Advertisement

ಧರ್ಮ ಸಂಘರ್ಷದ ಗುಲಾಮಗಿರಿ

09:53 AM Mar 07, 2020 | Team Udayavani |

ಭಾರತದ ಸಂವಿಧಾನದ 15ನೇ ಅನುಚ್ಛೇದ ಸಮಾಜದ ಸರ್ವರೂ ಸಮಾನರು, ಸರ್ವರಿಗೂ ಸಮಾನತೆ ದೊರಕಬೇಕೆಂದು ಹೇಳುತ್ತದೆ. ಇಂದಿಗೂ ಸಮಾನತೆಯ ಕುರಿತು ಹೋರಾಟಗಳು ನಡೆಯುತ್ತಲೇ ಇರುತ್ತವೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು “ಗುಲಾಮಗಿರಿ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಸುಮಾರು ಏಳು ವರ್ಷಗಳ ಕಾಲ ಕನ್ನಡ ಮತ್ತು ತಮಿಳಿನ ಹಲವು ಚಿತ್ರಗಳಿಗೆ ಸಹಾಯಕ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಅರುಣ್‌ ಕೃಷ್ಣ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಮಹಾ ಬೋಧಿ ಬುದ್ಧ ವಿಹಾರದಲ್ಲಿ ನಡೆದ “ಗುಲಾಮಗಿರಿ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಬೌದ್ಧ ಬಿಕ್ಕುಗಳು ಹಾಜರಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. “ಆ ದಿನಗಳು’ ಖ್ಯಾತಿಯ ನಟ ಚೇತನ್‌ ಮೊದಲಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.

Advertisement

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನವ ನಿರ್ದೇಶಕ ಅರುಣ್‌ ಕೃಷ್ಣ, “1977-92ವರೆಗೆ ತಮಿಳುನಾಡಿನಲ್ಲಿ ನಡೆದ ಪೆರಿಯಾರ್‌ ಹೋರಾಟ ಕ್ರಾಂತಿ ಈ ಚಿತ್ರದ ಕಥೆ ಬರೆಯಲು ಸ್ಫೂರ್ತಿಯಾಯಿತು. 1975 ಹಾಗೂ 2005 ಎರಡು ಕಾಲಘಟ್ಟದಲ್ಲಿ ಈ ಸಿನಿಮಾ ಸಾಗುತ್ತದೆ. ಹಿಂದಿನಿಂದಲೂ ಜನರು ಯಾವ ಯಾವ ರೀತಿಯಲ್ಲಿ ಗುಲಾಮರಾಗಿ ಬದುಕುತ್ತಿದ್ದರು. ಭೂಮಿ ಮೇಲೆ ಶ್ರೀಮಂತ-ಬಡವ ಎಂಬ ಜಾತಿ ಇರುತ್ತದೆ. ಶ್ರೀಮಂತರು ಬಡವರನ್ನು ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಲು ಬಿಡುತ್ತಿಲ್ಲ. ಇದರ ವಿರುದ್ಧ ಗತಕಾಲದಿಂದ ಹೋರಾಡಿಕೊಂಡು ಬಂದಿರುವ ಗ್ಯಾಂಗ್‌ಸ್ಟಾರ್‌ ಇರುತ್ತಾರೆ. ಹೀಗೆ ಎರಡು ಧರ್ಮಗಳ ನಡುವೆ ಉಂಟಾಗುವ ಸಂಘರ್ಷವೇ ಸಿನಿಮಾದ ಸಾರಾಂಶವಾಗಿದೆ.

ಕ್ಲೆ ಮಾಕ್ಸ್‌ನ್ನು 2005ಕ್ಕೆ ಕೊನೆಗೊಳ್ಳುವಂತೆ ಸಿನಿಮಾದ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ’ ಎಂದು ವಿವರಣೆ ನೀಡಿದರು.

ಚಿತ್ರದುರ್ಗ ಮೂಲದ ನಾಗರಾಜ್‌ ಹಾಗೂ ಟೈಗರ್‌ ನಾಗ್‌ ಜಂಟಿಯಾಗಿ “ಸಂವಿಧಾನ ಸಿನಿ ಕಂಬೈನ್ಸ್‌’ ಬ್ಯಾನರ್‌ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಟೈಗರ್‌ ನಾಗ್‌ ನಾಯಕನಾಗಿ ಎರಡು ಶೇಡ್‌ಗಳಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಾಯಕ ಟೈಗರ್‌ ನಾಗ್‌, “ಸಮಾಜದಲ್ಲಿ ಪ್ರತಿಯೊಬ್ಬರು ಮನುಷ್ಯರೇ. ಎಲ್ಲರನ್ನು ಸಮನಾಗಿ ಕಂಡು, ಎಲ್ಲರಿಗೂ ಬದುಕಲು ಅವಕಾಶ ಮಾಡಿಕೊಡಬೇಕು. ಯಾವುದೇ ವಿಷಯದಲ್ಲಿ ತಾರತಮ್ಯ ಮಾಡಬಾರದು. ನಮ್ಮ ಹಕ್ಕುಗಳಿಗೆ ಹೋರಾಟ ಮಾಡುತ್ತಲೇ ಇರಬೇಕು ಎನ್ನುವ ಸಂದೇಶ ಇದರಲ್ಲಿದೆ’ ಎಂದರು.

ತುಮಕೂರು ಮೂಲದ ಕಾವ್ಯಾ ನಾಗರಾಜು, ಸುಚರಿತಾ ಸಗಾಯ್‌ರಾಜ್‌ ಮತ್ತು ಸ್ನೇಹಾ ನಾಯ್ಡು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಚಿರಂಜೀವಿ, ಫಾರೂಕ್‌, ವಾಲೆಚಂದ್ರಯ್ಯ, ಶಶಿ ಮುಂತಾದವರು ಚಿತ್ರದ ಇತರ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.

Advertisement

ಬೆಂಗಳೂರು, ತುಮಕೂರು, ಮಧುಗಿರಿ, ಕೊರಟಗೆರೆ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣಕ್ಕೆ “ಗುಲಾಮಗಿರಿ’ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಸ್ಟೀಫ‌ನ್‌ ಪ್ರತೀಕ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ್‌ ಗೌಡ ಛಾಯಾಗ್ರಹಣ, ಅಲ್ಟಿಮೇಟ್‌ ಶಿವು ಸಾಹಸ, ಸ್ಟಾರ್‌ ನಾಗಿ ನೃತ್ಯ ಸಂಯೋಜಿಸುತ್ತಿದ್ದಾರೆ. ಸದ್ಯ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಬಹುತೇಕ ಹೊಸಬರ “ಗುಲಾಮಗಿರಿ’ ಚಿತ್ರ, ಈ ವರ್ಷದ ಕೊನೆಗೆ ಪ್ರೇಕ್ಷಕರ ಮುಂದೆ ಬರಬಹುದು.

Advertisement

Udayavani is now on Telegram. Click here to join our channel and stay updated with the latest news.

Next