Advertisement

Guru Bhavan: 28 ವರ್ಷವಾದ್ರೂ ಗುರುಭವನಕ್ಕೆ ಗುರುಬಲವಿಲ್ಲ!

03:29 PM Sep 04, 2023 | Team Udayavani |

ಕೋಲಾರ: ಜಿಲ್ಲಾ ಕೇಂದ್ರ ಕೋಲಾರದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಬೇಕೆಂಬ ಶಿಕ್ಷಕರ ಕನಸು ಬೆಳ್ಳಿಹಬ್ಬ ಪೂರ್ಣಗೊಳಿಸಿದರೂ ಗುರುಭವನ ಪೂ ರ್ಣಗೊಳ್ಳಲು ಗುರುಬಲ ಕೂಡಿ ಬರುತ್ತಿಲ್ಲ.

Advertisement

ಶಿಕ್ಷಕರಿಗೆ ಸುಸಜ್ಜಿತವಾದ ಗುರುಭವನ ನಿರ್ಮಾಣ ಮಾಡಬೇಕು ಎಂದು ಕನಸು ಕಂಡ ಸಾವಿರಾರು ಮಂದಿ ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಅನೇಕ ಅಧಿಕಾರಿ, ಶಾಸಕ, ಸಚಿವರು, ಸ್ಥಳೀಯ ಜನ ಪ್ರತಿನಿಧಿಗಳು ಸಾಕಷ್ಟು ಭರವಸೆಗಳ ನೀಡಿದ್ದಾರೆ. ಆದರೂ, ಗುರುಭವನ ನಿರ್ಮಾಣವಾಗದಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.

ಒಗ್ಗಟ್ಟಿನ ಕೊರತೆ: ಶಿಕ್ಷಕಕರ ಸಂಘಗಳಲ್ಲಿನ ಹೊಂದಾಣಿಕೆಯ ಕೊರತೆ, ಅಧಿಕಾರಿ ವರ್ಗದಲ್ಲಿನ ಅಸಡ್ಡೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಫಲವೆನ್ನುವಂತೆ ಶಿಕ್ಷಕರ ಭವನ ಕಾಮಗಾರಿಯು ನಾಲ್ಕೈದು ಬಾರಿ ಶಿಲಾನ್ಯಾಸ ನೆರವೇರಿಸಿಕೊಂಡರೂ ಆರಂಭವಾಗದ ಸ್ಥಿತಿಯಲ್ಲಿದೆ. ಶಿಕ್ಷಕರ ಭವನಕ್ಕೆ ಗುರುತಿಸಿರುವ ಎರಡೂ ನಿವೇಶನವು ಖಾಲಿ ನಿವೇಶ ನವಾಗಿಯೇ ಉಳಿದುಬಿಟ್ಟಿದೆ. ನಿವೇಶನ ಗುರುತು: ಕೋಲಾರದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಉರ್ದು ಶಾಲೆಯ ಮುಂಭಾಗ ನಿವೇಶನವನ್ನು ಗುರುತಿಸಲಾಗಿತ್ತು. ಈ ನಿವೇಶನದಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ, ಮಾಜಿ ಸಚಿವರಾಗಿದ್ದ ಕೆ.ಶ್ರೀನಿವಾಸಗೌಡ, ಆಲಂಗೂರ್‌ ಶ್ರೀನಿವಾಸ್‌, ಕೃಷ್ಣಯ್ಯಶೆಟ್ಟಿ ಆಗಿನ ಸಚಿವ ಆರ್‌.ವರ್ತೂರು ಪ್ರಕಾಶ್‌ ಸಮ್ಮುಖದಲ್ಲಿ ಹಲವಾರು ಬಾರಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆದರೆ, ಶಿಕ್ಷಕರ ಭವನಕ್ಕೆ ಗುರುತಿಸಿದ್ದ ನಿವೇಶನದಲ್ಲಿ ಇದ್ದ ಶಿಲಾನ್ಯಾಸ ಫಲಕವನ್ನು ರಾಜಕೀಯ ಕಾರಣಗಳಿಗಾಗಿ ಹಲವಾರು ಬಾರಿ ನಾಶಪಡಿಸಲಾಗಿತ್ತು. ಇದಕ್ಕೆ ಶಿಕ್ಷಕರ ಸಂಘಗಳಲ್ಲಿನ ಒಡಕೇ ಪ್ರಮುಖ ಕಾರಣವಾಗಿತ್ತು.

