Advertisement

B.Ed ಆಗದೆ ವೃತ್ತಿಗೆ ಕಂಟಕ- ಅಡಕತ್ತರಿಯಲ್ಲಿ ಅನುದಾನಿತ PU ಉಪನ್ಯಾಸಕರು

12:57 AM Nov 23, 2023 | Team Udayavani |

ಮಂಗಳೂರು: ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಬಿಎಡ್‌ ಆಗದೆ ಇದ್ದರೂ 2008ರ ಬಳಿಕ ನೇಮಕಗೊಂಡಿರುವ ಉಪನ್ಯಾಸಕರಿಗೆ ಈಗ ವೃತ್ತಿ ಕಂಟಕ ಎದುರಾಗಿದೆ.
2008ರ ಮೊದಲು ಉಪನ್ಯಾಸಕ ರಾಗಿ ಸೇರಿರುವವರಿಗೆ ಬಿಎಡ್‌ನಿಂದ ರಿಯಾಯಿತಿ ಇದೆ. ಜತೆಗೆ ಸರಕಾರಿ ಉಪನ್ಯಾಸಕರಿಗೆ ವೇತನ ಸಹಿತವಾಗಿ ಬಿಎಡ್‌ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಮಾಹಿತಿ ಕೊರತೆಯಿಂದ ಹಾಗೂ 2008ರ ಆಸುಪಾಸಿನಲ್ಲೇ ವೃತ್ತಿಗೆ ಸೇರಿದ ರಾಜ್ಯದ ಸುಮಾರು 1,200ಕ್ಕೂ ಅಧಿಕ (ದಕ್ಷಿಣ ಕನ್ನಡ, ಉಡುಪಿಯಲ್ಲಿ 80) ಅನುದಾನಿತ ಉಪನ್ಯಾಸಕರು ಮಾತ್ರ ಬಿಎಡ್‌ ಆಗಿಲ್ಲ ಎಂಬ ನೆಪದಿಂದ ಈಗ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಏನಿದು ಸಂಕಷ್ಟ?
2008ರ ಫೆ. 4ರ ಪೂರ್ವದಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಅಭ್ಯರ್ಥಿಯು ಬೋಧನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಎಂಬ ನಿಯಮವಿತ್ತು.

ಆದರೆ ಅನಂತರ ಸ್ನಾತಕೋತ್ತರ ಪದವಿಯ ಜತೆಗೆ ಬಿಎಡ್‌ ಪದವಿಯನ್ನೂ ಹೊಂದಿರಬೇಕು ಎಂಬ ನಿಯಮ ತರಲಾಯಿತು. ಈ ಮಧ್ಯೆ 2008ಕ್ಕಿಂತ ಹಿಂದೆ ನೇಮಕಗೊಂಡ ಪ.ಪೂರ್ವ ಉಪನ್ಯಾಸಕರಿಗೆ ಬಿಎಡ್‌ ಪದವಿ ಕಡ್ಡಾಯವಲ್ಲ; ಅನಂತರ ನೇಮಕಗೊಂಡವರಿಗೆ ಮಾತ್ರ ಕಡ್ಡಾಯ ಎಂದು ಸರಕಾರ 2021ರಲ್ಲಿ ತಿಳಿಸಿದೆ. ಆದರೆ ಈ ನಡುವಣ ಒಂದೆರಡು ವರ್ಷ ಬಿಎಡ್‌ ಇಲ್ಲದೆ ನೇಮಕಗೊಂಡವರು ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಇಲಾಖೆಯ ವಾದವೇನು?: ಸರಕಾರಿ/ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008ರ ಅನಂತರ ಆಯ್ಕೆಯಾಗಿರುವ ಉಪನ್ಯಾಸಕರಿಗೆ ನ್ಯಾಶನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಶನ್‌ ನಿಯಮದನ್ವಯ ಬಿಎಡ್‌ ಕಡ್ಡಾಯ. ಇದರಂತೆ ಕೆಲವು ವರ್ಷ ಕಾಲಾವಕಾಶ ನೀಡಲಾಗಿದ್ದು, ಬಿಎಡ್‌ ಪದವಿ ಪೂರ್ಣಗೊಳಿಸಲು ಹೇಳಲಾಗಿತ್ತು ಎಂಬುದು ಇಲಾಖೆಯ ವಾದ.
ಉಪನ್ಯಾಸಕರ ವಾದವೇನು?: ಪ್ರಸ್ತುತ ಖರುವ ಅನುದಾನಿತ ಉಪನ್ಯಾಸಕರಲ್ಲಿ 1,200ರಷ್ಟು ಮಂದಿ ಬಿಎಡ್‌ ಪದವಿ ಹೊಂದಿಲ್ಲ. ಬಿಎಡ್‌ಗೆ 2 ವರ್ಷ ಬೇಕಾಗಿದ್ದು, ಖಾಸಗಿ ಅನುದಾನಿತ ಕಾಲೇಜುಗಳು ಉಪನ್ಯಾಸಕರು ಕರ್ತವ್ಯಕ್ಕೆ ರಜೆ ಹಾಕಿ ಬಿಎಡ್‌ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ಅಲ್ಲದೆ ಇವರಿಗೆ ವೇತನ ಸಹಿತ ರಜೆ ಮಂಜೂರು ಮಾಡಲು ಆಡಳಿತ ಮಂಡಳಿಗಳಿಗೆ ಅವಕಾಶ ಇಲ್ಲ. ಸುಮಾರು 40-50ರ ಆಸುಪಾಸಿನ ವಯಸ್ಸಿನಲ್ಲಿರುವ ಈ ಉಪನ್ಯಾಸಕರು ಈಗ ಬಿಎಡ್‌ ಮಾಡುವುದು ಕೂಡ ತುಸು ಕಷ್ಟ.

