Advertisement

ಸಿಂಧಿಯಾಗೆ ಜೈ ಅನ್ನುತ್ತಾ ಗುಣಾ?

10:10 AM May 12, 2019 | Team Udayavani |

ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ ತಾರಾ ವರ್ಚಸ್ಸು ಹೊಂದಿರುವ, ಸತತ 4 ಬಾರಿ ಸಂಸದರಾಗಿರುವ ಜೋತಿರಾದಿತ್ಯ ಸಿಂಧಿಯಾಗೆ ಈ ಬಾರಿ ತುಸು ಸವಾಲು ಎದುರಾಗಿದೆ. ಅವರ ಪರಮ ಆಪ್ತ ಡಾ. ಯಾದವ್‌ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆದರೆ, ತಮ್ಮನ್ನು ಕ್ಷೇತ್ರದ ಜನ ಕೈಬಿಡುವುದಿಲ್ಲ ಎಂಬ ವಿಶ್ವಾಸದೊಂದಿಗೆ ಸಿಂಧಿಯಾ ಉತ್ತರ ಪ್ರದೇಶದಲ್ಲಿ ಹೆಚ್ಚು ಕಾಂಗ್ರೆಸ್‌ ಸ್ಥಾನ ಗೆಲ್ಲಿಸಲು ಅಲ್ಲೇ ಠಿಕಾಣಿ ಹೂಡಿ ರಣತಂತ್ರ ರೂಪಿಸುತ್ತಿದ್ದಾರೆ.

Advertisement

ಸಿಂಧಿಯಾ ಸೋಲಿಲ್ಲದ ಸರದಾರ: ಗುಣಾ ಕ್ಷೇತ್ರದಲ್ಲಿ 2002ರಿಂದ ಸಂಸದ ರಾಗಿರುವ ಜೋತಿರಾದಿತ್ಯ ಸಿಂಧಿಯಾ 5ನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಸಿಂಧಿಯಾ ಕೊಡುಗೆ ಸಾಕಷ್ಟಿದೆ. ಅವರೇ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಆದರೆ, ಹಿರಿಯ ನಾಯಕ ಕಮಲನಾಥೆ ಈ ಹುದ್ದೆ ನೀಡಿ ಸಿಂಧಿಯಾರನ್ನು ಸಮಾಧಾನಪಡಿಸಿ, ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವಂತೆ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿ ಯಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಂಧಿಯಾ, 39 ಲೋಕಸಭಾ ಕ್ಷೇತ್ರವಿರುವ ಉ.ಪ್ರದೇಶದ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿದ್ದಾರೆ. ಪ್ರಿಯಾಂಕಾರಷ್ಟೇ ಹೊಣೆ ಹೊತ್ತು ಹೆಚ್ಚು ಸ್ಥಾನ ಗೆಲ್ಲಿಸಲು ಇಲ್ಲೇ ಬೀಡುಬಿಟ್ಟಿದ್ದಾರೆ. ತವರು ಗುಣಾ ಕ್ಷೇತ್ರದಲ್ಲಿ ಸಿಂಧಿಯಾ ಅವರು ತಮ್ಮ ಪತ್ನಿ ಹಾಗೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ವಹಿಸಿದ್ದಾರೆ. ಪತ್ನಿ ಪ್ರಿಯದರ್ಶಿನಿ ರಾಜೆ ರ್ಯಾಲಿ, ಸಭೆಗಳನ್ನು ನಡೆಸುತ್ತಾ ಮತಬೇಟೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಸಿಂಧಿಯಾ ಕುಟುಂಬದ ಬಗ್ಗೆ ಮತದಾರರಲ್ಲಿ ಅಭಿಮಾನವಿದೆ. ಇದೇ ಕ್ಷೇತ್ರದಿಂದ ಅವರ ತಂದೆ ಮಧರಾವ್‌, ಅಜ್ಜಿ ವಿಜಯ ರಾಜೆ ಸಿಂಧಿಯಾ ಕೂಡ ಸಂಸದರಾಗಿದ್ದಾರೆ.

ಮಾಯಾ ಕೆಂಗಣ್ಣು: ರಾಜ್ಯದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಬಿಎಸ್ಪಿ, ಲೋಕೇಂದ್ರ ಸಿಂಗ್‌ ರಜಪೂತ್‌ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅವರು ನಾಮಪತ್ರ ವಾಪಸ್‌ ಪಡೆಯುವ ದಿನದಂದೇ ಕಣದಿಂದ ನಿವೃತ್ತಿ ಹೊಂದಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಈ ನಡೆ ಬಿಎಸ್ಪಿ ನೇತಾರೆ ಮಾಯಾವತಿ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದ್ದಾರೆ.

ಅರಳುತ್ತಾ ಕಮಲ?: ಗುಣಾ ಕ್ಷೇತ್ರದಲ್ಲಿ ಸಿಂಧಿಯಾಗೆ ಪೈಪೋಟಿ ನೀಡುವಷ್ಟು ಸಮರ್ಥ ನಾಯಕರು ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಆಪ್ತ ಡಾ.ಯಾದವ್‌ ಅವರನ್ನು ಪಕ್ಷಕ್ಕೆ ಕರೆ ತಂದು ಅಭ್ಯರ್ಥಿಯನ್ನಾಗಿಸಲಾಗಿದೆ. ಗುಣಾ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ 5 ಸ್ಥಾನ ಕಾಂಗ್ರೆಸ್‌ ಹಾಗೂ ಬಿಜೆಪಿ 3 ಸ್ಥಾನ ಪಡೆದಿದೆ. ಬಿಜೆಪಿ ಮತ ಪ್ರಮಾಣ ಕೂಡ ಹೆಚ್ಚಾಗಿದೆ. ಅಲ್ಲದೇ ಸಿಂಧಿಯಾ ಗೆಲುವಿನ ಅಂತರ ಕೂಡ ಕಡಿಮೆಯಾಗುತ್ತಿದೆ. ಗೆಲುವಿನ ಅದಮ್ಯ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಸಿಂಧಿಯಾ ಕಾಣಿಸಿಕೊಳ್ಳದೇ ಉತ್ತರಪ್ರದೇಶದಲ್ಲಿ ಸಕ್ರಿಯರಾಗಿರುವುದು ಇಲ್ಲಿನ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿದೆ. ಆಡಳಿತರೂಢ ಅಲೆ ಕೈಹಿಡಿದರೆ ಬಿಜೆಪಿ ಚೊಚ್ಚಲ ಗೆಲುವಿನ ನಗೆ ಬೀರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next