Advertisement

ದೇಶದ ಪ್ರಗತಿಗೆ ಜಿಎಸ್‌ಟಿ ಪೂರಕ: ಕುಲಕರ್ಣಿ

12:24 PM Jul 10, 2017 | Team Udayavani |

ಕಲಬುರಗಿ: ಭಾರತ ಸರ್ಕಾರ ಜಾರಿಗೊಳಿಸಿದ ನೂತನ ಸರಕು ಹಾಗೂ ಸೇವಾ ತೆರಿಗೆ(ಜಿಎಸ್‌ಟಿ) ದೇಶದ ಪ್ರಗತಿಗೆ ಪೂರಕ ಹಾಗೂ
ಜನಸ್ನೇಹಿಯಾಗಿದೆ. ಒಂದೇ ದೇಶ ಒಂದೇ ತೆರಿಗೆ ನೀತಿ ಇದರಲ್ಲಿದೆ. ಇದರಿಂದ ಗ್ರಾಹಕರು ಹಾಗೂ ವ್ಯಾಪಾರಿಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ಹೇಳಿದರು. 

Advertisement

ನಗರದ ಗೋಲ್ಡ್‌ ಹಬ್‌ನಲ್ಲಿ ಜಿಎಸ್‌ಟಿ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಜಿಎಸ್‌ಟಿ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ
ಅವರು ಮಾತನಾಡಿದರು. ಜಿಎಸ್‌ಟಿ ಜಾರಿಯಿಂದ ಆರಂಭದಲ್ಲಿ ಎಲ್ಲರಲ್ಲೂ ಗೊಂದಲಗಳಿರುವುದು ಸಹಜ. ಆದರೆ ಕೆಲದಿನಗಳಲ್ಲಿ ಎಲ್ಲರ ಸಮಸ್ಯೆಗಳು, ಗೊಂದಲಗಳು ಬಗೆಹರಿಯಲಿವೆ. ತೆರಿಗೆ ವಂಚನೆ ಮಾಡುತ್ತಿದ್ದವರು ಈಗ ತಪ್ಪಿಸಿಕೊಳ್ಳುವಂತಿಲ್ಲ. ವಾರ್ಷಿಕ 20 ಲಕ್ಷ ರೂ.ಗಳಿಗೂ ಕಡಿಮೆ ವ್ಯವಹಾರ ನಡೆಸುವವರಿಗೆ ಜಿಎಸ್‌ಟಿ ನೋಂದಣಿ ಕಡ್ಡಾಯವಲ್ಲ. ಸಣ್ಣ ವ್ಯಾಪಾರಿಗಳು ಜನರಿಗೆ ಬಿಲ್‌ ನೀಡುವ ಅಗತ್ಯವಿಲ್ಲ. ಸಣ್ಣ ವ್ಯಾಪಾರಿಗಳು ತಾವು ಖರೀದಿಸುವ ಸರಕುಗಳ ಮೇಲೆ ಜಿಎಸ್‌ಟಿ ಪಾವತಿಸಬೇಕು. ಆದರೆ ಅದೇ
ಸರಕಿನ ಮೇಲೆ ತಮ್ಮ ಲಾಭ ಮತ್ತು ಜಿಎಸ್‌ಟಿ ವಿಧಿಸಿ ಮಾರುವಂತಿಲ್ಲ. ಹೀಗಾಗಿ ಗ್ರಾಹಕರು ಆತಂಕಪಡುವಂತಿಲ್ಲ ಎಂದು ಹೇಳಿದರು.

20 ಲಕ್ಷಕ್ಕೂ ಅಧಿಕ ವ್ಯವಹಾರ ಮಾಡುವವರು ಶೇ.5ರಷ್ಟು ತೆರಿಗೆ ಕಟ್ಟಬೇಕು. ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕ ತೆರಿಗೆ ಪಾವತಿಸಬೇಕಿತ್ತು. ಒಂದೇ ವಸ್ತುವಿಗೆ ಒಂದೊಂದು ಕಡೆ ಒಂದೊಂದು ದರವಿತ್ತು. ಉತ್ಪಾದಕರು, ಪೂರೈಕೆದಾರರು, ಗ್ರಾಹಕರು ವಿವಿಧ ರೀತಿಯ ತೆರಿಗೆ ಭರಿಸಬೇಕಿತ್ತು. ಅನೇಕ ಹಂತದ ತೆರಿಗೆಗೆ ತೆರೆ ಎಳೆದ ಜಿಎಸ್‌ಟಿಯಿಂದಾಗಿ ದೇಶಾದ್ಯಂತ ತೆರಿಗೆ
ಏಕರೂಪದ್ದಾಗಿರುತ್ತದೆ. ಒಂದು ವಸ್ತುವನ್ನು ದೇಶದ ಯಾವುದೇ ಭಾಗದಲ್ಲಿ ಖರೀದಿಸಿದರೂ ಅದರ ಎಂಆರ್‌ಪಿ ಒಂದೇ ಆಗಿರುತ್ತದೆ. ಹೀಗಾಗಿ ಜನರನ್ನು ವಂಚಿಸಲಾಗದು ಎಂದು ಹೇಳಿದರು.

ಜು.1ಕ್ಕೂ ಮೊದಲು ಉತ್ಪಾದನೆಯಾದ ವಸ್ತುಗಳಿಗೆ ಕನಿಷ್ಠ ಎರಡು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಿಎಸ್‌ಟಿ ಅನ್ವಯ
ದರ ಪರಿಷ್ಕರಣೆ ಮಾಡಿ ಹೊಸ ಎಂಆರ್‌ಪಿ ನಿಗದಿಪಡಿಸಲು ಅವಕಾಶವಿದೆ. ಜಿಎಸ್‌ಟಿ ಜಾರಿಯಾಗಿರುವ ಪ್ರಯುಕ್ತ ಎಲ್ಲ ವಸ್ತುಗಳ
ಮೇಲೆ ಎಂಆರ್‌ಪಿ ಕಣ್ಣಿಗೆ ಕಾಣುವಂತೆ ಢಾಳಾಗಿ ಮುದ್ರಿಸುವುದು ಅವಶ್ಯವಿದೆ. ಜಿಎಸ್‌ಟಿ ತೆರಿಗೆ ಅನುಷ್ಠಾನಕ್ಕೆ ಬೇಕಾದ ಸಕಲ ಸಿದ್ದತೆಗಳನ್ನು ಇಲಾಖೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಜಿಎಸ್‌ಟಿ ನೋಂದಣಿಗೆ ಮಹತ್ವ ನೀಡಲಾಗಿದೆ ಎಂದು
ಹೇಳಿದರು. 

ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮಾತನಾಡಿದರು. ಲೆಕ್ಕ ಪರಿಶೋಧಕ ಆರ್‌.ಪಿ. ಬಿಜಾಸ್ಪೂರ,
ರೋಟರಿ ಕ್ಲಬ್‌ ಗೌರ್ನರ್‌ ಮಣಿಲಾಲ ಶಹಾ, ಸಂಯೋಜಕ ರಾಘವೇಂದ್ರ ಮೈಲಾಪುರ, ಅಮರನಾಥ ಪಾಟೀಲ, ಸುನೀಲ ಜುಗ್ರಾಳ,
ಲೋಧಾ, ಮಲ್ಲಿಕಾರ್ಜುನ ಮಹಾಂತಗೋಳ, ಪ್ರಶಾಂತ ಬಿಜಾಸ್ಪೂರ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next