Advertisement

ಭಕ್ತರ ಪಾಲಿನ ಭಾಗ್ಯದೇವತೆ ಗುಡ್ಡಾಪೂರ ದಾನಮ್ಮ

04:00 AM Mar 18, 2017 | |

ಶಿವಯೋಗ ಸಾಧನೆ, ದಾಸೋಹ,  ಕಾಯಕ ನಿಷ್ಠೆ, ಸತ್ಯ ಧರ್ಮ- ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12ನೇ ಶತಮಾನದಲ್ಲಿ ಧರ್ಮಜಾಗೃತಿಗಾಗಿ ದೇಶಸಂಚಾರ ಮಾಡುತ್ತ ಲೋಕ ಕಲ್ಯಾಣಕ್ಕಾಗಿ ಪಾರಮಾರ್ಥದ ಹಾದಿ ಹಿಡಿದು ಗುಡ್ಡಾಪೂರದಲ್ಲಿ ನೆಲೆಸಿದ ದಾನಮ್ಮ ಭಕ್ತರ ಪಾಲಿನ ವರದಾಯಿನಿ.
ಲಿಂಗಮ್ಮ ಎಂದು ಕರೆಯಲ್ಪಡುತ್ತಿದ್ದ ಮಹಾಮಹಿಮೆ ದಾನಮ್ಮದೇವಿ ಹುಟ್ಟಿದ್ದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ ಉಮರಾಣಿ ಎಂಬ ಗ್ರಾಮದಲ್ಲಿ. ಉಮರಾಣಿಯ ಅಕ್ಕಸಾಲಿಗ ಮನೆತನದ ಅನಂತರಾಯ ಮತ್ತು ಶಿರಸಮ್ಮ ದಂಪತಿಗೆ ಬಹಳ ಕಾಲ ಮಕ್ಕಳಾಗಿರಲಿಲ್ಲ. ಈ ಕುರಿತಾಗಿ ದಂಪತಿ ವೀರಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಶೃದ್ಧಾಭಕ್ತಿಗಳಿಂದ ಬೇಡಿಕೊಂಡರು. ಅವರ ಕನಸಿನಲ್ಲಿ ಬಂದ ಮಲ್ಲಯ್ಯ ನಿಮಗೆ ಸಾಕ್ಷಾತ್  ಪಾರ್ವತಿಯಂಥ ಮಗು ಜನಿಸುತ್ತದೆ. ಅವಳು ಸಾಮಾನ್ಯ ಮಕ್ಕಳಂತೆ ಅಳುವುದಿಲ್ಲ. 

