Advertisement

ಬಿಸಿಯೂಟಕ್ಕೆ ‘ಗುಗ್ಗುರು’ಕಾಟ!

11:51 PM Jun 25, 2019 | mahesh |

ಸುಳ್ಯ: ಅಕ್ಷರ ದಾಸೋಹಕ್ಕೆ ಪೂರೈಸಿರುವ ಅಕ್ಕಿಯಲ್ಲಿ ಗುಗ್ಗುರು ತುಂಬಿದ್ದು, ವಿದ್ಯಾರ್ಥಿಗಳು ಹುಳಪೂರಿತ ಬಿಸಿಯೂಟ ಸೇವಿಸುವ ಸ್ಥಿತಿ ಉಂಟಾಗಿರುವ ಆರೋಪದ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

Advertisement

ತಾ.ಪಂ. ಸಾಮಾನ್ಯ ಸಭೆಯು ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾವಿಸಿದ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅಧ್ಯಕ್ಷ ಚನಿಯ ಕಲ್ತಡ್ಕ, ಅಬ್ದುಲ್ ಗಫೂರ್‌, ಪೂರೈಕೆ ಆದ ಅಕ್ಕಿ ಶೇಖರಣೆ ಲೋಪದ ಪರಿಣಾಮ ಇಂತಹ ಸಮಸ್ಯೆಉದ್ಭವಿಸಿದೆಯೋ ಅಥವಾ ಪೂರೈಕೆ ಆಗುವ ಅಕ್ಕಿಯಲ್ಲೇ ಗುಗ್ಗುರು ತುಂಬಿರುತ್ತದೆಯೋ ಎಂಬ ಬಗ್ಗೆ ಇಲಾಖೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು. ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಅಧಿಕಾರಿಗಳು ಉತ್ತರಿಸಿ, ಪ್ರತಿ ತಿಂಗಳು ಅಕ್ಕಿ ಪೂರೈಕೆ ಮಾಡುವ ವ್ಯವಸ್ಥೆ ಇದೆ. ಅದನ್ನು ಸುರಕ್ಷಿತ ಸ್ಥಳದಲ್ಲಿ ದಾಸ್ತಾನು ಇರಿಸಿ ಬಳಸಲು ಸೂಚಿಸಲಾಗುತ್ತದೆ. ಎರಡು ತಿಂಗಳ ರಜೆ ಅವಧಿಯಲ್ಲಿ ಅಕ್ಕಿಯಲ್ಲಿ ಒಂದಷ್ಟು ವ್ಯತ್ಯಾಸ ಕಂಡಿರಬಹುದು. ಈ ಬಗ್ಗೆ ಆಯಾ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದರು.

ಲೆಕ್ಕಾಚಾರ ಇಲ್ಲ

ಶಾಲೆಗಳಲ್ಲಿ ಉಳಿಕೆ ಅಕ್ಕಿಗಳ ಬಗ್ಗೆ ಲೆಕ್ಕಾಚಾರ ಇರುವುದಿಲ್ಲ ಎಂದು ಬೊಳ್ಳೂರು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರಿ ವಸತಿ ನಿಲಯಗಳಲ್ಲಿ 6 ತಿಂಗಳಿಗೊಮ್ಮೆ ಅಕ್ಕಿ ಪೂರೈಸುತ್ತಿರುವ ಮಾಹಿತಿ ಇದ್ದು, ಅಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸಿರಬಹುದು ಎಂದು ಸದಸ್ಯ ಅಬ್ದುಲ್ ಗಫೂರ್‌ ಗಮನ ಸೆಳೆದರು. ಅಡ್ಪಂಗಾಯ ಶಾಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ನಿರ್ವಹಣ ವೆಚ್ಚ ಹೆಚ್ಚಿಸಿ
ಸರಕಾರಿ ಶಾಲೆಗಳಿಗೆ ಪ್ರತಿ ತಿಂಗಳು ನೀಡುವ ನಿರ್ವಹಣ ವೆಚ್ಚ ಅತಿ ಕಡಿಮೆ ಆಗಿದೆ. ಅದನ್ನು ಹೆಚ್ಚಿಸುವಂತೆ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲು ಅಬ್ದುಲ್ ಗಫೂರ್‌ ಸಲಹೆ ನೀಡಿದರು.