ಉಪನ್ಯಾಸಕರೊಬ್ಬರು ಮಾತನಾಡಿ, “ಪ್ರಸ್ತುತ ಪಿಯು ಕಾಲೇಜಿನಲ್ಲಿ ಶೇ. 80ರಷ್ಟು ಉಪನ್ಯಾಸಕರು 2008ರ ಮೊದಲು ಸೇರಿರುವ, ಬಿಎಡ್‌ ಆಗದವರೇ ಆಗಿದ್ದಾರೆ. ಬಿಎಡ್‌ ಆಗದೆ ಇದ್ದರೂ ಗುಣಮಟ್ಟದ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಬಿಎಡ್‌ ಕಡ್ಡಾಯಕ್ಕೆ ಸರಕಾರ ಜೋತುಬಿದ್ದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Advertisement

ವಿನಾಯಿತಿ ಅಗತ್ಯ
ಅನುದಾನಿತ ಪಿಯು ಕಾಲೇಜುಗಳಲ್ಲಿ 1998ರಲ್ಲಿಯೇ ಸ್ನಾತಕೋತ್ತರ ಪದವಿಯನ್ನು ಪಡೆದ ಉಪನ್ಯಾಸಕರು ಪ್ರಸ್ತುತ 45- 50ಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದು, 15ರಿಂದ 20 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. 2014ರ ಡಿಸೆಂಬರ್‌ 31ರ ವರೆಗೆ ನೇಮಕಗೊಂಡ ಎಲ್ಲ ಉಪನ್ಯಾಸಕರಿಗೆ ಬಿಎಡ್‌ನಿಂದ ವಿನಾಯಿತಿ ನೀಡುವುದು ಅಗತ್ಯ ಎಂದು ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಆಗ್ರಹಿಸಿದ್ದಾರೆ.

ಪಾಠ ಮಾಡುವವರೇ ಪಾಠ ಕೇಳುವ ಸ್ಥಿತಿ!
ವೃತ್ತಿ ಶಿಕ್ಷಣ ಇಲಾಖೆ (ಜೆಒಸಿ)ಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಡಿ ಬರುವ ಸರಕಾರಿ/ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ವಿಲೀನ ಹೊಂದಿರುವ 161 ಉಪನ್ಯಾಸಕರು ಬಿಎಡ್‌ ಮಾಡು ವಂತೆ ವೇತನ ಸಹಿತವಾಗಿ ನಿಯೋಜಿಸಿ ಇತ್ತೀಚೆಗೆ ಇಲಾಖೆ ಆದೇಶಿಸಿದೆ. ಹೀಗಾಗಿ ನಿವೃತ್ತಿಯ ಅಂಚಿನಲ್ಲಿರುವ ಕೆಲವು ಉಪನ್ಯಾಸಕರು ಕೂಡ ಈಗ ಬಿಎಡ್‌ ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪದವಿಪೂರ್ವ ಉಪನ್ಯಾಸಕರಿಗೆ ಬಿಎಡ್‌ ಕಡ್ಡಾಯ ಎಂಬ ನಿಯಮವನ್ನು ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಕೆಲವರಿಗೆ ಸಮಸ್ಯೆ ಸೃಷ್ಟಿಸಲಾಗಿದೆ. ಇದನ್ನು ಸರಕಾರ ಮರುಪರಿಶೀಲಿಸಬೇಕು. ಈ ಮೂಲಕ ಸಂಕಷ್ಟದಲ್ಲಿರುವ ಉಪನ್ಯಾಸಕರಿಗೆ ನೆರವಾಗಬೇಕಿದೆ.
-ಶ್ರೀಕಂಠೇಗೌಡ ,ರಾಜ್ಯ ಅಧ್ಯಕ್ಷರು, ಪದವಿಪೂರ್ವ ಪ್ರಾಂಶುಪಾಲರ ಸಂಘ

  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next