Advertisement

ದತ್ತಭಕ್ತರಿಂದ ಬೃಹತ್‌ ಶೋಭಾಯಾತ್ರೆ

04:58 PM Dec 22, 2018 | Team Udayavani |

ಚಿಕ್ಕಮಗಳೂರು: ದತ್ತಜಯಂತಿ ಉತ್ಸವದ ಅಂಗವಾಗಿ ನಗರದಲ್ಲಿ ಶುಕ್ರವಾರ ಗುರು ದತ್ತಾತ್ರೇಯರ ವಿಗ್ರಹದೊಂದಿಗೆ ದತ್ತಮಾಲಾಧಾರಿಗಳ ಬೃಹತ್‌ ಶೋಭಾಯಾತ್ರೆ ನಡೆಯಿತು.

Advertisement

ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆಗೆ ಶಾಸಕ ಸಿ.ಟಿ. ರವಿ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್‌, ಭಜರಂಗದಳ ಜಿಲ್ಲಾ ಸಂಚಾಲಕ ತುಡಕೂರು ಮಂಜು ಚಾಲನೆ ನೀಡಿದರು. ಬಳಿಕ ಕೆಇಬಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ತೆರಳಿದ ಮಾಲಾಧಾರಿಗಳು ಬಸವನಹಳ್ಳಿ ಮುಖ್ಯ ರಸ್ತೆಯಿಂದ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದರು. 

ಶೋಭಾಯಾತ್ರೆ ಸಂಚರಿಸಿದ ಮಾರ್ಗದ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಿಂತು ಮೆರವಣಿಗೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಸಾಕಷ್ಟು ಜನ ಕಟ್ಟಡಗಳ ಮೇಲೆ ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದರು.

ಚಂಡೆ, ವೀರಭದ್ರ ಕುಣಿತ, ಡೊಳ್ಳುಕುಣಿತ, ಕೀಲು ಕುದುರೆ, ವಿವಿಧವಾದ್ಯಗಳು ಶೋಭಾಯಾತ್ರೆಯ ಮೆರಗು ಹೆಚ್ಚಿಸಿದ್ದವು. ಗ್ರಾಮೀಣ ಪ್ರದೇಶದ ದೇವರ ಅಡ್ಡೆಗಳನ್ನು ಹೊತ್ತು ಸಾಗಿದ್ದು ಈ ಬಾರಿಯ ವಿಶೇಷವಾಗಿತ್ತು. ವಾದ್ಯಗೋಷ್ಠಿಗೆ ತಕ್ಕಂತೆ ಮಾಲಾಧಾರಿಗಳು ನೃತ್ಯ ಮಾಡಿದರು. ಮತ್ತೆ ಕೆಲವು ಯುವಕರು ಬೃಹದಾಕಾರದ ಕೇಸರಿ ಧ್ವಜ ಮತ್ತು ಭಗವಾಧ್ವಜಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಮಹಿಳೆಯರ ಕುಣಿತ: ಕೇವಲ ಯುವಕರು ಮಾತ್ರವಲ್ಲದೆ ಈ ಬಾರಿ ಮಹಿಳೆಯರೂ ಸಹ ಹಿಂದೂ ಪರ ಘೋಷಣೆ ಕೂಗಿ, ಭಜನೆ ಮಾಡುತ್ತ ಕುಣಿದರು. ಪಲ್ಲವಿ ಸಿ.ಟಿ.ರವಿ, ನಗರಸಭಾ ಸದಸ್ಯರಾದ ಕವಿತಾಶೇಖರ್‌, ವನಿತಾ, ವೀಣಾ ಶೆಟ್ಟಿ ಇತರರು ಘೋಷಣೆ ಕೂಗಿ ಕುಣಿಯುತ್ತಿದ್ದರು. ಸಂಘಟನೆಗಳ ಮುಖಂಡರು, ಶೋಭಾಯಾತ್ರೆಯಲ್ಲಿ ಆಗಮಿಸಿದ ಮಾಲಾಧಾರಿಗಳು ಸರತಿ ಸಾಲನ್ನು ಬಿಟ್ಟು ಹೋಗದಂತೆ ತಡೆಯುತ್ತಿದ್ದರು.

Advertisement

ರಸ್ತೆಯಲ್ಲಿ ಕುಳಿತು ಭಜನೆ : ಶೋಭಾಯಾತ್ರೆ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ಗಣಪತಿ ದೇವಾಲಯದ ಮುಂಭಾಗದಲ್ಲಿ ಭಜರಂಗದಳ ಜಿಲ್ಲಾ ಸಂಚಾಲಕ ತುಡಕೂರು ಮಂಜು ಹಾಗೂ ಇತರ ದತ್ತಮಾಲಾದಾರಿಗಳು ರಸ್ತೆಯ ಮೇಲೆ ಕುಳಿತು ಹಿಂದೂಪರ ಘೋಷಣೆ ಕೂಗಲಾರಂಭಿಸಿದರು. ಆಗ ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಟಿ.ರವಿ ಸಹ ಅವರುಗಳೊಂದಿಗೆ ರಸ್ತೆಯ ಮೇಲೆ
ಕುಳಿತು ಹಿಂದೂ ಪರ ಘೋಷಣೆಗಳನ್ನು ಕೂಗಿದರಲ್ಲದೆ, ಕೆಲಕಾಲ ಅಲ್ಲಿಯೇ ಕುಳಿತು ಭಜನೆ ಮಾಡಿದರು.

ಶೋಭಾಯಾತ್ರೆಯಲ್ಲಿ ಶಾಸಕ ಸಿ.ಟಿ.ರವಿ, ಸಂಸದೆ ಶೋಭಕರಂದ್ಲಾಜೆ, ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಎನ್‌.ಜೀವರಾಜ್‌, ಬಜರಂಗದಳ ದಕ್ಷಿಣ ಪ್ರಾಂಥ ಸಹ ಸಂಚಾಲಕ ರಘು ಸಕಲೇಶಪುರ, ಜಿಲ್ಲಾ ಸಂಚಾಲಕ ತುಡಕೂರು ಮಂಜು, ವಿಶ್ವಹಿಂದೂ ಪರಿಷತ್‌ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್‌, ಮುಖಂಡರುಗಳಾದ ಯೋಗೀಶ್‌ರಾಜ್‌ಅರಸ್‌, ರಾಜಪ್ಪ, ಪ್ರೇಮ್‌ಕಿರಣ್‌ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next