ಸಿದ್ದಾಪುರ: ಪ್ಲಾಸ್ಟಿಕ್ ಹಾಗೂ ಪೇಪರ್ ಮುಕ್ತವಾಗಿ ಕೇವಲ ಹೂ ಹಾಗೂ ಹಸಿರು ವಸ್ತುಗಳಿಂದ ಕಲ್ಯಾಣ ಮಂಟಪ ಸಿಂಗಾರಗೊಂಡಿತ್ತು. ಹಸಿರುಗಳ ಮಧ್ಯೆ ನವ ದಂಪತಿ ನಿಂತು ಎಲ್ಲರನ್ನು ಸ್ವಾಗತಿಸುತ್ತಿದ್ದರು. ಮದುವೆಗೆ ಬಂದವರಲ್ಲಿ ಏನೋ ಒಂದು ರೀತಿಯ ಪುಳಕ. ಕಲ್ಯಾಣ ಮಂಟಪದಲ್ಲಿ ಕೇವಲ ಹಸಿರು ವಸ್ತುಗಳು. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಸಿದ್ದಾಪುರ ಶ್ರೀ ಅನಂತಪದ್ಮನಾಭ ಸಭಾಗೃಹ.
ಹಸಿರುಗಳಿಂದ ಸಿಂಗಾರಗೊಂಡ ಶ್ರೀ ಅನಂತಪದ್ಮನಾಭ ಸಭಾಗೃಹದಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಎಂ. ರವೀಂದ್ರ ಶ್ಯಾನುಭೋಗ್ ಹಾಗೂ ನಳಿನಿ ದಂಪತಿ ಪುತ್ರಿ ಸುಜಲಾ ಮತ್ತು ಆಜ್ರಿ ಗ್ರಾಮದ ಇಳಲಿ ವಾಸುದೇವ ಹೆಗಡೆ ಹಾಗೂ ಅನಸೂಯಾ ದಂಪತಿ ಪುತ್ರ ಶರದ್ ಅವರ ಮದುವೆಯು ಆ. 19ರಂದು ಜರಗಿತು.
ಈ ಮದುವೆ ಪ್ಲಾಸ್ಟಿಕ್ ಹಾಗೂ ಪೇಪರ್ ಮುಕ್ತವಾಗಿ ನಡೆಯಿತು. ಕೇವಲ ಹೂ ಹಾಗೂ ಹಸಿರು ವಸ್ತುಗಳಿಂದ ಕಲ್ಯಾಣ ಮಂಟಪವನ್ನು ಸಿಂಗರಿಸುವ ಮೂಲಕ ಎಲ್ಲಾವು ಹಸಿರುಮಯವಾಗಿಸಿದರು. ಕಲ್ಯಾಣ ಮಂಟಪ ಪ್ರವೇಶದಿಂದ ಹಿಡಿದು ಊಟದ ತನಕವು ಎಲ್ಲಿಯೂ ಕೂಡ ಪ್ಲಾಸ್ಟಿಕ್ ಹಾಗೂ ಪೇಪರ್ಗಳನ್ನು ಉಪಯೋಗಿಸದೆ ಮದುವೆಯನ್ನು ನೆರವೇರಿಸಿದರು. ಈ ಹಸಿರು ಮದುವೆಗೆ ಸಿದ್ದಾಪುರ ಗ್ರಾ.ಪಂ. ಸಾಕ್ಷಿಯಾಗಿತ್ತು.
ಮದುಮಕ್ಕಳಿಗೆ ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ ಅವರು ಹಸಿರು ಸರ್ಟಿಪಿಕೇಟ್ನ್ನು ನೀಡಿ, ಆರ್ಶಿವಚಿಸಿದರು. ಈ ಸಂದರ್ಭ ಗ್ರಾ. ಪಂ. ಉಪಾಧ್ಯಕ್ಷ ಭರತ್ ಕಾಮತ್, ಸದಸ್ಯರಾದ ಪ್ರದೀಪ ಹೆಗ್ಡೆ, ಶೇಖರ ಕುಲಾಲ, ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ, ಸಿಬಂದಿ ಸ್ವಾಮೀನಾಥ ಉಪಸ್ಥಿತರಿದ್ದರು.