Advertisement

ಅಕ್ಟೋಬರ್‌ನಲ್ಲಿ ಹೊಸ ಶಿಕ್ಷಣ ನೀತಿಯಡಿ ಪದವಿ ಕಲಿಕಾ ವ್ಯವಸ್ಥೆ ಜಾರಿ

11:23 PM Jul 27, 2021 | Team Udayavani |

ಮಂಗಳೂರು: ಬಹುಶಿಸ್ತೀಯ ನಾಲ್ಕು ವರ್ಷಗಳ ಪದವಿ ಶಿಕ್ಷಣ ನೀಡುವ ರಾಷ್ಟ್ರೀಯ ಶಿಕ್ಷಣ ನೀತಿಯು ಅಕ್ಟೋಬರ್‌ನಲ್ಲಿ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದ್ದು, ಇದು ವಿದ್ಯಾರ್ಥಿಸ್ನೇಹಿ ಹಾಗೂ ಉದ್ಯೋಗ ಪೂರಕ ಶಿಕ್ಷಣ ಕ್ರಮವಾಗಿರಲಿದೆ. ಸದ್ಯಕ್ಕೆ ಇದು ಕಡ್ಡಾಯವಲ್ಲ. ಆದರೆ ವಿವಿ ಕಾಲೇಜು ಸಹಿತ ವಿವಿಧ ಕಾಲೇಜುಗಳಲ್ಲಿ ಇದು ಈ ವರ್ಷದಿಂದಲೇ ಅನುಷ್ಠಾನವಾಗಲಿದೆ ಎಂದು  ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಹೇಳಿದ್ದಾರೆ.

Advertisement

“ಕಾಲೇಜು ಶಿಕ್ಷಣದ ಸವಾಲು’ ಎಂಬ ವಿಷಯದಡಿ “ಉದಯವಾಣಿ’ಯು ಮಂಗಳೂರು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌-ಇನ್‌ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಇಲ್ಲಿಯವರೆಗೆ ಪದವಿ ಶಿಕ್ಷಣದ ಸರ್ಟಿಫಿಕೆಟ್‌ ಬೇಕಾದರೆ 3 ವರ್ಷ ಕಡ್ಡಾಯವಾಗಿ ಶಿಕ್ಷಣ ಪಡೆಯ ಬೇಕು. ಆದರೆ ಇನ್ನು ಮುಂದೆ ಪದವಿಯಲ್ಲಿ 1 ವರ್ಷದಲ್ಲಿಯೇ ವಿದ್ಯಾರ್ಥಿ ಬಿಟ್ಟು ಹೋದರೆ ವಿದ್ಯಾರ್ಥಿಯ ಉದ್ಯೋಗ ಅನುಕೂಲತೆಗಾಗಿ ಸರ್ಟಿಫಿಕೆಟ್‌ ನೀಡುತ್ತೇವೆ. 2 ವರ್ಷಗಳಲ್ಲಿ ಬಿಟ್ಟು  ಹೋದರೆ ಡಿಪ್ಲೊಮಾ ಸರ್ಟಿಫಿಕೆಟ್‌, ಮೂರು ವರ್ಷ ಪೂರ್ಣಗೊಳಿ ಸಿದರೆ ಪದವಿ ಹಾಗೂ 4 ವರ್ಷ ಪೂರ್ಣಗೊಳಿಸಿದರೆ “ಹೋನರ್‌’ ನೀಡಲಾಗುತ್ತದೆ. ಬಳಿಕ ನೇರ ಪಿಎಚ್‌.ಡಿ. ಮಾಡಲು ಅವಕಾಶವಿದೆ. ಉಪನ್ಯಾಸಕರಾಗಬೇಕಾದರೆ 1 ವರ್ಷ ಸ್ನಾತಕೋತ್ತರ ಪದವಿ ಮಾಡಿದರಾಯಿತು. ಒಬ್ಬ ವಿದ್ಯಾರ್ಥಿ ಪದವಿಗೆ ಸೇರಿದ ಬಳಿಕ ಆತ 2 ಬಾರಿ ತೊರೆಯುವ ಹಾಗೂ ಸೇರುವ ಅವಕಾಶವನ್ನೂ ನೂತನ ಶಿಕ್ಷಣ ನೀತಿಯಲ್ಲಿ ಪಡೆದುಕೊಂಡಿರುತ್ತಾನೆ ಎಂದವರು ಹೇಳಿದರು.

