Advertisement

ಅನುದಾನ ಹಂಚಿಕೆ ವಿಚಾರ: ಕೆಲವು ಸಚಿವರಿಗೇ ಅತೃಪ್ತಿ?

01:02 AM Feb 13, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದಲ್ಲಿ ಕೆಲವು ಸಚಿವರು ಮತ್ತು ಶಾಸಕರ ಕ್ಷೇತ್ರಕ್ಕೆ 1,200 ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿರುವುದು ಸಚಿವರ ನಡುವೆಯೇ ಕಸಿವಿಸಿಗೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆರೆ ನೀರು ತುಂಬಿಸುವುದಕ್ಕೆ ಬರೋಬ್ಬರಿ 1,200 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ಸೂಚಿಸ ಲಾಗಿತ್ತು. ಲೋಕಸಭೆ ಚುನಾವಣೆ ಸಮೀಪಿಸು ತ್ತಿರುವಂತೆಯೇ ಈ ವಿಚಾರ ಆಡಳಿತ ಪಕ್ಷದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವುದಕ್ಕೆ ಸಮಸ್ಯೆ ಯಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸಮಜಾಯಿಶಿ ನೀಡುತ್ತಿರುವ ಮಧ್ಯೆಯೇ ಆಯ್ದ ಸಚಿವರು ಹಾಗೂ ಶಾಸಕರ ಕ್ಷೇತ್ರಗಳಿಗೆ ಭರಪೂರ ಅನುದಾನ ಲಭಿಸು ತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಪ್ರತಿ ನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆರೆ ತುಂಬಿಸುವುದಕ್ಕೆ 800 ಕೋಟಿ ರೂ. ಹಾಗೂ ಕುಣಿಗಲ್‌ ಶಾಸಕ ರಂಗನಾಥ್‌ ಕ್ಷೇತ್ರಕ್ಕೆ 400 ಕೋಟಿ ರೂ. ಬಿಡುಗಡೆ ಮಾಡುವುದಕ್ಕೆ ಕಳೆದ ತಿಂಗಳು ಕೊನೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದು ಈಗ ಹಿರಿಯ ಸಚಿವರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಹೆಬ್ಟಾಳ್ಕರ್‌ ಕ್ಷೇತ್ರವೊಂದಕ್ಕೇ 800 ಕೋಟಿ ರೂ. ಅನುದಾನ ಬಿಡುಗಡೆ ಸಚಿವ ಸತೀಶ್‌ ಜಾರಕಿಹೊಳಿ ಕೋಪಕ್ಕೆ ಕಾರಣವಾಗಿದೆ. ಅವರು ಸಿಎಂ ಸಿದ್ದರಾಮಯ್ಯ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಹಿರಿಯ ಸಚಿವರು ನಡೆಸಿದ ಉಪಾಹಾರ ಸಭೆಯಲ್ಲೂ ಈ ವಿಚಾರ ಪ್ರಸ್ತಾವವಾಗಿದೆ ಎನ್ನಲಾಗಿದೆ. ಈ ನಡುವೆ ಲೋಕಸಭೆ ಚುನಾವಣೆ ಬಳಿಕ ಮತ್ತೆ ರಾಜ್ಯದಲ್ಲಿ ಮತ್ತಷ್ಟು ಡಿಸಿಎಂ ಹುದ್ದೆಗಳನ್ನು ರಚಿಸುವ ಬಗ್ಗೆ ಬೇಡಿಕೆ ಕೇಳಿಬರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next