Advertisement

ಗನ್‌, ಮೆಷಿನ್‌ ಗನ್‌ ಕದ್ದ ಪೇದೆ ನಿಮ್ಹಾನ್ಸ್ಗೆ?

11:41 AM Feb 26, 2017 | Team Udayavani |

ಬೆಂಗಳೂರು: ಹತ್ತು ವರ್ಷಗಳ ಹಿಂದೆ ತನ್ನ ಸಹೋದ್ಯೋಗಿಯಾಗಿದ್ದ ರಾಜಭವನದ ಸಿಎಆರ್‌ ಮುಖ್ಯಪೇದೆಯೊಬ್ಬರ ಸರ್ವೀಸ್‌ ಪಿಸ್ತೂಲ್‌ ಕದ್ದು ಇತ್ತೀಚೆಗೆ ಸಿಕ್ಕಿಬಿದ್ದಿದ್ದ ಸಿಎಆರ್‌ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಪುರುಷೋತ್ತಮ್‌ ಈ ಹಿಂದೆ ಮೆಷಿನ್‌ಗನ್‌ ಅನ್ನೂ ಕಳವು ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. 

Advertisement

ಆದರೆ, ದಶಕದ ಹಿಂದೆ ಪಿಸ್ತೂಲ್‌ ಮತ್ತು ಮೆಷೀನ್‌ ಗನ್‌ ಕಳವು ಮಾಡಿದ್ದರೂ ಪುರುಷೋತ್ತಮ್‌ ಇಲ್ಲಿ ತನಕ ಅವುಗಳನ್ನು ಬಳಸಿ ಯಾವುದೇ ಕುಕೃತ್ಯ ಎಸಗಿಲ್ಲ. ಅಷ್ಟೇ ಅಲ್ಲ, ಅದನ್ನು ಬಳಸಿಯೂ ಇಲ್ಲ. ಜತೆಗೆ ಯಾವ ಕಾರಣಕ್ಕೆ ಕಳವು ಮಾಡಿದ್ದರು ಎಂಬುದನ್ನೂ ಹೇಳುತ್ತಿಲ್ಲ. ಹೀಗಾಗಿ ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪುರುಷೋತ್ತಮ್‌ ಅವರು ಕಳವು ಮಾಡಿದ್ದ ಮೆಷಿನ್‌ ಗನ್‌ಅನ್ನು ಅವರ ಸಂಬಂಧಿಕರ ಮನೆಯಲ್ಲಿಟ್ಟಿದ್ದರು. ಅದನ್ನು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಅಕ್ರಮ ಶಾಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಪುರುಷೋತ್ತಮ್‌, ವಿಧಾನಪರಿಷತ್‌ ಸದಸ್ಯ ಮನೋಹರ್‌ ಅವರ ಗನ್‌ ಮ್ಯಾನ್‌. ಫೆ.17ರಂದು ರಾತ್ರಿ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿ­ದ್ದಾಗ ಗುಂಪೊಂದು ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಪುರುಷೋತ್ತಮ ಕಾಟನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಿಚಾರಿಸಿದಾಗ, ಪುರುಷೋತ್ತಮ ಅವರ ಮೇಲೆ ಹಲ್ಲೆ ಮಾಡಿ ಗನ್‌ ಕಸಿದಿದ್ದಾಗಿ ಹೇಳಿದ್ದರು. ಅನುಮಾನಗೊಂಡು ವಿಚಾ­ರಣೆ ನಡೆಸಿದ ಪೊಲೀಸರಿಗೆ ಹತ್ತು ವರ್ಷಗಳ ಹಿಂದಿನ ಗನ್‌ ಕಳ್ಳತನದ ಪ್ರಕರಣವೊಂದು ಗೊತ್ತಾಗಿತ್ತು. 

ಪುರುಷೋತ್ತಮ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ 2006ರ ಜೂನ್‌ 23ರಂದು ಶಸ್ತ್ರಗಾರದಲ್ಲಿ ಮೆಷೀನ್‌ ಗನ್‌ ಕಳವು ಮಾಡಿದ್ದಾಗಿ ಬಾಯ್ಬಿಟ್ಟಿದ್ದದ್ದಾರೆ. ಸಿಎಆರ್‌ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಶರೀಫ್ ಎಂಬುವರ ಗಮನ ಬೇರೆಡೆ ಸೆಳೆದು  ಮೆಷಿನ್‌ ಗನ್‌ ಎಗರಿಸಿದ್ದಾರೆ. 2017ರ ಫೆಬ್ರವರಿಯಲ್ಲಿ ಶಸ್ತ್ರಾಸ್ತ್ರಗಳ ಆಡಿಟ್‌ ಮಾಡುವಾಗ ಮೆಷಿನ್‌ ಗನ್‌ ಕಳವುವಾಗಿರುವುದು ಬೆಳಕಿಗೆ ಬಂದಿತ್ತು.