ಸಮಿತಿ ರಚನೆ: ಶಿಕ್ಷಕರ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಡಿಡಿಪಿಐ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಹಿಂದಿನ ಡಿಡಿಪಿಐ ರಾಜಣ್ಣರನ್ನು ಹೊರತುಪಡಿಸಿದರೆ ಬೇರಾವ ಡಿಡಿಪಿಐಗಳು ಶಿಕ್ಷಕರ ಭವನ ನಿರ್ಮಾಣದತ್ತ ಗಮನಹರಿಸಿಲ್ಲ. ಆನಂತರ ಮೂರು ವರ್ಷಗಳ ಹಿಂದೆ ಡಿಡಿಪಿಐ ಆಗಿ ಬಂದಿದ್ದ ನಾಗೇಶ್‌ ಗುರುಭವನಕ್ಕೆ ಆಸಕ್ತಿ ತೋರಿಸಿ ಸಮಿತಿ ಸಭೆಗಳನ್ನು ನಡೆಸಿದ್ದರು. ಒಂದೆರೆಡು ಸಭೆ ನಡೆಸಿ ಗುರುಭವನ ಕಾಮಗಾರಿ ಇನ್ನೇನುಆರಂಭವಾಗ ಬೇಕು ಎನ್ನುವಷ್ಟರೊಳಗೆ ಅವರು ವರ್ಗಾವಣೆಯಾದರು. ಕಾಮಗಾರಿ ಪ್ರಗತಿಯು ನೆನೆಗುದಿಗೆ ಬಿದ್ದಿತು.

ಭರವಸೆ ಮಹಾಪೂರ: 2005ರಲ್ಲಿ ಶಿಕ್ಷಕರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಕೆ.ಎಚ್‌.ಮುನಿಯಪ್ಪ ಶಿಕ್ಷಕರ ದೇಣಿಗೆಯಾಗಿ ಎಷ್ಟು ಹಣ ಸಂಗ್ರಹವಾಗುತ್ತದೋ ಅದಕ್ಕೆ ಸರಿಸಮನಾದ ಮೊತ್ತವನ್ನು ತಮ್ಮ ಸಂಸದರ ನಿಧಿಯಿಂದ ನೀಡಲಾಗುವುದೆಂದು ಪ್ರಕಟಿಸಿದ್ದರು. ಇದೇ ಅವಧಿಯಲ್ಲಿ ಸುಮಾರು 1500 ಶಿಕ್ಷಕರಿಂದ ಸುಮಾರು 1.60 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದರು. ಇದೀಗ ಅದರ ಮೊತ್ತವು ಬಡ್ಡಿ ಸೇರಿ ಸುಮಾರು 5 ಲಕ್ಷ ರೂಪಾಯಿಗಳಾಗಿದೆ. ಆದರೆ ಈ ಹಣಕ್ಕೆ ಜವಾಬ್ದಾರರಾರು ಎನ್ನುವುದೇ ತಿಳಿಯುತ್ತಿಲ್ಲ. ವಿಧಾನಪರಿಷತ್‌ ಸದಸ್ಯರು, ಶಾಸಕರು ಶಿಕ್ಷಕರ ಭವನಕ್ಕೆ ತಮ್ಮ ನಿದಿಯಿಂದ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದರು. ಆಗಿನ ನಗರಸಭೆ ಅಧ್ಯಕ್ಷರಾಗಿದ್ದ ಸಿ. ರಘುರಾಂ ಶಿಕ್ಷಕರ ಭವನಕ್ಕೆ ಗುರುತಿಸಿರುವ ನಿವೇಶನಕ್ಕೆ ಸಂಬಂಧಪಟ್ಟಂತೆ ಇರುವ ಖಾತೆ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಹಾಲಿ ಶಾಸಕ ಮಾಜಿ ಸಚಿವ ಆರ್‌.ವರ್ತೂರು ಪ್ರಕಾಶ್‌ ಸಹ ಶಿಕ್ಷಕರ ಭವನಕ್ಕೆ ತಮ್ಮ ನೆರವು ನೀಡುವುದಾಗಿ ಪ್ರಕಟಿಸಿದ್ದರು. ಆದರೆ, ಶಿಕ್ಷಕರ ಭವನ ನಿರ್ಮಾಣ ಕಾರ್ಯ ಆರಂಭವಾಗದ ಕಾರಣದಿಂದ ಈ ಹಣವನ್ನು ಹಾಗೂ ಜನಪ್ರತಿನಿಧಿಗಳ ನೆರವನ್ನು ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.

