Advertisement

ಗಿಡ ಗೆಳೆತನದಿಂದ ಕೃಷಿ ಬದುಕಿನ ಸಮೃದ್ಧಿ

11:57 AM Nov 20, 2017 | |

ಆರಂಭದ ವರುಷಗಳಲ್ಲಿ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಪತ್ರಿಕೆ ತಂಡ ಸಮೃದ್ಧಿಗೆ ನೀಡಿದ ಸಹಕಾರವನ್ನು ಮರೆಯಲಾಗದು. ಈಗ ಹಿಂತಿರುಗಿ ನೋಡಿದಾಗ, ಸ್ವಂತ ಕಚೇರಿಯಿಲ್ಲದೆ, ಲಕ್ಷಗಟ್ಟಲೆ ಹಣವಿಲ್ಲದೆ, ಯಾವ ಸಿಬ್ಬಂದಿಯೂ ಇಲ್ಲದೆ 25 ವರ್ಷ ಸಮೃದ್ಧಿ ಗಿಡಗೆಳೆತನ ಸಂಘ ನಡೆದು ಬಂದದ್ದೇ ಒಂದು ಪವಾಡ.
 
ಸಿಹಿಹುಣಿಸೆ, ಸಿಹಿಧಾರೆಹುಳಿ, ಕರಿಯಾಲ ಹರಿವೆ, ಬಾಂಗ್ಲಾ ಬಸಳೆ, ರೆಕ್ಕೆಬದನೆ, ಹಾವುಬದನೆ, ಏಲಕ್ಕಿ ತುಳಸಿ, ಕನಕಚಂಪಕ, ಕರ್ಪೂರಗಿಡ, ಬಂಟ ಕೇಪುಳ, ಮೊಟ್ಟೆಮುಳ್ಳು, ಕಾಂಚಿಕೇಳ ಬಾಳೆ, ಆಫ್ರಿಕನ್‌ ಚಿಕ್ಕು, ನೀರುಹಲಸು, ಭೀಮಫ‌ಲ, ಹನುಮಫ‌ಲ, ಮುಳ್ಳುಸೀತಾಫ‌ಲ ಇಂತಹ ಹತ್ತುಹಲವು ಅಪರೂಪದ ಸಸ್ಯಗಳು ಇಂದು ದಕ್ಷಿಣ ಕನ್ನಡದ ಹಲವು ಕೃಷಿಕರ ತೋಟಗಳಲ್ಲಿ ಬೆಳೆಯುತ್ತಿದ್ದರೆ ಅದಕ್ಕೆ ಕಾರಣ ಸಮೃದ್ಧಿ ಎಂಬ ಗಿಡಗೆಳೆತನ ಸಂಘ.

Advertisement

ಸಮೃದ್ಧಿಯಂತಹ ಕೃಷಿಕರ ವೇದಿಕೆ ಜಗತ್ತಿನಲ್ಲಿ ಬೇರೆಲ್ಲಿಯೂ ಇರಲಿಕ್ಕಿಲ್ಲ. ಇದು ಕಳೆದ 24 ವರ್ಷಗಳಲ್ಲಿ ಸದ್ದುಗದ್ದಲವಿಲ್ಲದೆ ಕೃಷಿಕರಿಂದ ಕೃಷಿಕರಿಗಾಗಿ ಎಂಬ ತತ್ವದ ನೆಲೆಯಲ್ಲಿ ಮೌಲ್ವಿಕ ಕೆಲಸ ಮಾಡಿದೆ. ಈ ದೀರ್ಘ‌ ಅವಧಿಯಲ್ಲಿ, ನೂರಾರು ಕೃಷಿಕರನ್ನು ಅದ್ಯಾವ ಆಕರ್ಷಣೆ ಸಮೃದ್ಧಿಯತ್ತ ಸೆಳೆಯಿತು? ಅಪರೂಪದ ಸಸ್ಯಗಳ ಬೀಜ ಅಥವಾ ಸಸಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಅವರೆಲ್ಲ ಸಮೃದ್ಧಿಯ ಕಾರ್ಯಕ್ರಮಗಳಿಗೆ ಬಂದರೇ? 

