Advertisement

ಜಿಎಸ್‌ಟಿ: ಬೆಲೆ ಇಳಿಸದ 194 ವರ್ತಕರ ವಿರುದ್ಧ ಪ್ರಕರಣ

11:15 AM Dec 08, 2017 | Team Udayavani |

ಬೆಂಗಳೂರು: ಜನ ಸಾಮಾನ್ಯರು ಬಳಸುವ ಆಯ್ದ ವಸ್ತುಗಳಿಗೆ ಜಿಎಸ್‌ಟಿಯಡಿ ವಿಧಿಸಿದ್ದ ತೆರಿಗೆ ಪ್ರಮಾಣ ಇತ್ತೀಚೆಗೆ ಇಳಿಕೆಯಾದರೂ ಅದರ ಲಾಭ ವನ್ನು ಗ್ರಾಹಕರಿಗೆ ವರ್ಗಾಯಿಸದೆ ದುಬಾರಿ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ
ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಬಿಸಿ ಮುಟ್ಟಿಸಿದೆ.

Advertisement

ನವೆಂಬರ್‌ನಲ್ಲಿ 4 ದಿನ ವಿಶೇಷ ಅಭಿಯಾನದಡಿ ರಾಜ್ಯಾದ್ಯಂತ ದಿಢೀರ್‌ ತಪಾಸಣೆ ನಡೆಸಿದ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯಾದ್ಯಂತ ದಾಖಲಾದ 194 ಪ್ರಕರಣಗಳ ಪೈಕಿ 102 ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿವೆ. ವರ್ತಕರು ಮಾತ್ರವಲ್ಲದೆ ಉತ್ಪಾದಕರು, ವಿತರಕರ ಪಾತ್ರವೂ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಲು ಇಲಾಖೆ ಸಿದ್ಧತೆ ನಡೆಸಿದೆ.

ದೇಶಾದ್ಯಂತ ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಿದ್ದು, ಸರಕು, ಸೇವೆಗಳಿಗೆ ಕನಿಷ್ಠ ಶೇ.5 ರಿಂದ ಗರಿಷ್ಠ ಶೇ.28ರವರೆಗೆ ಒಟ್ಟು ನಾಲ್ಕು ಹಂತದ ತೆರಿಗೆ ವಿಧಿಸಿತ್ತು. ಆದರೆ ಆಯ್ದ ಸರಕುಗಳ ತೆರಿಗೆ ದುಬಾರಿಯಾಗಿದ್ದು, ಇಳಿಕೆ ಮಾಡುವಂತೆ ಸಾರ್ವಜನಿಕರು ಸೇರಿದಂತೆ ಉತ್ಪಾದನಾ, ವಿತರಣಾ ವಲಯದಿಂದ ನಿರಂತರವಾಗಿ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ 177 ವಸ್ತುಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಸಿತ್ತು. ಇದರಲ್ಲಿ “ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು’ಗಳೇ (ಎಫ್ಎಂಸಿಜಿ) ಹೆಚ್ಚಾಗಿದ್ದವು. ಬಹಳಷ್ಟು ವಸ್ತುಗಳ ತೆರಿಗೆ ಪ್ರಮಾಣವನ್ನು ಶೇ.28ರಿಂದ ಶೇ.18ಕ್ಕೆ ಹಾಗೂ ಶೇ.18 ಇದ್ದ ಆಯ್ದ ವಸ್ತುಗಳ ತೆರಿಗೆಯನ್ನು ಶೇ.12ಕ್ಕೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಕೆಲವೊಂದು ವಸ್ತುಗಳ ತೆರಿಗೆ ಶೇ.12ರಿಂದ ಶೇ.5ಕ್ಕೂ ಇಳಿಕೆಯಾಗಿದ್ದು, ಜನರಲ್ಲೂ ಹರ್ಷ ಮೂಡಿಸಿತ್ತು.

ಗ್ರಾಹಕರಿಗೆ ಸಿಗದ ಲಾಭ: ನವೆಂಬರ್‌ನಲ್ಲಿ 177 ವಸ್ತುಗಳ ಜಿಎಸ್‌ಟಿ ತೆರಿಗೆ ಪ್ರಮಾಣ ಇಳಿಕೆ ಮಾಡಿದ ಕೇಂದ್ರ ಸರ್ಕಾರವು ಪರಿಷ್ಕೃತ ತೆರಿಗೆ ಮೊತ್ತವನ್ನು ನ.15ರಿಂದ ಜಾರಿಗೊಳಿಸಿತ್ತು. ಅದ ರಂತೆ ತೆರಿಗೆ ಇಳಿಕೆಯಾದ ವಸ್ತುಗಳ ಬೆಲೆ ನ.15ರಿಂದಲೇ ಪರಿಷ್ಕರಣೆಯಾಗಿ ಗ್ರಾಹಕರಿಗೆ ಅದರ ಲಾಭ ಸಿಗಬೇಕಿತ್ತು. ಆದರೆ ಬಹಳಷ್ಟು ಕಡೆ ಗ್ರಾಹಕರಿಗೆ ತೆರಿಗೆ ಇಳಿಕೆ ಲಾಭ ಸಿಗದಿರುವುದು
ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ನಡೆಸಿದ ತಪಾಸಣೆಯಿಂದ ಬಯಲಾಗಿದೆ.

