Advertisement

ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು

03:53 PM Jun 02, 2023 | Team Udayavani |

ಉಡುಪಿ: “ಬಡವರ ಬಾದಾಮಿ’ ಎಂದೇ ಕರೆಸಿಕೊಳ್ಳುವ ನೆಲಗಡಲೆ ಅಥವಾ ಶೇಂಗಾವು ಜಿಲ್ಲೆಯಲ್ಲಿ ಈಗ ತೀವ್ರ ಅಭಾವ. ಸಂಸ್ಕರಣ ಘಟಕಗಳಿಗೆ ಸ್ಥಳೀಯ ಶೇಂಗಾ ನಿರೀಕ್ಷೆಯಷ್ಟು ಬರುತ್ತಿಲ್ಲ. ಅನಿವಾರ್ಯವಾಗಿ ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜಿಲ್ಲೆಯ ಕೋಟ, ಕುಂದಾಪುರ, ಬೈಂದೂರು ಭಾಗದಲ್ಲಿ ಸುಮಾರು 2000 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಇದರಲ್ಲಿ ಬಹುಪಾಲು ಬೆಳೆಗಾರರು ತಾವು ಬೆಳೆದ ಶೇಂಗಾವನ್ನು ಕುಟುಂಬದ ಬಳಕೆಗೆ ಇಟ್ಟುಕೊಂಡು ಅಲ್ಪ ಪ್ರಮಾಣದಷ್ಟು ಮಾತ್ರ ಮಾರುಕಟ್ಟೆಗೆ ನೀಡುತ್ತಿದ್ದಾರೆ. ಶೇಂಗಾವನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವ ಕೃಷಿಕ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಹೀಗಾಗಿ ಜಿಲ್ಲೆಯಲ್ಲಿರುವ ಶೇಂಗಾ ಸಂಸ್ಕರಣ ಘಟಕದ ಮಾಲಕರು ಹೊರ ಜಿಲ್ಲೆಗಳಿಂದ ಶೇಂಗಾ ಆಮದು ಮಾಡಿಕೊಂಡು ಸಂಸ್ಕೃರಣೆ ಮಾಡಿ, ಮಾರುಕಟ್ಟೆಗೆ ನೀಡುವಂತಾಗಿದೆ.

ಸಾಮಾನ್ಯವಾಗಿ ಜಿಲ್ಲೆಯ ರೈತರು ಮುಂಗಾರು ಮತ್ತು ಹಿಂಗಾರಿನಲ್ಲಿ ಭತ್ತವನ್ನೇ ಪ್ರಧಾನವಾಗಿ ಬೆಳೆಯುತ್ತಾರೆ. ದ್ವಿದಳ ದಾನ್ಯಗಳಲ್ಲಿ ಶೇಂಗಾಕ್ಕೆ ಆದ್ಯತೆ ನೀಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬೀಡಾಡಿ ಹಸುಗಳು ಮತ್ತು ಕೆಲವು ಸಾಕು ಹಸುಗಳು ಗದ್ದೆಗಳಿಗೆ ಬಂದು ಶೇಂಗಾ ಬೆಳೆ ನಾಶ ಮಾಡುತ್ತಿರುವುದರಿಂದ ರೈತರು ಶೇಂಗಾ ಬೆಳೆಯಲು ಆಸಕ್ತಿ ತೋರುತ್ತಿಲ್ಲ. ಶೇಂಗಾ ಗದ್ದೆಗೆ ಹಸುಗಳು ಪ್ರವೇಶ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಅಥವಾ ಕೃಷಿ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಲ್ಲಿ ಶೇಂಗಾ ಬೆಳೆಗಾರರ ಸಂಖ್ಯೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಹಾಗೆಯೇ ಹವಾಮಾನ ವೈಪರಿತ್ಯ ಅಥವಾ ಶೇಂಗಾ ಬೀಜದ ಗುಣಮಟ್ಟ ಚೆನ್ನಾಗಿಲ್ಲದೇ ಇದ್ದಾಗ ಇಳುವರಿಯು ಕಡಿಮೆಯಾಗುತ್ತದೆ. ಈ ಬಗ್ಗೆಯೂ ಕೃಷಿಕರಿಗೆ ಅರಿವು ಮೂಡಿಸುವ ಜತೆಗೆ ಸೂಕ್ತ ಪರಿಹಾರ ನೀಡಬೇಕು. ಉತ್ತಮ ಗುಣಮಟ್ಟದ ಶೇಂಗಾ ಬೀಜಗಳನ್ನು ಕೃಷಿ ಇಲಾಖೆಯು ಸಂಸ್ಕರಣ ಘಟಕಗಳ ಮೂಲಕ ಸಂಸ್ಕರಿಸಿ, ರೈತರಿಗೆ ಸಬ್ಸಿಡಿ ದರದಲ್ಲಿ ವಿತರರಿಸುವ ವ್ಯವಸ್ಥೆ ಮಾಡಿದಾಗ ಶೇಂಗಾ ಉತ್ಪಾದನೆ ಹೆಚ್ಚಿಸಲು ಸಾಧ್ಯವಿದೆ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ.

