Advertisement

ಸೌಭಾಗ್ಯ ದಯಪಾಲಿಸುವ ಸ್ವರ್ಣಗೌರೀ-ಮಂಗಳಗೌರೀ

10:27 PM Sep 08, 2021 | Team Udayavani |

ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ, ಸಂಭ್ರಮದ ಹಬ್ಬವೆಂದರೆ “ಗೌರೀಹಬ್ಬ’ವೆಂದು ಪ್ರಸಿದ್ಧವಾಗಿರುವ ಸ್ವರ್ಣ­ಗೌರೀ­ವ್ರತ.  ಮರುದಿನದ ಗಣೇಶನ ಹಬ್ಬವೂ ಸೇರಿದಂತೆ “ಗೌರೀ-ಗಣೇಶ’ ಎಂಬುದಾಗಿ ಜನರ ಸಂತಸ- ಸಂಭ್ರಮಗಳಿಗೆ ವಿಷಯವಾಗಿದೆ ಇದು.

Advertisement

ಇದನ್ನು “ಹೆಂಗಸರ ಹಬ್ಬ’ ಎಂಬುದಾಗಿ ವ್ಯವಹರಿ­ಸುವುದನ್ನು ಕಾಣುತ್ತೇವೆ. ಕಾರಣ, ಇಂದು ಪ್ರಧಾನವಾಗಿ ಪೂಜೆಯನ್ನು ನಡೆಸುವವರು ಹೆಂಗಸರೇ. ಆದರೂ ಹೆಂಗಸರ ಪೂಜೆಗೆ ಸಹಕಾರ­ವನ್ನು ನೀಡುವುದಲ್ಲದೆ ಪುರುಷರೂ ಸಹ ಜಗನ್ಮಾತೆಯಾದ ಗೌರೀದೇವಿಯನ್ನು ಕುಟುಂಬ ಕ್ಷೇಮಕ್ಕಾಗಿ ನಮಿಸಿ-ಪ್ರಾರ್ಥಿಸ­ಬೇಕಾಗಿದೆ. ಸ್ತ್ರೀಯರೂ ಸಹ ಪುರುಷರನ್ನು ಹಬ್ಬದ ಸಂಭ್ರಮದಿಂದ ದೂರವಿಡಬೇಕಾಗಿಲ್ಲ. ಗೌರಿದೇವಿ­ಯೊಬ್ಬಳನ್ನೇ ಪೂಜಿಸಿ­ದಾಗಲೂ, ಪರಮೇಶ್ವರ ಸಹಿತವಾಗಿ “ಪಾರ್ವತೀ-­ಪರಮೇಶ್ವರರು’, ಜಗನ್ಮಾತಾ­ಪಿತೃಗಳು ಎಂಬುದಾಗಿಯೇ ಸ್ತುತಿಸುತ್ತಾರೆ.

