Advertisement

ಮನಿ, ಹೊಲವೆಲ್ಲಾ ನೀರಾಗ ಕೊಚಕೊಂಡು ಹೋಯ್ತು!

01:12 PM Aug 15, 2019 | Naveen |

ಮಲ್ಲಿಕಾರ್ಜುನ ಕಲಕೇರಿ
ಗುಳೇದಗುಡ್ಡ:
ಮನೀ, ಕಷ್ಟಪಟ್ಟ ಬೆಳೆದಿದ್ದ ಬೆಳಿ, ಹೋಲಾ ಎಲ್ಲ ನೀರಾಗ್‌ ಹೋಯ್ತು. ನಾವ್‌ ನೀರಾಗ್‌ ಹೋಗಿ ಬಿಟ್ಟಿದ್ರ ಚಲೋ ಇರತಿತ್‌ ನೋಡ್ರಿ. ಎಲ್ಲಾ ಕಳಕೊಂಡು ಇನ್ನೇನ್‌ ಮಾಡಬೇಕ್‌. ದೇವರ ಬಾಳ್‌ ಮೋಸ ಮಾಡಿದ. ನಾವ್‌ ಕಷ್ಟಪಟ್ಟ ಬೆಳೆದಿದ್ದು ನೀರ್‌ ಪಾಲಾಯ್ತು.

Advertisement

ಲಾಯದಗುಂದಿ ಗ್ರಾಮದ ನಿರಾಶ್ರಿತರ ನೋವಿನ ನುಡಿಗಳಿವು. ಕಳೆದ ವಾರ ನವಿಲುತೀರ್ಥ ಜಲಾಶಯದಿಂದ ಬಿಟ್ಟ ನೀರಿನಿಂದ ಲಾಯದಗುಂದಿ ಗ್ರಾಮಕ್ಕೆ ನೀರು ನುಗ್ಗಿ ಅಕ್ಷರಶಃ ನೀರಿನಲ್ಲಿ ಮುಳುಗಿ ಹೋಗಿತ್ತು. ಇಂದು ಆ ಪ್ರವಾಹಕ್ಕೆ ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರು ನೋವಿನಿಂದ ಹೇಳಿದ ಮಾತುಗಳು ನಿಜಕ್ಕೂ ಕಣ್ಣೀರು ತರಿಸುವಂತಿದ್ದವು. ಸಮಯ ಕಳೆದಂಗೆಲ್ಲಾ ನದಿ ನೀರ್‌ ಹೊಲಾ ದಾಟಿ ಊರೊಳಗ ನುಗ್ಗಿ, ಸುತ್ತವರದ ದಿಗ್ಬಂಧನ ಹಾಕಿ ನಮ್ಮನ್ನ ನಡುಗಡ್ಡೆಯಾಗಿ ಮಾಡಿಬಿಟ್ಟಾನ ಆ ದೇವರು ಎಂದು ಬೇಸರದಿಂದ ಹೇಳಿದ ನುಡಿಗಳು ಮನ ಕರಗುವಂತಿದ್ದವು. ಪ್ರವಾಹವೇನೋ ಇಳಿಮುಖವಾಯ್ತು. ಆದರೆ ಅದರಿಂದಾದ ಕಷ್ಟ-ನಷ್ಟವನ್ನು ಎದುರಿಸಿ, ಹೊಸ ಜೀವನ ಕಟ್ಟಿಕೊಳ್ಳುವುದೇ ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ ಗ್ರಾಮಸ್ಥರಿಗೆ ಮುಂದಿರುವ ದೊಡ್ಡ ಸವಾಲಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ನೀರಿನಿಂದ ಆವರಿಸಿ, ಹಾಳಾಗಿದೆ. ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಮನೆಗಳ ಸ್ವಚ್ಛತೆ ಕಷ್ಟ ಕಷ್ಟ: ಲಾಯದಗುಂದಿ ಗ್ರಾಮದ ಮನೆಗಳಲ್ಲಿ ನೀರು ಹೊಕ್ಕಿದ್ದರಿಂದ ಕೆಸರು ತುಂಬಿದ್ದು, ಅವುಗಳನ್ನು ಸ್ವಚ್ಛ ಮಾಡಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಮಂಗಳವಾರದಿಂದ ಮನೆಗಳ ಸ್ವಚ್ಛತೆ ಕೆಲಸಕ್ಕೆ ಮುಂದಾದ ಗ್ರಾಮಸ್ಥರಿಗೆ ಮನೆಗಳಲ್ಲಿ ನೀರು ಹೊಕ್ಕಿದ್ದರಿಂದ ಹಾವು ಚೇಳುಗಳು ಕಾಣಿಸಿಕೊಳ್ಳುತ್ತಿವೆ.ಅಷ್ಟೇ ಅಲ್ಲ ಗಬ್ಬು ವಾಸನೆಯಿಂದ ಮನೆಯೊಳಗೆ ಹೋಗಲೂ ಆಗುತ್ತಿಲ್ಲ. ಇದರಿಂದ ಸ್ವಚ್ಛ ಮಾಡಲು ಹೋದವರಿಗೆ ಅಲರ್ಜಿ ಸಮಸ್ಯೆ ಕಾಡುತ್ತಿದೆ. ಗ್ರಾಮದಲ್ಲಿ ಕೆಸರು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಇದೇ ಪರಿಸ್ಥಿತಿ ಸದ್ಯ ಆಸಂಗಿ, ಕಟಗಿನಹಳ್ಳಿ ಗ್ರಾಮದಲ್ಲೂ ಉಂಟಾಗಿದೆ.

