Advertisement

ಅತಿಥಿ 

03:45 AM Jan 08, 2017 | |

ಇಂದು ಯಾರಾದರೂ ಬರುವರೇನೋ? ಎಂದು ಕೆಲವು ಸಲ ನಾನು ಮನೆಯ ಮುಂದಿನ ಹಾದಿಯ ನೋಡಿ ಅಂದುಕೊಳ್ಳುವುದುಂಟು. ಒಲೆ ವಿಚಿತ್ರ ರೀತಿಯಲ್ಲಿ ಸದ್ದು ಮಾಡುತ್ತ ಉರಿದರೆ, ಕಾಗೆ ಗಂಟಲು ಕೆರೆಯುತ್ತ ಅರಚಿದರೆ ಅಮ್ಮ ಹೇಳುತ್ತಾಳೆ “”ನೋಡು, ಇಂದು ಯಾರಾದರೂ ಖಂಡಿತ ಬರುತ್ತಾರೆ. ಆದರೆ ಹೆಚ್ಚಾಗಿ ದಿಢೀರ್‌ ಎಂದು ಯಾರೂ ಈಗ ಬರುವುದಿಲ್ಲ. ಒಂದು ಕರೆ ಮಾಡಿ ಇಷ್ಟು ಹೊತ್ತಿಗೆ ಬರುವವರಿದ್ದೇವೆ” ಎಂದು ತಿಳಿಸಿಯೇ ಬರುತ್ತಾರೆ. ಬಂದವರು ಬೇಗ ಹೊರಡಬೇಕಿದೆ ಎಂಬ ಅವಸರದಲ್ಲಿಯೇ ಆಗಮಿಸುತ್ತಾರೆ. ನಾವು ಕೂಡಾ ಬರುವಾಗ ತಿಳಿಸಿಯೇ ಬರಬೇಕು ಎಂದು ಆಮಂತ್ರಿಸಿ ಹೊರಡುತ್ತಾರೆ. ಇನ್ನು ಉಳಿದಂತೆ ಬರುವವರೆಂದರೆ ಪೋಸ್ಟ್‌ಮ್ಯಾನ್‌, ಕರೆಂಟು ಬಿಲ್ಲು ಓದುವವನು, ಬಟ್ಟೆ, ಸಾಬೂನು, ಕಂಬಳಿ ಮಾರುವವರು, ಜೋಳಿಗೆ, ಮುಂಡಾಸುಗಳು, ವಂತಿಗೆ ಬೇಡುತ್ತ ಬರುವವರು ಮಾತ್ರ. 

Advertisement

ನಾನು ಮತ್ತು ತಮ್ಮ ಚಿಕ್ಕವರಿದ್ದಾಗ ಹೊಸ ಚಪ್ಪಲಿ ಮೆಟ್ಟಿಲ ಬುಡದಲ್ಲಿ ಕಂಡರೆ ಇಂದಾರೋ ಬಂದಿದ್ದಾರೆ ಎಂದು ಅಂದಾಜು ಮಾಡಿ ಮೆಲ್ಲನೆ ಒಳಗೆ ಕಾಲಿಡುತ್ತಿದ್ದೆವು. ನಮ್ಮ ಚಿಕ್ಕ ಮಾವ ಒಮ್ಮೆ ನಮ್ಮನ್ನು ಬೇಸ್ತು ಬೀಳಿಸಲು ಅಡಗಿ ಕುಳಿತಿದ್ದ. ಆದರೆ ನಾವು ಚಪ್ಪಲಿ ನೋಡಿ ಅವನನ್ನು ಪತ್ತೆಹಚ್ಚಿದ್ದೆವು. ಶಾಲೆಗೆ ರಜೆ ಸಿಕ್ಕಾಗ ಬರುತ್ತಿದ್ದ ಅತ್ತೆ-ಮಾವಂದಿರ ಮಕ್ಕಳೂ ಈಗ ಬಲು ಅಪರೂಪ. ಸಮಯವಿಲ್ಲವೆಂಬುದೆಲ್ಲರ ಸಬೂಬು. ಇಂದೆಲ್ಲಾದರೂ ಗೇಟಿನ ಹೊರಗಡೆ ಬೈಕ್‌, ಕಾರಿನ ಸದ್ದಾದರೆ, ನಾಯಿ ಬೊಗಳಿದರೆ ನಮ್ಮ ಕೆಲಸಗಳೆಲ್ಲ ಎರಡು ನಿಮಿಷ ಸ್ತಬ್ಧ. ನನಗಂತೂ ಈ ತರಹದ ಕಾಯುವಿಕೆಯೊಂದು ಈಚೆಗೆ ಮನಸ್ಸಿನ ವಿಚಿತ್ರ ತಳಮಳವೇ ಆಗಿಬಿಟ್ಟಿದೆ.