ಇಲ್ಲಿ ಪುರಾಣದ ಕಥೆಯೊಂದನ್ನು ಸ್ಮರಿಸಬಹುದಾಗಿದೆ. ಒಮ್ಮೆ ಕೈಲಾಸದಲ್ಲಿ ಶಿವ ಮತ್ತು ಪಾರ್ವತಿಯರಲ್ಲಿ ಯಾರು ಹೆಚ್ಚು ಶ್ರೇಷ್ಠರು ಎಂಬ ಪ್ರಶ್ನೆಯೆದ್ದಿತು. ಶಿವಗಣಗಳೆಲ್ಲರೂ ಉತ್ತರಿಸದೆ ಮೌನವನ್ನು ವಹಿಸಿದರು. ಆಗ ಭೃಂಗಿಮುನಿಯು “ಶಿವನೇ ಶ್ರೇಷ್ಠ’ ಎಂದು ಉತ್ತರಿಸಿದನಂತೆ.  ಶಕ್ತಿಯ ಹಿರಿಮೆಯನ್ನು ಒಪ್ಪದೆ ಶಿವನೇ ಹೆಚ್ಚು ಎಂದು ಸಾರಿದರು. ಇದರಿಂದ ಕೋಪ­ಗೊಂಡ ದೇವಿಯು “ನಿನ್ನಲ್ಲಿರುವ ನನ್ನ ಅಂಶವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಆತನ ಶರೀರದಲ್ಲಿನ ಸಪ್ತಧಾತು­ಗಳನ್ನೂ ಶೋಷಿಸಿಬಿಟ್ಟಳು. ಮುನಿಯು ಬರೀ ಅಸ್ತಿಪಂಜರವಾಗಿ ಉಳಿಯಬೇಕಾಯಿತು. ಇದು ಸೂಚಿಸುವ ತತ್ವಾರ್ಥವೆಂದರೆ, ಶಿವ-ಶಕ್ತಿಯರ ಸಮಾ­ಯೋಗದಿಂದಲೇ ಸೃಷ್ಟಿಯು ಮುಂದು­ವರಿ­ದಿರುವುದು. ಆದ್ದರಿಂದ ಅವರಿಬ್ಬರ ಪಾತ್ರವೂ ಸಮಾನವಾಗಿದೆ.  ಲೋಕದಲ್ಲಿ ಪತಿ-ಪತ್ನಿಯರು ಶಿವ-ಶಕ್ತಿಯರ ಪ್ರತಿನಿಧಿ­ಗಳಾಗಿ ವರ್ತಿಸಬೇಕಾಗಿರು­ವುದರಿಂದ ಇಬ್ಬರೂ ಸೇರಿಯೇ ಪೂಜಿಸುವುದೆಂಬುದು ಜ್ಞಾನಿಸಮ್ಮತವಾದದ್ದು.

ಶಿವ-ಶಕ್ತಿಯರು ಸೇರಿಯೇ ಇರುವವರಾಗಿದ್ದರೆ, ಗೌರಿ­ಯನ್ನು ಮಾತ್ರವೇ ಅಂದು ಪೂಜಿಸಬಹುದೇ? ಎಂದರೆ, ಅದಕ್ಕೆ ಜ್ಞಾನಿಗಳ ಉತ್ತರ, ಪುರುಷಾರ್ಥಗಳ ಕೆಲವು ವಿಶೇಷಭಾಗಗಳ ಪ್ರಾಪ್ತಿಗಾಗಿ ಅವುಗಳನ್ನ­ನುಗ್ರಹಿಸುವ ದೇವಿಯನ್ನು ಪ್ರತ್ಯೇಕವಾಗಿ ಪೂಜಿಸುವುದು ಸೂಕ್ತವೇ ಆಗಿದೆ. ದೇವಿಯ ಪೂಜೆಯಿಂದ ದೇವನೂ ಸಂತುಷ್ಟನಾಗುತ್ತಾನೆ ಎಂಬ ಅಂಶವನ್ನೂ ನೆನಪಿಡಬೇಕಾಗಿದೆ.

