Advertisement

ಸಾವಯವ ಕೃಷಿಕ, ಸಂಶೋಧಕ, ಲೇಖಕ ಶಂಕರ ಭಟ್‌ ಬದನಾಜೆ

10:31 AM Dec 22, 2019 | mahesh |

ಹೆಸರು: ಶಂಕರ ಭಟ್‌ ಬದನಾಜೆ
ಏನು ಕೃಷಿ: ಮಿಶ್ರಬೆಳೆ
ವಯಸ್ಸು: 76
ಕೃಷಿ ಪ್ರದೇಶ: 30 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ವಿಟ್ಲ: ಇಲ್ಲಿಗೆ ಸಮೀಪದ ಬದನಾಜೆ ಶಂಕರ ಭಟ್‌ ಅವರು ಸಾವಯವ ಕೃಷಿಕ, ಸಂಶೋಧಕ, ಲೇಖಕ, ಅರಣ್ಯ ರಕ್ಷಕ, ಮಾರ್ಗದರ್ಶಕ, ಸಂಘಟಕ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿ, ಮಹಾನ್‌ ಸಾಧಕರಾಗಿ ಸರಳ ಜೀವನ ನಡೆಸುತ್ತಿರುವವರು. ಇವರಿಗೆ 30 ಎಕ್ರೆ ಜಮೀನಿದೆ. 10 ಎಕ್ರೆಯಲ್ಲಿ ಸಂರಕ್ಷಿತ ಅರಣ್ಯವಿದೆ. ಈ ಅರಣ್ಯಕ್ಕೆ ಇಂದಿನ ತನಕ ಕೊಡಲಿ ಹಾಕಿಲ್ಲ. ತೋಟದಲ್ಲಿ 4,000ಕ್ಕೂ ಹೆಚ್ಚು ಅಡಿಕೆ (ಮಂಗಳಾ, ಸುಮಂಗಳಾ ಹಾಗೂ ಸ್ಥಳೀಯ ತಳಿಗಳು), 100 ತೆಂಗು, 100 ಕೊಕ್ಕೋ, 800 ರಬ್ಬರ್‌, ಕಾಳುಮೆಣಸು 300 ಬುಡ, 300 ವಿಧಗಳ ಔಷಧೀಯ ಗಿಡಗಳ ವನ, ಹೈನುಗಾರಿಕೆಯಿದೆ. ರಾಂಬೂಟಾನ್‌, ಸೀಬೆಕಾಯಿ, ಇನ್ನಿತರ ಹಣ್ಣುಹಂಪಲುಗಳನ್ನು ಬೆಳೆಯುತ್ತಾರೆ. ಬಯೋಗ್ಯಾಸ್‌ ಸ್ಲರಿ ಯನ್ನು ಮತ್ತು ಸೊಪ್ಪು, ಸಾವಯವ ಗೊಬ್ಬರ, ಕುರಿಗೊಬ್ಬರ, ಹಟ್ಟಿಗೊಬ್ಬರವನ್ನು ತೋಟಕ್ಕೆ ಬಳಸುತ್ತಾರೆ. ವಿಶೇಷ ಅಧ್ಯಯನಕ್ಕಾಗಿ 5,000ಕ್ಕೂ ಹೆಚ್ಚು ಗ್ರಂಥಗಳುಳ್ಳ ಗ್ರಂಥಾಲಯವನ್ನು ಹೊಂದಿದ್ದಾರೆ. ಅಡಿಕೆ ಸ್ಪ್ರೆà ಫಲಿನಿ ಸಂಶೋಧನೆ (ಕೊಳೆ ರೋಗ ನಿಯಂತ್ರಣ) ಮಾಡಿ ಅನೇಕ ಮಂದಿ ಕೃಷಿಕರಿಗೆ 80 ಸಾವಿರ ಲೀಟರ್‌ ವಿತರಣೆ ಮಾಡಿದ್ದಾರೆ. (ಲಾಭಕ್ಕಾಗಿ ಮಾರಾಟವಲ್ಲ). ಅಡಿಕೆಯಿಂದ ವೈನ್‌, ಸಾಫ್ಟ್‌ ಡ್ರಿಂಕ್‌, ಐಸ್‌ಕ್ರೀಂ, ಸಾಬೂನು, ಶಾಯಿ, ಗಮ್‌, ಔಷಧಗಳ ಸಂಶೋಧನೆ, ತಯಾರಿಕೆ ಸಹಿತ ಔಷಧೀಯ ಗಿಡಮೂಲಿಕೆಗಳ ವನ, ಅವುಗಳ ಬಳಕೆಗೆ ಮಾರ್ಗದರ್ಶನ, ಅವುಗಳ ಪರಿಚಯ ಮತ್ತು ಉಪಯೋಗದ ಮಾಹಿತಿ ನೀಡುತ್ತಿದ್ದಾರೆ.

ಮಾರ್ಗದರ್ಶನ
70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳನ್ನು ನಡೆಸಿದ್ದಾರೆ. ಅವುಗಳು ರಾಜ್ಯ, ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆದಿವೆ. ಪಿಎಚ್‌.ಡಿ.ಗಾಗಿ ಕೂಡ ಇವರ ಮಾರ್ಗದರ್ಶನ ಪಡೆದಿದ್ದಾರೆ.