ಹೊರ ಜಿಲ್ಲೆಗಳಿಂದ ಆಮದು
ಉಡುಪಿ ಜಿಲ್ಲೆಯಲ್ಲಿ ಒಂದು ಬೃಹತ್‌ ಹಾಗೂ ಎರಡು ಸಣ್ಣ ಮಟ್ಟದ ಶೇಂಗಾ ಸಂಸ್ಕರಣ ಘಟಕವಿದೆ. ಸ್ಥಳೀಯವಾಗಿ ಸುಮಾರು 400ರಿಂದ 600 ಟನ್‌ ಶೇಂಗಾ ಉತ್ಪಾದನೆಯಾಗುತ್ತದೆ. ಅದರಲ್ಲಿ ಸ್ಥಳೀಯ ಸಂಸ್ಕರಣ ಘಟಕಕ್ಕೆ ಹೋಗುತ್ತಿರುವುದು ಸುಮಾರು 250ರಿಂದ 300 ಟನ್‌ ಮಾತ್ರ. ಬೃಹತ್‌ ಸಂಸ್ಕರಣ ಘಟಕದಲ್ಲಿ ದಿನಕ್ಕೆ 10 ಟನ್‌ ಶೇಂಗಾ ಸಂಸ್ಕರಣೆಯ ಸಾಮರ್ಥ್ಯವಿದ್ದರೂ ಸದ್ಯ 5 ಟನ್‌ ಮಾತ್ರ ಸಂಸ್ಕರಿಸಲಾಗುತ್ತಿದೆ. ಆದರೂ ತಿಂಗಳಿಗೆ 150 ಟನ್‌ ಶೇಂಗಾ ಬೇಕಾಗುತ್ತದೆ. ವರ್ಷ ಪೂರ್ತಿ ಘಟಕ ನಡೆಸಬೇಕಾದರೆ ಕನಿಷ್ಠ 1500 ಟನ್‌ ಶೇಂಗಾ ಬೇಕಾಗುತ್ತದೆ. ಹೀಗಾಗಿ ಗದಗ, ಲಕ್ಷ್ಮೀಶ್ವರ, ಸವಣೂರು, ಮುಂಡರಗಿ, ಚಳ್ಕೆರೆ, ತುಮಕೂರು ಭಾಗದಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದಾರೆ.