ಪಿಯು: ಎಲ್ಲ ವಿದ್ಯಾರ್ಥಿಗಳಿಗೂ ಸೀಟ್‌:

ಪ್ರಸಕ್ತ ವರ್ಷ ಪಿಯುಸಿಯಲ್ಲಿ ಎಲ್ಲರೂ ಉತ್ತೀರ್ಣರಾಗಿರುವ ಕಾರಣ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಸಾಧ್ಯತೆಯಿದೆ. ಆದರೆ ಯಾವ ವಿದ್ಯಾರ್ಥಿಗೂ ಸೀಟ್‌ ಇಲ್ಲ ಎಂಬ ಪರಿಸ್ಥಿತಿ ಉಂಟಾಗಬಾರದು. ಒಂದುವೇಳೆ ಇಷ್ಟವಿರುವ ಕೋರ್ಸ್‌ ಸಿಗದಿದ್ದರೆ ಆ ಸಂದರ್ಭದಲ್ಲಿ ಅವರಿಗೆ ಪರ್ಯಾಯ ಮಾರ್ಗ/ಅವಕಾಶವನ್ನು ನೀಡುವ ನೆಲೆಯಲ್ಲಿ ಕಾಲೇಜು ಆಡಳಿತ ವ್ಯವಸ್ಥೆ ಮಾಡ ಬೇಕು. ಹೆಚ್ಚು ವಿದ್ಯಾರ್ಥಿಗಳು ಇರುವಲ್ಲಿ ಹೆಚ್ಚುವರಿ ತರಗತಿ ಕೋಣೆ ಹಾಗೂ ಪೀಠೊಪಕರಣ ವ್ಯವಸ್ಥೆ ಇದ್ದರೆ ಅನುಮತಿ ನೀಡಲಾಗುವುದು. ಇಲ್ಲದಿದ್ದರೆ ಬೆಳಗ್ಗೆ, ಮಧ್ಯಾಹ್ನದ ಅನಂತರ ಎಂದು ಶಿಫ್ಟ್ ಆಧಾರದಲ್ಲಿ ತರಗತಿ ನಡೆಸಲು ಅನುಮತಿಯಿದೆ. ಸದ್ಯ ವಾಣಿಜ್ಯ ಪದವಿಗೆ ಹೆಚ್ಚಿನ ಬೇಡಿಕೆಯಿದೆ ಎಂದರು.

Advertisement

ಗೊಂದಲ-ಗಾಬರಿ ಬೇಡ:

ಕಾಲೇಜು ಸದ್ಯ ಆರಂಭವಾದರೂ ಆ.16ರ ಬಳಿಕವಷ್ಟೇ ಭೌತಿಕ ತರಗತಿ ಆರಂಭವಾಗಲಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿ ಲಸಿಕೆ ಪಡೆದುಕೊಂಡಿರಬೇಕು. ಜ್ವರ ಲಕ್ಷಣ ಇದ್ದರೆ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಬೇಕು. ಒಂದು ವೇಳೆ ಜ್ವರ ಇದ್ದರೆ ಅವರಿಗೆ ವಿಶೇಷ ಕೊಠಡಿಯಲ್ಲಿ ಇರಲು ಅವಕಾಶ ನೀಡಲಾಗುವುದು. ಜತೆಗೆ ಜ್ವರ ಇದ್ದವರಿಗೆ ವಿಶೇಷ ಪರೀಕ್ಷೆಗೂ ಅವಕಾಶವಿದೆ. ಹೀಗಾಗಿ ಯಾರೂ ಕೂಡ ಗಾಬರಿಯಾಗುವುದು ಬೇಡ. ಗೊಂದಲ ಮಾಡಿಕೊಳ್ಳುವುದು ಬೇಡ ಎಂದರು.