ಹಿಂದಿಯಲ್ಲೊಂದು ಸಿನೆಮಾ ಇದೆ ಅತಿಥಿ ತುಮ್‌ ಕಬ್‌ ಜಾವೋಗೆ ಎಂದು. ದೂರದೂರಿನ ಹಿರಿಯರೊಬ್ಬರು ಅಚಾನಕ್ಕಾಗಿ ಮನೆಗೆ ಬಂದಾಗ ಮನೆಯಲ್ಲಿದ್ದವರು ಪಡುವ ಪೇಚಿನ ಪ್ರಸಂಗಗಳನ್ನೊಳಗೊಂಡ ಸಿನೆಮಾ ಅದು. ಹೀಗೆಯೇ ಒಂದು ದಿನ ನಮ್ಮ ಮನೆಗಾಗಮಿಸಿದ ಹಿರಿಯರನ್ನು ನೋಡಿದಾಗ ಸಿನೆಮಾಕ್ಕೂ ನನ್ನನುಭವಕ್ಕೂ ಹಲವಾರು ಸಾಮ್ಯಗಳಿರುವುದು ಹೌದು ಎಂದೆನಿಸಿತು.

ಒಂದು ಮಧ್ಯಾಹ್ನದ ಬಿಸಿಲಲ್ಲಿ ರಿûಾವೊಂದು “ಟುರ್ರ’ ಎಂದು ಸದ್ದು ಮಾಡುತ್ತ ಅಂಗಳದಲ್ಲಿ ಬಂದು ನಿಂತಿತು. ಹಣ್ಣು ಹಣ್ಣು ಮುದುಕರೊಬ್ಬರು ಕೋಲೊಂದನ್ನೂರುತ್ತಾ ಬಲು ನಿಧಾನಗತಿಯಲ್ಲಿ ಮನೆ ಕಡೆಗೆ ಹೆಜ್ಜೆ ಹಾಕತೊಡಗಿದರು. ಅಮ್ಮ ಇಷ್ಟರವರೆಗೆ ನೋಡಿಲ್ಲವಲ್ಲ ಎಂದು ತಲೆ ಕೆರೆದುಕೊಂಡಳು. ಆ ದಿನ ತಂದೆ ಮನೆಯಲ್ಲಿರಲಿಲ್ಲ. ಅಪರೂಪಕ್ಕೆಂಬಂತೆ ಬೇರೆ ಮನೆಗೆ ಹೋಗುವವರು ತಪ್ಪಿ$ನಮ್ಮ ಮನೆಗೆ ಬಂದಿಳಿದವರಿದ್ದರು. ಹಾಗಾಗಿ ಅಮ್ಮ ಅವರ ಬಳಿ “”ಯಾರು ನೀವು, ಇಲ್ಲಿಗೇ ಬಂದಿರೇ?” ಎಂದಳು. ಅಲ್ಲಿಯವರೆಗೂ ಆತ್ಮೀಯತೆಯಿಂದೆಂಬಂತೆ  ಹಲ್ಕಿರಿಯುತ್ತಿದ್ದವರು ಅಮ್ಮನ ಈ ಪ್ರಶ್ನೆಯನ್ನು ಕೇಳಿ ಕೆಂಡಾಮಂಡಲವಾಗಿ ಬೈಗುಳದ ಮಳೆ ಸುರಿಸತೊಡಗಿದರು. ಬೈಯುತ್ತಿರುವುದು ಅಮ್ಮನಿಗೇ ಎಂದು ಅರ್ಥೈಸಿಕೊಳ್ಳಲು ನಮಗೆ ಕೆಲಕಾಲ ಹಿಡಿಯಿತು. ಬೊಗಳುವ ತನ್ನ ಕೆಲಸ ಇನ್ನೇನು ಮುಗಿಸುವುದರಲ್ಲಿದ್ದ ನಮ್ಮ ನಾಯಿ ಇವರ ಬೈಗುಳ ಕೇಳಿ ಇನ್ನಷ್ಟು ಜೋರಿನಲ್ಲಿ ಬೊಗಳತೊಡಗಿತು. ಇದರಿಂದ  ಅಜ್ಜನ ಸಿಟ್ಟು ಮತ್ತಷ್ಟು ಏರಿ ನಾಯಿಗೂ ಹಿಗ್ಗಾಮುಗ್ಗಾ ಬೈಯತೊಡಗಿದರು. ಈ ಗದ್ದಲದಲ್ಲಿ ಏನೂ ಕೇಳಿಸದಾಯಿತು. ನಾನು, “”ನೀವು ಬೈಯುವುದನ್ನು ನಿಲ್ಲಿಸಿ, ಒಳಗೆ ಬನ್ನಿ ಕುಳಿತುಕೊಳ್ಳಿ” ಎಂದೆ. ಅವರ ಸಿಟ್ಟು ಸ್ವಲ್ಪ$ತಣ್ಣಗಾದಾಗ ಮತ್ತೆ ಮುಂದುವರೆಸಿದರು “”ನಾನು ಸಾಮಾನ್ಯ ವ್ಯಕ್ತಿಯಲ್ಲ, ಕೇರಳದಲ್ಲಿ ನನ್ನಿಂದಾಗಿ ಅಣುಸ್ಥಾವರವಾಗದೇ ಉಳಿಯಿತು, ಕಾರಂತರೊಡನೆ ಉಗ್ರ ಹೋರಾಟ ನಡೆಸಿದವನು, ನಿಮ್ಮಜ್ಜನೂ ನಾನೂ ಜೊತೆಗೇ ತಿರುಗಾಡಿದವರು, ನಾನು ಕಳ್ಳನಲ್ಲ, ಬಂದವರನ್ನು ಉಪಚರಿಸದೆ ನೀವು ಹೀಗೆ ಕೇಳಿದ್ದು ನನ್ನ ಎದೆಗೆ ತಾಕಿತು” ಎಂದು ಎದೆ ಮುಟ್ಟಿ ತೋರಿಸಿದರು. ನಮಗೆ ಇದನ್ನೆಲ್ಲ ನಂಬುವುದೋ ಬಿಡುವುದೋ ತಿಳಿಯಲಿಲ್ಲ.  

