Advertisement

ಕಸ ಮಾಫಿಯಾ ಕಡಿವಾಣಕ್ಕೆ ಗ್ರಾಪಂಗಳಿಗೆ ಅಧಿಕಾರ

08:13 AM Nov 06, 2017 | |

ಬೆಂಗಳೂರು: ಎಲ್ಲಿಂದಲೋ ಕಸ ತಂದು ಕದ್ದು ಮುಚ್ಚಿ ರಾತ್ರೋರಾತ್ರಿ ಹಳ್ಳಿಗಳ ಬದಿ ಹಾದು ಹೋಗುವ ಹೆದ್ದಾರಿಗಳಲ್ಲಿ ಸುರಿದು ಹೋಗುವ ಚಾಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಈ ರೀತಿ ಹಳ್ಳಿಗಳಲ್ಲಿ ಕಸ ತಂದು ಸುರಿಯುವವರಿಗೆ ಲಗಾಮು ಹಾಕಲು ಗ್ರಾಮ ಪಂಚಾಯಿತಿಗಳಿಗೆ “ಕಾನೂನು ಅಧಿಕಾರ’ ನೀಡಲು ಸರ್ಕಾರ ನಿರ್ಧರಿಸಿದೆ.

Advertisement

ಹಳ್ಳಿಗಳ ನೈರ್ಮಲ್ಯ ಹಾಳು ಮಾಡುತ್ತಿರುವ “ಹೊರಗಿನ ಕಸ ಮಾಫಿಯಾ’ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ನೀಡುವ ಸಂಬಂಧ “ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ-1993’ರ ಪ್ರಕರಣ 75ಕ್ಕೆ ತಿದ್ದುಪಡಿ ತರಲು ಗ್ರಾಮೀಣಾ ಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಫಾರಸಿನ ಮೇರೆಗೆ ಈ ತಿದ್ದುಪಡಿ ತರಲಾಗುತ್ತಿದ್ದು, ಪ್ರಸ್ತಾವನೆಗೆ ಗ್ರಾಮೀಣಾಭಿವೃದ್ಧಿ ಸಚಿವರ ಅನುಮೋದನೆ ಸಿಕ್ಕಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ-1993’ರ ಪ್ರಕರಣ 75ಲ್ಲಿ ಗ್ರಾಮದ ಅನೈರ್ಮಲ್ಯಕ್ಕೆ ಕಾರಣವಾಗುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಾರ್ವಜನಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲು ಗ್ರಾ.ಪಂ.ಗೆ ಅವಕಾಶವಿತ್ತು. ಆದರೆ, ಈಗ ತಿದ್ದುಪಡಿ ನಿಯಮ ಜಾರಿಗೆ ಬಂದರೆ ಹೊರಗಿನಿಂದ ಕಸ ತಂದು ಹಳ್ಳಿಗಳಲ್ಲಿ ಸುರಿದವರ ಮೇಲೆ ದಂಡ ವಿಧಿಸುವ ಹಾಗೂ ತಪ್ಪಿತಸ್ಥರ ವಿರುದ್ಧ ಪೊಲೀಸ್‌ ದೂರು ದಾಖಲಿಸುವ ಕಾನೂನು ಅಧಿಕಾರ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಸಿಗಲಿದೆ.

ಅಸಹಾಯಕವಾಗಿದ್ದವು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಬೇರೆ ಗ್ರಾಮ, ಜಿಲ್ಲೆ ಮತ್ತು ರಾಜ್ಯಗಳಿಂದ ರಾತ್ರಿ ವೇಳೆ ವಾಹನಗಳಲ್ಲಿ ಕಸ ತಂದು ಸುರಿಯುವ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು ಸವಾಲಾಗುತ್ತಿದೆ. ಜೊತೆಗೆ ದೊಡ್ಡ ನಗರಗಳಿಗೆ ಹೊಂದಿಕೊಂಡಿರುವ ಮತ್ತು ಪಟ್ಟಣ ಪ್ರದೇಶದ ಗುಣಲಕ್ಷಣಗಳನ್ನು ಹೊಂದಿರುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಆದರೆ, ಕಣ್ಣ ಮುಂದೆ ಎಲ್ಲ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳಲು ಗ್ರಾಪಂಗಳಿಗೆ ಅವಕಾಶವಿರ ಲಿಲ್ಲ. ಅದಕ್ಕಾಗಿ ತಿದ್ದುಪಡಿ ತರಲಾಗುತ್ತಿದೆ  ಎಂದು ಅಧಿಕಾರಿಗಳು ಹೇಳುತ್ತಾರೆ. 

ಗ್ರಾಮಕ್ಕೆ ನಿಯಮಾವಳಿ ಇರಲಿಲ್ಲ: ಸ್ವಚ್ಛ ಭಾರತ
ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ “ಘನತಾಜ್ಯ ವಿಲೇವಾರಿ ನಿಯಮಾವಳಿ-2016’ರಲ್ಲಿ ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ನಿಯಮಾವಳಿಗಳು ಇರಲಿಲ್ಲ. ಇದರ ನೆರವು ಪಡೆದುಕೊಂಡ ಕೆಲವರು ಬೇರೆ ಕಡೆಯಿಂದ ವಾಹನಗಳಲ್ಲಿ ಕಸ ತಂದು ಗ್ರಾ.ಪಂ. ವ್ಯಾಪ್ತಿಗೆ ಬರುವ ಹೆದ್ದಾರಿಗಳಲ್ಲಿ ಸುರಿದು ಹೋಗುತ್ತಿದ್ದರು. ಹಾಗಾಗಿ, ಕೇಂದ್ರ ಸರ್ಕಾರದ ಘನ ತ್ಯಾಜ್ಯ ನಿಯಾಮವಳಿಗಳು ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ಮತ್ತು ಬೇರೆ ಕಡೆಗಳಿಂದ ಕಸ ತಂದು ಗ್ರಾ.ಪಂ. ಬಳಿ ಹಾದು
ಹೋಗುವ ಹೆದ್ದಾರಿಗಳಲ್ಲಿ ಸುರಿದವರ ಮೇಲೆ ದಂಡ ವಿಧಿಸಿ, ತಪ್ಪಿತಸ್ಥರ ವಿರುದ್ಧ ಪೊಲೀಸ್‌ ದೂರು ದಾಖಲು ಮಾಡುವ ಅಧಿಕಾರವನ್ನು ಸಂಬಂಧಪಟ್ಟ ಗ್ರಾ.ಪಂ.ಗೆ ಕೊಡಲು ಅನುಕೂಲವಾಗುವಂತೆ ಸೂಕ್ತ ತಿದ್ದುಪಡಿ ತರಲು ಕೋರಲಾಗಿತ್ತು. ಅದರಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. 

ರಫಿಕ್‌ ಅಹ್ಮದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next