Advertisement

ವಂತಿಗೆ ಸಂಗ್ರಹಿಸಿ ಡೀಸೆಲ್ ಹಾಕಿ
ಬಿಎಸ್ಸೆನ್ನೆಲ್ ಅವ್ಯವಸ್ಥೆ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯಿತು. ಅಧ್ಯಕ್ಷ ಚನಿಯ ಕಲ್ತಡ್ಕ ವಿಷಯ ಪ್ರಸ್ತಾಪಿಸಿ, ಟವರ್‌ ಕಾರ್ಯ ನಿರ್ವಹಿಸುತ್ತಿಲ್ಲ. ವಿನಿಮಯ ಕೇಂದ್ರಗಳು ಮುಚ್ಚಿವೆ. ನೆಟ್ವರ್ಕ್‌ ಇಲ್ಲದೆ ಸರಕಾರಿ ಕೆಲಸಗಳು ಬಾಕಿ ಆಗಿವೆ. ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅಶೋಕ್‌ ನೆಕ್ರಾಜೆ, ಹಲವು ವರ್ಷಗಳ ಇತಿಹಾಸ ಇರುವ ಬಿಎಸ್ಸೆನ್ನೆಲ್ ಈಗ ಡೀಸೆಲ್ ಹಾಕಲು ದುಡ್ಡಿಲ್ಲದೆ ಪರದಾಡುತ್ತಿದೆ.

· ಸರಕಾರಿ ಆಸ್ಪತ್ರೆಯ ಹೊರಗುತ್ತಿಗೆ ಆಧಾ ರಿತ ಡಿ ಗ್ರೂಪ್‌ ನೌಕರರ ವೇತನ ಪಾವತಿಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ನೌಕರರ ಸೇವಾವಧಿಯನ್ನು ಜುಲೈ ತನಕ ವಿಸ್ತರಿಸಿ ಸರಕಾರ ಸುತ್ತೋಲೆ ಕಳುಹಿಸಿದೆ: ತಾ| ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ.

· ಗ್ರಾ.ಪಂ.ನಲ್ಲಿ ಆಧಾರ್‌ ಕೇಂದ್ರ ಮತ್ತೆ ಆರಂಭಿಸಲು ಸದಸ್ಯರ ಆಗ್ರಹ. ಐದು ಕಡೆಗಳಲ್ಲಿ ಆಧಾರ್‌ ಕೇಂದ್ರ ಸ್ಥಾಪಿಸುವುದಾಗಿ ತಹಶೀಲ್ದಾರ್‌ ಭರವಸೆ.

· ಕೇರಳ – ಕರ್ನಾಟಕ ಗಡಿಗ್ರಾಮಗಳಲ್ಲಿ ಆನೆ ದಾಳಿ ನಿಯಂತ್ರಣಕ್ಕೆ ಮಂಡೆಕೋಲು ಮತ್ತು ದೇಲಂಪಾಡಿಯಲ್ಲಿ ಗ್ರಾಮಸ್ಥರ ಸಭೆ ನಡೆಸಲು ನಿರ್ಧರಿಸಿದ್ದು, ದಿನಾಂಕ ಶೀಘ್ರ ಪ್ರಕಟಿಸುವುದಾಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್‌. ತಿಳಿಸಿದ್ದಾರೆ.

· ಪ್ರತಿ ಬಾರಿ ಸಾಮಾನ್ಯ ಸಭೆ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಆದರೆ ಮಂಗಳವಾರ ನಡೆದ ಸಭೆ ಬೆಳಗ್ಗೆ 11ರಿಂದ ಆರಂಭಗೊಂಡು ಸಂಜೆ 6 ಗಂಟೆ ತನಕ ನಡೆಯಿತು.