ನಮಗೆ ಇದೊಂದು ತಲೆನೋವು ತರಿಸುವ ವಿಷಯವಾಗತೊಡಗಿತು. ಅಜ್ಜನ ಬಳಿಯಿದ್ದುದು ಒಂದು ಹಳೇ ಧಿ-ಎರಡನೆಯ ಪುಟದಿಂದ
ಬಟ್ಟೆಯ ಚೀಲ ಮತ್ತೂಂದು ಜೊತೆ ಹರಕಲು ಚಪ್ಪಲಿ ಮಾತ್ರ. ತನಗೊಂದು ಮನೆ ಇದೆ, ಮಕ್ಕಳೂ ಇದ್ದಾರೆ ಎನ್ನುತ್ತಾರೆ. ಅವರ ಬಗ್ಗೆ ಕೇಳಿದರೆ ಸಿಡುಕುತ್ತಿದ್ದರು. ನಡೆದಾಡಲು ಬಹಳ ಕಷ್ಟಪಡುತ್ತಿದ್ದರು ಮತ್ತು ನಡೆವಾಗ ಆಧಾರಕ್ಕಾಗಿ ಗೋಡೆಗೆ ಕೈ ತಾಗಿಸಿಕೊಂಡೇ ಹೋಗುತ್ತಿದ್ದರು. ಇತ್ತೀಚೆಗಷ್ಟೇ ಬಿಳಿ ಪೈಂಟ್‌ ಹೊಡೆಸಿಕೊಂಡ ಗೋಡೆಯಲ್ಲಿ ಚಿತ್ತಾರ ಬಿಡಿಸುತ್ತ ಮನೆಯೆಲ್ಲ ಓಡಾಡಿದರು. ಇದನ್ನು ನೋಡಿದ ಅಮ್ಮ ಹತಾಶಳಾಗಿ ತಲೆಮೇಲೆ ಕೈ ಇಟ್ಟುಕೊಂಡಳು. ಹತ್ತು ನಿಮಿಷಕ್ಕೊಮ್ಮೆ ಅಮ್ಮನನ್ನೋ ಇಲ್ಲಾ ನಮ್ಮನ್ನೋ ಕರೆದು, “”ಎರಡು ತಿಂಗಳು ಹಳೆಯ ಇಂತಹ ದಿನದ ಪೇಪರ್‌ ತಾ, ಇಂತಹ ಪುಸ್ತಕ ಹುಡುಕಿ ತಾ, ಎಳನೀರು ತರಿಸಿ, ಮಜ್ಜಿಗೆ ಬರಲಿ” ಎಂದು ಒಂದೊಂದಾಗಿ ಆರ್ಡರ್‌ ಮಾಡುತ್ತಿದ್ದರು. ಇಷ್ಟರಲ್ಲಿ ಇವರು ಹೊರಡುವುದು ಯಾವಾಗಪ್ಪಾ? ಎಂಬ ಪ್ರಶ್ನೆ ನಮ್ಮನ್ನು ಬಲುವಾಗಿ ಕಾಡಲು ಶುರುವಾಗಿತ್ತು.