ಪ್ರಕಟಿತ ಕೃತಿಗಳು
ಇಬ್ಬರು ತಜ್ಞರ ಸಹಕಾರದೊಂದಿಗೆ ಪಶುಚಿಕಿತ್ಸಾ ಕೈಪಿಡಿ, ಮಲಯಾಳಿ ವಿಷ ಚಿಕಿತ್ಸೆ ಅಪಾಮಾರ್ಗ, ಸುಗಂಧ ಫಲ ಅಡಿಕೆ, Arecanut Medicinal and alternative uses (ಮುಖ್ಯಮಂತ್ರಿ ಗಳಿಂದ ಬಿಡುಗಡೆ), ಕೃಷಿ, ಆಯುರ್ವೇದ, ಅಡಿಕೆ ಇತ್ಯಾದಿ ಬಗ್ಗೆ ಸಂಶೋಧನಾತ್ಮಕ ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

Advertisement

ಸಂಘಟನೆ
ಆಯುರ್ವೇದ ಅಧ್ಯಯನ ಸಂಶೋಧನೆ ಕೇಂದ್ರ ಸ್ಥಾಪಕ, ಕ್ಯಾಂಪ್ಕೋ ಪ್ರಾಯೋಜಿತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಟ್ರಸ್ಟಿ, ಮಂಗಳಾ ಹರ್ಬಲ್‌ ಪಾರ್ಕ್‌ ಸ್ಥಾಪಕ, ಮಂಗಳಾ ಚ್ಯಾರಿಟೆಬಲ್‌ ಟ್ರಸ್ಟಿ.

 ವಿದ್ಯಾಭ್ಯಾಸ : ಎಂ.ಎ., ಎಲ್‌ಎಲ್‌.ಬಿ.
 ಸ್ವತಃ ಸಂಶೋಧಕರು
 10 ಎಕ್ರೆ ಭೂಮಿಯಲ್ಲಿ ಸಂರಕ್ಷಿತ ಅರಣ್ಯ
 ಮೊಬೈಲ್‌ ಸಂಖ್ಯೆ: 9448382229

ಪ್ರಶಸ್ತಿ ಸಮ್ಮಾನ

 1998ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ
 2003ರಲ್ಲಿ ಪೆರ್ಲ ನಲ್ಕ ಗಣಪತಿ ಭಟ್‌ ಪ್ರತಿಷ್ಠಾನ ಸಮ್ಮಾನ
 2008ರಲ್ಲಿ ಪ್ರಸಾರ ಭಾರತಿ (ಆಕಾಶವಾಣಿ)ಯಿಂದ ಕಿಸಾನ್‌ ವಾಣಿ ಪ್ರಶಸ್ತಿ
 2010ರಲ್ಲಿ ಅಖೀಲ ಹವ್ಯಕ ಮಹಾಸಭಾ ಸಮ್ಮಾನ
 2011ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು.
 2013ರಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ
 2019ರಲ್ಲಿ ಆಯುಷ್‌ ಫೆಡರೇಶನ್‌ ಆಫ್‌ ಇಂಡಿಯ ಪ್ರಶಸ್ತಿ ಪುರಸ್ಕೃತರು
 2019ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಯಿಂದ ಪ್ರಶಸ್ತಿ

ಅಡಿಕೆಯ ಉಪಯೋಗ
ಅಡಿಕೆ ಹಲವು ಏಳುಬೀಳುಗಳನ್ನು ಕಂಡಿದೆ. ಅದಕ್ಕೆ ಕಾರಣ ಹಲವು. ಜಗಿದು ಉಗುಳುವುದಕ್ಕಷ್ಟೇ ಸೀಮಿತವಾದರೆ ಸಾಲದು. ಈ ನಿಟ್ಟಿನಲ್ಲಿ ಅಡಿಕೆಯಿಂದ ವಿವಿಧ ಉತ್ಪನ್ನಗಳನ್ನು ಹೊರತೆಗೆಯಲು ಬಳಸಬೇಕಾಗಿದೆ. ಅದಕ್ಕಾಗಿ ಸಂಶೋಧನೆಗಳಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ, ಪ್ರಯೋಗಗಳನ್ನು ಮಾಡಲಾಗಿದೆ. ಹಲವರ ಸಹಕಾರವೂ ಸಿಕ್ಕಿದೆ. ಆದರೆ ಇನ್ನಷ್ಟು ಕಾರ್ಯವಾಗಬೇಕು. ವಯಸ್ಸಾಗಿದ್ದರೂ ಅಧ್ಯಯನ ನಿಲ್ಲಿಸಿಲ್ಲ. ನಿಲ್ಲಿಸುವುದೂ ಇಲ್ಲ. ನಿರಂತರ ಶ್ರಮ ವಹಿಸುವುದು ಅನಿವಾರ್ಯ.
-ಶಂಕರ ಭಟ್‌ ಬದನಾಜೆ

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next