ಯಾರು ಗೌರೀ?: ಮೇಲೆ ಗಮನಿಸಿದಂತೆ ಗೌರಿಯು ಶಿವನ ಅರ್ಧಾಂಗಿ. ಶಿವನ ಮಡದಿಯಾಗಿದ್ದ ದಾಕ್ಷಾಯಣೀ (ಸತೀದೇವಿ). ತನ್ನ ಪತಿಗಾದ ಅಪ­ಮಾನವನ್ನು ತಾಳಲಾರದೆ ದೇಹತ್ಯಾಗವನ್ನು ಮಾಡಿದಳು. ಮುಂದೆ ಹಿಮ­ವಂತನ ಮಗಳಾಗಿ ಜನಿಸಿದಳು.  ಮಹಾದೇವನು ತಪಸ್ಸಿನಲ್ಲೇ ಮಗ್ನ­ನಾಗಿ­ದ್ದಾಗ  ಆತನನ್ನು ತಪಸ್ಯೆಯಿಂದ ಹೊರತರಲು ಕಾಮದೇವನ ಮೂಲಕ  ದೇವತೆಗಳು ಪ್ರಯತ್ನಿಸಿದಾಗ ಕುಪಿತನಾದ ಶಿವನು ಕಾಮನನ್ನು ಭಸ್ಮಮಾಡಿದ. ಹಿಮವಂತನ ಮಗಳಾದ ಗೌರಿಯು ಕಠಿನ ತಪಸ್ಯೆಯಿಂದ ಶಿವನನ್ನು ಒಲಿಸಿ­ಕೊಂಡಳು. ಪ್ರಸನ್ನನಾದ ಶಿವನು ಲೋಕಕಲ್ಯಾಣಕ್ಕಾಗಿ ತಾನಾಗಿಯೇ ಕಾಮನನ್ನು ಬರಮಾಡಿಕೊಂಡು ಗೌರಿಯನ್ನು ವಿವಾಹವಾದ ಎಂಬುದು ಪುರಾಣಕಥೆ.

Advertisement

ಶ್ರೀಕೃಷ್ಣನೇ ತಾನು ದೇವಕಿಯ ಗರ್ಭದಲ್ಲಿ ಹುಟ್ಟುವಾಗ ಯೋಗಮಾಯೆಯಾದ ಗೌರಿದೇವಿಯು ಯಶೋದೆಯ ಗರ್ಭದಲ್ಲಿ ಅವತರಿಸಿದಳು. ಆತನ ಅವತಾರದಲ್ಲಿ ನೆರವಾದ ಆಕೆಯನ್ನು ಲೋಕವು ತನ್ನ (ನಾರಾಯಣನ)ಸೋದರಿಯೆಂದು ಕೊಂಡಾಡಲಿ ಎಂಬುದಾಗಿ ಶ್ರೀಕೃಷ್ಣನೇ ಹೇಳುತ್ತಾನೆ ಎನ್ನುತ್ತದೆ ಶ್ರೀಮದ್ಭಾಗವತ.

ಗೌರೀಪೂಜೆಯ ಉದ್ದೇಶ: ಪ್ರಧಾನವಾಗಿ ಗೌರೀ­ಪೂಜೆ­ಯನ್ನು ಮಾಡುವುದು ಒಳ್ಳೆಯ ದಾಂಪತ್ಯ­ಸೌಭಾಗ್ಯಕ್ಕಾಗಿ. ಇದನ್ನು ಸಾರುವ ಪುರಾಣದ ಕಥಾಭಾಗ­ಗಳಲ್ಲಿ ಪ್ರಮುಖ­ವಾದವುಗಳೆಂದರೆ ಗೋಪಿಕೆಯರು ಕೃಷ್ಣನನ್ನೇ ಪತಿಯಾಗಿ ಪಡೆಯಲು ಮಾಡಿದ ಪೂಜೆ, ರುಕ್ಮಿಣೀ­ದೇವಿಯು ತನ್ನ ವಿವಾಹ ಸಂದರ್ಭದಲ್ಲಿ ಆಚರಿ­ಸಿದ ಗೌರೀ­ಪೂಜೆ. ಇದನ್ನೇ ಆಧರಿಸಿ ಇಂದೂ  ವಿವಾಹ­ಪೂರ್ವಭಾವಿ­ಯಾಗಿ ಗೌರೀ ಪೂಜೆ­ಯನ್ನು ಮಾಡುವ ಪದ್ಧತಿಯಿದೆ. ದಾಂಪತ್ಯ­ ಸೌಖ್ಯವನ್ನಷ್ಟೇ ಅಲ್ಲದೆ ಸರ್ವ ಮಂಗಲಗಳನ್ನೂ-ಸತ್ಸಂತಾನವನ್ನೂ-ಸುಖಸಮೃದ್ಧಿ ಗಳನ್ನೂ  ಕರುಣಿಸಬಲ್ಲ ಮಹಾತಾಯಿ ಈಕೆ.