Advertisement

ತಂದೆ ಬಂದಾಗ ಅವರೊಡನೆ ಬಲು ಸೌಜನ್ಯದಿಂದ ಮಾತನಾಡಿಸಿದರು. ತಂದೆ ಐದು ನಿಮಿಷ ಯೋಚಿಸಿ ಸುಮಾರು ಇಪ್ಪತ್ತು ವರುಷಗಳ ಕೆಳಗೆ ಬಂದಿದ್ದರು ಎಂದರು. ಅವರಿಗೆ ಪುಸ್ತಕ, ಪೇಪರ್‌ ಕೊಟ್ಟರೆ ಮರಳಿ ಸಿಗದು ಎಂದು ನಮಗೆ ಎಚ್ಚರಿಕೆ ಕೊಟ್ಟರು. ಅಮ್ಮ ಕಷ್ಟಪಟ್ಟು ಅದು ಇದು ಕೇಳಿ (ಮತ್ತಷ್ಟು ಬೈಗುಳಗಳನ್ನು ಕೇಳಿಸಿಕೊಂಡು) ಅವರು ನಾಳೆ ಬೆಳಗ್ಗೆಯೇ ರಾಮೇಶ್ವರಕ್ಕೆ ಹದಿಮೂರನೆಯ ಬಾರಿ (ಹದಿಮೂರು ಎಂಬುದನ್ನು ಮತ್ತೆ ಮತ್ತೆ ಹೇಳಿದರು) ಹೊರಡುವವರು ಎಂದು ಹೇಳಿಸುವಲ್ಲಿ ಯಶಸ್ವಿಯಾದಳು. ನಾವೆಲ್ಲಾ ಸಮಾಧಾನದ ಉಸಿರು ಬಿಟ್ಟೆವು. 

ನನ್ನ ಗೆಳೆಯನ ತಂದೆಯ ಹೊಟೇಲೊಂದು ನಮ್ಮೂರಲ್ಲಿದೆ. ನನ್ನ ಗೆಳೆಯ ಸಂಜೆ ಸಿಕ್ಕವ “”ನಿಮ್ಮನೆಗೆ ಬಂದಿದ್ದ ಅಜ್ಜ ಮೊದಲು ನಮ್ಮ ಹೊಟೇಲಿಗೆ ಬಂದಿದ್ದರು” ಎಂದ. ಬೆಳಗ್ಗೆಯೇ ಬಸ್ಸಲ್ಲಿ ಬಂದಿಳಿದರಂತೆ. ಬಸ್ಸಿಳಿಯುತ್ತಿದ್ದಾಗಲೇ ಡ್ರೆ„ವರ್‌ನಿಗೆ ಐದು ನಿಮಿಷ ಬೈದರಂತೆ. ಹೊಟೇಲಿಗೆ ಬಂದು ಮಧ್ಯಾಹ್ನದವರೆಗೆ ಏರುದನಿಯಲ್ಲಿ ಹರಟುತ್ತಿದ್ದು ಬಳಿಕ ಊಟ ಮಾಡಿದರಂತೆ. ಮಾವಿನಹಣ್ಣು ಬೇಕೆಂದೂ ಅದನ್ನು ಸಿಪ್ಪೆ$ಸುಲಿದು ಕೊಡಬೇಕೆಂದರಂತೆ. ನಂತರ ಅಲ್ಲೇ ಅಂಗಳದಲ್ಲೇ ಉಚ್ಚೆ ಹೊಯ್ದು ನಮ್ಮ ಮನೆಗೆ ಹೊರಟರಂತೆ. ಇದಾದ ಮೇಲೆ ಊರವರೆಲ್ಲ  “”ಆ ಅಜ್ಜ ಇನ್ನೂ ನಿಮ್ಮಲ್ಲೇ ಇದ್ದಾರೆಯೇ?” ಎಂದು ಕೇಳತೊಡಗಿದರು.