Advertisement

ಲಿಂಗಧಾರಣೆಯಾಗುವವರೆಗೂ ಹಾಲನ್ನಾಗಲಿ, ನೀರನ್ನಾಗಲಿ ಸೇವಿಸುವುದಿಲ್ಲ ಎಂದು ಹೇಳಿದಂತೆ ಕನಸು ಬಿತ್ತು.  ಮುಂದೆ ಕ್ರಿ.ಶ.1146ರಲ್ಲಿ ತಮಗೆ ಜನಿಸಿದ ಹೆಣ್ಣುಮಗು ವೀರಮಲ್ಲಯ್ಯನ ಮಾತಿನಂತೆ ನಡೆಯತೊಡಗಿತು. ಆಗ ಆ ಮಗುವಿಗೆ ಲಿಂಗಧಾರಣೆ ಮಾಡಿಸಿ. ಸಂಗಮೇಶ ಗುರುಗಳಿಂದ ಲಿಂಗಮ್ಮ ಎಂದು ಹೆಸರು ಪಡೆದ ಈಕೆ ಉಳಿದ ಬಾಲಕಿಯರಂತೆ ಆಟವಾಡದೇ ದೇವರ ಪ್ರಾರ್ಥನೆ ಮತ್ತು ಪೂಜೆಯಲ್ಲಿ ಕಾಲಕಳೆಯುತ್ತಾ, ಸಮಾಜ ಸೇವೆಗೆ ತೊಡಗಿಕೊಂಡಳು. 
ಅನುಭವ ಮಂಟಪಕ್ಕೆ ಹೋಗಿ ಬಸವಣ್ಣನವರನ್ನು ಕಾಣಬೇಕೆಂದು ಉಮರಾಣಿಯಿಂದ ಹೊರಟು ಬಂದಿದ್ದ  ಈಕೆಯನ್ನು ನೋಡಲು, ಸ್ವತಃ ಬಸವಣ್ಣನವರೇ ಇವಳಿದ್ದ ಸ್ಥಳಕ್ಕೆ ಬಂದು ಸೇವಾ ಮನೋಭಾವನೆಯನ್ನು ಕಂಡು ದಾನಮ್ಮ ಎಂದು ಕರೆದರು.   ದಾನಮ್ಮ ಕಲ್ಯಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯೂ ಕೂಡ ಶರಣರ ಸೇವೆಗೈಯುತ್ತ ಅನುಭವ ಮಂಟಪದಲ್ಲಿ ತನಗಿದ್ದ ಸಂದೇಹಗಳನ್ನು ಶರಣರಲ್ಲಿ ಪ್ರಶ್ನಿಸುತ್ತ ಸೂಕ್ತ ಉತ್ತರಗಳನ್ನು ಪಡೆದುಕೊಂಡಳಂತೆ. 

ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವೇಶ್ವರರು ಕೂಡಲಸಂಗಮದಲ್ಲಿ ಐಕ್ಯರಾದ ನಂತರದ ದಿನಗಳಲ್ಲಿ ದಾನಮ್ಮ ಶರಣ ಕುಲಕ್ಕೆ ಬಂದೊದಗಿದ ಆಪತ್ತನ್ನು ಕಂಡು ದಿಗ್ರಾ$½ಂತಳಾಗುತ್ತಾಳೆ. ತಾನು ಕೂಡ ಮನೆ-ಮಠ ತೊರೆದು ವಚನ ಸಾಹಿತ್ಯದ ಕಂಪನ್ನು ಹರಡಲು ಹಾಗೂ ಶಿವಭಕ್ತಿ ಪ್ರಸಾರ ಕಾರ್ಯದಲ್ಲಿ ತೊಡಗಲು ಟೊಂಕಕಟ್ಟಿ ನಿಂತಳು. ಈ ಎಲ್ಲ ಕಾರ್ಯಗಳಲ್ಲಿಯೂ ಪತಿ ಸಂಗಮನಾಥರೂ ಕೂಡ ದಾನಮ್ಮಳಿಗೆ ಬೆನ್ನೆಲುಬಾಗಿ ನಿಂತರು. ಹೀಗೆ ದೇಶ ಸಂಚಾರ ಪತಿಯೊಡನೆ ಕೈಗೊಂಡ ದಾನಮ್ಮ ತಾನು ಹೋದ ಕಡೆಯಲ್ಲೆಲ್ಲ ಶರಣ ಸಂದೇಶ ಸಾರುತ್ತ ದಾಸೋಹ ನಡೆಸುತ್ತ ಗುಡ್ಡಾಪುರಕ್ಕೆ ಬಂದಳು.