ಪೂಜೆ/ವ್ರತದ ವಿಧಾನ: ಗೌರೀಪೂಜೆಯ ಆಚರಣೆಯ ಮೊದಲ ಹಂತ ಆಕೆಯನ್ನು ಹೃದಯದಲ್ಲಿ ಧ್ಯಾನ ಮಾಡುವುದೇ ಆಗಿದೆ.  ಒಳಗೆ ಕಂಡ-ಧ್ಯಾನ ಮಾಡಿದ ಜಗನ್ಮಾತೆಯನ್ನು ಅನಂತರ ಹೊರಗಡೆಯೂ ಇತರ ಮಾಧ್ಯಮಗಳಿಂದ ಪೂಜಿಸುವುದು ಮಹರ್ಸಿ­ವಿಹಿತ ಪೂಜಾಕ್ರಮ.

ಮನೆಯಲ್ಲಿ ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ರಚಿಸಿ, ಅಲಂಕರಿಸಿ, ಕಲಶಸ್ಥಾಪನೆಯನ್ನು ಮಾಡುತ್ತಾರೆ. ಗೌರೀ­ದೇವಿಯ ವಿಗ್ರಹವನ್ನು ಸ್ವರ್ಣದಿಂದಲೋ, ಅರಿಶಿನ­ದಿಂದಲೋ ಅಥವಾ ಗಂಗಾತೀರದ ಮರಳು-­ಮೃತ್ತಿಕೆ ಯಿಂದ ಮಾಡುತ್ತಾರೆ. ಗಂಗೆಯ ಸಾಮೀಪ್ಯ­ವಿಲ್ಲದವರು ಯಾವುದಾದರೂ ಜಲಾ­ಶಯ­­ದಲ್ಲಿ ಗಂಗೆ­ಯನ್ನು ಆವಾಹನೆ ಮಾಡಿ ಅಲ್ಲಿನ ಮಣ್ಣನ್ನು ತಂದು ಮಾಡುವುದುಂಟು. ಆವಾಹಿತಳಾದ ದೇವಿಯನ್ನು ಷೋಡಶೋಪ ಚಾರ­ಗಳಿಂದ ಪೂಜಿಸುತ್ತಾರೆ. ಹದಿನಾರು ಗ್ರಂಥಿಗಳುಳ್ಳ ದಾರವನ್ನಿಟ್ಟು ಆ ಗ್ರಂಥಿಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಿಗೆ ಪ್ರಿಯವಾದ ಉಪಚಾರಗಳು, ಮಂತ್ರ- ತಂತ್ರ­ಗಳಿಂದ ಪೂಜೆಯು ಸಂಪನ್ನ­ಗೊಳ್ಳುತ್ತದೆ. ಪೂಜಾ­ವಿಧಾನ­ಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡು­ಬಂದರೂ ಎಲ್ಲದರ ಹಿಂದಿನ ಆಶಯವೂ ದೇವಿಯನ್ನು ಪ್ರಸನ್ನ­ಗೊಳಿಸಿ ಆಕೆಯ ಅನುಗ್ರಹವನ್ನು ಪಡೆಯುವುದೇ ಆಗಿದೆ.