ಮರುದಿನ ಮೊದಲನೇ ಬಸ್ಸಿಗೆ ಹೊರಟು ತಯಾರಾದರು. ಬೆಳ್ಳಂಬೆಳಗ್ಗೆ ಸಿಗದು ಎಂದು ಮುಂಚಿನ ದಿನವೇ ನಾವು ರಿûಾ ಹೇಳಿದ್ದೆವು. ತಂದೆಯ ಬಳಿ ರಾಮೇಶ್ವರಕ್ಕೆ ಹೋಗಲು ಹಣ ಕೇಳಿದರು. ತಂದೆ “”ನೀವು ಈ ಇಳಿವಯಸ್ಸಿನಲ್ಲಿ ನಡೆದಾಡಲು ಕಷ್ಟಪಡುತ್ತ  ತಿರುಗಾಡುವುದನ್ನು ಬಿಟ್ಟು ಆರಾಮವಾಗಿ ಮನೆಯಲ್ಲಿರಬೇಕು” ಎಂದರು. ಅದಕ್ಕವರು ಅಸಮಾಧಾನ ವ್ಯಕ್ತಪಡಿಸುತ್ತಾ “”ಹೋಗಬೇಕು, ಹೋಗುತ್ತೇನೆ, ರಾಮೇಶ್ವರದಿಂದ ಲಂಕೆ ಕಾಣುತ್ತದೆ” ಎಂದು ಗೊಣಗಿದರು. ಬಲು ಕಷ್ಟಪಟ್ಟು ಚಪ್ಪಲಿ ಧರಿಸಿ, ರಿûಾ ಹತ್ತಿ ನಮ್ಮತ್ತ ಕೈ ಬೀಸುತ್ತಾ ಹೊರಟುಹೋದರು. “”ಇವರು ಇನ್ನೊಮ್ಮೆ ಬರದಿರಲಿ” ಎಂದು ಅಮ್ಮ ಪ್ರಾರ್ಥಿಸಿದಳು.

ವಿಚಿತ್ರ ಅಥವಾ ವಿಶೇಷ ಎನಿಸುವಂತಹ ವ್ಯಕ್ತಿಗಳ ಅಥವಾ ಘಟನೆಗಳ ನೆನಪುಗಳು ತುಂಬಾ ಸಮಯ ನಮ್ಮ ಮನದಲ್ಲಿ ಉಳಿದುಬಿಡುತ್ತವೆ. ಹಳೇ ಸಿನೆಮಾದ ರಕ್ಕಸ ಪಾತ್ರಗಳು ಎದುರಾಳಿಯನ್ನು ನೋಡಿ “ಹØಹØಹØ ‘ ಎಂದು ನಗುತ್ತಿದ್ದಂತೆ ಇದ್ದ ಅವರ ನಗು ನೆನಪಾಗಿ ಹೆದರಿಕೆ ಮತ್ತು ನಗು ಜೊತೆಗೇ ಬರುತ್ತದೆ. ಈ ವಯಸ್ಸಿನಲ್ಲೂ ಯಾರಿಗೂ ಕ್ಯಾರೇ ಅನ್ನದೆ ಬದುಕುವ ರೀತಿ ನೋಡಿ ಅಚ್ಚರಿಯಾಗುತ್ತದೆ. ಒಂದೇ ಲಯದಲ್ಲಿ ಸಾಗುತ್ತಲಿರುವಂತೆ ಕಾಣುವ ನಮ್ಮ ಕಣ್ಣ ಮುಂದಿರುವ ಜಗತ್ತು ಕೆಲವೊಮ್ಮೆ ಅನಿರೀಕ್ಷಿತ ಅತಿಥಿಗಳನ್ನೂ ಭೇಟಿ ಮಾಡಿಸುತ್ತಲಿರುತ್ತದೆ. ಇವೆಲ್ಲಾ ನಮ್ಮ ಬದುಕಿಗೆ ಅನಿವಾರ್ಯವೇನೋ ಎಂದೂ ಒಮ್ಮೊಮ್ಮೆ ನನಗನಿಸುತ್ತದೆ. 

ಶ್ರೀರಂಜನ್‌ ಟಿ.

Advertisement

Udayavani is now on Telegram. Click here to join our channel and stay updated with the latest news.

Next