ಅದಕ್ಕಿಂತ ಮಿಗಿಲಾಗಿ, ಹಲವರನ್ನು ಸೆಳೆದದ್ದು ಇನ್ನೊಂದು ಆಕರ್ಷಣೆ ಅನಿಸುತ್ತದೆ. ಅದೇನೆಂದರೆ, ನಿರಂತರವಾಗಿ ಪ್ರತಿ ತಿಂಗಳೂ ಸಮೃದ್ಧಿ ತನ್ನ ಸದಸ್ಯರಿಗೆ ಒದಗಿಸಿದ ಬೆಲೆಕಟ್ಟಲಾಗದ ಅವಕಾಶ: ಕೃಷಿಕರ ಹೊಲ-ತೋಟಗಳಿಗೆ ಭೇಟಿ ನೀಡುವ ಅವಕಾಶ. 
ಯಾಕೆಂದರೆ, ಪ್ರತಿಯೊಬ್ಬ ಕೃಷಿಕನ ಮನದಾಳದಲ್ಲಿ ಒಂದು ಹಂಬಲವಿರುತ್ತದೆ: ಇತರ ಕೃಷಿಕರ ಕೃಷಿ ಹಾಗೂ ಬದುಕಿನೊಂದಿಗೆ ತನ್ನದನ್ನು ಹೋಲಿಸಿ ನೋಡುವುದು. ಆ ಹಂಬಲವನ್ನು ಸಮೃದ್ಧಿಯ ತಿಂಗಳ ಕ್ಷೇತ್ರಭೇಟಿಗಳು ತುಂಬಿವೆ ಎನ್ನಬಹುದು.

ಇಂತಹ ಕ್ಷೇತ್ರಭೇಟಿಗಳಲ್ಲಿ ಇತರರ ಜಮೀನು, ತೋಟ, ಬೆಳೆಗಳು, ಗಿಡಮರಗಳನ್ನು ಕಣ್ಣಾರೆ ಕಾಣುತ್ತಾ, ಅವರ ಮಾತುಗಳನ್ನು ಕೇಳುತ್ತಾ, ಅವರ ಕೃಷಿ ವಿಧಾನಗಳನ್ನು ತಿಳಿಯುತ್ತಾ ಕಲಿಯುವುದು ಬಹಳಷ್ಟು ಇರುತ್ತದೆ. ಅವರು ಅನುಸರಿಸುವ ವಿಧಾನವು ನಮ್ಮ ತೋಟದಲ್ಲೊಂದು ಬದಲಾವಣೆಗೆ ಪ್ರೇರಣೆಯಾದೀತು. ಅವರೊಂದು ಸಮಸ್ಯೆಯನ್ನು ಎದುರಿಸಿದ ನಮೂನೆ, ನಮ್ಮ ಒಂದು ಸಮಸ್ಯೆಯ ಪರಿಹಾರದ ದಿಕ್ಕು ತೋರಿಸೀತು.

ಸಮೃದ್ಧಿ ಬಳಗದೊಂದಿಗೆ ಕಳೆದೆರಡು ವರುಷಗಳ ಒಡನಾಟದ ಅನುಭವದಲ್ಲಿ ನಾನು ಗಮನಿಸಿದ ನಾಲ್ಕು ಮುಖ್ಯ ಅಂಶಗಳು ಹೀಗಿವೆ:
1) ಯುವಜನರು ಕೃಷಿಯಿಂದ ದೂರವಾಗುತ್ತಿದ್ದಾರೆ ಎಂಬುದು ಹಲವರ ಅನಿಸಿಕೆ. ಆದರೆ, ಕೃಷಿಕರ ವೇದಿಕೆ ಸಮೃದ್ಧಿಯಲ್ಲಿ ಹಲವು ಯುವಕರು ಸಕ್ರಿಯರಾಗಿರುವುದು ಚೇತೋಹಾರಿ ಬೆಳವಣಿಗೆ. ಕಳೆದ ವರ್ಷದ ಕಾರ್ಯದರ್ಶಿ ಅರುಣ್‌ ಮೆಹಂದಳೆ, ಈ ವರ್ಷದ ಕಾರ್ಯದರ್ಶಿ ರಾಮ… ಪ್ರತೀಕ್‌ ಕರಿಯಾಲ, ಕೋಶಾಧಿಕಾರಿ ಮರಿಕೆಯ ಎ.ಪಿ. ಸದಾಶಿವ ಅವರ ಮಗ ಸುಹಾಸ್‌ ಇವರೆಲ್ಲರೂ ಕಾಲೇಜು ಶಿಕ್ಷಣ ಪೂರೈಸಿ, ಈಗ ಕೃಷಿಯಲ್ಲಿ ತೊಡಗಿಕೊಂಡವರು; ಸಮೃದ್ಧಿಯ ಕೆಲಸಗಳಿಗೆ ಕೈಜೋಡಿಸಿದವರು. ಯುವಜನರನ್ನು ಸೆಳೆದದ್ದು ಇದರ ದೊಡª ಸಾಧನೆ.

