Advertisement

ಗಲ್ಫ್‌ ಕನ್ನಡಿಗರ ಒಕ್ಕೂಟ: ಮುಖ್ಯಮಂತ್ರಿ, ಸಭಾಪತಿಯನ್ನು ಭೇಟಿಯಾಗಿ ಬೇಡಿಕೆ ಸಲ್ಲಿಕೆ

03:56 PM Feb 24, 2024 | Team Udayavani |

ಅನಿವಾಸಿ ಕನ್ನಡಿಗರ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಿದ ಸಭಾಪತಿ ಯು.ಟಿ. ಖಾದರ್‌ ಅವರು ಅನಿವಾಸಿಗಳ ಬಗ್ಗೆ ಮತ್ತು ನಾಡು ನುಡಿ ಬಗ್ಗೆ ಅವರಿಗಿರುವ ಅಪರಿಮಿತ ಅಭಿಮಾನದ ಕುರಿತು ಹೊಗಳಿದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವರಾದ ಜಿ. ಪರಮೇಶ್ವರ್‌ ಅವರು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಚುರ ಪಡಿಸಿದಂತೆ ಈಗಾಗಲೇ ಎನ್‌ಆರ್‌ಐ ಸಮಿತಿಯ ಉಪಾಧ್ಯಕ್ಷರನ್ನಾಗಿ ಡಾ| ಆರತಿಕೃಷ್ಣ ಅವರನ್ನು ನೇಮಕ ಮಾಡಿದ್ದೇವೆ. ಮುಂದೆ ಕೇರಳದ ಮಾದರಿಯಂತೆ ಎನ್‌ಆರ್‌ಐ ಸಚಿವಾಲಯವನ್ನು ಸ್ಥಾಪಿಸುವ ಭರವಸೆ ನೀಡಿದರು.

Advertisement

ಅಧಿವೇಶನದ ಚರ್ಚೆಯ ಮೊದಲು ಗಲ್ಫ್‌ ಕನ್ನಡಿಗರ ಒಕ್ಕೂಟದ ವತಿಯಿಂದ (NKRI Gulf Fourm) ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಪತಿ ಯು.ಟಿ. ಖಾದರ್‌ ಮತ್ತು ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ| ಆರತಿ ಕೃಷ್ಣ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಗಲ್ಫ್‌ ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕೆ ಕೆಎನ್‌ಆರ್‌ಐ ಸಚಿವಾಲಯದ ಅಗತ್ಯವಿದೆ. ಕೇರಳ ರಾಜ್ಯದಲ್ಲಿ ಈ ಕುರಿತು ಅನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಅಲ್ಲಿ ಪ್ರತ್ಯೇಕ ಸಚಿವಾಲಯವಿದ್ದೂ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಹ ಪ್ರಾರಂಭಿಸಬೇಕೆನ್ನುವ ಒಕ್ಕೂಟದ ಬೇಡಿಕೆಯಿಟ್ಟಿತು. ಗಲ್ಫ್‌ ಕನ್ನಡಿಗರ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಂ ಖಲೀಲ್‌ , ಉಪಾಧ್ಯಕ್ಷರಾದ ರಮಾನಂದ ಪ್ರಭು, ಇಬ್ರಾಹಿಂ ಹುಸೇನ್‌ ಈ ಸಂದರ್ಭ ಉಪಸ್ಥಿತರಿದ್ದರು.

ಗಲ್ಫ್‌ ಕನ್ನಡಿಗರ ಒಕ್ಕೂಟವು ಮಧ್ಯ ಪ್ರಾಚ್ಯರಾಷ್ಟ್ರಗಳಾದ ಯುಎಇ, ಕುವೈತ್‌, ಕತಾರ್‌, ಒಮಾನ್‌, ಬಹ್ರೈನ್‌ ಮತ್ತು ಸೌದಿ ಅರೇಬಿಯಾದಲ್ಲಿ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಕನ್ನಡಿಗರು ರಚಿಸಿಕೊಂಡಿರುವ ಸಮಿತಿಯಾಗಿದೆ. ಇವರು ಸ್ಥಳೀಯ ಗಲ್ಫ್‌ ದೇಶಗಳ ಕರ್ನಾಟಕ ಮೂಲದ ಜನರಿಂದ ಸ್ಥಾಪಿತವಾದ ಕನ್ನಡ ಸಂಘ, ಕನ್ನಡಕೂಟ, ಕನ್ನಡ ಸಂಘಟನೆಗಳ ಮೂಲಕ ಗಲ್ಫ್‌ ರಾಷ್ಟ್ರಗಳಲ್ಲಿ ಕನ್ನಡ ನುಡಿ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುತ್ತ, ನಾಡು ನುಡಿಗೆ ಅಗಾಧವಾದ ಸೇವೆಯನ್ನು ಸಲ್ಲಿಸಿದ್ದಾರೆ.

ಗಲ್ಫ್‌ ಕನ್ನಡಿಗರ ಒಕ್ಕೂಟದ ಕೆಲಸ ಕಾರ್ಯಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಸಭಾಪತಿಗಳು ಸರಕಾರದ ವತಿಯಿಂದ ಎಲ್ಲ ರೀತಿಯ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುವ ಭರವಸೆ ನೀಡಿದರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಸ್‌. ರಂಗನಾಥ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next