Advertisement

ನಗರದಲ್ಲಿ ಹಸುರು ಮಾಯವಾಗುತ್ತಿದೆ !

02:29 AM Jun 24, 2019 | Team Udayavani |

ಮಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ನಗರದಲ್ಲಿ ಮರಗಳನ್ನು ಕಡಿಯಲಾಗುತ್ತಿದ್ದು, ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಪೈಕಿ ಬಂದರು ಮತ್ತು ಕುದ್ರೋಳಿ ವಾರ್ಡ್‌ ಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮರ-ಗಿಡಗಳಿವೆ.

Advertisement

ಕುದ್ರೋಳಿ, ಬಂದರು ವಾರ್ಡ್‌ ಗಳಲ್ಲಿ ಕೇವಲ ಶೇ. 0.5ನಷ್ಟು ಪ್ರದೇಶದಲ್ಲಿ ಮಾತ್ರ ಮರ-ಗಿಡಗಳಿವೆ. ಈ ವಿಚಾರವನ್ನು ಅರಣ್ಯ ಇಲಾಖೆ ಇದೀಗ ಗಂಭೀರವಾಗಿ ಪರಿಗಣಿ ಸಿದ್ದು, ಈ ಎರಡೂ ವಾರ್ಡ್‌ ಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 100 ಗಿಡ ನೆಡುವ ಯೋಜನೆಯನ್ನು ಹಾಕಿದೆ. ಬಂದರು ವಾರ್ಡ್‌ನಲ್ಲಿ ಸದ್ಯ ಕಟ್ಟಡಗಳ ಸಂಖ್ಯೆ ಹೆಚ್ಚಿರುವುದರಿಂದ ಗಿಡ ಗಳನ್ನು ನೆಡಲು ಸ್ಥಳಾವಕಾಶದ ಕೊರತೆ ಇದೆ. ಆದರೂ ಯಾವೆಲ್ಲ ಪ್ರದೇಶ ಗಳಲ್ಲಿ ಗಿಡ ನೆಡಬಹುದು ಎಂದು ಪರಿಶೀಲಿಸಲಾಗುತ್ತಿದೆ.

ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕೆಲವು ವರ್ಷಗಳ ಹಿಂದೆ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯು 2011ರ ಜನಗಣತಿಗೆ ಅನುಗುಣವಾಗಿ 2016ರಲ್ಲಿ ಸರ್ವೆ ನಡೆಸಿದೆ. ಈ ವೇಳೆ ನಗರದ ಬಂದರು ಮತ್ತು ಕುದ್ರೋಳಿ ವಾರ್ಡ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮರಗಳಿವೆ ಎಂಬ ವಿಷಯ ತಿಳಿಯಿತು. ಪಾಲಿಕೆ ವ್ಯಾಪ್ತಿಯು 2001ರಲ್ಲಿ ಶೇ.22ರಷ್ಟು ಹಸಿರೀಕರಣವಾಗಿತ್ತು. 2011ರಲ್ಲಿ ಶೇ.20 ಮತ್ತು 2018ರಲ್ಲಿ ಶೇ.18ಕ್ಕೆ ಇಳಿದಿದೆ. 7ರಿಂದ 8 ವರ್ಷದಲ್ಲಿ ಸುಮಾರು ಶೇ.2ರಿಂದ 3ರಷ್ಟು ಹಸುರು ಪ್ರದೇಶ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಟ್ಟೆ ಯುನಿವರ್ಸಿಟಿ ಸೆಂಟರ್‌ ಫಾರ್‌ ಸೈನ್ಸ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ನ ಪ್ರೊಪೆಸರ್‌ ಡಾ| ಸ್ಮಿತಾ ಹೆಗ್ಡೆ ಮಾರ್ಗದರ್ಶನದಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಟ್ ವಿಭಾಗದ ಸಹಾಯಕ ಪ್ರೊಪೇಸರ್‌ ಸಂಗೀತಾ ಎಸ್‌. ಅವರು 2011ನೇ ಇಸವಿಯಲ್ಲಿ “ಮರ, ಜನರು ಮತ್ತು ನಗರ: ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿನ ಹಸಿರೀಕರಣ’ ವಿಷಯದಲ್ಲಿ ಸಂಶೋಧನೆ ನಡೆಸಿದ್ದರು.
ಡಾ| ಸ್ಮಿತಾ ಹೆಗ್ಡೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಮಂಗಳೂರಿಗೆ ಸ್ಮಾರ್ಟ್‌ ಸಿಟಿ ಯೋಜನೆ ಬರುವ ವೇಳೆ ನಗರಕ್ಕೆ ಎಷ್ಟು ಹಸುರಾಗಿರಬೇಕು ಎಂಬ ವಿಷಯ ತಿಳಿಯುವ ಸಲುವಾಗಿ ಈ ಸಂಶೋಧನೆಯನ್ನು ಕೈಗೊಂಡಿದ್ದೆವು. ಬಂದರು ಮತ್ತು ಕುದ್ರೋಳಿ ವಾರ್ಡ್‌ಗಳಲ್ಲಿ ಶೇ.0.5ನಷ್ಟು ಪ್ರದೇಶದಲ್ಲಿ ಮರ ಗಿಡಗಳಿರುವುದು ತಿಳಿದು ಬಂತು. 2008, 2016ರ ಸ್ಯಾಟಲೈಟ್‌ ಇಮೇಜ್‌ ಆಧಾರಿತವಾಗಿ ಸರ್ವೆ ಮಾಡಲಾಗಿದೆ. ನಗರದ ಇನ್ನು ಕೆಲವು ಪ್ರದೇಶಗಳಲ್ಲಿ ಮರ ಗಳ ಸಂಖ್ಯೆ ಹೆಚ್ಚು ಕಾಣುತ್ತದೆ. ಆದರೆ, ಜನಗಳ ಸಾಂಧ್ರತೆ ಮತ್ತಷ್ಟು ಜಾಸ್ತಿ ಇದ್ದು, ಸಮತೋಲನವಾಗಿಲ್ಲ ಎಂದಿದ್ದಾರೆ.

ಶೇ. 33ರಷ್ಟು ಹಸುರು ಬೇಕು
ಯಾವುದೇ ನಗರದಲ್ಲಿ ಕನಿಷ್ಠ ಶೇ. 33ರಷ್ಟು ಮರ ಗಿಡಗಳಿಂದ ಹಸಿರೀಕರಣದಿಂದ ಕೂಡಿರಬೇಕು. ಆದರೆ ನಗರದಲ್ಲಿ ಕೇವಲ ಶೇ. 18ರಷ್ಟು ಮಾತ್ರ ಹಸುರು ತುಂಬಿಕೊಂಡಿದೆ. ಮತ್ತೂಂದೆಡೆ ರಾಜ್ಯದಲ್ಲಿಯೂ ಹಸುರು ಪ್ರದೇಶ ಕಡಿಮೆಯಾಗುತ್ತಿದ್ದು, ಶೇ.23ಕ್ಕೆ ಇಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next