ಸೆಪ್ಟಂಬರ್‌ನಲ್ಲಿ ಡಿಜಿಟಲ್‌ ಮೌಲ್ಯಮಾಪನ:

ಡಿಜಿಟಲ್‌ ಮೌಲ್ಯಮಾಪನ ಮಾಡುವಂತೆ ಹೈಕೋರ್ಟ್‌ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಟೆಂಡರ್‌ ಕರೆಯಲಾಗಿದ್ದು ಅದು ಅಂತಿಮವಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಹೀಗಾಗಿ ಸೆಪ್ಟಂಬರ್‌ 15 ರ ಬಳಿಕ ನಡೆಯಲಿರುವ ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ ಉತ್ತರಪತ್ರಿಕೆಯನ್ನು ಡಿಜಿಟಲ್‌ ಮೌಲ್ಯ ಮಾಪನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ನಿಶ್ಚಿತಾ ಮಂಗಳೂರು

ಪರೀಕ್ಷೆಗೆ ವೇಳಾಪಟ್ಟಿ ಸಿದ್ಧವಾಗಿದೆ. ಆದರೆ ನನ್ನ ಹಾಸ್ಟೆಲ್‌ ಇನ್ನೂ ತೆರೆದಿಲ್ಲ

ಜು.23ರಿಂದ ಸ್ಯಾನಿಟೈಸೇಶನ್‌ ಸೇರಿದಂತೆ ಕೊರೊನಾ ಸಂಬಂಧವಾಗಿ ಸರಕಾರದ ಎಲ್ಲ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳನ್ನು ಸಿದ್ಧಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

.

ಪ್ರಣಿತ್‌,  ಕಿರಣ್‌ ಮಂಗಳೂರು 

2 ಮತ್ತು 4ನೇ ಸೆಮಿಸ್ಟರ್‌ಗೆ ಫ‌ಲಿತಾಂಶ ಹೇಗೆ? ರಿಸಲ್ಟ್ ಯಾವಾಗ ?

ಯುಜಿಸಿ ಮತ್ತು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ 2 ಮತ್ತು 4 ಸೆಮಿಸ್ಟರ್‌ಗೆ

ಪ್ರಮೋಷನ್‌ ಫಾರ್ಮುಲಾ ಅಧಾರಿತವಾಗಿ ಫ‌ಲಿತಾಂಶ ನೀಡಲಾಗುತ್ತದೆ. 1ನೇ ಮತ್ತು 3ನೇ ಸೆಮಿಸ್ಟರ್‌ಗಳ ಅಂಕ ಮತ್ತು ಪ್ರಸ್ತುತ ಸೆಮಿಸ್ಟರ್‌ನ ಆಂತರಿಕ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಗಸ್ಟ್‌ ಕೊನೆಯ ವಾರಕ್ಕೆ ಫ‌ಲಿತಾಂಶ ಪ್ರಕಟವಾಗಲಿದೆ.

.

ಗೀತಾ, ತೊಕ್ಕೊಟ್ಟು

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮಾಹಿತಿ ನೀಡಬಹುದೇ?

34 ವರ್ಷಗಳ ಬಳಿಕ ಸ್ವಾತಂತ್ರೊéàತ್ತರ ಭಾರತಕ್ಕೆ ಬೇಕಾದ ದೇಶೀಯತೆಯನ್ನು ಎತ್ತಿ ಹಿಡಿಯುವ, ವಿದ್ಯಾರ್ಥಿ ಕೇಂದೀಕೃತ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಇದು ಹೊಸ ಆವಿಷ್ಕಾರವನ್ನು ಒಳಗೊಂಡಿದ್ದು ವಿದ್ಯಾರ್ಥಿಗೆ ಕೌಶಲವನ್ನು ಒದಗಿಸಿ ಜೀವನ ಪರೀಕ್ಷೆ ಎದುರಿಸಲು ಬೇಕಾದ ಶಿಕ್ಷಣವಾಗಿರುತ್ತದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆ ತರಲಿದೆ. ಅಕ್ಟೋಬರ್‌ನಲ್ಲಿ ನಮ್ಮ ಕಾಲೇಜುಗಳಲ್ಲಿಯೂ ಈ ಹೊಸ ಶಿಕ್ಷಣ ವ್ಯವಸ್ಥೆ ಆರಂಭಗೊಳ್ಳಲಿದೆ.

