Advertisement

ಕೋಟ: ಹೆದ್ದಾರಿಯಲ್ಲಿ ಮರಣಗುಂಡಿ- ವಾಹನ ಸವಾರರಿಗೆ ಜೀವ ಭಯ

04:47 PM Jul 05, 2024 | Team Udayavani |

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ಅಲ್ಲಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿದ್ದು ಮಳೆ ಬರುವಾಗ ಈ ಗುಂಡಿಯಲ್ಲಿ ನೀರು ತುಂಬಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಮತ್ತಷ್ಟು ಸಮಸ್ಯೆ ಎದುರಾಗುತ್ತಿದೆ. ಹೆದ್ದಾರಿ ಮರು ಡಾಂಬರೀಕರಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿದ್ದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

Advertisement

ಚತುಷ್ಪಥ ಹೆದ್ದಾರಿಯ ಟೋಲ್‌ ವಸೂಲಾತಿ ಹಾಗೂ ನಿರ್ವಹಣೆಯ ಹೊಣೆಯನ್ನು ನವಯುಗ ಕಂಪೆನಿಯಿಂದ ಹೈವೇ ಕನ್ಸ್‌ಟ್ರಕ್ಷನ್‌ ಕಂಪೆನಿ ಕೆಲವು ತಿಂಗಳ ಹಿಂದೆ ಪಡೆದಿತ್ತು ಹಾಗೂ ಹೆದ್ದಾರಿಯ ಮರು ಡಾಮರೀಕರಣ ಕಾರ್ಯಕ್ಕೆ ಹೊಸ ಕಂಪೆನಿ ಮುಂದಾಗಿತ್ತು.

ಉಡುಪಿಯಿಂದ ಸಾಸ್ತಾನದ ತನಕ ಡಾಂಬರೀಕರಣ ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಯಿತು. ಅದೇ ರೀತಿ ಕುಂದಾಪುರ ತನಕ
ಕಾಮಗಾರಿ ನಡೆದಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಸಾಸ್ತಾನ ಟೋಲ್‌ ಸಮೀಪದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಮಳೆಗಾಲ ಆರಂಭವಾದ್ದರಿಂದ ಕೆಲಸ ಮುಂದುವರಿಯಲಿಲ್ಲ. ಈಗ ಮಳೆಯ ಜತೆಗೆ ಗುಂಡ್ಮಿ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಕೋಟೇಶ್ವರ ಮೊದಲಾದ ಕಡೆ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ಸಂಕಷ್ಟ: ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆ ಇದ್ದು ಮಳೆ ಬರುವಾಗ
ಗುಂಡಿಯಲ್ಲಿ ನೀರು ತುಂಬಿ ಹೊಂಡವನ್ನು ಗಮನಿಸದೆ ಬೆ„ಕ್‌ ಸ್ಕಿಡ್‌ ಆಗಿ ಬಿದ್ದು ಜೀವ ಹಾನಿ ಸಂಭವಿಸುವ ಸಾದ್ಯತೆ ಕೂಡ
ಇದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಚ್ಚು ಅಪಾಯವಿದೆ.

ರಸ್ತೆಯಿಂದ ರಸ್ತೆಗೆ ಚಿಮ್ಮುವ ನೀರು: ಕೆಲವು ಕಡೆಗಳಲ್ಲಿ ಹೆದ್ದಾರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಹೇರಳ ಪ್ರಮಾಣದಲ್ಲಿ ರಸ್ತೆಯಲ್ಲೇ ನೀರು ನಿಂತಿರುತ್ತದೆ. ವಾಹನಗಳು ವೇಗವಾಗಿ ಸಾಗುವಾಗ ನೀರಿನ ಮೇಲೆ ಸಾಗಿ ವಾಹನ ಪಲ್ಟಿಯಾಗುವ ಸಂಭವವಿದೆ ಹಾಗೂ ಕಾರು ಮುಂತಾದ ಘನ ವಾಹನಗಳಿಂದ ಚಿಮ್ಮಿದ ನೀರು ಎದುರುಗಡೆ ಇನ್ನೊಂದು ರಸ್ತೆಯಲ್ಲಿ ಬರುವ ವಾಹನದ ಗ್ಲಾಸಿಗೆ ಚಿಮ್ಮಿ ಎದುರಿನ ವಾಹನಗಳು ಕಕ್ಕಾಬಿಕ್ಕಿಯಾಗಿ ಅಪಘಾತ ಸಂಭವಿಸಿದ ಉದಾಹರಣೆ ಕೂಡ ಇದೆ. ಕಳೆದ ತಿಂಗಳು ಬ್ರಹ್ಮಾವರದಲ್ಲಿ ಇದೇ ರೀತಿ ಅಪಘಾತವೊಂದು ಸಂಭವಿಸಿತ್ತು.

Advertisement

ಪರಿಹಾರ ಅಗತ್ಯ: ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ರಸ್ತೆಯ ಹೊಂಡಗಳನ್ನು ಮುಚ್ಚುವ ಕೆಲಸ ಆಗಬೇಕು ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಬಾಕಿ ಉಳಿದಿರುವುದ ಮರು ಡಾಮರೀಕರಣ ಕಾಮಗಾರಿ ಆದಷ್ಟು ಶೀಘ್ರ ನಡೆಯಬೇಕು ಎನ್ನುವುದು ವಾಹನ ಸಂಚಾರಿಗಳ ಬೇಡಿಕೆಯಾಗಿದೆ.

ಸಾರ್ವಜನಿಕರಿಗೆ ಸಂಪರ್ಕಕ್ಕಾಗಿ
ಸಾಸ್ತಾನ ಟೋಲ್‌ಗೆ ಸಂಬಂಧಿಸಿ ಉಡುಪಿಯಿಂದ-ಕುಂದಾಪುರ ತನಕ ರಸ್ತೆಯಲ್ಲಿ ಸಮಸ್ಯೆಗಳಿದ್ದರೆ ಸ್ಥಳೀಯ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಸಂಖ್ಯೆ 8130006595 ಕರೆ ಮಾಡಿ ದೂರು ನೀಡಬಹುದು.

ತಾತ್ಕಾಲಿಕ ದುರಸ್ತಿ
ತಾಂತ್ರಿಕ ಕಾರಣದಿಂದ ಡಾಮರೀಕರಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಹೊಂಡಗಳನ್ನು ಗುರುತಿಸಿ ವೆಟ್‌ ಮಿಕ್ಸ್‌ ಹಾಕಿ ಮುಚ್ಚಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ದೂರುಗಳಿದ್ದರೆ ಸ್ಥಳೀಯ ಟೋಲ್‌ನವರ ಗಮನಕ್ಕೆ ತಂದಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು.
*ತಿಮ್ಮಯ್ಯ, ಮೂರು ಟೋಲ್‌ಗ‌ಳ ಪ್ರಬಂಧಕರು

ಗಮನಹರಿಸಿ
ರಸ್ತೆ ಹೊಂಡಗಳಿಂದ ಹಾಗೂ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಅಪಾಯ ಖಂಡಿತ. ಹೀಗಾಗಿ ಅಪಘಾತ, ದುರಂತಗಳು ನಡೆಯುವ ಮುನ್ನ ಸಂಬಂಧಪಟ್ಟ ಕಂಪೆನಿ ಈ ಬಗ್ಗೆ ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
*ನವೀನ್‌ ಶೆಟ್ಟಿ, ವಾಹನ ಸಂಚಾರಿ

*ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next