Advertisement

ಪುಟಾಣಿಗಳ ಸ್ವಾಗತಕ್ಕೆ ಶಾಲೆಗಳಿಗೆ ತಳಿರು ತೋರಣ ಶೃಂಗಾರ

09:25 PM May 28, 2019 | mahesh |

ಬೆಳ್ತಂಗಡಿ: ಬೇಸಗೆ ರಜಾದಿನಗಳನ್ನು ಕಳೆದು ಶಾಲಾ ಪ್ರವೇಶಕ್ಕೆ ಮುಂದಾಗುವ ಮಕ್ಕಳು ಹಾಗೂ ಈಗ ತಾನೆ ಶಿಕ್ಷಣ ಆರಂಭಕ್ಕೆ ಪುಟ್ಟ ಹೆಜ್ಜೆ ಇಟ್ಟು ಬರುವ ಪುಟಾಣಿಗಳ ಸ್ವಾಗತಕ್ಕೆ ತಾಲೂಕಿನಾದ್ಯಂತ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗಾರಗೊಳಿಸಲಾಗಿದೆ.

Advertisement

ಈಗಾಗಲೇ ತಾಲೂಕಿನ 17 ಕ್ಲಸ್ಟರ್‌ಗಳ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲ ಸರಕಾರಿ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಎರಡು ಸುತ್ತಿನ ಸಭೆ ಕರೆಯಲಾಗಿತ್ತು. ಮಕ್ಕಳ ಸ್ವಾಗತಕ್ಕೆ ಶಾಲೆ ಸಿಂಗಾರ, ಸರಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಿಸುವುದು ಸಹಿತ ಶಾಲಾಭಿವೃದ್ಧಿ ಸಮಿತಿಯೊಂದಿಗೆ ನಿರಂತರ ಸಂಪರ್ಕದೊಂದಿಗೆ ಕಾಳಜಿ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಳಿರು ತೋರಣ
ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ದೃಷ್ಟಿಯಿಂದ ಈಗಾಗಲೇ ಶಿಕ್ಷಕರು ರಜೆ ಅವಧಿಯಲ್ಲಿ ಮನೆ ಭೇಟಿ ನಡೆಸಿ ಮಕ್ಕಳ ಸರ್ವೇ ಕೈಗೊಂಡಿದ್ದಾರೆ. ಮಂಗಳವಾರ ಸಂಜೆ ಶಿಕ್ಷಕರು ಶಾಲೆ ಸ್ವತ್ಛಗೊಳಿಸಿ ತಳಿರು ತೋರಣದೊಂದಿಗೆ ರಂಗೋಲಿ ಹಾಕಿ ಶೃಂಗರಿಸಿದ್ದಾರೆ. ಬುಧವಾರ ಶಾಲೆ ಆರಂಭವಾಗುತ್ತಲೇ ಎಲ್ಲ ಶಿಕ್ಷಕರು ಹಾಜರಿದ್ದು ಮಕ್ಕಳನ್ನು ಸ್ವಾಗತಿಸಿ ಅವಶ್ಯ ಪುಸ್ತಕ ವಿತರಣೆ, ವಾರ್ಷಿಕ ತರಗತಿ ಪಟ್ಟಿ ಸಿದ್ಧಪಡಿಸುವ ಮೂಲಕ ಮಕ್ಕಳ ಕಾರ್ಯ ಚಟುವಟಿಕೆಯ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ. ಶಾಲೆ ಆರಂಭದಿಂದಲೇ ಬಿಸಿಯೂಟವೂ ಲಭ್ಯವಾಗಲಿದೆ.

40 ಸಾವಿರ ಮಕ್ಕಳು
ತಾಲೂಕಿನಾದ್ಯಂತ ಸರಕಾರಿ, ಅನುದಾನಿತ, ಅನುದಾನ ರಹಿತ 305ಕ್ಕೂ ಹೆಚ್ಚು ಶಾಲೆಗಳಿಂದ ಸುಮಾರು 40 ಸಾವಿರ ಮಕ್ಕಳು ಶಾಲೆ ಆರಂಭದ ಅನುಭವ ಪಡೆಯಲಿದ್ದಾರೆ. ಎಲ್ಲ
ವ್ಯವಸ್ಥೆಗಳ ಪೂರ್ಣಗೊಂಡಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲರ ಸಹಕಾರ ಅಗತ್ಯ
ಮುಖ್ಯ ಶಿಕ್ಷಕರ ಸಭೆ ಕರೆದು ಶಾಲಾ ಪ್ರವೇಶೋತ್ಸವಕ್ಕೆ ಸ್ವತ್ಛತೆ, ಶೃಂಗಾರದ ಮೂಲಕ ಸಿದ್ಧಗೊಳಿಸುವಂತೆ ಸೂಚಿಸಲಾಗಿದೆ. ಸರಕಾರಿ ಶಾಲೆ ಯೆಂಬ ಕೀಳರಿಮೆ ತೊರೆದು ಮಕ್ಕಳ ಸಂಖ್ಯೆ ಹೆಚ್ಚಿಸುವುದು, ಸರಕಾರಿ ಶಾಲೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವಲ್ಲಿ ಎಲ್ಲರ ಸಹಕಾರ ಅಗತ್ಯ.
 - ಸತೀಶ್‌, ಕ್ಷೇತ್ರ ಶಿಕ್ಷಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next