗಿ ಅಲೆದಾಡುತ್ತಾರೆ.

ಮೂಲ ಸೌಲಭ್ಯಗಳಿಂದ ವಂಚನೆ: ಬಡಾವಣೆಗೆ ಬೇಕಾದ ಮೂಲ ಸೌಲಭ್ಯಗಳು ಮರಿಚೀಕೆಯಾಗಿವೆ. ನೈರ್ಮಲ್ಯ ಎಂದರೆ ಏನು ಎಂದು ಕೇಳುವಂತಾಗಿದೆ ಅಲ್ಲಿನ ಪರಿಸ್ಥಿತಿ. ಎಲ್ಲೆಂದರಲ್ಲಿ ಕೊಳಕು

ಎದ್ದು ಕಾಣುತ್ತದೆ. ಮನೆಗಳಿಗೆ ವಿದ್ಯುತ್‌ ಸೌಲಭ್ಯ ಇಲ್ಲ. ಕುಡಿಯವ ನೀರಿಗಾಗಿ ಅಲೆದಾಡುವುದು ತಪ್ಪಿಲ್ಲ. ಪಟ್ಟಣದ ಜನರಿಗೆ ಬಯಲು ಶೌಚವೇ ಗತಿ. ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುತ್ತ ಅನೇಕ ಬಾರಿ ತಿರುಗಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಗೋಳು.

Advertisement

ಹೈಸ್ಕೂಲ್ ಮೆಟ್ಟಿಲು ಹತ್ತಿಲ್ಲ: ಬಡಾವಣೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ

ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 39 ವಿದ್ಯಾರ್ಥಿಗಳ ದಾಖಲಾತಿ ಇದೆ. ಇಬ್ಬರು ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿನ ಮಕ್ಕಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮೆಟ್ಟಿಲೇರಿದವರು ವಿರಳ. ಬುತೇಕರ ಅಭಿಪ್ರಾಯದಂತೆ ಇಲ್ಲಿನ ಮಕ್ಕಳು ಹೈಸ್ಕೂಲ್ಗೆ ಹೋಗುವುದೇ ಇಲ್ಲ.

ಬಡಾವಣೆ ಜನರು ತಮ್ಮ ನೆಲೆ ಭದ್ರಗೊಳಿಸಲು ಸೂರು ನೀಡುವಂತೆ ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಅಂಗಲಾಚುತ್ತಾರೆ. ಬಡಾವಣೆಯಿಂದ ಆಯ್ಕೆಯಾದವರು ಅನೇಕ ಭರವಸೆ ನೀಡಿದ್ದಾರೆ. ಆದರೆ ಅವೆಲ್ಲ ಭರವಸೆಯಾಗಿಯೇ ಉಳಿದಿವೆ. ಪುರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಮೇಲೆ ಇಟ್ಟಿರುವ ನಿರೀಕ್ಷೆ ಫಲ ನೀಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ನಮಗೆ ಕೆಲಸ ಇಲ್ಲ. ಅಲ್ಲದೇ ಮನೆಗಳೂ ಇಲ್ಲ. ಮಳೆ ಬಂದರೆ ಕುಳಿತುಕೊಳ್ಳಲು ಜಾಗ ಇಲ್ಲ. ಸಂಸಾರಗಳು ದೊಡ್ಡವಾಗಿವೆ. ಮಕ್ಕಳು ಮಗಲಿಕ್ಕೆ ಆಗುತ್ತಿಲ್ಲ. ಮಕ್ಕಳು, ಸೊಸೆಯಂದಿರು ಇರುವ ಸ್ಥಳದಲ್ಲಿ ಹೇಗೆ ಇರಬೇಕು? ಸೋರುವ ಒಂದೇ ಕೋಣೆಯಲ್ಲಿ ಎಲ್ಲರು ಎದ್ದು ಕೂಡಬೇಕಾಗಿದೆ. ಮನೆಗಳಿಗೆ ವಿದ್ಯುತ್‌ ಇಲ್ಲ. ಮತ ಕೇಳ್ಳೋಕೆ ಮಾತ್ರ ಬರುತ್ತಾರೆ. ಅದಾದ ಬಳಿಕ ನಾವು ಸತ್ರು ಕೇಳೊರಿಲ್ಲ.
•ಸಾಯಮ್ಮ, ಇಂದಿರಾ ನಗರ ನಿವಾಸಿ

ಇಂದಿರಾನಗರ ಬಡಾವಣೆಯಿಂದ ಪ್ರಥಮ ಬಾರಿಗೆ ಕಳೆದ 4 ತಿಂಗಳ ಹಿಂದೆ ಆಯ್ಕೆಯಾಗಿದ್ದೇನೆ. ಅಲ್ಲಿ ಬಹಳಷ್ಟು ಜನರಿಗೆ ಮನೆಗಳಿಲ್ಲ. ಅದನ್ನು ಅರಿತು ಈಗಾಗಲೇ ಕುಟುಂಬಗಳ ಪಟ್ಟಿ ಮಾಡಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದೇನೆ. ಬಡಾವಣೆ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ.
ಕ್ರಿಷ್ಣಾ ಮೇದಾ, ಪುರಸಭೆ ವಾರ್ಡ್‌ ನಂ.10ರ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next