Advertisement

ಮತ್ತೂಂದು ಶಿಲಾನ್ಯಾಸ: ಕಳೆದ 2022 ಡಿಸೆಂಬರ್‌ ನಲ್ಲಿ ಕೋಲಾರ ಗುರುಭವನಕ್ಕೆ ಇದೇ ಕೊನೆಯ ಶಿಲಾನ್ಯಾಸವಾಗಬೇಕೆಂದು ಆಗಿನ ಶಾಸಕ, ಸಂಸದ, ಉಸ್ತುವಾರಿ ಮಂತ್ರಿ, ವಿಧಾನಸಪರಿಷತ್‌ ಸದಸ್ಯರು ಮತ್ತೂಮ್ಮೆ ಗುದ್ದಲಿಪೂಜೆ ನೆರವೇರಿಸಿದ್ದರು. ಯಥಾ ಪ್ರಕಾರ ಸಾಕಷ್ಟು ಅನುದಾನವನ್ನು ಘೋಷಿಸಿದ್ದರು. ಇದಕ್ಕಾಗಿ ಹಳೆಯ ನಿವೇಶನ ಬದಲಿದೆ ಅದೇ ಆವರಣದಲ್ಲಿರುವ ಮತ್ತೂಂದು ಹಳೆಯ ಶಾಲಾ ಕಟ್ಟಡವ ನ್ನು ಕೆಡವಿ ನಿವೇಶನ 145-90 ನಿವೇಶನ ಗುರುತಿಸಲಾಯಿತು. ಇದೇ ನಿವೇಶನದಲ್ಲಿ 79-130 ಅಡಿಯಲಿ ನಿವೇಶನವನ್ನು ಬಹು ಅಂತಸ್ತುಗಳಲ್ಲಿ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೂ, ಕಾಮಗಾರಿ ಆರಂಭವಾಗಲೇ ಇಲ್ಲ.

ಗುಂಪುಗಾರಿಕೆ: ಮೂರು ದಶಕಗಳಿಂದಲೂ ಶಿಕ್ಷಕರ ಸಂಘಗಳಲ್ಲಿನ ಗುಂಪುಗಾರಿಕೆ, ಶಿಕ್ಷಕರ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಬಣದ ಹೆಸರು ಇರಬೇಕೆಂಬ ವಿಚಾರಕ್ಕೆ ಶಿಕ್ಷಕ ಪ್ರತಿನಿಧಿಗಳು ನೀಡಿದಷ್ಟು ಗಮನವನ್ನು ಶಿಕ್ಷಕರ ಭವನ ಕಾಮಗಾರಿ ಆರಂಭಿಸಲು ನೀಡಿದ್ದರೆ ಈ ವೇಳೆಗಾಗಲೇ ಶಿಕ್ಷಕರ ಭವನ ಪೂರ್ಣ ಗೊಳ್ಳುತ್ತಿತ್ತು ಎಂಬ ಭಾವನ ಶಿಕ್ಷಕರ ವಲಯದಲ್ಲಿದೆ. ಗುರುಭವನ ನಿರ್ಮಾಣ ಮಾಡದಿದ್ದರೆ ಶಿಕ್ಷಕರ ದಿನಾಚರಣೆಗೆ ಬರುವುದಿಲ್ಲವೆಂದು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಿಂದಿನ ವರ್ಷದ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈಗ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾಮಗಾರಿ ಆರಂಭಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ನಿರ್ಮಿತಿ ಕೇಂದ್ರದ ಪ್ಲ್ರಾನ್‌ ಅಂತಿ ಮಗೊಂಡ ನಂತರ ಕಾಮಗಾರಿಯನ್ನು ಆರಂಭಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ, ಈಗ ಆಗಿರುವ ವಿಳಂಬವನ್ನು ಗಮನಿಸಿದ ಶಿಕ್ಷಕರ ವಲಯವು ಗುರುಭವನ ಕಾಮಗಾರಿ ಕುರಿತು ಆಸಕ್ತಿ ಕಳೆದುಕೊಂಡಿದೆ.