.

ಪ್ರಕಾಶ್‌ ಪಡಿಯಾರ್‌, ಮರವಂತೆ

ಕೊರೊನಾದಿಂದಾಗಿ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಡ್ಡಿಯಾಯಿತೆ?

ಅಡ್ಡಿಯಾಗಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಪುಸ್ತಕ ರಚನಾ ಸಮಿತಿ ರಚನೆಯಾಗಿದೆ. ಹೊಸ ಶಿಕ್ಷಣ ನೀತಿ ಅಳವಡಿಸಿಕೊಳ್ಳುವ ಎಲ್ಲ ಕಾಲೇಜುಗಳಿಗೂ ಅನುಮತಿ ನೀಡಲಾಗುತ್ತಿದೆ. ಪೂರಕವಾಗಿ ಇತರ ಪ್ರಕ್ರಿಯೆಗಳು ನಡೆಯುತ್ತಿವೆ.

.

 ದೀಕ್ಷಾ,  ಬಂಟ್ವಾಳ

ಕಾಲೇಜುಗಳಲ್ಲಿ ಪರೀಕ್ಷೆಯ ರಿವಿಜನ್‌ಗೆ ಅವಕಾಶ ನೀಡಿದರೆ ಉತ್ತಮ. ಕೆಲವೆಡೆ ಆನ್‌ಲೈನ್‌ ಮೂಲಕ ರಿವಿಜನ್‌ ಮಾಡಿಸಲಾಗುತ್ತಿದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಮಾನಸಿಕ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಮನವಿಯಂತೆ ಈಗ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿಲ್ಲ. ಸದ್ಯ ಕಾಲೇಜುಗಳಿಗೆ ತೆರಳಿ ಪರೀಕ್ಷಾ ಸಿದ್ಧತೆಯ ಭಾಗವಾಗಿ ಆಯಾ ವಿಷಯದ ಉಪನ್ಯಾಸಕರೊಂದಿಗೆ ಸಂದೇಹ ಬಗೆಹರಿಸಿಕೊಳ್ಳಲು ಮಾತ್ರ ಅವಕಾಶವಿದೆ.

.

 ತಾರಾನಾಥ್‌, ಮೂಡುಬಿದಿರೆ

ಮಗಳು ಪಿಯುಸಿಯಲ್ಲಿ ಶೇ.60 ಅಂಕ ಗಳಿಸಿದ್ದಾಳೆ. ಬಿ.ಕಾಂ.ಗೆ ಸೀಟು ಸಿಗಬಹುದೆ ?

ಪಿಯುಸಿಯಲ್ಲಿ ತೇರ್ಗಡೆಗೊಂಡವರು ಉನ್ನತ ಶಿಕ್ಷಣ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಅಗತ್ಯ ಮೂಲ ಸೌಕರ್ಯಗಳು ಇರುವ ಕಾಲೇಜುಗಳು ಹೆಚ್ಚು  ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅನುಮತಿ ನೀಡಲಾಗುತ್ತಿದೆ. ವಿ.ವಿ. ಕಾಲೇಜಿನಲ್ಲಿ ಹೆಚ್ಚುವರಿ ಬ್ಯಾಚ್‌ ಮಾಡಲು ನಿರ್ಧರಿಸಲಾಗಿದೆ. ಬೆಳಗ್ಗೆ 8ರಿಂದ 2 ಹಾಗೂ ಅಪರಾಹ್ನ ಗಂಟೆ 2ರಿಂದ 6ರ ವರೆಗೆ ಪಾಳಿಯಲ್ಲಿ ತರಗತಿ ನಡೆಸಲು ಕೂಡ ತೀರ್ಮಾನಿಸಲಾಗಿದೆ.