  ಗುಡ್ಡಾಪುರಕ್ಕೆ ಬಂದ ದಾನಮ್ಮ ಗುಡ್ಡಾಪುರದ ಶ್ರೀಸೋಮೇಶ್ವರನಾಥ ದೇವಸ್ಥಾನದಲ್ಲಿ ತನ್ನ ದಿನ ನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತ ಅಲ್ಲಿ ಬಂದ ಭಕ್ತರಿಗೆ ದಾನ ಮಾಡುತ್ತ ಸಹಾಯಹಸ್ತ ನೀಡುತ್ತ ಜನಸೇವೆಯಲ್ಲಿ ತೊಡಗಿದಳು. ಜೀವಿತ ಕಾಲದಲ್ಲಿ ಸಾವಿರಾರು ಪವಾಡಗಳನ್ನು ಮಾಡಿ ಭಕ್ತರ ಪಾಲಿನ ಕಾಮಧೇನುವಾಗಿ ದಾಸೋಹದ ಪ್ರತಿರೂಪವಾಗಿ ಜನಸೇವೆ ಗೈದಳು. ಹೀಗೆ ದಿನಗಳು ಸಾಗುತ್ತಿರಲು ಒಮ್ಮೆ ತನ್ನ ಶಿವಪೂಜೆ ಮುಗಿದ ನಂತರ ಯಾವುದೋ ಒಂದು ಅಂತರ್ಶಕ್ತಿಯ ಕರೆಯನ್ನು ಆಲಿಸಿ ತಾನು ಇಲ್ಲಿಗೆ ಬಂದ ಕಾರ್ಯ ಮುಗಿಯಿತು ಎಂದು ಹೇಳಿ ಸಮಾಧಿ ಸಿದ್ಧಪಡಿಸುವಂತೆ ಸೂಚಿಸಿದಳು. ಗುಡ್ಡಾಪುರದಲ್ಲಿ ಲಿಂಗೈಕ್ಯಳಾದ ದಾನಮ್ಮಳ ಸಮಾಧಿಯನ್ನು ಯಾದವ ವಂಶದ ಮಹಾದೇವರಾಜ ಅರಸು ಸಾಯಿನಾಥ ಮಾಂಡಲೀಕ ದಾನಮ್ಮ ದೇವಿಯ ಸಮಾಧಿ ಮಂದಿರಕ್ಕೆ ದೇವಸ್ಥಾನ ನಿರ್ಮಿಸಿದರು. ಮುಂದೆ ಟ್ರಸ್ಟ ರಚನೆಯಾಗುವ ಮೂಲಕ ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತ ಜನರ ಸಹಕಾರದಿಂದ ವಸತಿಗೃಹಗಳ ನಿರ್ಮಾಣಗೊಂಡು ಈಗ ಇದೊಂದು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿ ಪರಿಣಮಿಸಿದೆ.

       ಭಕ್ತರ ಪಾಲಿನ ವರದಾನಿ ಎಂದೇ ಕರೆಯುವ ದಾನಮ್ಮಳಿಗೆ ಭಕ್ತರು ಮಕ್ಕಳಾಗದವರಿಗೆ ಮಕ್ಕಳಭಾಗ್ಯ,ಮದುವೆಯಾಗದ ಕನ್ಯೆಯರಿಗೆ ಕಂಕಣ ಭಾಗ್ಯ,.ಜೀವನದಲ್ಲಿ ಜುಗುಪ್ಸೆ ಹೊಂದಿದವರಿಗೆ ಮಾನಸಿಕ ಶಾಂತಿ ದೊರೆಯುವುದೆಂಬ ಪ್ರತೀತಿಯಿಂದ ಎಲ್ಲ ವಿಧದ ಭಕ್ತ ಜನತೆ ಇಲ್ಲಿಗೆ ಬರುವ ಮೂಲಕ ದೇವಿಯಲ್ಲಿ ಅರ್ಚನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರುವರು. ಛಟ್ಟಿ ಅಮವಾಸೆಯಂದು ಸಂಜೆ ಜರಗುವ ರಥೋತ್ಸವವು ಹಾಗೂ ಜಾತ್ರೆಗೆ ಮುಂಚಿತ ಒಂದು ವಾರಗಳ ಕಾಲ ವಿವಿಧ ರೀತಿಯ ಪೂಜೆಯ ಕಾರ್ಯಗಳು ಜರುಗುತ್ತವೆ.

Advertisement

ವೈ.ಬಿ.ಕಡಕೋಳ

Advertisement

Udayavani is now on Telegram. Click here to join our channel and stay updated with the latest news.

Next