Advertisement

ಸ್ವಂತ ಮನೆ ಇದ್ದವರಿಗೆ “ಹೋಂ ಸ್ಟೇ’ಆರಂಭಕ್ಕೆ  ಗ್ರೀನ್‌ ಸಿಗ್ನಲ್‌

08:45 AM Jul 24, 2017 | Team Udayavani |

– ದಿನೇಶ್‌ ಇರಾ

Advertisement

ಮಹಾನಗರ: ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಜಿಲ್ಲೆಯಲ್ಲಿ ಹೋಂ ಸ್ಟೇ ಯೋಜನೆಯನ್ನು ಆರಂಭಿಸಿದೆ.

ಕರಾವಳಿ ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹೆಚ್ಚಾಗಿ ಗುತ್ತಿನ ಮನೆ, ಗ್ರಾಮೀಣ ಶೈಲಿಯ ಹೋಂಸ್ಟೇಗೆ  ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಈ ವಿನ್ಯಾಸದಲ್ಲಿರುವ ಹಲವು ಮನೆಗಳಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.

ಹೋಂ ಸ್ಟೇ ಎಂದರೆ “ಭೇಟಿದಾರರಿಗೆ/ ಪ್ರವಾಸಿಗರಿಗೆ ಬಾಡಿಗೆ ಆಧಾರದ ಮೇಲೆ ವಸತಿ ಸೌಲಭ್ಯ ಕಲ್ಪಿಸುವ ಸ್ಥಳೀಯ ಕುಟುಂಬಗಳ ಖಾಸಗಿ ಮನೆ. ಹೋಂ ಸ್ಟೇ ಯೋಜನೆಯನ್ನು ಆರಂಭಿಸಲು ಯಾವುದೇ ವ್ಯಾಪಾರ ಪರವಾನಿಗೆಯ ಆವಶ್ಯಕತೆ ಇಲ್ಲ.  ಕೇವಲ  ಪ್ರವಾಸೋದ್ಯಮ ಇಲಾಖೆಯ ಅನುಮೋದನೆ ಪಡೆದರೆ ಸಾಕು ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಅಧಿಕಾರಿ. 

ಹೋಂ ಸ್ಟೇ ಯೋಜನೆಗಳಿಗೆ ರಿಯಾಯಿತಿ
ಯಾವುದೇ ಕೊಠಡಿ ಶುಲ್ಕವು ದಿನಕ್ಕೆ 5 ಸಾವಿರ ರೂ. ಗಳಿಗಿಂತ‌ ಕಡಿಮೆಯಿದ್ದಲ್ಲಿ ವಿಲಾಸಿ ತೆರಿಗೆ ಪಾವತಿಯಿಂದ ವಿನಾಯಿತಿ ಇದೆ. ವಿದ್ಯುತ್ಛಕ್ತಿ ಮತ್ತು ನೀರಿನ ಶುಲ್ಕಗಳನ್ನು ಗೃಹ ಬಳಕೆಯ ದರದಲ್ಲಿ ಪಾವತಿಸಬೇಕಾಗುತ್ತದೆ. 
ವಸತಿ ಉದ್ದೇಶಗಳಿಗೆ ನಿರ್ದಿಷ್ಟ ಪಡಿಸಿರುವಂತೆ ಆಸ್ತಿ  ತೆರಿಗೆ ದರಗಳನ್ನು ಪಾವತಿಸಬಹುದು. 

Advertisement

ಹೋಂ ಸ್ಟೇ ಯೋಜನೆಯನ್ನು ಆರಂಭಿಸಲು ಆಸಕ್ತರು ರಾಜ್ಯ ಸರಕಾರದ www.karnatakatourism.org ವೆಬ್‌ಸೈಟ್‌ ಮೂಲಕ ನೇರವಾಗಿ ನೋಂದಣಿ ಮಾಡಬಹುದು. 

3 ವರ್ಷಗಳಿಗೆ ನೋಂದಣಿ 500 ರೂ. ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಸುಧೀರ್‌ ಗೌಡ “ಉದಯವಾಣಿ ಸುದಿನ’ ಜತೆಗೆ ಮಾತನಾಡಿ, ಮಡಿಕೇರಿ ಮೈಸೂರು ನಗರಗಳಲ್ಲಿ ಹೋಂಸ್ಟೇಗೆ ಹೆಚ್ಚಿನ ಬೇಡಿಕೆಯಿದೆ. ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಕೊಡುವ ನಿಟ್ಟಿನಲ್ಲಿ ಸರಕಾರ ಎಲ್ಲ ಜಿಲ್ಲೆಗಳಲ್ಲೂ ಹೋಂಸ್ಟೇ ಆರಂಭಿಸಲು ಚಿಂತನೆ ನಡೆಸಿದೆ. ಪ್ರವಾಸೋದ್ಯಮ ಇಲಾಖೆಯೇ ಇದಕ್ಕೆ ಪರವಾನಗಿ ನೀಡಲಿದೆ. ಇದು ಕಡ್ಡಾಯ. ಜಿಲ್ಲೆಯಲ್ಲಿ ಈ ಕುರಿತ ಪ್ರಕ್ರಿಯೆ ಆರಂಭ‌ವಾಗಿದೆ.  ವ್ಯಾಪಾರ ಲೈಸೆನ್ಸ್‌ ಸಹಿತ ಇತರ ಯಾವುದೇ ಪರವಾನಗಿಯ ಅಗತ್ಯ ಇಲ್ಲ ಎನ್ನುತ್ತಾರೆ ಅವರು.

ಮಾರ್ಗಸೂಚಿಗಳು
– ನಿವಾಸದ ಮಾಲಕರಾಗಿರಬೇಕು ಹಾಗೂ ಅದೇ ನಿವಾಸದಲ್ಲಿ ವಾಸವಿರಬೇಕು.
– ಗರಿಷ್ಠ 5 ಹಾಗೂ ಕನಿಷ್ಠ 2 ಕೊಠಡಿಗಳನ್ನು ಹೊಂದಿದ್ದು, ಗುಣಮಟ್ಟದ ಶೌಚಾಲಯ ಹಾಗೂ  ಸೇವೆಯನ್ನು ಸಲ್ಲಿಸಬೇಕು.
– ಹೋಂ ಸ್ಟೇ ಮಾಲಕರು ಅತಿಥಿಗಳು ಪಾವತಿಸಬೇಕಾದ ದರಪಟ್ಟಿಯನ್ನು ನಿಖರವಾಗಿ ವಿವರಿಸಬೇಕು.
– ಅತಿಥಿಗಳ ವಿವರದ ಬಗ್ಗೆ ನೋಂದಣಿ ಪುಸ್ತಕವನ್ನು ಹಾಗೂ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಗಣಕೀಕರಣ ಮಾಡಿಸಬೇಕು.
– ಮನೆಯ ಕಾಂಪೌಂಡ್‌ ಮತ್ತು ಮುಖ್ಯದ್ವಾರಕ್ಕೆ ಒಟ್ಟು 2 ಸಿಸಿ ಕ್ಯಾಮೆರಾ ಅಳವಡಿಸಿರಬೇಕು.
– ವರ್ಷಕ್ಕೊಮ್ಮೆ ಪೊಲೀಸರಿಂದ ನಿರಾಕ್ಷೇಪಣಾ ಪತ್ರ ಪಡೆದು, ಪರವಾನಿಗೆ ನವೀಕರಣ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next