ಎಂಆರ್‌ಪಿಯೇ ಇಲ್ಲ!: ತೆರಿಗೆ ಇಳಿಕೆ ಪ್ರಮಾಣಕ್ಕೆ ಪೂರಕವಾಗಿ ದರ ಪರಷ್ಕರಿಸಿ ಹೊಸ ದರ ಪಟ್ಟಿ ಮುದ್ರಿಸಿ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹಳೆಯ ದುಬಾರಿ ದರದಲ್ಲೇ ಮಾರಾಟ ಮಾಡುವುದು ನಿಯಮಬಾಹಿರ. ಆದರೆ ಹಲವೆಡೆ ಬೆಲೆ ಇಳಿಸಿ ಪರಿಷ್ಕೃತ ದರ ಪಟ್ಟಿ ನಮೂದಿಸದಿರುವುದು ಕಂಡುಬಂದರೆ ಬಹಳಷ್ಟು ವಸ್ತುಗಳಿಗೆ ಗರಿಷ್ಠ ಮಾರಾಟ ದರ ಪಟ್ಟಿಯನ್ನೇ (ಎಂಆರ್‌ಪಿ) ನಮೂದಿ ಸದಿರುವುದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಒಟ್ಟು 194 ಮಳಿಗೆದಾರರ ವಿರುದ್ಧ ಇಲಾಖೆಯು ಕಾನೂನು
ಮಾಪನಶಾಸ್ತ್ರ (ಪ್ಯಾಕೇಜ್ಡ್ ಕಮಾಡಿಟಿ) ನಿಯಮ 18 (3)ರಡಿ ಪ್ರಕರಣ ದಾಖಲಿಸಿದೆ. 

Advertisement

ದಂಡದ ಜತೆಗೆ ಜೈಲು ಶಿಕ್ಷೆ
ಜಿಎಸ್‌ಟಿ ತೆರಿಗೆ ಇಳಿಕೆ ಹಿನ್ನೆಲೆಯಲ್ಲಿ ತೆರಿಗೆ ಇಳಿಕೆ ಲಾಭ ಗ್ರಾಹಕರಿಗೆ ಸಿಗುತ್ತಿದೆಯೇ ಎಂಬುದರ ಪರಿಶೀಲನೆಗೆ ನವೆಂಬರ್‌ನಲ್ಲಿ ನಾಲ್ಕು ದಿನ ರಾಜ್ಯಾದ್ಯಂತ ವಿಶೇಷ ಅಭಿಯಾನ ನಡೆಸಲಾಯಿತು. ಈ ವೇಳೆ ತೆರಿಗೆ ಇಳಿಕೆಯಂತೆ ದರ ಇಳಿಕೆ ಮಾಡದೆ ಹಳೆಯ ದರದಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ 2,500 ರೂ. ದಂಡ ವಿಧಿಸಲಾಗುತ್ತದೆ. 2ನೇಬಾರಿ ನಿಯಮ ಉಲ್ಲಂಘನೆಗೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲು  ಅವಕಾಶವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕರು ದೂರು ನೀಡಬಹುದು
ರಾಜ್ಯದಲ್ಲಿ ಯಾವುದೇ ಪ್ಯಾಕೇಜ್ಡ್ ಕಮಾಡಿಟಿಯ ಮೇಲೆ ಎಂಆರ್‌ಪಿ ಮುದ್ರಿಸದಿರುವುದು, ಜಿಎಸ್‌ಟಿ ತೆರಿಗೆಗಿಂತಲೂ ಹೆಚ್ಚು ತೆರಿಗೆ
ವಿಧಿಸಿ ಗ್ರಾಹಕರನ್ನು ಶೋಷಿಸುತ್ತಿ ದ್ದರೆ ಆ ಬಗ್ಗೆ ಇಲಾಖೆಯ ಇ-ಮೇಲ್‌ ವಿಳಾಸಕ್ಕೆ ದೂರು ನೀಡಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಲಿದ್ದಾರೆ. ಇ-ಮೇಲ್‌ ವಿಳಾಸ: kar.lmdhelpdesk@gmail.com

 ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next