Advertisement

ವರದಾ-ಬೇಡ್ತಿ ನದಿ ಜೋಡಣೆಗೆ ಹಸಿರು ನಿಶಾನೆ

11:20 AM Jun 04, 2019 | Suhan S |

ಬ್ಯಾಡಗಿ: ಕಳೆದ 10 ವರ್ಷಗಳ ಅನುಭವದೊಂದಿಗೆ ಪ್ರಸಕ್ತ ಅವಧಿಯಲ್ಲಿಯೂ ಕೆರೆಗಳನ್ನು ತುಂಬಿಸುವ ಮೂಲಕ ರೈತನ ಪರವಾದ ಕಾರ್ಯಕ್ರಮ ಮಾಡುತ್ತೇನೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವರದಾ ಮತ್ತು ಬೇಡ್ತಿ ನದಿ ಜೋಡಣೆಗೆ ಹಸಿರು ನಿಶಾನೆ ದೊರೆತಿದೆ. ಬ್ಯಾಡಗಿ ತಾಲೂಕು ಆಣೂರು ಸೇರಿದಂತೆ ಎಲ್ಲ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ರೈತನ ಅಭ್ಯುದಯ ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದೃಷ್ಟಿಕೋನ ಇಟ್ಟುಕೊಂಡು ಯೋಜನೆ ರೂಪಿಸಿದ್ದಾರೆ. ದೇಶ ಆರ್ಥಿಕವಾಗಿ ಸುರಕ್ಷಿತವಾಗಿರಬೇಕಾದರೆ ರೈತ ಬಹಳಷ್ಟು ಸಮೃದ್ಧಿಯಾಗಿರಬೇಕು. ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿರುವ ಮೋದಿ ಅವರು ಮೊದಲ ಭಾಗವಾಗಿ ಪ್ರತಿ ರೈತನಿಗೆ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದೇ ಇದಕ್ಕೆ ಸಾಕ್ಷಿ. ಸಾರ್ವಜನಿಕ ಸುರಕ್ಷತೆಯೊಂದಿಗೆ ದೇಶವನ್ನು ಭೌಗೋಳಿಕವಾಗಿ ಸುಭದ್ರವಾಗಿಡುವುದು ಬಿಜೆಪಿ ಕಾರ್ಯಕ್ರಮ. ಇದಕ್ಕೆ ವ್ಯತಿರಿಕ್ತವಾಗಿ ಸಂಸತ್ತು ಎಂದಿಗೂ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದರು.

ಮೊದಲ ಬಾರಿ ಪ್ರಧಾನಿಯನ್ನಾಗಿ ಮಾಡುವ ಸಮಯದಲ್ಲಿ ನರೇಂದ್ರ ಮೋದಿ ಅವರ ಮೇಲೆ ಸಾಕಷ್ಟು ನೀರಿಕ್ಷೆಗಳನ್ನಿಟ್ಟು ಮತ ಹಾಕಿದ್ದೀರಿ. ಹೀಗಾಗಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ಕೇಂದ್ರ ಸರ್ಕಾರದ ಒಂದಿಲ್ಲೊಂದು ಯೋಜನೆ ತಲುಪುವಂತೆ ಮಾಡಿದ್ದಾರೆ. ಅದೇ ಕಾರಣದಿಂದ ಎರಡನೇ ಬಾರಿ ಮತದಾನ ಮಾಡುವ ಸಮಯದಲ್ಲಿ ನರೇಂದ್ರ ಮೋದಿ ಅವರ ಮೇಲೆ ಸಾಕಷ್ಟು ವಿಶ್ವಾಸವನ್ನಿಟ್ಟು ಮತವನ್ನು ಹಾಕಿದ್ದೀರಿ ಎಂದು ಹೇಳಿದರು.