Advertisement

2) ಕೃಷಿಕರಲ್ಲಿ ಸಾಹಸ ಪ್ರವೃತ್ತಿಯ ಕೊರತೆಯಿದೆ ಎಂಬುದು ಹಲವರ ಅನಿಸಿಕೆ. ಅದು ಸರಿಯಲ್ಲ ಎಂದು ಸ್ಪಷ್ಟವಾದದ್ದು ಸಮೃದ್ಧಿಯ ಕ್ಷೇತ್ರಭೇಟಿಗಳಿಂದ. ಪಂಜಿಗುಡ್ಡೆ ಈಶ್ವರ ಭಟ್‌ ಹಿಟಾಚಿ ಯಂತ್ರದಿಂದ ಗುಡ್ಡಗಳನ್ನೇ ಬಗೆದು ಬಯಲಾಗಿಸಿ, ಅಡಿಕೆ ತೋಟ ಎಬ್ಬಿಸಿದ್ದು, ಕಡಮಜಲು ಸುಭಾಷ್‌ ರೈ ಪ್ರತಿ ಎಕರೆಯಲ್ಲಿ ಅಧಿಕ ಸಂಖ್ಯೆಯ ಗೇರು ಸಸಿಗಳನ್ನು ಯಶಸ್ವಿಯಾಗಿ ಬೆಳೆಸಿದ್ದು, ಬಲ್ಯ ವಿಶ್ವೇಶ್ವರ ಭಟ್‌ ಅವರಿಂದ ತಮ್ಮ ತೋಟದಲ್ಲಿ ಒಂದು ಕಾರ್ಖಾನೆಯಂತೆ ಅಡಿಕೆ  ಕರಿಮೆಣಸಿನ ಕೃಷಿ, ನಡ ಗ್ರಾಮದ ಪ್ರಭಾಕರ ಮಯ್ಯರ ವಿವಿಧ ಕೃಷಿಪ್ರಯೋಗಗಳು  ಇವೆಲ್ಲ ಕೃಷಿಕರ ಸಾಹಸ ಪ್ರವೃತ್ತಿಯ ಅಪ್ಪಟ ನಿದರ್ಶನಗಳು.

3) ಕೃಷಿಕರಲ್ಲಿ ಉದ್ಯಮಶೀಲತೆಯ ಕೊರತೆಯಿದೆ ಎಂಬುದೂ ಹಲವರ ಅನಿಸಿಕೆ. ಇದೂ ಸರಿಯಲ್ಲ ಎಂದು ಕಂಡು ಬಂದದ್ದು ಸಮೃದ್ಧಿಯ ಕ್ಷೇತ್ರಭೇಟಿಗಳಲ್ಲಿ. ಮುಂಡಾಜೆಯ ದೋಸ್ತಿ ಸುಪಾರಿ ಘಟಕದ ದಿನೇಶ್‌ ಪಟವರ್ಧನರ ಅಡಿಕೆ  ಆಧಾರಿತ ಸೊಳ್ಳೆವಿಕರ್ಷಕ ಮೊಸ್‌-ಕ್ವಿಟ್‌, ಕೆದಿಲ ಹತ್ತಿರದ ಮುದ್ರಜೆಯ ಕೆ. ಸುಬ್ರಹ್ಮಣ್ಯ ಭಟ್‌ ಅವರ ಹಾರ್ದಿಕ್‌ ಹರ್ಬಲ್ಸ… ಘಟಕದ ಸತ್ವಮ… ಮೂಲಿಕಾ ಪಾನೀಯ-ಇವು ಕೃಷಿಕರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೆಲವು ಕಿರುಉದ್ಯಮಗಳು.

