Advertisement

ಹೊಟೇಲಿಗರ ಜಿಎಸ್‌ಟಿ ತೆರಿಗೆ ಶೇ. 5ಕ್ಕೆ ಇಳಿಕೆ ಅಭಿನಂದನೀಯ

12:23 PM Nov 15, 2017 | Team Udayavani |

ಮುಂಬಯಿ: ಹೊಟೇಲಿಗರ ಸಮಸ್ಯೆಯನ್ನು ಕೇಂದ್ರ ಸರಕಾರವು ಅರಿತು ಜಿಎಸ್‌ಟಿಯನ್ನು ಶೇ. 18 ರಿಂದ ಶೇ. 5 ಕ್ಕೆ ಇಳಿಸಿರುವುದು ಸ್ವಾಗತಾರ್ಹವಾಗಿದೆ. ಅದಕ್ಕಾಗಿ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಜಿಎಸ್‌ಟಿ ಮಂಡಳಿ ಹಾಗೂ ಮುಂಬಯಿ ಸಂಸದರಿಗೆ ಆಹಾರ್‌ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಆಹಾರ್‌ನ ಅಧ್ಯಕ್ಷ ಆದರ್ಶ್‌ ಬಿ. ಶೆಟ್ಟಿ ಅವರು ನುಡಿದರು.

Advertisement

ನ. 13 ರಂದು ವಡಾಲ ಆಹಾರ್‌ನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳುಗಳಿಂದ ಹೊಟೇಲಿಗರು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಶೇ. 30 ರಷ್ಟು ವ್ಯವಹಾರವು ಕಡಿಮೆಯಾಗಿತ್ತು. ಇದೀಗ ಸರಕಾರವು ಜಿಎಸ್‌ಟಿಯನ್ನು ಕಡಿಮೆಗೊಳಿಸಿರುವುದರಿಂದ ಹೊಟೇಲಿಗರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೊಟೇಲಿಗರ ಸಮಸ್ಯೆಯನ್ನು ಸರಕಾರಕ್ಕೆ ಮತ್ತು ಜಿಎಸ್‌ಟಿ ಮಂಡಳಿಯ ಗಮನಕ್ಕೆ ತಂದಿದ್ದು, ನಿರಂತರ ಈ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ. ಇದೀಗ ನಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಇದು ಕೇವಲ ಹೊಟೇಲಿಗರ ಸಮಸ್ಯೆಯಾಗಿರಲಿಲ್ಲ. ಹೊಟೇಲಿಗರಿಗೆ ಆಹಾರ ಸೇವಿಸಲು ಬರುವ ಪ್ರತಿಯೋರ್ವ ಸಾಮಾನ್ಯ ವ್ಯಕ್ತಿಯ ಸಮಸ್ಯೆಯಾಗಿತ್ತು. ಹೊಟೇಲ್‌ ಉದ್ಯಮಕ್ಕೆ ಬಹಳ ಕಷ್ಟದ ದಿನಗಳು ಒದಗಿತ್ತು. ಆದರೆ ಸರಕಾರವು ತತ್‌ಕ್ಷಣವೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಗಿರುವುದಕ್ಕೆ ನಾನು ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ. ಜಿಎಸ್‌ಟಿ ತೆರಿಗೆ ಕಡಿಮೆಗೊಳಿಸುವಲ್ಲಿ ನಮ್ಮೊಂದಿಗೆ ಮಾಧ್ಯಮ ಪ್ರತಿನಿಧಿಗಳು ಬಹಳಷ್ಟು ಸಹಕರಿಸಿದ್ದಾರೆ. ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನು ಮುಂದೆ ರಾಜ್ಯ ಸರಕಾರದ ಶೇ. 2.5 ಹಾಗೂ ಕೇಂದ್ರ ಸರಕಾರದ ಶೇ. 2.5 ಒಟ್ಟು ಶೇ. 5 ರಷ್ಟು ಜಿಎಸ್‌ಟಿ ಮಾತ್ರ ಅನ್ವಯವಾಗುತ್ತದೆ. ಇದು ನ. 15 ರಿಂದ ಕಾರ್ಯಗತಗೊಳ್ಳಲಿದೆ. ಈ ಬಗ್ಗೆ ಎಲ್ಲಾ ಹೊಟೇಲಿಗರಿಗೆ ಮನವರಿಕೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next