ಈಗಿನ ತೊಡಕು ಏನು?: ಹಿಂದಿನ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಶಿಕ್ಷಕರ ಭವನದ ಕಾಮಗಾರಿ ಯನ್ನು ಲೋಕೋಪಯೋಗಿಇಲಾಖೆ ಮೂಲಕ ಆರಂಭಿಸಬೇಕೆಂದು ತಾಕೀತು ಮಾಡಿದ್ದರು. ಆದರೆ, ಲೋಕೋಪಯೋಗಿ ಇಲಾಖೆ 2 ಕೋಟಿ ರೂ.ಮುಂಗಡವಾಗಿ ಕೊಟ್ಟರೆ ಮಾತ್ರವೇ ಕಾಮಗಾರಿ ಆರಂಭಿ ಸುವುದಾಗಿ ಷರತ್ತು ಹಾಕಿತ್ತು. ಇದರಿಂದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲು ನಿರ್ಧರಿಸಲಾಯಿತು. ಇದೀಗ ನಿರ್ಮಿತಿ ಕೇಂದ್ರವು ಪ್ಲ್ರಾನ್‌ ತಯಾರಿಸುವ ಹಂತದಲ್ಲಿದೆ. ಪ್ಲ್ರಾನ್‌ ತಯಾರಾದ ನಂತರ ಸಂಸದ ನಿಧಿಯಿಂದ ಘೋಷಿಸಿರುವ 50 ಲಕ್ಷ ರೂ. ಬಳಸಿಕೊಂಡು ಕಾಮಗಾರಿ ಆರಂಭಿಸುವ ಚಿಂತನೆಯಲ್ಲಿ ಶಿಕ್ಷಕರ ಸಂಘವಿದೆ.

ಶಿಕ್ಷಕರ ಸಂಘದ ಪದಾಧಿಕಾರಿಗಳು ಗುರುಭವನ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿದ್ದು, ಪಿಡಬ್ಲೂಡಿ ಇಲಾಖೆಯಿಂದ ಕಾಮಗಾರಿ ಜವಾಬ್ದಾರಿಯು ನಿರ್ಮಿತಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಪ್ಲ್ರಾನ್‌ ತಯಾರಿಸಲಾಗುತ್ತಿದ್ದು, ಫ್ಲ್ಯಾನ್‌ ಕೈಗೆ ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದು. ಗುರುಭವನಕ್ಕೆ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಶ್ರಮಿಸಿದ್ದೇವೆ. – ಅಪ್ಪೇಗೌಡ, ಅಧ್ಯಕ್ಷರು, ಜಿಲ್ಲಾ ಪ್ರಾಥಮಿಕಶಾಲಾ ಶಿಕ್ಷಕರ ಸಂಘ, ಕೋಲಾರ.

ಕೋಲಾರ ಜಿಲ್ಲೆಯ ಶಿಕ್ಷಕರ ಅಗತ್ಯಕ್ಕೆ ತಕ್ಕಂತೆ ಭವನವನ್ನು 3 ಅಂತಸ್ತುಗಳಲ್ಲಿ ನಿರ್ಮಾಣ ಮಾಡಲು ನೀಡಿರುವ ಸಲಹೆ ಸೂಚನೆಗಳ ಪ್ರಕಾರ ಪ್ಲ್ರಾನ್‌ ತಯಾರಾಗು ತ್ತಿದೆ. ನೆಲ ಹಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೂ ಅವಕಾಶ ಕಲ್ಪಿಸಿ ಸಂಘದ ಆದಾಯ ಉತ್ಪಾದನೆಗೂ ಒತ್ತು ನೀಡಲಾಗುತ್ತಿದೆ. – ನಾಗರಾಜ್‌, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಕೋಲಾರ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next