4) ತಿಂಗಳಿಗೊಮ್ಮೆ ಸಮೃದ್ಧಿ ಏರ್ಪಡಿಸುವ ಕ್ಷೇತ್ರಭೇಟಿಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಕೃಷಿಯ ಬಗ್ಗೆ ಬಹಳಷ್ಟು ಕಲಿಯಬಹುದು. ಈ ಅಂಕಣದಲ್ಲಿ ಪ್ರಕಟವಾಗಿರುವ ನೆಟ್ಟಣಿಗೆ  ಮುಟ್ನೂರು ಗ್ರಾಮದ ಸರವು ಜಗನ್ನಾಥ ಶೆಟ್ಟಿ ಬಗ್ಗೆ ಕರಿಮೆಣಸು ಕೃಷಿ ಯಶಸ್ಸಿಗೆ ಪಂಚಸೂತ್ರ ಮತ್ತು ಪಟ್ನೂರಿನ ಪಂಜಿಗುಡ್ಡೆ ಈಶ್ವರ ಭಟ್‌ ಬಗ್ಗೆ ಅಡಿಕೆ ಕೃಷಿ ಯಶಸ್ಸಿಗೆ ಐದು ಸೂತ್ರಗಳು ಇತ್ಯಾದಿ ಲೇಖನಗಳ ಹೂರಣವೇ ಇದಕ್ಕೆ ಉದಾಹರಣೆ.

ಸಮೃದ್ಧಿಯ 25ನೇ ವರ್ಷದ ಆರಂಭದ ಸಂಭ್ರಮಾಚರಣೆ ಜರಗಿದ್ದು 29 ಅಕ್ಟೋಬರ್‌ 2017ರಂದು, ಪುತ್ತೂರಿನ ಹತ್ತಿರದ ಕೋಟೆಮುಂಡುಗಾರಿನ ಸಹಕಾರಿ ಸಂಘದ ಸಭಾಭವನದಲ್ಲಿ. ಈಗಿನ ಅಧ್ಯಕ್ಷರಾದ ಆರ್‌.ಕೆ. ಭಾಸ್ಕರ ಅವರ ಮುಂದಾಳುತನದಲ್ಲಿ. ಅಂದು ಅಲ್ಲಿ ದಿನವಿಡೀ ಜರಗಿದ ಕಾರ್ಯಕ್ರಮಗಳಲ್ಲಿ ಸುಮಾರು 500 ಕೃಷಿಕರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಏಕೆಂದರೆ ಕಳೆದ 24 ವರ್ಷಗಳಲ್ಲಿ ಯಾವುದೋ ಒಂದು ರೀತಿಯಲ್ಲಿ ಸಮೃದ್ಧಿ ಅವರ ಬದುಕನ್ನು ತಟ್ಟಿತ್ತು.

ಪುತ್ತೂರಿನಿಂದ ಪ್ರಕಟವಾಗುವ ಅಡಿಕೆ ಪತ್ರಿಕೆ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀಪಡ್ರೆಯವರು 24 ವರ್ಷಗಳ ಮುಂಚೆ ನೀಡಿದ ಒಂದು ಐಡಿಯಾ ಸಮೃದ್ಧಿಯಾಗಿ ರೂಪುಗೊಂಡದ್ದೇ ಒಂದು ವಿಸ್ಮಯ. ಆರಂಭದ ವರುಷಗಳಲ್ಲಿ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಪತ್ರಿಕೆ ತಂಡ ಸಮೃದ್ಧಿಗೆ ನೀಡಿದ ಸಹಕಾರವನ್ನು ಮರೆಯಲಾಗದು.

ಈಗ ಹಿಂತಿರುಗಿ ನೋಡಿದಾಗ, ಸ್ವಂತ ಕಚೇರಿಯಿಲ್ಲದೆ, ಲಕ್ಷಗಟ್ಟಲೆ ಹಣವಿಲ್ಲದೆ, ಯಾವ ಸಿಬ್ಬಂದಿಯೂ ಇಲ್ಲದೆ 25 ವರ್ಷ ಸಮೃದ್ಧಿ ಗಿಡಗೆಳೆತನ ಸಂಘ ನಡೆದು ಬಂದದ್ದೇ ಒಂದು ಪವಾಡ. ಇಂತಹ ಪವಾಡಗಳು ಕೃಷಿಕರ ಬದುಕನ್ನು ಸಮೃದ್ಧವಾಗಿಸಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಯುವಂತಾಗಲಿ. 

ಅಡ್ಡೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next