Advertisement

ಬೇಡಿಕೆ ಹೆಚ್ಚಿದೆ
ಶೇಂಗಾಕ್ಕೆ ಸದಾ ಬೇಡಿಕೆ ಇರುತ್ತದೆ. ರೈತರು ತಾವು ಬೆಳೆದ ಶೇಂಗಾವನ್ನು ಆರಂಭದಲ್ಲಿ ಕೆಜಿಗೆ 50ರಿಂದ 60 ರೂ.ಗಳಂತೆ ನೀಡುತ್ತಾರೆ. ಅದೇ ಸ್ವಲ್ಪ ದಿನಗಳ ಕಾಲ ಸಂಗ್ರಹಿಸಿಟ್ಟುಕೊಂಡು ನೀಡಿದರೆ ದರ ಇನ್ನಷ್ಟು ಹೆಚ್ಚು ಸಿಗುವ ಸಾಧ್ಯತೆ ಇರುತ್ತದೆ. ಕಳೆದ ವರ್ಷ ಶೇಂಗಾ ಖರೀದಿ ದರ ಪ್ರತಿ ಕೆಜಿಗೆ 55 ರಿಂದ 65 ರೂ. ಇತ್ತು ಈ ವರ್ಷ ಅದು ಪ್ರತಿ ಕೆಜಿಗೆ 75ರಿಂದ 80 ಆಗುವ ಸಾಧ್ಯತೆಯೂ ಇದೆ. ಅಲ್ಲದೆ ಶೇಂಗಾ ಬೀಜದ ರಫ್ತು ದರ ಕೂಡ 110 ರಿಂದ 120 ರೂ. ಇದೆ. ಹೀಗಾಗಿ ಶೇಂಗಾ/ ಶೇಂಗಾ ಬೀಜಕ್ಕೆ ಎಲ್ಲ ಕಾಲದಲ್ಲೂ ಬೇಡಿಕೆ ಇರುತ್ತದೆ. ಶೇಂಗಾ ಎಣ್ಣೆ ಮತ್ತು ಶೇಂಗಾದಿಂದ ಚಿಕ್ಕಿ ಸಹಿತ ಹಲವು ಬಗೆಯ ಆಹಾರೋತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಬೇಡಿಕೆಯಷ್ಟು ಜಿಲ್ಲೆಯಲ್ಲಿ ಶೇಂಗಾ ಪೂರೈಕೆ ಇಲ್ಲ ಎನ್ನುತ್ತಾರೆ ಸಂಸ್ಕರಣ ಘಟಕದ ಮಾಲಕರು.

ನೂತನ ಕ್ರಮ ಅಗತ್ಯ
ಕರಾವಳಿಯ ಶೇಂಗಾವು ರುಚಿ ಹಾಗೂ ಗುಣಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸ್ಥಳೀಯವಾಗಿ ಶೇಂಗಾ ಬೆಳೆಗಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ/ ಕೃಷಿ ಇಲಾಖೆ ಒಂದಿಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು.
-ಶ್ರೀಗಣೇಶ್‌ ಗಾಣಿಗ, ಶೇಂಗಾ ಸಂಸ್ಕರಣ ಘಟಕದ ಮಾಲಕ

ಪ್ರಧಾನ ಬೆಳೆಯಾಗಿಲ್ಲ
ಗುಣಮಟ್ಟದ ಶೇಂಗಾ ಬೀಜವನ್ನು ಕೃಷಿ ಸಂಪರ್ಕ ಕೇಂದ್ರದಿಂದ ಸಬ್ಸಿಡಿ ದರದಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿದ್ದೇವೆ. ಜಿಲ್ಲೆಯ ಕೋಟ, ಕುಂದಾಪುರ, ಬೈಂದೂರು ಭಾಗದಲ್ಲಿ ಸುಮಾರು 2,000 ಎಕರೆಯಲ್ಲಿ ಶೇಂಗಾ ಬಿತ್ತನೆಯಾಗುತ್ತದೆ. ಪ್ರಧಾನ ಬೆಳೆಯಾಗಿ ಇದನ್ನು ಬೆಳೆಯುತ್ತಿಲ್ಲ.
– ಸತೀಶ್‌, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next