Advertisement

ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು ಎಂದು ಆಯುಕ್ತರು ಹೇಳಿದ್ದಾರೆ. ‌ಹಲ್ಲೆ ಪ್ರಕರಣದ ಬಳಿಕ ಆಸ್ಪತ್ರೆಗೆ ಸೇರಿದ್ದ ಪುರುಷೋತ್ತಮ್‌ ಮೆಷಿನ್‌ಗನ್‌ ಅನ್ನು ಸಂಬಂಧಿಕರ ಮನೆಯಲ್ಲಿ ಇಡುವಂತೆ ಹೇಳಿದ್ದ. ಅದರಂತೆ ಆತನ ಪತ್ನಿ ಅದನ್ನು ಕತ್ರಿಗುಪ್ಪೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಅಡಗಿಸಿಟ್ಟಿದ್ದರು.

11 ಮಂದಿಯ ಶಿಕ್ಷೆಗೆ ಕಾರಣವಾಗಿದ್ದ ಪುರುಷೋತ್ತಮ 
ಪುರುಷೋತ್ತಮ್‌ ಮಾಡಿದ ಪಿಸ್ತೂಲ್‌ ಮತ್ತು ಮೆಷಿನ್‌ ಗನ್‌ ಕಳವು ಪ್ರಕರಣದಲ್ಲಿ ಆತನ ಸಹೋದ್ಯೋಗಿಗಳೇ ಶಿಕ್ಷೆಯಾಗಿತ್ತು.  ಶಸ್ತ್ರಗಾರದಲ್ಲಿ ಮೆಷೀನ್‌ ಗನ್‌ ಕಳವು ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 11 ಮಂದಿ ಸಿಬ್ಬಂದಿ ವಿರುದ್ಧ ಇಲಾಖಾ ಮಟ್ಟದ ತನಿಖೆ ನಡೆಸಲಾಗಿತ್ತು.

ಬಳಿಕ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಅವರ ಒಂದು ವರ್ಷದ ವಾರ್ಷಿಕ ವೇತನ ಬಡ್ತಿ ಮುಂದೂಡಲಾಗಿತ್ತು. ಅದೇ ರೀತಿ ರಾಜಭವನದಲ್ಲಿ ಗನ್‌ ಕಳವು ಆದ ಪ್ರಕರಣದಲ್ಲಿ ದಶರಥ್‌ ರಾವ್‌ ಅವರಿಗೆ 3 ವರ್ಷ ವಾರ್ಷಿಕ ವೇತನ ಬಡ್ತಿ ಮುಂದೂಡಲಾಗಿತ್ತು. ಜತೆಗೆ ಪಿಸ್ತೂಲ್‌ ಬೆಲೆ 20,650 ರೂ. ವೇತನದಿಂದ ಕಡಿತಗೊಳಿಸಲಾಗಿತ್ತು.  

ಈ ಕುರಿತಂತೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಆರೋಪಿ ಪುರುಷೋತ್ತಮ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಆತನ ವಿರುದ್ಧ ಇಲಾಖಾ ಮಟ್ಟದ ತನಿಖೆ ಕೂಡ ನಡೆಸಲಾಗುವುದು. ಪಿಸ್ತೂಲ್‌ ಮತ್ತು ಮೆಷಿನ್‌ ಗನ್‌ ಕಳವು ಪ್ರಕರಣದಲ್ಲಿ ಈ ಹಿಂದೆ ಶಿಕ್ಷೆ ಅನುಭವಿಸಿರುವ ದಶರಥ್‌ ರಾವ್‌ ಮತ್ತು ಇನ್ನುಳಿದವರಿಗೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಕರಣ ಕೈ ಬಿಟ್ಟಿದ್ದ ಪೊಲೀಸರು 
ಪಿಸ್ತೂಲ್‌ ಹಾಗೂ ಮೆಷೀನ್‌ ಗನ್‌ ಕಳವು ಪ್ರಕರಣಗಳು ದಶಕಗಳ ಹಿಂದೆ ಘಟನೆ ನಡೆದಿದ್ದು, ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಪ್ರಕರಣದ ತನಿಖೆ ಕೈ ಬಿಟ್ಟಿದ್ದರು. ಆದರೆ, ಹಲ್ಲೆ ಪ್ರಕರಣದಲ್ಲಿ ನಾಟಕವಾಡಿದ್ದ ಸಿಎಆರ್‌ ಹೆಡ್‌ಕಾನ್ಸ್‌ಟೇಬಲ್‌ ಇದೀಗ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದರೊಂದಿಗೆ ಈ ಪ್ರಕರಣಗಳು ಮತ್ತೆ ಬೆಳಕು ಕಾಣುವಂತಾಗಿದೆ.

ಗನ್‌ ಕದ್ದಿರುವ ಪುರುಷೋತ್ತಮ ಇಲ್ಲಿವರೆಗೆ ಅವುಗಳಿಂದ ಕುಕೃತ್ಯ ಮಾಡಿಲ್ಲ. ಅದನ್ನು ಬಳಸಿಯೂ ಇಲ್ಲ. ಯಾತಕ್ಕೆ ಕದ್ದಿದ್ದಾಗಿಯೂ ಹೇಳುತ್ತಿಲ್ಲ. ಹೀಗಾಗಿ ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲು ನಿರ್ಧರಿಸಲಾಗಿದೆ 
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next