.

ಹಮೀದ್‌, ವಿಟ್ಲ

ನನಗೆ ಉದ್ಯೋಗ ನಿಮಿತ್ತ ಮಂಗಳೂರು ವಿ.ವಿ.ಯಿಂದ ತುರ್ತಾಗಿ ಅಂಕಪಟ್ಟಿ ಬೇಕು. ಸಿಗಬಹುದೆ?

ತುರ್ತಾಗಿ ಅಂಕಪಟ್ಟಿ ನೀಡುವುದಕ್ಕಾಗಿ ವಿ.ವಿ.ಯಲ್ಲಿ “ತತ್ಕಾಲ್‌’ ಎಂಬ ವ್ಯವಸ್ಥೆ ಆರಂಭಿಸಲಾಗಿದೆ. ಸಾಮಾನ್ಯ ಶುಲ್ಕಕ್ಕಿಂತ ಸ್ವಲ್ಪ ಹೆಚ್ಚಿನ ಶುಲ್ಕ ನಿಗದಿ ಪಡಿಸಲಾಗಿದೆ. ಬೆಳಗ್ಗೆ ಅರ್ಜಿ ನೀಡಿದರೆ ಸಂಜೆಯೊಳಗೆ ಅಂಕಪಟ್ಟಿ ಒದಗಿಸಿಕೊಡಲಾಗುತ್ತಿದೆ.

.

ಮೀನಾಕ್ಷಿ, ಮಂಗಳೂರು

ಪರೀಕ್ಷೆ ಬರೆಯಲು ಬರುವ ಕಾಸರಗೋಡಿನ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಕಾಸರಗೋಡಿನವರು ಮಂಗಳೂರಿಗೆ ಬಂದು ಪರೀಕ್ಷೆ ಬರೆಯುವುದು ಕಷ್ಟಸಾಧ್ಯವಾದರೆ ಅವರ ಪ್ರದೇಶಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಕಾಸರಗೋಡು ಭಾಗದ ವಿದ್ಯಾರ್ಥಿಗಳು ತಮ್ಮ ಅನನುಕೂಲತೆಗಳ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ತಿಳಿಸಿದರೆ ಅವರು ಕುಲಸಚಿವರ ಜತೆಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.

ಅಶೋಕ್‌, ಗಂಗೊಳ್ಳಿ

ಇನ್ನು ಮುಂದೆ ಪದವಿ ನಾಲ್ಕು ವರ್ಷವೇ?

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಪದವಿಯ ಒಂದು ವರ್ಷ ಪೂರೈಸಿದರೂ ಪ್ರಮಾಣಪತ್ರ ದೊರೆಯಲಿದೆ. ಎರಡನೇ ವರ್ಷ ಪೂರೈಸಿದರೆ ಡಿಪ್ಲೊಮಾ, ಮೂರನೇ ವರ್ಷ ಪೂರೈಸಿದರೆ ಪದವಿ, ನಾಲ್ಕನೇ ವರ್ಷ ಪೂರೈಸಿದರೆ “ಹಾನರ್‌’ ದೊರೆಯುತ್ತದೆ. ಅನಂತರ ಪಿಎಚ್‌.ಡಿ. ಮಾಡಬಹುದು. ಉಪನ್ಯಾಸಕರಾಗುವುದಾದರೆ ಮತ್ತೆ ಒಂದು ವರ್ಷದ ಸ್ನಾತಕೋತ್ತರ ಪದವಿ ಮಾಡಬಹುದು.

