Advertisement

ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸಿ: ಬಿ.ವೈ. ರಾಘವೇಂದ್ರ

03:14 PM Aug 04, 2017 | |

ಶಿಕಾರಿಪುರ: ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಮಕ್ಕಳನ್ನು ತೊಡಗಿಸಬೇಕು. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಕೆಲವು ಬೇಡದ ಹವ್ಯಾಸಗಳನ್ನು ದೂರ ಮಾಡಿ ವಿದ್ಯಾರ್ಥಿ ದಿಸೆಯಲ್ಲಿಯೇ ನಾವು ಅಧ್ಯಯನದ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಏಕಲವ್ಯನ ಸಾಧನೆ, ಶ್ರವಣನ ಮಾತಾ- ಪಿತೃಭಕ್ತಿ ಅಭಿಮನ್ಯುವಿನ ûಾತ್ರ ತೇಜಸ್ಸು ನಮ್ಮಲ್ಲಿ ಸೃಜಿಸಬೇಕು. ಸವಾಧ್ಯಕ್ಷೆಯಾಗಿರುವ ರಕ್ಷತಾ ಅವರ ಸಾಧನೆ ನಿಮಗೆಲ್ಲ ಮಾದರಿ ಆಗಬೇಕು. ನಮಗೆ ಕನ್ನಡದ ನೆಲ, ಜಲ, ಸಂಸ್ಕೃತಿ ಭಾಷೆ, ಸಂಪ್ರದಾಯಗಳ ಬಗ್ಗೆ ಕಳಕಳಿ ಇರಬೇಕು. ಕನ್ನಡ ಭಾಷೆಯ ಪ್ರಶ್ನೆ ಬಂದಾಗ ನಾವು ಮುಂದಿರಬೇಕು ಎಂದರು. 

ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ರಕ್ಷಿತ ಜಿ.ಎನ್‌. ಮಾತನಾಡಿ, ಏಕರೂಪ ಶಿಕ್ಷಣವನ್ನು ಒದಗಿಸಿ ಕನ್ನಡ ನಾಡಿನ ಎಲ್ಲ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಬೋಧಿಸುವಂತೆ ಸರ್ಕಾರ ಕ್ರಮ ಕೈಗೊಂಡು ಹತ್ತನೇ ತರಗತಿ ಹಾಗೂ ಏಳನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಗುರುತಿಸಿ ಗೌರವಿಸಬೇಕು ಎಂದರು. 

ಮಕ್ಕಳ ಸಾಹಿತ್ಯ ಎಂದರೆ ಹಲವು ಪ್ರಕಾರಗಳಿಂದ ಕೂಡಿ ಮಕ್ಕಳಿಗೆ ಅರಿವು ಮೂಡಿಸುವ ಜೊತೆಗೆ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇರುವ ಸಾಹಿತ್ಯ. ಕನ್ನಡ ಭಾಷೆಯನ್ನು ಮಾತನಾಡುವ ನಾವು ಕಲಿಯುವಾಗ ಕನ್ನಡ ಮಾಧ್ಯಮವನ್ನು ಅರಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ
ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದರು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಸಾಧ್ಯವಾದ ಮಟ್ಟಿಗೆ ಸರ್ಕಾರ ತಾರತಮ್ಯವನ್ನು ಹೋಗಲಾಡಿಸಬೇಕು. ಖಾಸಗಿ ಶಾಲೆಗಳಲ್ಲಿ ಇರುವಂತೆ ಸರ್ಕಾರಿ ಶಾಲೆಗಳಲ್ಲಿಯೂ ರಚನಾತ್ಮಕವಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು. 

ಶಿಕಾರಿಪುರ ತಾಲೂಕು ಅಕ್ಕ, ಅಲ್ಲಮ, ಮುಕ್ತಾಯಕ್ಕ, ಅಜಗಣ್ಣ ಮುಂತಾದ ಶರಣ- ಶರಣೆಯರಿಗೆ ಜನ್ಮ ನೀಡಿದ ಸ್ಥಳ. ಇಲ್ಲಿ ಸಾಹಿತ್ಯ ತನ್ನದೇ ಅದ ವಿಶಿಷ್ಟತೆಯಿಂದ ವಚನಗಳಾಗಿ ಸಾಮಾಜಿಕ ಕಳಕಳಿಗೆ ದಾರಿ ಮಾಡಿ ಕೊಟ್ಟಿದೆ. ಇಲ್ಲಿ ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪನೆಯಾಗಿದೆ. ಶೈವ,
ಜೈನ, ಬೌದ್ಧ ಸಂಪ್ರದಾಯಗಳು ಇದ್ದವು ಎಂಬುದಕ್ಕೆ ಶಾಸನಗಳನ್ನು ಸಂಶೋಧಕರು ಶೋಧಿಸಿದ್ದಾರೆ ಎಂದರು.

Advertisement

 ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಈ ಸಮ್ಮೇಳನ ತುಂಬಾ ಅಚ್ಚುಕಟ್ಟಾಗಿ ಆಯೋಜಿತವಾಗಿದೆ. ತಾಲೂಕು ಜಿಲ್ಲಾ ಹಾಗೂ ರಾಜ್ಯ ಸಮ್ಮೇಳನಕ್ಕೆ ಅನುದಾನ ಸಿಗುತ್ತದೆ. ಆದರೆ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ಅನುದಾನ ಸಿಗುವುದಿಲ್ಲ. ಸಾಹಿತ್ಯ ಪರಿಷತ್‌ನ ಸಮ್ಮೇಳನಗಳಿಗೆ ಕೇವಲ ಹಿರಿಯರ ಸಂರ್ಪಕವಿತ್ತು. ಆದರೆ ನಾವು ಮಕ್ಕಳನ್ನು ಸಾಹಿತ್ಯ ವಲಯಕ್ಕೆ ತರಲು ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದೇವೆ. ನೀವು ನಿಮ್ಮೂರ ಚರಿತ್ರೆ ಬರೆದಿಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಡಿ. ಭೂಕಾಂತ, ಮಕ್ಕಳ ಮನಸ್ಸು ಮಲ್ಲಿಗೆ ಇದ್ದಂತೆ. ಬಾಲ್ಯ ದಲ್ಲಿಯೇ ನಾವು ಅವರಿಗೆ ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯದ ಅರಿವು ಮೂಡಿಸಬೇಕು. ಈ ತಾಲೂಕಿನಲ್ಲಿ ಜನಿಸಿದ ಶರಣ ಶರಣೆಯರಲ್ಲ ಅದ್ಭುತ  ಸಾಹಿತಿಗಳಾಗಿದ್ದರು. ಅವರೆಲ್ಲ ನಿಮಗೆ ಮಾದರಿಯಾಗಿದ್ದಾರೆ ಎಂದರು. ಕಸಾಪ ಅಧ್ಯಕ್ಷ ಕಾನೂರು ಮಲ್ಲಿಕಾರ್ಜುನ, ಕಾರ್ಯದರ್ಶಿ ಮಂಜಾಚಾರ್‌, ಸುಭಾಷ್‌ಚಂದ್ರ ಸ್ಥಾನಿಕ್‌, ಸಾಲೂರು ಕುಮಾರ , ಬಿ.ವಿ. ಕೊಪ್ಪದ, ದೀನೇಶ್‌, ಮಾಲತೇಶ, ಕಾಂಚನಾ ಕುಮಾರ, ಜಯಣ್ಣ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next