ಟವರ್‌ಗೆ ಬಸಳೆ ಬಳ್ಳಿ ಹಾಯಿಸಿ ಪ್ರತಿಭಟಿಸಿದ್ದು, ನಿಗಮದ ದಯನೀಯ ಸ್ಥಿತಿ ಬಹಿರಂಗಗೊಂಡಿದೆ. ಗ್ರಾ.ಪಂ.ಗಳಲ್ಲಿ ನೆಟ್ವರ್ಕ್‌ ಕೈ ಕೊಟ್ಟು ಕಚೇರಿ ಕೆಲಸ ಆಗುತ್ತಿಲ್ಲ. ಬ್ಯಾಂಕ್‌ ಸಹಿತ ಬಿಎಸ್ಸೆನ್ನೆಲ್ ಸಂಪರ್ಕ ಇರುವ ಎಲ್ಲ ಕಡೆ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ. ಹೀಗಾಗಿ ನಿಮ್ಮ ವಿರುದ್ಧವೇ ಧರಣಿ ಕೂರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸ್ಥೆಯ ಅಧಿಕಾರಿ ಉತ್ತರ ನೀಡಿ, ಅನುದಾನ ಕೊರತೆಯಿಂದ ಡೀಸೆಲ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಒಂದು ಕಾಲದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಗೆ ಈಗ ತಕ್ಕ ಶಾಸ್ತಿಯಾಗಿದೆ. ದುಡ್ಡಿಲ್ಲದಿದ್ದರೆ ಜನರಿಂದ ವಂತಿಗೆ ಸಂಗ್ರಹಿಸಿ ಡೀಸೆಲ್ ಹಾಕಿ ಎಂದು ರಾಧಾಕೃಷ್ಣ ಬೊಳ್ಳೂರು ಹರಿಹಾಯ್ದರು. ತಾಲೂಕಿನಲ್ಲಿ ಬಿಎಸ್ಸೆನ್ನೆಲ್ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ತಾ.ಪಂ. ಅಧ್ಯಕ್ಷರು ಸೂಚನೆ ನೀಡಿದರು.

ಕ್ರಮಕ್ಕೆ ಆಗ್ರಹ
ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣ ಮತ್ತು ಭಿತ್ತಿಪತ್ರ, ಕರಪತ್ರ ಮುಖೇನ ಅವಹೇಳನಕಾರಿ ಸಂದೇಶ ರವಾನಿಸಿದವರ ವಿರುದ್ಧ ಪೊಲೀಸ್‌ ಠಾಣೆ ಮತ್ತು ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಲಾಗಿತ್ತು. ಭಿತ್ತಿಪತ್ರ, ಕರಪತ್ರದ ಬಗ್ಗೆ ಬೆಳ್ಳಾರೆ ಠಾಣೆಗೆ ಲಿಖೀತ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಅಲ್ಲಿನ ಪೊಲೀಸರು ನೀಡಿದ ಉತ್ತರವು ಮನಸ್ಸಿಗೆ ನೋವು ತರುವಂತಿದೆ. ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಹೇಗೆ ಎಂದು ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಆಶಾ ತಿಮ್ಮಪ್ಪ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ತನಿಖಾ ಪ್ರಗತಿ ವರದಿಯನ್ನು ವಾರದೊಳಗೆ ತಾ.ಪಂ. ಅಧ್ಯಕ್ಷರಿಗೆ ಸಲ್ಲಿಸಲು ಮತ್ತು ಅಪಪ್ರಚಾರ ಹರಡಿದವರ ಮೇಲೆ ಸೂಕ್ತ ಕ್ರಮಕ್ಕೆ ಸಭೆ ಸೂಚಿಸಿತು. ಈ ವಿಚಾರವನ್ನು ಠಾಣಾಧಿಕಾರಿ ಗಮನಕ್ಕೆ ತರುವುದಾಗಿ ಸುಳ್ಯ ಎಸ್‌.ಐ. ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಸಹಾಯಕ ನಿರ್ದೇಶಕ ಭವಾನಿಶಂಕರ ಉಪಸ್ಥಿತರಿದ್ದರು.

ಪ್ರತೀ ಬಾರಿ ಸಾಮಾನ್ಯ ಸಭೆ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಆದರೆ ಮಂಗಳವಾರ ಸಭೆ ಬೆಳಕ್ಕೆ 11 ಗಂಟೆಗೆ ಆರಂಭಗೊಂಡು ಸಂಜೆ 6ರ ತನಕ ಮುಂದುವರಿಯಿತು. ಪಾಲನಾ ವರದಿ ಚರ್ಚೆ ಪೂರ್ಣಗೊಳ್ಳುವಾಗಲೇ ಸಂಜೆ 5 ದಾಟಿತ್ತು. ಅನಂತರ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪ್ರತಿ ದಿನ 5 ಗಂಟೆಗೆ ಕರ್ತವ್ಯ ಮುಗಿಸಿ ತೆರಳುವ ಇಲಾಖಾಧಿಕಾರಿಗಳು ಮಂಗಳವಾರ ಅವಧಿ ಮೀರಿ ಸಭಾಂಗಣದಿಂದ ಹೊರ ಹೋಗುವ ಪ್ರಯತ್ನ ಮಾಡಲಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next