Advertisement

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್‌ ನಾಯಕರಿಗೆ ಬುದ್ಧಿ ಭ್ರಮಣೆಯಿಂದ ಮನಬಂದಂತೆ ಮಾತನಾಡುತ್ತಿದ್ದಾರೆ. ಕಿಚಡಿ ಸರ್ಕಾರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡ ಕಿಚಡಿ ಸರ್ಕಾರ ನಡೆಸುತ್ತಿರುವ ಅದು ಜೆಡಿಎಸ್‌ ಕೈಯಲ್ಲಿ ಸಿಕ್ಕು ನರಳಾಡುತ್ತಿದೆ. ಜನರಲ್ಲಿ ಸರ್ಕಾರದ ಮೇಲೆ ನಂಬಿಕೆಯಿಲ್ಲದಂತಾಗಿದೆ. ನೀರಾವರಿ ಯೋಜನೆಗಳು ನಿಂತಲ್ಲೇ ನಿಂತಿವೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಬಿಡಿಗಾಸಿನ ಅನುದಾನ ಬರುತ್ತಿಲ್ಲ. ಶಿವಕುಮಾರ ಉದಾಸಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅನುದಾ ತಂದಾದರೂ ಬ್ಯಾಡಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಲೀಡ್‌ ನೀಡುವ ಮೂಲಕ ಭಾರತೀಯ ಜನತಾ ಪಕ್ಷದ ಗೌರವ ಹೆಚ್ಚಿಸಿದ್ದೀರಿ ಎಂದು ಹೇಳಿದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಸ್ವಾತಂತ್ರ್ಯ ನಂತರ 6 ದಶಕಗಳ ಕಾಲ ನಮ್ಮನ್ನಾಳಿದ ಕಾಂಗ್ರೆಸ್‌ ದೇಶವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸಿದ್ದಲ್ಲದೇ ವಿಶ್ವ ಮಟ್ಟದಲ್ಲಿ ನಮ್ಮದೊಂದು ಸಾಲಗಾರ ದೇಶ ಎಂಬುದನ್ನು ಸಾಬೀತು ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಿಸ್ವಾರ್ಥ ಸೇವೆ ಮತ್ತು ಪ್ರಾಮಾಣಿಕ ಆಡಳಿತ ನೀಡುವ ಮೂಲಕ ದೇಶದ ಸಾಮರ್ಥ್ಯ ವಿಶ್ವಕ್ಕೆ ಪರಿಚಯಿಸಿದ್ದಾರೆ, ಒಂದು ವೇಳೆ ಸ್ವಾತಂತ್ರ್ಯಕ್ಕೂ ಮುನ್ನ ಇಂತಹ ಒಬ್ಬ ಧೀಮಂತ ನಾಯಕ ನಮಗೆ ಸಿಕ್ಕಿದ್ದರೇ ಇಡೀ ವಿಶ್ವ ಸಂಸ್ಥೆ ನಮ್ಮ ಕಾಲಡಿಯಲ್ಲಿರುತ್ತಿತ್ತು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಈ ಸಲದ ಲೋಕಸಭೆ ಚುನಾವಣೆ ಫಲಿತಾಂಶ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ. ಫಲಿತಾಂಶ ಹೊರಬರುತ್ತಿದ್ದಂತೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇಂತಹ ನೆಲ ಕಚ್ಚಿದ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲು ಎಲ್ಲರೂ ಹೆದರಿ ಓಡಿ ಹೋಗುತ್ತಿದ್ದು, ಆ ಸ್ಥಾನವನ್ನು ವಹಿಸಿಕೊಳ್ಳಲು ಯಾರೂ ಸಿದ್ದರಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ಸಂಸದ ಶಿವಕುಮಾರ ಉದಾಸಿ ಅವರನ್ನು ಬಿಜೆಪಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಅಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವೀರೇಂದ್ರ ಶೆಟ್ಟರ, ಮುಖಂಡರಾದ ಜಯಣ್ಣ ಮಲ್ಲಿಗಾರ, ಚನ್ನವೀರಗೌಡ, ವಿ.ವಿ. ಹಿರೇಮಠ, ಸುರೇಶ ಯತ್ನಳ್ಳಿ, ರವೀಂದ್ರ ಪಟ್ಟಣಶೆಟ್ಟಿ, ಮುರಿಗೆಪ್ಪ ಶೆಟ್ಟರ, ಶಿವಯೋಗಿ ಶಿರೂರ, ವನಿತ ಗುತ್ತಲ, ವಿಜಯ ಮಾಳಗಿ, ಪುರಸಭೆ ಸದಸ್ಯರಾದ ಬಿ.ಎಂ. ಛತ್ರದ, ರಾಮಣ್ಣ ಕೋಡಿಹಳ್ಳಿ, ಚಂದ್ರಣ್ಣ ಶೆಟ್ಟರ, ಬಾಲಚಂದ್ರ ಪಾಟೀಲ, ಶಿವಯೋಗಿ ಅಂಗಡಿ, ಕಲಾವತಿ ಬಡಿಗೇರ, ಸುಭಾಸ ಮಾಳಗಿ, ಮಂಜಣ್ಣ ಬಾರ್ಕಿ, ಈರಣ್ಣ ಬಣಕಾರ, ಹನುಮಂತ ಮ್ಯಾಗೇರಿ, ವಿನಯ ಹಿರೇಮಠ, ಮೆಹಬೂಬ್‌ ಅಗಸನಹಳ್ಳಿ, ಫಕ್ಕೀರಮ್ಮ ಛಲವಾದಿ, ಗಾಯತ್ರಿ ರಾಯ್ಕರ್‌, ಸರೋಜಾ ಉಳ್ಳಾಗಡ್ಡಿ, ಕವಿತಾ ಸೊಪ್ಪಿನಮಠ ಇದ್ದರು. ಮುರಿಗೆಪ್ಪ ಶೆಟ್ಟರ ಸ್ವಾಗತಿಸಿದರು. ಸುರೇಶ ಅಸಾದಿ ನಿರೂಪಿಸಿದರು. ಮಲ್ಲೇಶ ಬಣಕಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next