ಗೌರೀಪೂಜಾ ಕ್ರಮದಲ್ಲಿನ ತತ್ವಾರ್ಥ: ಗೌರಿಯು ಹಿಮವಂತನ ಪುತ್ರಿಯೆಂಬುದು ಪುರಾ­ಣೋಕ್ತಿ. ಆದರೆ ಪುರಾಣಕಥೆಗಳು ಕೆಲವು ಗಹನವಾದ ತಣ್ತೀಗಳನ್ನು, ಸತ್ಯಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಹೊರಟಿ­ರುವವು ಎಂಬ ಶ್ರೀರಂಗ­ಮಹಾಗುರುಗಳ ಮಾತು ಗಮನಾರ್ಹವಾಗಿದೆ. ಮರ್ಹಗಳು ಅಂತರಂಗ­ಸಾಧನೆಯಲ್ಲಿ ತಮ್ಮ ಬೆನ್ನು­ಹುರಿಯ ಉನ್ನತಸ್ಥಾನವನ್ನು ಏರಿದಾಗ ಪರಮಾನಂದ­ಭರಿತರಾಗಿ ಇಂದ್ರಿಯ ವ್ಯಾಪಾರಗಳೆಲ್ಲವೂ  ಸ್ತಬ್ಧವಾಗಿ­ಬಿಡುತ್ತವೆ. ಮೈಮರ­ಗಟ್ಟುತ್ತದೆ. ಈ ಅಂಶಗಳನ್ನು ಹೋಲುವ ಹಿಮ ವತ್ಪರ್ವತವನ್ನೇ ಕಥೆಯಲ್ಲಿ ಆರಿಸಿ­ಕೊಂಡಿದ್ದಾರೆ. ಹಾಗೆ ಆನಂದತುಂದಿಲ­ನಾದವನು ಅಲ್ಲಿಯೇ ನಿಂತುಬಿಡದೆ ಮುಂದೆ ಲೋಕದಲ್ಲಿ ತನ್ನ ಜ್ಞಾನಾ­ನಂದಗಳನ್ನು ಬೆಳೆಸಬೇಕಾದರೆ ಆ ಸ್ಥಾನದಿಂದ ಕೆಳಗಿಳಿಯಬೇಕು. ಇಂದ್ರಿಯಗಳ ಕೆಲಸವೂ ಜರಗ­ಬೇಕು. ಆದ್ದರಿಂದ ಆತನನ್ನು ಅಲ್ಲಿಂದ ಲೋಕಪ್ರಜ್ಞೆಗೆ ಇಳಿಸಲು ಕಾಮನ ಮೂಲಕ ಇಂದ್ರಿಯಾಧೀಶರಾದ ದೇವತೆಗಳ ಪ್ರಯತ್ನ. ಅದು ಅಕಾಲದಲ್ಲಾದರೆ ಕೆಡಕು. ಸಕಾಲವಾದರೆ ಉತ್ತುಂಗಸ್ಥಾನದಿಂದ ಪ್ರಕೃತಿಮಾತೆಯು(ಶಕ್ತಿಸ್ವರೂಪಿಣಿಯು) ತನ್ನ ಚೈತನ್ಯಕ್ಕೆ ಮೂಲನಾದ ಶಿವನೊಡನೆ ಸೇರಿ ಕೆಳಗಿಳಿದಾಗ ಅಲ್ಲಿ ಶಿವ-­ಶಿವೆಯರ ಸೇರುವೆ-ವಿವಾಹ. ಅಲ್ಲಿಂದ ಮುಂದೆ ಸಂತಾನಪ್ರಾಪ್ತಿ.  ಆದ್ದ­ರಿಂದಲೇ ದಾಂಪತ್ಯಸೌಭಾಗ್ಯಕ್ಕಾಗಿ ಜಗನ್ಮಾತೆಯ ಪೂಜೆ.