ಹಾಳಾದ ವಸ್ತುಗಳು: ನೀರು ಬರುತ್ತದೆ ಎಂಬ ಭಯದಲ್ಲಿ ಮನೆ ಬಿಟ್ಟು ಹೊರಗೆ ಬಂದ ಗ್ರಾಮಸ್ಥರ ಮನೆಗಳಲ್ಲಿ ವಸ್ತುಗಳು ಹಾಳಾಗಿವೆ. ಸಂತ್ರಸ್ಥರ ಬದುಕು ನೀರು ಪಾಲಾಗಿದೆ. ಪ್ರವಾಹ ನಿಂತರೂ ಮನೆಗಳಿಗೆ ಮರಳಿ ಹೋಗುವ ಹಾಗಿಲ್ಲ. ಕೆಲ ಮನೆಗಳು ಬೀಳುವ ಸ್ಥಿತಿಯಲ್ಲಿವೆ.. ಸಂಪೂರ್ಣ ಸ್ಥಳಾಂತರವಾಗಲಿ: ಗ್ರಾಮದಲ್ಲಿ ಈ ಹಿಂದೆ ಪ್ರವಾಹ ಉಂಟಾಗಿತ್ತು. ಪದೇ ಪದೇ ಪ್ರವಾಹ ಉಂಟಾಗುತ್ತಿದ್ದರೆ ಜನರು ಬದುಕು ಕಟ್ಟಿಕೊಳ್ಳುವುದು ಹೇಗೆ. ಅದಕ್ಕೆ ನಮ್ಮ ಗ್ರಾಮವನ್ನು ಸಮೀಪದ ಗುಡ್ಡದ ಮೇಲಿನ ಸಮತಟ್ಟಾದ ಪ್ರದೇಶದಲ್ಲಿ ನಿರ್ಮಿಸಿ ಕೊಡಲಿ. ಒಟ್ಟು 400 ಮನೆಗಳಲ್ಲಿ 275ಕ್ಕೂ ಹೆಚ್ಚು ಮನೆಗಳು ಸದ್ಯ ಹಾನಿಗೊಳಗಾಗಿವೆ. ಅವುಗಳನ್ನು ದುರಸ್ತಿ ಮಾಡುವುದು ಕಷ್ಟವಾಗಿದೆ. ಎಲ್ಲ ಕುಟುಂಬಗಳನ್ನು ಗುಡ್ಡದ ಮೇಲಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂಬುದು ನಿರಾಶ್ರಿತರ ಆಗ್ರಹ.

ರಸ್ತೆ ತುಂಬಾ ಕೆಸರು: ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ನೀರು ಬಂದಿದ್ದರಿಂದ ಗುಳೇದಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲ ಕೆಸರು ನಿಂತು ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿದೆ. ಗ್ರಾಮಕ್ಕೆ ತೆರಳಿದ ಬಸ್‌ ಕೆಸರಿನಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಸ್ವಚ್ಛಗೊಳಿಸುವ ಸಮಯದಲ್ಲಿಯೇ 5-6 ಬೈಕ್‌ ಸವಾರರು ಕೆಸರಿನಲ್ಲಿ ಸ್ಕೀಡ್‌ಆಗಿ ಬಿದ್ದ ಘಟನೆಗಳೂ ನಡೆದವು.

Advertisement

ಮನಿ ನೀರಾಗ್‌, ಕಷ್ಟಪಟ್ಟ ಬೆಳೆದಿದ್ದ ಬೆಳಿ, ಹೊಲಾ ಎಲ್ಲ ನೀರಾಗ್‌ ಹೋಯ್ತು. ಏನ್‌ ಹೇಳ್ಬೇಕ್ರಿ. ನಾವ್‌ ಎಲ್ಲ ಕಳಕೊಂಡು ಸಾಲ್ಯಾಗ್‌ ಬಂದ್‌ ಕುಂತೀವ್ರಿ. ಅವರಿವರ ದಾನಿಗಳು ಕೊಟ್ಟಿದ್ದು ತಿನ್ನಾಕತಿತೀವಿ. ಇನ್ನ ಈ ಶಾಲಿಯವರು ಹೋಗ್‌ ಅಂದ್ರ ಎಲ್ಲಿ ಹೋಗಬೇಕ್ರಿ. ನಮ್ಮ ಮನೆಗಳೆಲ್ಲ ನೀರಿನಿಂದ ತುಂಬಿ ಕುಸಿದು ಹೋಗ್ಯಾವ. ಬಿದ್ದ ಹೋಗ್ಯಾವ. ಹೊಲ್ದಾಗ ನೀರು ನಿಂತು ರಾಡಿ ತುಂಬೈತಿ. ಹೆಂಗ್‌ ಜೀವ್ನಾ ಕಟ್ಟಿಕೊಳ್ಳಬೇಕ್‌. ನಮ್ಗ ಸರಕಾರ ಏನಾದ್ರು ಸಹಾಯ ಮಾಡ್ಬೇಕು ಎನ್ನುತ್ತಾರೆ ಲಾಯದಗುಂದಿ ಗ್ರಾಮದ ನಿರಾಶ್ರಿತರಾದ ಮಾದೇವಿ ಸೀಮಿಕೇರಿ, ಸಂಗವ್ವ ಸಿಂಬಗಿ, ನೀಲವ್ವ ಸೀಮಿಕೇರಿ, ಲಕ್ಷ್ಮೀಬಾಯಿ ಕೋಚಲ, ರೇಣವ್ವ ಗುಡಗುಂಟಿ, ಮಲ್ಲವ್ವ ಚಿಲ್ಲಾಪುರ.

Advertisement

Udayavani is now on Telegram. Click here to join our channel and stay updated with the latest news.

Next