ಮಹಿಮಾ ಉಡುಪಿ, ನಿರ್ಮಲಾ ಬೋಂದೆಲ್‌, ಸದಾನಂದ ಶೆಟ್ಟಿ ಮುಲ್ಕಿ, ಶಶಿ ವರ್ಣ, ಗಣೇಶ್‌ ಅತ್ತಾವರ, ಲವೀನಾ ಕುಲಶೇಖರ ಸಹಿತ ಹಲವಾರು ವಿದ್ಯಾರ್ಥಿಗಳು ಕುಲಪತಿಯವರೊಂದಿಗೆ ಮಾತನಾಡಿ ತಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಂಡರು ಮಾತ್ರವಲ್ಲದೆ  ಕೆಲವೊಂದು ಸಮಸ್ಯೆಗಳ ಬಗೆಗೆ ಕುಲಪತಿಯವರ ಗಮನ ಸೆಳೆದರು.

ಮೌಲ್ಯಮಾಪನ ಆರಂಭ; ಆಗಸ್ಟ್‌ ಕೊನೆಯಲ್ಲಿ ಫಲಿತಾಂಶ :

ಬಾಕಿ ಉಳಿದಿರುವ ಯುಜಿ ಪರೀಕ್ಷೆ ಆ.2ರಿಂದ ಹಾಗೂ ಆ.5ರಿಂದ ಪಿ.ಜಿ ಪರೀಕ್ಷೆಗಳು ನಡೆಯಲಿವೆ. ಆ.16ರ ಒಳಗೆ ಪರೀಕ್ಷೆ ಪೂರ್ಣಗೊಳ್ಳಲಿವೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವ ಕಾರಣದಿಂದ ಆನ್‌ಲೈನ್‌ ತರಗತಿ ಕೂಡ ನಡೆಯುವುದಿಲ್ಲ. ಈ ವೇಳೆಯಲ್ಲಿ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಎರಡು ದಿನಗಳೊಳಗೆ ಈ ಪ್ರಕ್ರಿಯೆ ಆರಂಭವಾಗಲಿದ್ದು ದೋಷರಹಿತ ಫಲಿತಾಂಶ ನೀಡಲು ಉದ್ದೇಶಿಸಲಾಗಿದೆ. ಕೊಡಗು, ಪುತ್ತೂರು, ಮಂಗಳೂರು, ಉಡುಪಿಯಲ್ಲಿ ಮೌಲ್ಯಮಾಪನ ನಡೆಯಲಿದೆ. ಆಗಸ್ಟ್‌ ಕೊನೆಯಲ್ಲಿ ಪರೀಕ್ಷೆಯ ಫಲಿತಾಂಶ ನೀಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರೊ|ಪಿ.ಎಸ್‌.ಯಡಪಡಿತ್ತಾಯ ಹೇಳಿದರು.

ವಿವಿಯಲ್ಲಿ ಆಪ್ತ ಸಹಾಯವಾಣಿ ಕೇಂದ್ರ : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕಾಲೇಜುಗಳಲ್ಲಿ ಕೌನ್ಸಿಲರ್‌ಗಳನ್ನು ನೇಮಕ ಮಾಡಲು ಸೂಚಿಸಲಾಗಿದೆ. ವಿ.ವಿಯಲ್ಲಿ ಈಗಾಗಲೇ ಕೌನ್ಸಿಲರ್‌ ನೇಮಕ ಮಾಡಲಾಗಿದೆ. ಜತೆಗೆ “ಟ್ರೈನಿಂಗ್‌ ಪ್ಲೇಸ್‌ಮೆಂಟ್‌’ ಎಂಬ ಘಟಕ ಆರಂಭಿಸುವ ಚಿಂತನೆ ಇದೆ. ಪದವಿ ವಿದ್ಯಾರ್ಥಿಗಳ ಯಾವುದೇ ಸಮಸ್ಯೆ, ಸವಾಲು, ಗೊಂದಲ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮಂಗಳೂರು ವಿ.ವಿ.ಯು ಶೀಘ್ರವೇ “ಆಪ್ತ ಸಹಾಯವಾಣಿ’ ಕೇಂದ್ರವನ್ನು ಆರಂಭಿಸಲಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next