ಪೂಜೆಗೆ ಸುವರ್ಣವೇ ಏಕೆ?: ಸೌಲಭ್ಯವಿಲ್ಲದಿದ್ದಾಗ ಅರಿಸಿನವೇ ಏಕೆ? ಬೆಳ್ಳಿಯಿಂದಾಗಬಾರದೇಕೆ? ಎಂಬ ಪ್ರಶ್ನೆಗ­ಳಿಗೆ ವೈಜ್ಞಾನಿಕ ನೋಟದಿಂದಲೇ ಉತ್ತರವನ್ನು ಹುಡುಕ­ಬೇಕಾಗಿದೆ. ಜ್ಞಾನಿಗಳ ಅನುಭವವು ಸಾರುವಂತೆ ಗೌರೀ­ಮಾತೆಯು ಚಾಂಪೇಯ (ಸಂಪಿಗೆಹೂವಿನ) ವರ್ಣ­­ದವಳು. ಆ ವರ್ಣವನ್ನೂ, ಆಕೆಯ ಹೊಳಪನ್ನೂ ಬಹುಮಟ್ಟಿಗೆ ಹೋಲು­ವುದು ಸುವರ್ಣ. ಜೊತೆಗೆ ಸುವರ್ಣದ ದರ್ಷನ, ಸ್ಪಶ‌ìಗಳು ನಮ್ಮೊಳಗೆ ದೇವಿಯ ಸಾಕ್ಷಾತ್ಕಾರಕ್ಕೆ ಪೋಷಕವಾದ ಕೇಂದ್ರಗಳನ್ನು ತೆರೆಯಲು ಸಹಕರಿಸುತ್ತದೆ. ದೇವ-ದೇವಿ­ಯರನ್ನು ತಮ್ಮೊಳಗೆ ಸ್ವತಃ ಕಂಡನುಭವಿಸಿದವರೂ, ಮಹರ್ಸಿ ಹೃದಯವನ್ನ­ರಿತವರೂ ಆಗಿದ್ದ ಶ್ರೀರಂಗಮಹಾ­ಗುರುಗಳು ಸುವ­ರ್ಣದ ಧರ್ಮವು ಬಹುಮಟ್ಟಿಗೆ ಅರಿಶಿನ­ದಲ್ಲೂ ಕಂಡು­ಬರುವುದನ್ನೂ ತಮ್ಮ ನಾಡೀವಿಜ್ಞಾನದ ಮೂಲಕ ನಿರೂ­ಪಿಸಿದರು. ಆದ್ದರಿಂದಲೇ ಸುವರ್ಣದ ಸೌಲಭ್ಯವಿಲ್ಲ­ದಿದ್ದಾಗ  ಅರಿಸಿನವನ್ನು ಪಯೋಗಿಸುವ ಕ್ರಮವನ್ನು ವಿಧಿಸಿ­ರು­­­­ವುದು ಸೂಕ್ತವಾಗಿ ದೆಯೆಂಬ ವಿವರಣೆ­ಯನ್ನೂ ನೀಡಿ­ದರು. ಪೂಜೆಯಲ್ಲಿ ಗ್ರಂಥಿಗಳ, ಉಪಚಾರಗಳ ಸಂಖ್ಯೆ ಮುಂತಾ­ದವುಗಳಲ್ಲಿ ಹದಿನಾರೆಂಬ ಸಂಖ್ಯೆಯು ವಿಶೇಷವಾಗಿ ಎದ್ದು ಕಾಣುತ್ತದೆ. ಇದು ಜಗನ್ಮಾತೆಯ ಷೋಡಶಕಲೆಗಳ ಸೂಚಕ.

ಸೌಭಾಗ್ಯದಾಯಿನಿಯಾದ ಜಗನ್ಮಾತೆಯನ್ನು-ಜಗ­ದಾದಿ ದಂಪತಿಯನ್ನು ದಂಪತೀ ಸಮೇತರಾಗಿ ಈ ಶುಭ­ಪರ್ವದಲ್ಲಿ ಪೂಜಿಸಿ  ಸಕಲ ಸೌಭಾಗ್ಯಗಳನ್ನೂ ಗಳಿಸಿ ನಲಿಯೋಣ.

 

ಮೈಥಿಲಿ ರಾಘವನ್‌,

ಸಂಸ್ಕೃತಿ ಚಿಂತಕಿ

Advertisement

Udayavani is now on Telegram. Click here to join our channel and stay updated with the latest news.

Next