Advertisement

ಗುಳೆ ತಡೆಗೆ ಖಾತ್ರಿ ಯೋಜನೆ ವರದಾನ

01:53 PM May 18, 2019 | Team Udayavani |

ಹಾವೇರಿ: ಕೂಲಿ ಕಾರ್ಮಿಕರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಕೂಲಿಕಾರ್ಮಿಕರು ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಾಪಂ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಜಿ.ಎಸ್‌. ಬೆನ್ನೂರ ಹೇಳಿದರು.

Advertisement

ಕರಜಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ ದಿನಾಚರಣೆಯಲ್ಲಿ ಮಾತನಾಡಿದರು.

ಸಂಕಷ್ಟಕ್ಕೆ ಉದ್ಯೋಗ ಖಾತ್ರಿ ಪರಿಹಾರ: ತಾಲೂಕು ಪದೇ ಪದೇ ಬರ ಪರಿಸ್ಥಿತಿ ಎದುರಿಸುತ್ತಿದ್ದು ಜನ-ಜಾನುವಾರು ವರ್ಷದಿಂದ ವರ್ಷಕ್ಕೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಲದ ಮೂಲಗಳು ಕಡಿಯಾಗುತ್ತಿದ್ದು, ಕೆರೆ-ಕಟ್ಟೆಗಳಿಗೆ ಹರಿದು ಬರುವ ನೀರಿನ ಮಾರ್ಗಗಳು ಕಾಲುವೆಗಳ ಹೂಳು ಹಾಗೂ ಗಿಡ ಗಂಟೆಗಳಿಂದ ಮುಚ್ಚಿ ಹೋಗಿವೆ. ಇದರಿಂದ ಕೆರೆ-ಕಟ್ಟೆಗಳಲ್ಲಿ ನೀರು ಕಾಣದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶದ ಕೂಲಿಕಾರರು ಉದ್ಯೋಗ ಅರಸಿ ನಗರ, ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಲಮೂಲ ಅಭಿವೃದ್ಧಿ: ಪಿಡಿಒ ಲೋಕೇಶ ಪಟ್ಟಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನರು ವಲಸೆ ತಪ್ಪಿಸಲು ತಾಲೂಕಿನಲ್ಲಿ ನೀರಿನ ಮೂಲ ಉಳಿಸಿಕೊಳ್ಳುವ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಯೋಗ ಖಾತ್ರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನೈಸರ್ಗಿಕ ಜಲ ಸಂರಕ್ಷಣೆ ಕಾಮಗಾರಿ ಮಾಡುವುದರಿಂದ ಜಲಮೂಲ ಅಭಿವೃದ್ಧಿಪಡಿಸುವುದು ಒಂದೆಡೆಯಾದರೆ ಮತ್ತೂಂದೆಡೆ ಹೆಚ್ಚು ಜನರಿಗೆ ಉದ್ಯೋಗ ಖಾತ್ರಿಯಡಿ ಕೂಲಿ ಕೆಲಸ ಕೊಟ್ಟಂತಾಗಲಿದೆ ಎಂದರು.

ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯುವಂತೆ ಮಾಡಲು ತಾಪಂ ಬದ್ಧವಾಗಿದ್ದು, ಪ್ರತಿ ಗ್ರಾಪಂಗಳಲ್ಲಿ ಸಾಮೂಹಿಕವಾಗಿ ಹೆಚ್ಚು ಕೂಲಿಕಾರರು ಪಾಲ್ಗೊಳ್ಳುವಂತಹ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆ ಹೂಳೆತ್ತುವುದು, ಗೋ ಕಟ್ಟೆಗಳ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ, ಕಲ್ಯಾಣಿಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

Advertisement

ತಾಪಂ ಇಂಜಿನಿಯರ್‌ ಇಮ್ರಾನಖಾನ್‌, ಸಂಜೀವ ಮೇಗಳಮನಿ, ಪಂಚಾಯತಿ ಸಿಬ್ಬಂದಿ ಇದ್ದರು. ಇದೇ ಸಂದರ್ಭದಲ್ಲಿ ಕೂಲಿಕಾರರಗೆ ಉದ್ಯೋಗ ಚೀಟಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next